Home / ಕವನ / ಕವಿತೆ / ಗುಡಿಯಾ

ಗುಡಿಯಾ

ಗುಡಿಯಾ ಆಟದ ಗೊಂಬೆಯಲ್ಲ
ರಕ್ತ ಮಾಂಸ ತುಂಬಿದ ಜೀವಂತ ಗೊಂಬೆ
ದುಃಖಕ್ಕೊಂದೇ ಹಕ್ಕು ಪಡೆದವಳು ಗುಡಿಯಾ
ನೋವಿನ ಕಡಲು ಒಡಲಲಿಟ್ಟುಕೊಂಡು
ನಾಪತ್ತೆಯಾದ ಪತಿ ಮರಳಿ ಬರುವ
ಹಾದಿ ಕಾಯ್ದಳು ದೀರ್‍ಘ ಕಾಲದ ತನಕ
ಕನಸು ಹುಸಿಹೋಯ್ತು ರೆಪ್ಪೆ ಭಾರವಾಯ್ತು.
ಹನಿಹನಿ ಉದುರಿಸಿ ಕಣ್ಣ ಕಿಂಡಿ ಬರಿದಾಯ್ತು
ಕೊನೆಗೆ ವಿದಾ ಹೇಳಿ ಮನದ ಕದವಿಟ್ಟುಕೊಂಡಳು.
ಮೌನ ಕಡಲಿಗೆ ಮರುಮಾತಿಲ್ಲದೆ ಶರಣಾದಳು
ಈಜಿದಳು ಭಯಂಕರ ಅಲೆಗಳಿಗೆ ಎದುರಾಗಿ
ನಕ್ಕಿದ್ದೇಷ್ಟೋ! ಬಿಕ್ಕಿದ್ದೆಷ್ಟೋ! ವಿರಹ
ಹಾಡಿದ್ದೇಷ್ಟೋ ಹಲುಬಿದ್ದೇಷ್ಟೋ ಗೀತೆ.

ಹರಿಯರಾಣತಿಯಂತೆ ಮರುಮದುವೆಯಾದಳು
ವಿಧಿಗೆ ತಲೆಬಾಗಿದಳು ಪುಟ್ಟ ಗುಡಿಯಾ
ಹೊತ್ತುನಿಂತಳು ಇವನ ಫಲಭಾರ
ಹೊಸ ಬದುಕಿನ ಬಾಗಿಲಲ್ಲಿ ಗಸ್ತುನಿಂತಳು.
ಮರಳಿ ಬಂದಿದ್ದ ಮೊದಲ ಪತಿ ಆರೀಫ್
ಮೈ ಮನಗಳಲ್ಲಿ ತೌಫಿಕನ ಬೆಳಕಿನ ಚುಳಕ
ವಿಧಿಯಾಟಕ್ಕೆ ಬೇಸ್ತು ಬಿದ್ದಳು ಗುಡಿಯಾ
ಸಂಕೀರ್‍ಣ ಬದುಕಿಗೆ ಎರವಾದಳು.

ಮೂಡಿದ ಮಿಡಿಗೆ ಅಗಲಿಕೆಯ ಭಯವೆ?
ಜೇನ ಸುರಿಯುವ ಬೊಚ್ಚು ಬಾಯಿಯ ಕೂಸು
ಹೆತ್ತಮ್ಮನ ಗುರುತಿಸಿ ಕೇಕೆ ಹಾಕುವ ಮುನ್ನ
ಒದ್ದು ಅಮ್ಮನ ಎದೆ ಹಾಲು ಹೆಕ್ಕುವ ಮುನ್ನ
ಜಮಾತಿನ ತೀರ್‍ಮಾನ ಹೊರಬಿತ್ತು
“ಕರುಳ ಬಳ್ಳಿಯನ್ನು ಇವನಿಗೊಪ್ಪಿಸಿ
ಮರಳಿ ಹೋಗಬೇಕು ಅವನಲ್ಲಿಗೆ”
ತೀರ್‍ಮಾನ ಕೇಳಿದ ಮೀನಾರಿನ ಮೈಕು
ಅಲ್ಲಾಹು ಎಂದು ಮೌನವಾಯಿತು.

ಭೂಮಿ ಎದೆ ಬರಿಯುವಂತೆ ರೊದಿಸಿದ
ಗುಡಿಯಾಳ ಆರ್‍ತ ಬಿಕ್ಕುಗಳ ಶಬ್ದ
ತಟ್ಟಲಿಲ್ಲವೆ ಜಮಾತಿನ ಹೃದಯಕೆ?
ಭೂಮಿ-ಆಗಸಕೆ, ತಾಯಿ ಮಗುವಿಗೆ
ಹಾಕಬಹುದೇ ಬಹಿಷ್ಕಾರ?
ಕಂಪಿಸಿದ ಗುಬ್ಬಿ ಹೃದಯ ಹಾಲಹಲ
ಕ್ರೌಂಚ ಪಕ್ಷಿಯ ಮೌನ ರೋದನ
ತಟ್ಟಲಾರದೇ ಜಮಾತಿನ ಕಟ್ಟೆಗೆ?

ಹೆಣ್ಣಿನ ಮಾತೃತ್ವ ಆಟದ ವಸ್ತುವೇನೆ?
ನಿಷೇಧದ ಬೇಲಿಗಳ ಕಿತ್ತೆಸೆದು
ಸೊಕ್ಕಿದ ಕೊಕ್ಕುಗಳ ಕತ್ತರಿಸಿ
ಶಕ್ತಿ ಒಗ್ಗೂಡಿಸಿ ಹೊರಗೆ ಬಾ ಗುಡಿಯಾ
ಬದುಕು ಮಾಧ್ಯಮದ ವಿಷಯವಲ್ಲ
ಚಪ್ಪರಿಸುವ ಸುದ್ದಿಯಲ್ಲ.
ಎದ್ದು ಹೇಳುಬಾ ನಿನ್ನದೇ ನಿರ್‍ಧಾರ.
ಕಿಕ್ಕಿರಿದ ಜಮಾತಿನ ಮಧ್ಯೆ
ಸಿಕ್ಕಲಾರರೇ ಒಬ್ಬರಾದರೂ ಸಂತರು
ನಿನ್ನ ನೋವ ಕರಗಿಸಿ
ಸಂತೈಸುವ ಪೈಗಂಬರರು.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...