Home / ಕವನ / ಕವಿತೆ / ಪ್ರಾರ್ಥನೆ

ಪ್ರಾರ್ಥನೆ

|| ಓಮ್ ||


ಪರಮನೆ ನಿನ್ನ ಪರಿಯನು ಪರಿಕಿಸೆ
ಬರಿಸಿದೆ ಬಾರದ ಭವಗಳಲಿ
ತಿರೆಯಲಿ ಮೆರೆಯಲು ತನವನು ತರಿಸಿದೆ
ಅರಿಯದ ಜನನಿಯ ಜಠರದಲ್ಲಿ


ಆಗುವದೆಲ್ಲವು ಆಗಲಿದೇವನೆ
ಭೋಗಿಪ ಕರ್ಮವಭೋಗಿಸುವೆ
ನೀಗದ ದುಗುಡವ ಬೆಂಕೊಂಡಾಡಲಿ
ಭೋಗಿಪ ಕರ್ಮವ ಭೋಗಿಸುವೆ


ಕೇಸುವಿನೆಲೆಗಳ ಮೇಲೆಯ ಬೀಳುವ
ನೀರದು ಜಾರುವ ತೆರದಿಂದೆ
ಹೊಸಹೊಸ ಸಂಕಟ ಸಂಚಯವೆರಗುತ
ಮು೦ಕೊ೦ಡೋಡಲಿ ಮನದಿಂದೆ


ಟೊಂಗೆಯ ಮೇಲಣ ಮಂಗನತೆರದಲಿ
ಲಂಘನ ಗೆಯ್ಯುವ ಮನವನ್ನು
ಮೂಡಣಗೂಳಿಯ ಮೂಗಿನದಾಣದ
ತಿರುಗಿಸು ನಿನ್ನಡಿದಾವರೆಗೆ


ಕಾರುಣಾಂಬುಧಿ ಕನಿಕರ ತೋರೆಲೊ
ಕರಗುವ ಕರುಳಿನ ನಿಲಯಕ್ಕೆ
ಬಾಳಿನ ಬೆಳಕದು ಸಾಲದೆ ಸಾಗಿದೆ
ಕೇಳುವೆ ಶಾಂತಿಯ ಕುಡುದೊರೆಯೆ


ತಾಯಿಯು ನೀನೇ ತಂದೆಯ ನೀನೇ
ಬ೦ಧುವು ನೀನೇ ಬಳಗಗಳು
ನೀನೇ ದೇವನೆ ಜನತೆಯು ನೀನೇ
ಸರ್ವವು ನೀನೇ ಜಗದೀಶ


ಮಕ್ಕಳ ಮುದ್ದಿನ ಮಾತಿಂದಳಲುತೆ
ಬಿಕ್ಕುತ ಕೇಳುವೆ ದರುಶನವ
ಸತಿಪತಿ ಮಿಥುನದ ವಿರಹದ ಸರದೊಳು
ತೀಡುತ ಬೇಡುವೆ ಭೆಟ್ಟಿಯನು


ತಾಯಿಯೆ ಆದರೆ ತ೦ದೆಯೆ ಆದರೆ
ಪತಿನೀನಾದರೆ ಕಾಡುವೆಯ
ತಾಯಿಯ ತಂದೆಯ ಪಾಶದ ಪರಿಯನು
ಸತಿಪತಿ ಸಲುಗೆಯು ನೀ ನರಿಯ


ಕಾಡುವೆ ಯಾತಕೊ ಕಾಡಿಸಿ ಕಾಡಿಸಿ
ನೋಡುವೆ ಯಾತಕೊ ಪೊಡವಿಪನೆ
ಜೇಡನ ಹುಳುವಿನ ಬೀಡೊಳು ಬೀಳಿಸಿ
ಕಾಡಿಪ ಗಾಡಿಯದೇನಯ್ಯ

೧೦
ನಿಧಿಯನು ಬೇಡೆನು ಪದವಿಯ ಬೇಡೆನು
ಪದುಳದೆ ಬೇಡುವೆ ದರುಶನವ
ಹೃದಯದೆ ಕದಲದ ಬಕುತಿಯ ಬೆಳ್ಗೊಡೆ
ಬೇಡುವೆ ಕೇಳೆನು ಪರತನ್ನು

೧೧
ನಶಿಸದ ನಾಕದ ನಿ್ಧಿಯನು ಹೊಂದೆನು
ಜನಪದ ಸದನವು ಸೊರಗುತಿರೆ
ಜನುಮಾಂತರಗಳ ಜನಪದ ಸೇವೆಯ
ಜನುಮವ ನೀಡೈ ಪರಮೇಶ

೧೨
ದೇಹದ ದಾರ್ಢ್ಯವು ದಾಟುತಲೋಡುವ
ಮುನ್ನಮೆ ಸನ್ನುತ ಪರಮನನು
ಭವಸಂಸಾರದ ಬವರದ ಬಳಿವಿಡಿ
ದಾಡುತ ಪಾಡೆಲೆ ಒಡಲೊಡೆಯ

೧೩
ಕಾಣದ ವಿಶ್ವವು ಕಾಣುತಲೆದ್ದಿತು
ದೇವನ ಲೀಲಾ ಮಾತ್ರದಲಿ
ಲೀಲೆಯದೆಂತೋ ಬಾಲಕವೃಂದದ
ಗುರಿಗೊತ್ತಿಲ್ಲದ ಚೇಷ್ಟೆಯದೊ ?

೧೪
ಹುಡುಗರ ತ೦ಡವು ಹೂವಿನ ಮೇಲಿನ
ಹುಳಿಹುಪ್ಪಡಿಗಳ ಹಿಡಿಹಿಡಿದು
ಕಾಡುತ ನಲಿನಲಿದಾಡುತ ನೋಡುತ
ಪೀಡಿದ ನೀತಿಯಿದೇನಯ್ಯ

೧೫
ಭವಸಂಸಾರದ ಬವರದ ಬವಣೆಯ
ಬೇಳೊಳು ಪುಟಕಿಕ್ಕೇಳದಿರೆ
ಭುವನದ ಜೀವಿಯ ಬವಣೆಯನರಿಯುತ
ಬಗೆಹರಿಸುವ ಬಗೆ ತಾನರಿಯ

೧೬
ಜಾತಿಮತಂಗಳ ಕಲಹದ ಕೊಳೆಯಲಿ
ನೀತಿಯ ದೇವನ ಕಾಣದಿಹೆ
ಮಾತಿಗೆ ಮಾತಿಗೆ ಜಾತಿಯನೆತ್ತುವ
ಪಾಪಿ ಜನಗಳ ಕಾಣುತಿಹೆ

೧೭
ನೀತಿಯ ನುಳಿದಿಹ ಜಾತಿಯದೆಂತೋ
ಭೀತಿಯ ಬಿತ್ತುವ ಬವಣೆಯದು
ಹಿಂದುವನೆಲ್ಲವ ಕೊಂದಿಹ ಜಾತಿಯ
ಬಂಧನ ಬಿಡಿಸೈ ಜಗದೀಶ

೧೮
ಓಮಕ್ಷರದಾ ನಾಮದೆ ನೆನೆಸುವ
ಸೀಮೆಯ ದೇವನೆ ಎಲ್ಲಿಹೆಯೋ
ನಾಮದ ಮಾತ್ರದೆ ನರರಿಗೆ ಕಾಣುವ
ನೇಮವನೆಲ್ಲಿಯು ಕಾಣದಿಹೆ

೧೯
ಭೇದವ ತಿಳಿಯನಭೇದವ ತಿಳಿಯೆನು
ವಾದದ ಭೂಮಿಗೆ ಬೀಳದಿಹೆ
ಮೋದವು ತುಂಬಿರೆ ಹೃದಯವೆ ಭೇದಾ
ಭೇದದ ಬವಣೆಯ ನಾನರಿಯೆ

೨೦
ಮುಗಿಲಿನ ಮಡಲಲಿ ಮಿಡಿಮಿಡಿದಾಡುವ
ಮೋಡದ ಗಾಡಿಗೆ ಮೈಮರೆವೆ
ಎಲ್ಲಿಹೆ ದೇವನೆ ನಿಲ್ಲದೆ ಬಾರೆಲೊ
ಲಲ್ಲೆಯಮೆಲ್ಲುಲಿಸಲಿಗೆಯಲಿ

೨೧
ಬಾರೆಲೊ ದೇವನೆ ಆ೦ಬರದಿಂಬಿನ
ವಿವರದ ಲಂಬಿಸಿ ಚುಂಬಿಸುವ
ವನಪಿನ ಮೋಹದ ಮಗಿಲಿನ ಮೊನೆಯದು
ಮನವನು ಮಾರಿಸಿ ಕುಣಿಸುತಿದೆ

೨೨
ತೇಜದೆ ಬೆಳಗುವೆ ತೇಜವ ಕೊಡುನೀ
ವೀರ್ಯಕೆ ಇರ್ಕೆಯು ನೀನಿರುವೆ
ವೀರ್ಯವ ಕೊಡುನೀ ಒಲವನು ಕೊಡುನೀ
ಬಲವಂತನು ನೀನಾಗಿರುವೆ

೨೩
ಓಜವ ಕೊಡುನೀ ಓಜವು ನೀನೇ
ಮನ್ಯುಗೆ ಮನೆ ನೀನಾಗಿರುವೆ
ಮನ್ಯುವ ಕೊಡುನೀ ಸಹನವ ಕೊಡುನೀ
ಸಹನದ ಸೀಮಾಪುರುಷನಿಹೆ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...