Home / ಕವನ / ಅನುವಾದ / ಶ್ರೀಹರೀ ಶ್ರೀಹರೀ ಶ್ರೀಹರೀ

ಶ್ರೀಹರೀ ಶ್ರೀಹರೀ ಶ್ರೀಹರೀ

ಮೂಲ: ಅರವಿಂದ ಗುಹಾ

ಹಿಂದೊಮ್ಮೆ ಒಬ್ಬ ಬೆಲೆವೆಣ್ಣನ್ನು ಕೂಡಿದೆ
ಎರಡೂವರೆ ರೂಪಾಯಿ ಕೊಟ್ಟು,
ಕತ್ತಲ ಓಣಿಯಲ್ಲಿ ಪಡೆದೆ, ಲೆಕ್ಕಾಚಾರದ ಪ್ರೀತಿ
ಕೊಟ್ಟ ಹಣಕ್ಕೆ ತಕ್ಕಷ್ಟು;
ನೆನಪಿಸಿಕೊಳ್ಳಲು ಅವಳ ಎಷ್ಟೋ ಯತ್ನಿಸುತ್ತೇನೆ
ಸ್ಮೃತಿಯ ತಳದಾಳಕ್ಕೇ ಜಾರಿ,
ಏನು ಮಾಡಿದರು ಸಹ ನೆನಪಾಗುತ್ತಿಲ್ಲವೇ
ಶ್ರೀಹರೀ ಶ್ರೀಹರೀ ಶ್ರೀಹರೀ!

ಅವಳ ಹೆಸರೆಂಥದೋ ನೆನಪಾಗುತ್ತಿಲ್ಲ ಈಗ
ಘಟನೆ ಬಲು ಹಿಂದೆ ನಡೆದದ್ದು,
ಏನವಳ ಹೆಸರು? ಮಾಲತಿಯೋ, ತರಂಗಿಣಿಯೊ
ರಾಧಾಮಣಿಯೊ, ನೆನಪು ಮಬ್ಬು;
ಇರಲಿ ಬಿಡಿ ಅದನ್ನೀಗ, ಒಂದು ಮಾತಂತು ನಿಜ
ಅವಳ ಜಡೆ ಬೆನ್ನಲ್ಲಿ ಜಾರಿ,
ಕಾಡಿಗೆ ಹೊಳಪಿನ ನೋಟ ಎದೆ ಸೀಳುವಂತಿತ್ತು
ಶ್ರೀಹರೀ ಶ್ರೀಹರೀ ಶ್ರೀಹರೀ!

ಎಷ್ಟನೆಯ ಸ್ವರ್ಗಕ್ಕೋ ರವಾನೆಯಾದಂತಿದ್ದೆ
ರತಿದೇವಿ ರೆಕ್ಕೆಯನ್ನೇರಿ,
ರೆಕ್ಕೆಯ ಸ್ಪರ್ಶವಷ್ಟೆ ನೆನಪಿನಲ್ಲುಳಿದಿದೆ
ಉಳಿದ ವಿವರಗಳೆಲ್ಲ ತೀರಿ;
ವಿಗ್ರಹದ ಮೂಗು ತುಟಿ ಕೈಕಾಲು ಕೆತ್ತನೆ
ಹೂತುಹೋಗಿದೆ ಮರವೆಯಲ್ಲಿ,
ಕಡೆದಿದ್ದ ಕಲ್ಲಷ್ಟೆ ನೆನಪಲ್ಲಿ ಉಳಿದಿದೆ
ಶ್ರೀಹರೀ ಶ್ರೀಹರೀ ಶ್ರೀಹರಿ!

ಕುರುಡನಿಗೆ ಕಂಡೀತು ಏನು? ಆದರೆ ನೋಡಿ,
ಕತ್ತಲೆಯನ್ನೆ ಅವನು ಹಾಡಬಹುದು,
ಕತ್ತಲೆಯಲ್ಲಿ ನಾನು ಮಟ್ಟೊಂದ ರಚಿಸಿದರೆ
ಹಾಡಲು ಅದಕ್ಕೆ ಒಂದು ಗೀತೆ ಬೇಕು;
ಎರಡೂವರೆ ರೂಪಾಯಿ ಕೊಂಡ ಪ್ರೀತಿಯು ಹೀಗೆ
ಹಾಡೊಂದು ಹುಟ್ಟಲು ಆಯ್ತು ದಾರಿ,
ಆಕಾಶ ಪುಟ್ಟ ಕೊಳದಲ್ಲಿ ಪ್ರತಿಬಿಂಬಿಸಿತು
ಶ್ರೀಹರೀ ಶ್ರೀಹರೀ ಶ್ರೀಹರೀ!
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...