Home / ಕಥೆ / ಸಣ್ಣ ಕಥೆ / ಶ್ರೀರಂಗಪಟ್ಟಣದ ಅಲಮೇಲಮ್ಮ

ಶ್ರೀರಂಗಪಟ್ಟಣದ ಅಲಮೇಲಮ್ಮ

ವಿಜಯನಗರದ ಅರಸರ ಪ್ರತಿನಿಧಿಯಾಗಿ ತಿರುಮಲರಾಯನು ಶ್ರೀರಂಗಪಟ್ಟಣದಲ್ಲಿದ್ದುಕೊಂಡು ರಾಜಒಡೆಯರು ಮುಂತಾದ ಒಡೆಯರಿಂದಲೂ ಪಾಳಯಗಾರರಿಂದಲೂ ಪೊಗದಿಯನ್ನು ತೆಗೆದುಕೊಳ್ಳುತಿದ್ದನಷ್ಟೆ. ತಿರುಮಲರಾಯನೂ ಆತನ ಹೆಂಡತಿಯಾದ ಅಲಮೇಲಮ್ಮನೂ ಶ್ರೀರಂಗಪಟ್ಟಣದ ರಂಗನಾಥಸ್ವಾಮಿಯಲ್ಲಿ ಬಹಳ ಭಕ್ತಿಯುಳ್ಳವರಾಗಿದ್ದರು. ದೇವರ ಉತ್ಸವಕಾಲಗಳಲ್ಲಿ ಅಲಮೇಲಮ್ಮನು ತಪ್ಪದೆ ದೇವರಸೇವೆ ಮಾಡುತ್ತಿದ್ದುದಲ್ಲದೆ ದೇವರ ಅಲಂಕಾರಕ್ಕಾಗಿ ತನ್ನ ಸ್ವಂತ ಆಭರಣಗಳನ್ನು ಕೊಡುತ್ತಿದ್ದಳು.

ರಾಜಒಡೆಯರು ದಿನೇ ದಿನೇ ಬಲಿಷ್ಟರಾಗುತ್ತ ಸುತ್ತ ಮುತ್ತಣ ಒಡೆಯರೊಡನೆ ಸ್ಪರ್ಧಿಸಿ ಜಯಶಾಲಿಗಳಾಗುತ್ತಿದ್ದರು. ಅಂತಹ ಕಾಲದಲ್ಲಿಯೇ ತಿರುಮಲರಾಯನಿಗೆ ಬೆನ್ನು ಫಣೆಯು ಪ್ರಾಪ್ತಿಯಾಯಿತು. ಅಲ್ಲದೆ ಚಂದ್ರಗಿರಿಯಲ್ಲಿದ್ದ ವಿಜಯನಗರದ ಅರಸನು ತಿರುಮಲರಾಯನು ಅಯೋಗ್ಯನೆಂದು ತಿರಸ್ಕಾರಮಾಡಿದ್ದನು. ಹೀಗೆ ತಿರುಮಲರಾಯನು ದುರವಸ್ಥೆಗೆ ಸಿಕ್ಕಿದನು. ಆಗ ತಲಕಾಡಿಗೆ ಹೋಗಿ ಅಲ್ಲಿ ದೇವರ ಸೇವೆಮಾಡಿದರೆ ಬೆನ್ನುವ್ರಣವು ವಾಸಿಯಾದೀತೆಂದು ಯಾರೋ ಸೂಚಿಸಿದರು. ತಿರುಮಲರಾಯನು ಶ್ರೀರಂಗಪಟ್ಟಣದ ರಕ್ಷಣೆಯನ್ನು ಸಮರ್ಥರಾಗಿದ್ದ ರಾಜಒಡೆಯರಿಗೊಪ್ಪಿಸಿ ತಲಕಾಡಿಗೆ ಹೊರಟನು. ಅಲಮೇಲಮ್ಮನೂ ಗಂಡನ ಜತೆಯಲ್ಲಿ ಹೊರಟಳು.

ತಿರುಮಲರಾಯನಿಗೆ ವಾಸಿಯಾಗುವ ಸಂಭವದೋರಲಿಲ್ಲ. ಆ ಸಮಯದಲ್ಲಿ ಶ್ರೀರಂಗಪಟ್ಟಣವನ್ನು ತಮ್ಮ ಸ್ವಾಧೀನದಲ್ಲಿಯೇ ಇಟ್ಟುಕೊಂಡು ತಾವೇ ಅರಸುತನವನ್ನು ವಹಿಸುವುದೊಳ್ಳೆಯದೆಂದು ರಾಜ ಒಡೆಯರಿಗೆ ತೋರಿತು. ಆದಕಾರಣ ತಿರುಮಲರಾಯನು ಹೊರಟುಹೋದ ಕೂಡಲೆ ರಾಜಒಡೆದುರು ಶ್ರೀರಂಗಪಟ್ಟಣದಲ್ಲಿ ಸಿಂಹಾಸನವನ್ನೇರಿ ನವರಾತ್ರಿಯ ಮಹೋತ್ಸವದ ಕಟ್ಟಳೆಯನ್ನು ಮಾಡಿ ನೆರೆಹೊರೆಯ ನಾಯಕರೂ ಒಡೆಯರೂ ತಮ್ಮ ವಶವರ್ತಿಗಳಾಗುವಂತೆ ಸನ್ನಾಹಪಟ್ಟರು.

ಸಿಂಹಾಸನವನ್ನೇರಿ ರಾಜ್ಯಭಾರವನ್ನು ವಹಿಸಿದಾಗ ರಂಗನಾಥ ಸ್ವಾಮಿಯ ಅರ್ಚಕನು ಬಂದು ಆ ದೇವರ ಉತ್ಸವಕಾಲದಲ್ಲಿ ಅಲಮೇಲಮ್ಮನವರು ತಮ್ಮ ರತ್ನ ಪಡಿ ನಗಗಳನ್ನು ಕೊಡುತ್ತಿದ್ದರು. ಈಗ ದೇವರ ಉತ್ಸವವನ್ನು ಮಾಡಲು ಆಭರಣಗಳಿರುವುದಿಲ್ಲ, ದೇವರ ವಿಗ್ರಹದ ಅಲಂಕಾರಕ್ಕೆ ತಕ್ಕ ಅಭರಣಗಳಿಗೆ ಅಪ್ಪಣೆಯಾಗಬೇಕು” ಎಂದು ಬಿನ್ನವಿಸಿದನು. ಆಗ ರಾಜಒಡೆಯರು ಅಮಲ್ಯವಾದ ಆಭರಣಗಳು ಕಳೆದುಹೋದುವಲ್ಲಾ ಎಂದು ಚಿಂತಿಸಿ, ಹೇಗಾದರೂ ಅವುಗಳನ್ನು ಹಿಂತಿರುಗಿ ಪಡೆಯಬೇಕೆಂದು ಯೋಚಿಸಿ, ಆಭರಣಗಳನ್ನು ಕೇಳಿ ತೆಗೆದುಕೊಂಡು ಬನ್ನಿರೆಂದು ಕೆಲವು ಭಟರನ್ನು ಮಾಲಂಗಿಗೆ ಕಳುಹಿಸಿದರು. ಮಾಲಂಗಿಯಲ್ಲಿದ್ದ ಅಲಮೇಲಮ್ಮನು ಭಟರ ಹೇಳಿಕೆಯನ್ನು ಕೇಳಿ ಆ ನಗಗಳು ನಮ್ಮ ಸ್ವಂತ. ಅವುಗಳನ್ನು ಕೊಡಲಾಗುವುದಿಲ್ಲ. ಇದನ್ನು ನಿಮ್ಮ ಒಡೆಯರಿಗೆ ತಿಳಿಯ ಹೇಳಿ” ಎಂದು ಹೇಳಿದಳು. ರಾಜಒಡೆಯರು ಇದನ್ನು ಕೇಳಿ ಹೇಗಾದರೂ ಆಭರಣಗಳನ್ನು ತರಬೇಕೆಂದು ಪುನಃ “ಇನ್ನು ಮೇಲೆ ಆಭರಣಗಳಿಂದ ನಿಮಗೇನು ಪ್ರಯೋಜನ ಶಾಂತರಾಗಿ ನೀವು ಕೊಡದಿದ್ದರೆ ಬಲಾತ್ಕಾರದಿಂದ ನಾವು ನಿಮ್ಮ ಆಭರಣಗಳನ್ನು ತೆಗೆದುಕೊಳ್ಳುತ್ತೇವೆ” ಎಂದು ಹೇಳಿ ಕಳುಹಿಸಿದರು.

ತಿರುಮಲರಾಯನಿಗೆ ತಲಕಾಡಿನಲ್ಲಿ ಗುಣತೋರಲಿಲ್ಲ. ದಿನೇ ದಿನೇ ಕೃಶವಾಗಿ ಮರಣೋನ್ಮುಖನಾಗಿದ್ದನು. ಆಗ ಅಲಮೇಲಮ್ಮನು “ಈ ಒಡೆಯರ ಹಟವೆಷ್ಟು! ಹೆಂಗಸರನ್ನು ನಿರ್ಬಂಧಿಸುವಷ್ಟು ಯೋಚನೆಯನ್ನು ಮಾಡಿದನಲ್ಲವೆ! ನನ್ನ ಯಜಮಾನರು ಬದುಕಲಿಲ್ಲ. ನಾನುಳಿದು ಪ್ರಯೋಜನವಿಲ್ಲ. ಅಂತ್ಯಕಾಲದಲ್ಲಿ ಹಿಂಸೆಕೊಟ್ಟನಲ್ಲವೆ ಈ ಒಡೆಯನು ” ಎಂದುಕೊಂಡು, ಬಂದಿದ್ದ ಭಟರ ಕೈಲಿ ಮೂಗುತಿಯೊಂದನ್ನು ಕೊಟ್ಟು “ಇದನ್ನು ದೇವರಿಗೆ ಇಡಿ” ಎಂದು ಹೇಳಿ ಉಳಿದ ಒಡವೆಗಳನ್ನು ಮಡುಲಲ್ಲಿ ಕಟ್ಟಿ ಕೊಂಡು, ಮಾಲಂಗಿ ಮಡುವಿಗೆ ನಡೆದು “ಈ ರಾಜಒಡೆಯರು ನನ್ನನ್ನು ಈ ಪರಿ ಹಿಂಸಿಸಿದನು. ಆದ್ದರಿಂದ ನಾನು ಮಡುವಿನಲ್ಲಿ ಧುಮುಕಿ ಪ್ರಾಣಬಿಡುತ್ತೇನೆ. ಇನ್ನು ಮೇಲೆ ತಲಕಾಡು ಮರಳಾಗಿ, ಮಾಲಂಗಿ ಮಡುವಾಗಿ, ಮೈಸೂರು ದೊರೆಗೆ ಮಕ್ಕಳೇ ಇಲ್ಲವಾಗಲಿ” ಎಂದು ನುಡಿದು ನದಿಯಲ್ಲಿ ಧುಮುಕಿದಳು.

ಈ ಶಾಪವನ್ನು ಕೇಳಿ ರಾಜಒಡೆಯರು ಚಿಂತಾಕ್ರಾಂತರಾದರು. ಶಮನೋಪಾಯವೆಂದು ಅಲಮೇಲಮ್ಮನ ವಿಗ್ರಹವೊಂದನ್ನು ಮಾಡಿಸಿ ನವರಾತ್ರಿಕಾಲದಲ್ಲಿ ಅದಕ್ಕೆ ಪೂಜೆ ನಡೆಯುವಂತೆ ಕಟ್ಟಳೆಮಾಡಿದರು. ಈಗ್ಗೂ ನವರಾತ್ಯುತ್ಸವಕಾಲದಲ್ಲಿ ಆ ವಿಗ್ರಹಕ್ಕೆ ಪೂಜೆ ನಡೆಯುತ್ತದೆ. ಅದನ್ನು ಈಗ ಅಮಲಾದೇವತೆಯ ಪೂಜೆಯೆಂದು ಕರೆಯುತ್ತಾರೆ.
*****
[ವಂಶರತ್ನಾಕರ, ಪುಟ ೩೨-೩೪; ವಂಶಾವಳಿ ಸಂ.೧, ಪುಟ ೩೦-೩೧ ವಿಲ್ಕ್ಸ್‌, ಸಂ. ೧ ಪುಟ ೨೭]

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...