Home / ಕವನ / ಕವಿತೆ / ಸಂದ್ಯಾ-ಸೂಕ್ತ

ಸಂದ್ಯಾ-ಸೂಕ್ತ

ಇ೦ದು ಸಂಜೆಯ ನಿಟ್ಟು ನಿಟ್ಟಿಗೆ
ಬೆಳೆದು ನಿಂತಿದೆ ಸಂಪದ
ಹಕ್ಕಿ ಹಾರಿದ ಹಾಗೆ ಹರಿಯಿತು
ಮನದಿ ಊರಿದ ಆ ಪದ

ಚೆಂಗುಲಾಬಿಯ ಬನವು ಅರಳಿದೆ
ನೋಡು ಬಾನಿನ ದಂಡೆಗೆ
ಪ್ರಾಣ ಶುಕವೇ ಕ್ಷುಬ್ಧವಾಯಿತು
ಬಂತು ಕಣ್ಣಿನ ಕಿಂಡಿಗೆ

ಸ್ವರ್ಗಲೋಕದ ಸ್ವರ್ಣ ದ್ವಾರವು
ತೆರೆಯಿತೆನುವೊಲು ಅರೆಚಣ
ಸಂಜೆಗೆಂಪಿನ ಸುಮನ ಕಾಂತಿಗೆ
ತುಂಬ ಹೊತ್ತಿತು ಪಡುವಣ.

ನೋವು ನರಳಿಕೆಯಿಂದ ನವೆದಿಹ
ಜಗದ ಕೊರಳಿಗೆ ತಾಯಿತ
ಸುತ್ತಿಕೊಂಡಿದೆ ಸಂಜೆಗೆಂಪಿನ
ಮುತ್ತು ಮಾಲೆಯು ಮಂತ್ರಿತ

ದೇವ ಮಮತೆಯ ಕೈಯು ಚಾಚಿತು
ತಂಪು ಗಾಳಿಯ ಸುಳಿಯಲಿ
ಬೆಂದ ಹಣೆಗಳ ಬೇಗೆ ಸವರಿತು
ಶಾಂತಿಯೆರಚಿತು ಎದೆಯಲಿ.

ಮಡದಿ ಮಕ್ಕಳ ಮಮತೆ ನುಡಿಸಿತು
ಹಕ್ಕಿಯುಲಿಯುವ ಚಿಲಿಪಿಲಿ
ಕಿರಣ ಶಿಶುಗಳ ಚರಣ ಕಿಂಕಿಣಿ
ನಾದ ತುಂಬಿತು ಜಗದಲಿ

ಜಗದ ಬಗೆವಟ ಹರಡಿ ನಿಂತಿತು
ಟೊಂಗೆ ಟೊಂಗೆಯು ಕೊನರಿತು
ಗಾಳಿಗಡಲಿನ ತೆರೆಗೆ ನೌಕೆಯ
ಹಾಗೆ ಉಯ್ಯಲೆಯಾಡಿತು.

ಕಾಲದಿಕ್ತಟ ದಾಟಿ ಸೇರಿತು
ನೆನಹು ಹಕ್ಕಿಯ ಸಂಕುಲ.
ಕಳೆದ ಸತ್ವ ವಿಭೂತಿ ನೆರೆಯಿತೊ
ಎನ್ನು ವೊಲು ತಾರಾಕುಲ

ಮೋಡ ನೀಡದಿ ಚಿಕ್ಕೆ ಹಕ್ಕಿಯ
ತುಂಬಿ ತುಳುಕುವ ಪಿಕರುತಿ
ಕಾಲವೀಣೆಯು ಮಿಡಿಯ ತೊಡಗಿತೊ
ದೇವ ವಾಣಿಯ ಆ ಶೃತಿ

ಸಪ್ತ ಋಷಿಗಳ ವೇದ ವಾಣಿಯು
ಉಸುರಿತಾ ಗಾಯತ್ರಿಯ
ಯಮನ ಜಯಿಸಿದ ಸತ್ವ ಹೊಮ್ಮಿತು
ಕರಿಯಿತಾ ಸಾವಿತ್ರಿಯ

ವ್ಯಾಸ ವಾಲ್ಮೀಕಿಯರ ಪ್ರತಿಭೆಯ
ಗಂಗೆ ಬಾನೊಳು ಹರಿಯಿತು
ಧರ್ಮ ಭೀಮರ ರಾಮ ಹನುಮರ
ವೀರ ತೇಜವು ಚಿಮುಕಿತು.

ಕ್ರಿಸ್ತ ನೇರಿದ ಶಿಲುಬೆಯಿಂದಲಿ
ಸುರಿದ ರಕ್ತದ ಹನಿಯಲಿ
ಸಾವನರಿಯದ ಸೊಲ್ಲು ಗುಡುಗಿತು
ಚಿಕ್ಕೆ ಚಿಕ್ಕೆಯ ಎಡೆಯಲಿ

ಬುದ್ಧ ಬೋಧಿಯು ಮತ್ತೆ ಚಿಗುರಿತು
ಜಿನನ ವಾಣಿಯು ಅರಳಿತು
ಸೋತು ಸರಿದಿಹ ತತ್ವವೇತ್ತರ
ಶಬ್ದ ಸೌಷ್ಠವ ಕೊನರಿತು.

“ಬೆಂದು ಬಳಲಿದ ಜಗದ ಜೀವವೆ,
ಏಳು ಕುಡಿಯಲು ಸಿಡಿಲನು
ಮರೆತ ಮಾತಿನ ಹಣ್ಣು ಹಂಪಲ-
ದಿಂದ ತುಂಬಾ ಮಡಿಲನು

ಏಕೆ ಅಶುಭದ ಹೊಲೆಗೆ ಆಳುಕುವೆ
ಸಾವಿನಲಿ ನೀ ಬಾಳುವೆ
ಅಮೃತ ಪುತ್ರರ ಪಿತಗೆ ಭಯವೆ
ನೀನೆ ಎಂದಿಗು ಆಳುವೆ”

ಕಾಲಸಾಗರ ಕೆರಳಿ ಕೆದರಿತು
ನಾದ ಹೊಮ್ಮಿತು ತೆರೆತೆರೆ
ಹಾಲ ಸಾಗರ ನಂದ ಕಂದನು
ನೋಡು ನಕ್ಕನು ಜಗದೊರೆ

“ಕ್ಲೈಬೃಂ ಮಾಸ್ಮಗುಮಃ ಪ್ರಾಣೀ
ಸಲ್ಲದಿದು ನಿನಗೆಂದಿಗು
ಕುರುಕ್ಷೇತ್ರವಿದು ಧರ್ಮಕ್ಷೇತ್ರವು
ಉಂಟು ಕೊನೆಯಾ ಸಾವಿಗು.”
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...