Home / ಕವನ / ಕವಿತೆ / ಧಾರಾವಾಹಿ

ಧಾರಾವಾಹಿ

ರಕ್ಕಸರಿನ್ನೂ ಮುಗಿದಿಲ್ಲ
ರಕ್ಕಸರಿನ್ನೂ ಬರುತಿದ್ದಾರೆ
ಬರಲೇಬೇಕು
ರಕ್ಕಸರಿನ್ನೂ ಬರದಿದ್ದರೆ
ಮುಂದುವರಿಯುವುದು ಹೇಗೆ ?
ರಕ್ಕಸರಿರ್‍ತಾರೆ ಖಳನಾಯಕರಿರ್‍ತಾರೆ
ಚೌಕಿಯಲ್ಲಿ ವೇಷ ತೊಟ್ಟುಕೊಂಡು
ಮಲಗಿರ್‍ತಾರೆ ಇಲ್ಲವೆ ಚಕ್ಕಂದ
ಆಡಿಹಾಡಿರ್‍ತಾರೆ ಹಾಡಿಕೊಂಡಿರ್‍ತಾರೆ
ಸಮಯಕ್ಕೆ ಸರಿಯಾಗಿ ಎದ್ದು ಬರುತ್ತಾರೆ
ದುಷ್ಟ ವೇಷ ಪುಂಡು ವೇಷ ಪ್ರಚಂಡ ವೇಷ
ಬಣ್ಣದ ವೇಷ
ಹಾ ಎಂಥಾವೇಶ
ರಕ್ಕಸರೂ ಕೆಲ ಛದ್ಮವೇಷ
ಬಡ ಬಡ ಬ್ರಾಹ್ಮಣ ಕಳ್ಳ ಸನ್ಯಾಸಿ
ದಾರಿಹೋಕ ಇಲ್ಲವೆ ತೀರಾ ತಲೆಹೋಕ
ಹಾವಾಡಿಗ ವರ್‍ತಕ ಅಥವಾ
ಜನಸಾಮಾನ್ಯ
ವಂಚಿಸಿದ ನಂತರ ಅವರು ನಿಜ ವೇಷವ
ತೋರುವರು
ಅದೇನು ಅಕರಾಳ ವಿಕರಾಳ
ಏನು ರಾಳದ ಪುಡಿ ಎಡಬಲ ದೊಂದಿ
ಬಯಲ ಕೊನೆಯಿಂದ ಎದ್ದು ಬರುತಾರೆ
ಅದೇನಟ್ಟಹಾಸ ಅದೇನು ಹೂಂಕಾರ
ನಿದ್ದೆ ತೂಗುತ ಇದ್ದ ಜನ ಈಗ ಎಚ್ಚರ
ನೋಡಿದರಿದೋ ಎದುರಿಗೇ ಇದೆ ಒಂದು ಘೋರಾಕಾರ
ಜನ ತತ್ತರ
ಒಮ್ಮೆಲೆ ಹಾಹಾಕಾರ
ಏನಿದು ಉಪಟಳ ಏನಿದು ಹಿಂಸೆ
ಏನಿದು ಜನಾಂಗ ಹತ್ಯೆ
ಈಗುಳಿದುದು ಒಂದೇ
ದೇವರ ಪ್ರಾರ್‍ಥನೆ
ಅಯ್ಯ ಬಾರೋ ಅಪ್ಪ ಬಾರೋ
ಹೇಗಾದರೂ ನಮ್ಮ ಕಾಪಾಡೋ
ಅವನೂ ಬರುತಾನೆ ಶಂಖ ಊದಿ
ಬರದೇನು ಮಾಡ್ತಾನೆ ಧರ್‍ಮಗ್ಲಾನಿ
ನಿವಾರಿಸಬೇಕು ತಾನೆ
ಹತ್ತವತಾರಿ ಇದೆಷ್ಟನೆ ಬಾರಿ
ಬಾರಿ ಬಾರಿಗೂ ರಕ್ಕಸರ ತಲೆ ಹಾರಿಸಿ
ದುಷ್ಟನಿಗ್ರಹ ಶಿಷ್ಟ ಅನುಗ್ರಹ
ಎಷ್ಟಾದರು ಅವತಾರ
ಅದೂ ಮುಗಿಯದು ಲೋಕವೆ ಹಾಗೆ
ನಿರಂತರ ಧಾರಾವಾಹಿ
ಇತ್ತ ವಿದೂಷಕ ವಿಧವಿಧ ವೇಷ
ಧರಿಸಿ ಪ್ರವೇಶಿಸುತಾನೆ
ಮಧ್ಯಂತರದಲಿ
ಅಥವಾ ಕೆಲವು ಸಲ ಸಣ್ಣ ಪಾತ್ರದಲಿ
ಉದಾಹರಣೆಗೆ ದೂತ
ಅಥವಾ ಅಂಬಿಗ
ರಾಯರ ಕೆಲಸ ದೇವರ ಕೆಲಸ
ಹೈರಾಣಾದ ಪ್ರೇಕ್ಷಕರನ್ನ
ನಗಿಸೋದೂ ಅವನ ಕೆಲಸ
ಆದರೆ ನಗಿಸೋದು ಯಾರು
ಖುದ್ದು ಈ ವಿದೂಷಕನ
ಅವನೆಂದೂ ನಗಲೇಬಾರದು
ಹೆಂಡ್ತಿಗೆ ಕಾಯಿಲೆ ಮಕ್ಕಳು ದಡ್ಡರು
ಇವನಿಗೊ ನಿದ್ದೇನೆ ಇಲ್ಲದೆ
ನೆತ್ತಿಗೇರಿದೆ ಕಪಿತ್ಥ ಜಂಬೂ
ಓ ದೇವರೆ, ನಿನ್ನ ಲೀಲೆಯಲಿ
ಈ ಇವನಿಗೇನು ಬೆಲೆ
ಈ ನಮಗೇನು ನೆಲೆ
ಬರಿನೆಲದಲ್ಲಿ ಕೂತವರು ನಾವು
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...