Home / ಕವನ / ಕವಿತೆ / ಕವನ ಕಂಬನಿ!

ಕವನ ಕಂಬನಿ!

ರಘುಪತಿ ರಾಘವ ರಾಜಾರಾಮ
ಮಹಾಜೀವನಕೆ
ಇಂದು ಬರೆದೆಯಾ
ದೇವನೆ, ಪೂರ್ಣವಿರಾಮ!
ರಘುಪತಿ ರಾಘವ ರಾಜಾರಾಮ!

ಪತಿತ ಪಾವನ!
ಪಟೇಲ ಜೀವನ
ವಾಯಿತು ದೇವನ-
ಮುರಲೀವಾದನ
ಸ್ವಾತಂತ್ರ್ಯದ ಆ ವೀರೋದಾಮನ
ಬೆಳೆಯಿತು ತಾನ ವಿತಾನ
ದೇವಾ, ಸಖ್ಯ ಸೌಖ್ಯ, ಸಂಧ
ರಘುಪತಿ ರಾಘವ ರಾಜಾರಾಮ
ಪತಿತ ಪಾವನ ಸೀತಾರಾಮ
ವಿಧಿಯ ಘಟನೆಯಲಿ
ಘೋರ ಮರಣದಲಿ
ಪಡೆದಿತು ಗಾನವಿರಾಮ
ಸುಂದರ ಮಾಧವ ಮೇಘಶ್ಯಾಮ


ಜರೆಯನು ಜರೆದನು
ಅವನೇ ನಿರ್ಜರ
ದುಡಿಮೆಗೆ ಎಂದಿಗು
ಇಲ್ಲ ಅಂತರ
ಮಿಂಚು ತೂರಿತೆನೆ
ಹರಿದು ನಿರ್ಝರ
ದೇಹದಿ ಉಕ್ಕಿತು
ಪ್ರಾಣಸಾಗರ
ನಾಡಿನ ಪುಣ್ಯದ
ಉದಿತ ಭಾಸ್ಕರ
ಅದೋ ನಮ್ಮ ಸರದಾರ
ಅವನ ದರ್ಶನ
ಉತ್ಸಾಹದ ಸಂಚಾರ
ರಘುಪತಿ ರಾಘವ ರಾಜಾರಾಮ
ಭಾರತ ಪಂಚ ಪ್ರಾಣ
ಬತ್ತಿತು
ಅಯ್ಯೋ ಮೇಫಶ್ಯಾಮ!


ಆತ್ಮ ಕವಚವದು
ವಜ್ರ ಕೇವಲ
ಒಳಗೆ ಬೆಳೆಯಿತೈ
ಕಮಲ ಕೋಮಲ
ಭಾರತ ಭಾಗ್ಯದ
ಗಂಧ ಪರಿಮಳ
ಹರಿಯಿತು ಸಾಗರ ಪಾರ
ದೇವಾ,
ಏನು ಮಹಾ ಸರದಾರ!
ಕೇಳು ದೇವನೆ
ದೇಶ ಕೂಗುತಿದೆ
ಅಣ್ಣನ ವಾರಂವಾರ
ರಘುಪತಿ ರಾಘವ ರಾಜಾರಾಮ


ಯುದ್ಧ ಭೂಮಿಯಲಿ
ಸ್ಫುರಣ ಕಾರಣ
ಕಾಡ ಸವರಿದನು
ವೈರಿ ಮರ್‍ದನ
ನಾಡ ಕಟ್ಟಿದನು
ಭೀಮ ಯೋಧನ
ಸ್ವಾತಂತ್ರ್ಯದ ಸಂಗ್ರಾಮ
ಗೆದ್ದನು,
ಅವನಿಗೆ ಪ್ರೇಮ ಪ್ರಣಾಮ
ರಘುಪತಿ ರಾಘವ ರಾಜಾರಾಮ!


ದೇಹ ಮುರಿದರೂ
ಸಾವು ಬಾರದು
ಅಮೃತ ಪುತ್ರನಾ
ಸತ್ವ ಸರಿಯದು
ಅವನ ಧೈರ್ಯದಾ
ಕವಚ ನಾಡಿಗೆ
ಅವನ ಉಕ್ಕಿನಾ
ಹುರಿಯು ಮನಸಿಗೆ
ಅವನ ಪುಣ್ಯದಾ
ರಕ್ಷೆ ಬೆನ್ನಿಗೆ
ಅವನ ಕನಸಿನಾ-
ಮಾಲೆ ಕೊರಳಿಗೆ
ಅವನ ಧ್ಯೇಯದಾ
ಮೂರ್ತಿ ಕಣ್ಣಿಗೆ
ಇರಲು ಎಲ್ಲಿಯಾ
ಸಾವು ಅವನಿಗೆ


ದುಃಖ ಸಂವೃತ
ತಾಳು ಭಾರತ
ಮೋಹ ವಿಸ್ಮೃತ
ಏಳು ಭಾರತ
ಪ್ರಗತಿ ಸುವ್ರತ
ಬಾಳು ಅಮೃತ!
ರಘುಪತಿ ರಾಘವ ರಾಜಾರಾಮ
ಪತಿತ ಪಾವನ ಸೀತಾರಾಮ!
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...