Home / ಕವನ / ಕವಿತೆ / ಪ್ರಾರ್ಥನೆ

ಪ್ರಾರ್ಥನೆ

|| ಓಮ್ ||


ಪರಮನೆ ನಿನ್ನ ಪರಿಯನು ಪರಿಕಿಸೆ
ಬರಿಸಿದೆ ಬಾರದ ಭವಗಳಲಿ
ತಿರೆಯಲಿ ಮೆರೆಯಲು ತನವನು ತರಿಸಿದೆ
ಅರಿಯದ ಜನನಿಯ ಜಠರದಲ್ಲಿ


ಆಗುವದೆಲ್ಲವು ಆಗಲಿದೇವನೆ
ಭೋಗಿಪ ಕರ್ಮವಭೋಗಿಸುವೆ
ನೀಗದ ದುಗುಡವ ಬೆಂಕೊಂಡಾಡಲಿ
ಭೋಗಿಪ ಕರ್ಮವ ಭೋಗಿಸುವೆ


ಕೇಸುವಿನೆಲೆಗಳ ಮೇಲೆಯ ಬೀಳುವ
ನೀರದು ಜಾರುವ ತೆರದಿಂದೆ
ಹೊಸಹೊಸ ಸಂಕಟ ಸಂಚಯವೆರಗುತ
ಮು೦ಕೊ೦ಡೋಡಲಿ ಮನದಿಂದೆ


ಟೊಂಗೆಯ ಮೇಲಣ ಮಂಗನತೆರದಲಿ
ಲಂಘನ ಗೆಯ್ಯುವ ಮನವನ್ನು
ಮೂಡಣಗೂಳಿಯ ಮೂಗಿನದಾಣದ
ತಿರುಗಿಸು ನಿನ್ನಡಿದಾವರೆಗೆ


ಕಾರುಣಾಂಬುಧಿ ಕನಿಕರ ತೋರೆಲೊ
ಕರಗುವ ಕರುಳಿನ ನಿಲಯಕ್ಕೆ
ಬಾಳಿನ ಬೆಳಕದು ಸಾಲದೆ ಸಾಗಿದೆ
ಕೇಳುವೆ ಶಾಂತಿಯ ಕುಡುದೊರೆಯೆ


ತಾಯಿಯು ನೀನೇ ತಂದೆಯ ನೀನೇ
ಬ೦ಧುವು ನೀನೇ ಬಳಗಗಳು
ನೀನೇ ದೇವನೆ ಜನತೆಯು ನೀನೇ
ಸರ್ವವು ನೀನೇ ಜಗದೀಶ


ಮಕ್ಕಳ ಮುದ್ದಿನ ಮಾತಿಂದಳಲುತೆ
ಬಿಕ್ಕುತ ಕೇಳುವೆ ದರುಶನವ
ಸತಿಪತಿ ಮಿಥುನದ ವಿರಹದ ಸರದೊಳು
ತೀಡುತ ಬೇಡುವೆ ಭೆಟ್ಟಿಯನು


ತಾಯಿಯೆ ಆದರೆ ತ೦ದೆಯೆ ಆದರೆ
ಪತಿನೀನಾದರೆ ಕಾಡುವೆಯ
ತಾಯಿಯ ತಂದೆಯ ಪಾಶದ ಪರಿಯನು
ಸತಿಪತಿ ಸಲುಗೆಯು ನೀ ನರಿಯ


ಕಾಡುವೆ ಯಾತಕೊ ಕಾಡಿಸಿ ಕಾಡಿಸಿ
ನೋಡುವೆ ಯಾತಕೊ ಪೊಡವಿಪನೆ
ಜೇಡನ ಹುಳುವಿನ ಬೀಡೊಳು ಬೀಳಿಸಿ
ಕಾಡಿಪ ಗಾಡಿಯದೇನಯ್ಯ

೧೦
ನಿಧಿಯನು ಬೇಡೆನು ಪದವಿಯ ಬೇಡೆನು
ಪದುಳದೆ ಬೇಡುವೆ ದರುಶನವ
ಹೃದಯದೆ ಕದಲದ ಬಕುತಿಯ ಬೆಳ್ಗೊಡೆ
ಬೇಡುವೆ ಕೇಳೆನು ಪರತನ್ನು

೧೧
ನಶಿಸದ ನಾಕದ ನಿ್ಧಿಯನು ಹೊಂದೆನು
ಜನಪದ ಸದನವು ಸೊರಗುತಿರೆ
ಜನುಮಾಂತರಗಳ ಜನಪದ ಸೇವೆಯ
ಜನುಮವ ನೀಡೈ ಪರಮೇಶ

೧೨
ದೇಹದ ದಾರ್ಢ್ಯವು ದಾಟುತಲೋಡುವ
ಮುನ್ನಮೆ ಸನ್ನುತ ಪರಮನನು
ಭವಸಂಸಾರದ ಬವರದ ಬಳಿವಿಡಿ
ದಾಡುತ ಪಾಡೆಲೆ ಒಡಲೊಡೆಯ

೧೩
ಕಾಣದ ವಿಶ್ವವು ಕಾಣುತಲೆದ್ದಿತು
ದೇವನ ಲೀಲಾ ಮಾತ್ರದಲಿ
ಲೀಲೆಯದೆಂತೋ ಬಾಲಕವೃಂದದ
ಗುರಿಗೊತ್ತಿಲ್ಲದ ಚೇಷ್ಟೆಯದೊ ?

೧೪
ಹುಡುಗರ ತ೦ಡವು ಹೂವಿನ ಮೇಲಿನ
ಹುಳಿಹುಪ್ಪಡಿಗಳ ಹಿಡಿಹಿಡಿದು
ಕಾಡುತ ನಲಿನಲಿದಾಡುತ ನೋಡುತ
ಪೀಡಿದ ನೀತಿಯಿದೇನಯ್ಯ

೧೫
ಭವಸಂಸಾರದ ಬವರದ ಬವಣೆಯ
ಬೇಳೊಳು ಪುಟಕಿಕ್ಕೇಳದಿರೆ
ಭುವನದ ಜೀವಿಯ ಬವಣೆಯನರಿಯುತ
ಬಗೆಹರಿಸುವ ಬಗೆ ತಾನರಿಯ

೧೬
ಜಾತಿಮತಂಗಳ ಕಲಹದ ಕೊಳೆಯಲಿ
ನೀತಿಯ ದೇವನ ಕಾಣದಿಹೆ
ಮಾತಿಗೆ ಮಾತಿಗೆ ಜಾತಿಯನೆತ್ತುವ
ಪಾಪಿ ಜನಗಳ ಕಾಣುತಿಹೆ

೧೭
ನೀತಿಯ ನುಳಿದಿಹ ಜಾತಿಯದೆಂತೋ
ಭೀತಿಯ ಬಿತ್ತುವ ಬವಣೆಯದು
ಹಿಂದುವನೆಲ್ಲವ ಕೊಂದಿಹ ಜಾತಿಯ
ಬಂಧನ ಬಿಡಿಸೈ ಜಗದೀಶ

೧೮
ಓಮಕ್ಷರದಾ ನಾಮದೆ ನೆನೆಸುವ
ಸೀಮೆಯ ದೇವನೆ ಎಲ್ಲಿಹೆಯೋ
ನಾಮದ ಮಾತ್ರದೆ ನರರಿಗೆ ಕಾಣುವ
ನೇಮವನೆಲ್ಲಿಯು ಕಾಣದಿಹೆ

೧೯
ಭೇದವ ತಿಳಿಯನಭೇದವ ತಿಳಿಯೆನು
ವಾದದ ಭೂಮಿಗೆ ಬೀಳದಿಹೆ
ಮೋದವು ತುಂಬಿರೆ ಹೃದಯವೆ ಭೇದಾ
ಭೇದದ ಬವಣೆಯ ನಾನರಿಯೆ

೨೦
ಮುಗಿಲಿನ ಮಡಲಲಿ ಮಿಡಿಮಿಡಿದಾಡುವ
ಮೋಡದ ಗಾಡಿಗೆ ಮೈಮರೆವೆ
ಎಲ್ಲಿಹೆ ದೇವನೆ ನಿಲ್ಲದೆ ಬಾರೆಲೊ
ಲಲ್ಲೆಯಮೆಲ್ಲುಲಿಸಲಿಗೆಯಲಿ

೨೧
ಬಾರೆಲೊ ದೇವನೆ ಆ೦ಬರದಿಂಬಿನ
ವಿವರದ ಲಂಬಿಸಿ ಚುಂಬಿಸುವ
ವನಪಿನ ಮೋಹದ ಮಗಿಲಿನ ಮೊನೆಯದು
ಮನವನು ಮಾರಿಸಿ ಕುಣಿಸುತಿದೆ

೨೨
ತೇಜದೆ ಬೆಳಗುವೆ ತೇಜವ ಕೊಡುನೀ
ವೀರ್ಯಕೆ ಇರ್ಕೆಯು ನೀನಿರುವೆ
ವೀರ್ಯವ ಕೊಡುನೀ ಒಲವನು ಕೊಡುನೀ
ಬಲವಂತನು ನೀನಾಗಿರುವೆ

೨೩
ಓಜವ ಕೊಡುನೀ ಓಜವು ನೀನೇ
ಮನ್ಯುಗೆ ಮನೆ ನೀನಾಗಿರುವೆ
ಮನ್ಯುವ ಕೊಡುನೀ ಸಹನವ ಕೊಡುನೀ
ಸಹನದ ಸೀಮಾಪುರುಷನಿಹೆ.
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...