Home / ಕವನ / ಅನುವಾದ / ಮೂರು ಗುಲಾಬಿ ಪೊದೆಗಳು

ಮೂರು ಗುಲಾಬಿ ಪೊದೆಗಳು

ಮೂಲ: ವಿಲಿಯಂ ಬಟ್ಲರ್ ಏಟ್ಸ್

ಕುಲೀನ ಯುವತಿ ನುಡಿದಳು ಪ್ರೇಮಿಗೆ :
‘ತಕ್ಕ ತಿನಿಸನ್ನು ಉಣಿಸದ ಪ್ರೇಮವ
ಯಾರು ನೆಚ್ಚುವರು, ಹೇಗೆ?
ಅದಕ್ಕೆ ಪ್ರೇಮವೆ ಅಳಿಯುವುದಾದರೆ
ಹಾಡುವಿ ಪ್ರೇಮವ ಹೇಗೆ? ಆಗ
ನಾ ಗುರಿಯಾಗುವೆ ನಿಂದೆಗೆ.
ಓ ನನ್ನೊಲವೇ, ಓ ನನ್ನೊಲವೇ,

‘ಬೆಳಕು ಇರದಿರಲಿ ನಿನ್ನ ಕೋಣೆಯಲಿ’
ನುಡಿದಳು ಪ್ರೇಮಿಗೆ ಚೆಲುವೆ,
‘ನಟ್ಟಿರುಳಲ್ಲಿ ನನಗೆ ನುಸುಳಿ ಬರ
ಲಾಗುವ ಹಾಗೆ ಶಯ್ಯೆಗೆ,
ನುಸುಳುತ ನನ್ನನ್ನು ಕಂಡರೆ ನಾನೇ
ಕುಸಿದೇ ಹೋಗುವೆ. ಒಮ್ಮೆಗೇ’
ಓ ನನ್ನೊಲವೇ, ಓ ನನ್ನೊಲವೇ.

‘ಗುಟ್ಟಿನಲ್ಲಿ ಒಲಿದಿರುವೆ ಒಬ್ಬನನು’,
ಯುವತಿ ಹೇಳಿದಳು ದಾಸಿಗೆ.
‘ಕಳೆದುಕೊಂಡೆನೋ ಅವನೊಲವನ್ನ
ಕುಸಿದೇ ಹೋಗುವೆ ಮಣ್ಣಿಗೆ – ಹಾಗೇ
ನೀಗಿಕೊಂಡರೂ ನನ್ನ ಕನ್ನೆತನ
ಕುಸಿದೇ ಹೋಗುವ ಒಮ್ಮೆಗೇ.
ಓ ನನ್ನೊಲವೇ, ಓ ನನ್ನೊಲವೇ.

‘ಮಲಗು ನೀನವನ ಬದಿಯಲ್ಲಿ
ನಾನೇ ಎನ್ನಿಸುವಂತೆ’
ಬೆಳಕೇ ಇಲ್ಲದ ಕಡೆಯಲಿ, ಹೆಣ್ಣೇ
ಎಲ್ಲದೇಹ ಸಮವಂತೆ,
ಬೆತ್ತಲೆಯಾಗುವ ಮೈಗಳಲಿ
ವ್ಯತ್ಯಾಸವೆ ಇರದಂತೆ’.
ಓ ನನ್ನೊಲವೇ, ಓ ನನ್ನೊಲವೇ.

ಯಾವ ನಾಯಿಯೂ ಬೊಗಳಲಿಲ್ಲ ನಡು-
ರಾತ್ರಿ ಎಂಥ ಮೊಳಗು,
‘ಎಂಥ ಒಳ್ಳೆ ಆಲೋಚನೆ, ನಲ್ಲನ
ಮುಖದೊಳೆಂಥ ಬೆಳಗು’;
ಎನ್ನಿಸಿಯೂ ನಿಟ್ಟುಸಿರು, ದಾಸಿ ಇಡಿ
ದಿನ ಆಕಳಿಸುತ್ತಿರಲು.
ಓ ನನ್ನೊಲವೇ, ಓ ನನ್ನೊಲವೇ.

‘ಬೇಡ ಬೇರೊಂದು ಹಾಡಿನ ಹಂಗು’
ಎಂದನು ಆ ಯುವಕ,
‘ನಲ್ಲೆ ಮೊದಲ ಸಲ ಕೂಡಿ ಹಾಡಿದಳು
ಇಂದಿಗಾಯ್ತು ವರುಷ
ಗಂಟೆ ಬಡಿಯಿತೋ ಹೊದಿಕೆಯೊಳೊಬ್ಬನೆ
ಉಳಿಯುವೆ ನಲ್ಲೆಗೆ ಕಾಯುತ’.
ಓ ನನ್ನೊಲವೇ, ಓ ನನ್ನೊಲವೇ.

‘ನಗುವ, ಅಳುವ, ಪವಿತ್ರಗೀತೆ
ವ್ಯಭಿಚಾರೀ ಗೀತೆ’,
ಎಂದರು ಜನ. ಹಿಂದೆಂದೂ ಇಲ್ಲ
ಇಂಥದ ಕೇಳಿದ್ದಿಂದೇ;
ಇಂಥ ಸವಾರಿಯ ಮಾಡಿದ್ದವನೇ
ಯಾರೂ ಮಾಡಿಲ್ಲ ಹಿಂದೆ.
ಓ ನನ್ನೊಲವೇ, ಓ ನನ್ನೊಲವೇ.

ಆದರೆ ಓಡುತ ಕುದುರೆ ಕಾಲನ್ನು
ಇಟ್ಟಿತು ಮೊಲಬಿಲದೊಳಗೆ
ಕೆಳಗೆ ಉರುಳಿ ಸತ್ತನು ಆ ಯುವಕ
ಯುವತಿ ಕಂಡಳದ ತಾನೇ,
ಅವನಾತ್ಮವನೇ ಒಲಿದವಳಲ್ಲವೆ?
ತಾನೂ ಸತ್ತಳು ಒಡನೆ.
ಓ ನನ್ನೊಲವೇ, ಓ ನನ್ನೊಲವೇ.

ದಾಸಿ ಬಾಳಿದಳು ಮುಂದೂ – ಬಂದುವು
ಗೋರಿಗಳವಳ ವಶಕ್ಕೆ,
ನೆಟ್ಟಳು ಎರಡು ಗುಲಾಬಿಯ, ಬೆಳೆದುವು
ದೊಡ್ಡದಾಗಿ ಮೇಲಕ್ಕೆ,
ಒಂದೇ ಮೂಲದ ಎರಡು ಟಿಸಿಲಂತೆ
ಹಾಕಿಕೊಂಡವು ತೆಕ್ಕೆ.
ಓ ನನ್ನೊಲವೇ, ಓ ನನ್ನೊಲವೇ.

ಮುದುಕಿಯಾಗಿ ಕಡೆಯುಸಿರ ಬಿಡುವಾಗ
ಬಂದನು ಪಾದ್ರಿ ಬಳಿಗೆ,
ತೋಡಿಕೊಂಡಳು ಕಥೆಯನ್ನೆಲ್ಲಾ
ಮರುಗಿದ ಪಾದ್ರಿ ಒಳಗೇ,
ಒಳ್ಳೆಯ ಜೀವ ಒಳ್ಳೆಯ ಹೃದಯವ
ಅರಿಯದಿದ್ದೀತು ಹೇಗೆ?
ಓ ನನ್ನೊಲವೇ, ಓ ನನ್ನೊಲವೇ.

ಒಡತಿಯ, ನಲ್ಲನ ಗೋರಿಯ ಬದಿಗೇ
ಅವಳದೂ ಇರುವಂತೆ
ಪಾದ್ರಿ ಮಾಡಿಸಿದ ಗೋರಿಯ, ಮೇಲೆ
ನೆಡಿಸಿದ ಗುಲಾಬಿ ಟೊಂಗೆ,
ಹೂವು ಸುರಿಸುವುವು ಮೂರು ಗಿಡಗಳೂ
ಹೆಣೆದಿವೆ ಒಂದಕ್ಕೊಂದು,
ಯಾವ ಗಿಡದ ಹೂ ಯಾವುದು ತಿಳಿಯದು
ಕೀಳುವ ಜನಕ್ಕೆ ಇಂದೂ.
ಓ ನನ್ನೊಲವೇ, ಓ ನನ್ನೊಲವೇ.
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...