Home / ಕವನ / ಕವಿತೆ / ಸ್ವಪ್ನಹರಿಣ!

ಸ್ವಪ್ನಹರಿಣ!

ಸ್ವಪ್ನಹರಿಣ ಚಪಲ ಚರಣ
ಕಂಗಳಲ್ಲಿ ಇಳಿಯೆ ಹರಣ
ಓಡುತಿಹುದು ವಿಧಿಗೆ ಭೀತ
ಎದೆಯ ಕಾಡೊಳು!

ಜೀವನ ನಿರ್ದಯ ನಿಷಾದ
ದುರ್ದೈವದ ಧನು ಸಜ್ಜಿತ
ಚಿಂತೆಯ ನಂಜಲಗ ತಿವಿದು
ಬೆನ್ನ ಹತ್ತಿದ!

ಭೀತಿಯಿಂದ ತನುಕಂಪಿತ
ನಯನಂಗಳು ಅಶ್ರುಭರಿತ
ಬಂದಿತೆಂದಿತದೊ ಸಮೀಪ
ಕೊನೆಯಗಳಿಗೆಯು

ಕರುಣಾಶ್ರಯವಿಲ್ಲದಾಯ್ತು
ನಿಷ್ಕರುಣಿಯ ಜಗವಾಯಿತು
ಕೆನ್ನೀರಿನ ಮಡುವಾಯಿತು
ಮೃದುಲ ದೇಹವು!

ಕಂಗಳ ಬಟ್ಟಲುಗಳಲ್ಲಿ
ಜಗದಾಸೆಯ ಮದಿರೆಯಲ್ಲಿ
ತುಂಬಿದರೂ ತುಳುಕಿ ತಿಂದು
ದುಃಖಸಾಗರ!

ಪ್ರಕೃತಿಯೆಲ್ಲ ಪ್ರತಿಬಿಂಬಿತ
ನಯನಂಗಳಲತಿ ರಂಜಿತ
ಅದನೊರಸುತ ತೇಲಿ ಬಂತು
ದುಗುಡ ಬೆಂತರ!

ಓಡಿದತ್ತ ಬೆಂಬತ್ತಿದೆ
ನೋಡಿದತ್ತ ನೆಗೆದೆದ್ದಿದೆ
ಮೂರ್ತಿಮಂತ ಮರಣದಂತೆ
ಬಾಳ ರಕ್ಕಸ!

ಸ್ವಪ್ನಹರಿಣ, ನಿಲ್ಲರೆ ಚಣ,
ದಿನ ಸತ್ತಿತು ಇದೆ ಈ ಕ್ಷಣ
ಬಿಸಿಲು ಬಾಣ ತಾಗೆ, ಬಾನ್ಗೆ-
ರಕ್ತ ಚಿಮ್ಮಿತು!

ಕಲ್ಪನೆಯುತ್ತುಂಗ ಶಿಖರ
ಮನದಾಸೆಯ ಸೌಖ್ಯ ಶಿಬಿರ
ಕೈಯ ಚಾಚಿ ಕರೆಯುತಿಹುದು
ತನ್ನ ಎಡೆಯಲಿ!

ಇರುಳಿನ ತೋಳ್‌ ತೊಟ್ಟಿಲಲ್ಲಿ
ಬೆಳುಂದಿಗಳ ಸೆರಗಿನಲ್ಲಿ
ವಿರಮಿಸಿ ಆ ಕರುಣೆಯಲ್ಲಿ
ಬೆಳೆಸು ಬಲವನು.

ನೀನಿರುತಿರೆ ಇದೆ ಸಂಸ್ಕೃತಿ
ನೀ ಬೆಳೆದರೆ ಅವ ಸಾಹಿತಿ
ಮನ ಮಂದಿರದಲಿ ಮೂರುತಿ
ಚೆಲುವು ನಿನ್ನದು!

ಮುನ್ನಡೆಯಲಿ ನೀ ಪ್ರೇರಣೆ
ಪ್ರತಿ ಯತ್ನಕೆ ನೀ ಚೇತನೆ
ನಿತ್ಯ ನೂತ್ನ ರಮ್ಯವದನೆ
ಕಹಿಯ ಕಳೆಯುವೆ!

ಸಾಯಬಾರದೆಂದು ನೀನು
ಕರಿಯಿರುಳಲಿ ಬೆಳಕು ನೀನು
ಬೆಂದ ಬಾಳ ಹಾಳಿನಲ್ಲಿ
ತಣಿವಿನೂಟೆಯು!

ನಿನ್ನುಳಿಸಲು ಜನ ಕೂಡಿದೆ
ದೇವರನ್ನು ಜಗ ಬೇಡಿದೆ
ಚಿಂತಾಕುಲ ಜೀವಿತದಲಿ
ನಿನಗೆ ಕಾದಿದೆ!

ಕ್ಷುಬ್ಬವಿದ್ಧ ಮಾನವ ಕುಲ
ಅದರ ದುಃಖವಾಯಿತಚಲ
ಅದಕ ಯತ್ನವೆಲ್ಲ ವಿಫಲ
ವಿರಸ ಬಾಳುವೆ!

ಪಾಪದ ಕೋಳ್‌ ಗೋಣ್‌ ಬಿಗಿಯಲು
ಶಾಪದ ಕೈ ಅಲುಗಿರಿಯಲು
ನಿನ್ನೊಡಲಿನ ಕಸ್ತೂರಿಯು
ಪ್ರಾಣದಾನ ಮಾಡಲಿ!

ನಮ್ಮೊಡಲಿನ ಚಿಂತೆಯನ್ನು
ನೀಗದಿರುವ ಶಂಕೆಯನ್ನು
ಸ್ವಪ್ನ ಸಜಲ ನಯನ ನೀರ
ತಣಿವ ತೋರಲಿ!

ಚೆಲುವದೋರು ಒಲವನೀಡು
ಕೆಡುಕಳಿಯುವ ಹಾಗೆ ಮಾಡು
ಚಿರಮಂಗಲ ಸುರಸುಂದರ
ಬಾಳ ಕೊನರಿಸು.
*****

Tagged:

Leave a Reply

Your email address will not be published. Required fields are marked *

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...