Home / ಕವನ / ಕವಿತೆ / ಪ್ರಭುವೇ ಹಬ್ಬಗಳನ್ನೇಕೆ ಮಾಡಿದೆ

ಪ್ರಭುವೇ ಹಬ್ಬಗಳನ್ನೇಕೆ ಮಾಡಿದೆ

ನನ್ನ ಮನೆಯ ನೆತ್ತಿಯ ಮೇಲೆ
ಸೂರ್ಯ ಇನ್ನೂ ಹುಟ್ಟಿರಲಿಲ್ಲ.
ಒಲೆಗೆ ಬೆಂಕಿಯ ಕಾವು ಸಿಕ್ಕಿರಲಿಲ್ಲ
ಚಳಿಯಲ್ಲಿ ನಡುಗುತ್ತ ಮಲಗಿದ್ದ
ಹಸಿವಿನಿಂದ ಚಡಪಡಿಸುತ್ತಿರುವ
ಮಕ್ಕಳಿಗೆ ಹೇಗೆ ಹೇಳಲಿ ನಾನು
ನಮ್ಮ ರಂಜಾನಿನ ಉಪವಾಸ
ಇನ್ನೂ ಮುಗಿದಿಲ್ಲ ಎಂದು.
ಹಾಳಾದ ಚಳಿಗೆ ಮತ್ತಷ್ಟು ಹಸಿವು
ಅಳಬೇಡ ಕಂದ ಇಂದು ಪವಿತ್ರಹಬ್ಬ
ರಂಜಾನಿನ ಪುಣ್ಯದಿನ ನಮಾಜಿಗೆ ಹೋಗು
ಅಲ್ಲಾಹ್ ಬಡವರ ಕೈ ಬಿಡಲಾರ.

ಪುಟ್ಟ ಮಕ್ಕಳು ಪ್ರಾರ್ಥನೆ ಮಾಡಿದರೆ
ಕರುಣಾಮಯನಿಗೆ ಬೇಗ ಮುಟ್ಟುತ್ತದೆ
ಅಳಬಾರದು ಬೇಟಾ ಇಂದು ಪುಣ್ಯದಿನ
ಎದ್ದು ನಮಾಜಿಗೆ ಹೋಗು ಮಸೀದಿಗೆ
ಅಮ್ಮಿ ಹೇಳುವ ಮಾತುಗಳು,
ಕಿವಿಗಪ್ಪಳಿಸಿ ಹಿಂತಿರುಗಿ ಹೋದವು.
ದೇವರು ನಮಗೆ ಬಡವರಾಗಿ
ಹುಟ್ಟಿಸಿದ ಸಿಟ್ಟಿಗೆ ಮುಷ್ಟಿ ಬಿಗಿಯಾದವು.

ತಿಂಗಳುಪವಾಸದ ನಂತರ ಪವಿತ್ರ ಹಬ್ಬ
ಪಕ್ಕದ ಶ್ರೀಮಂತರ ಮನೆಯಿಂದ
ಕರಿದ ಮೀನು, ಚಿಕನ್ನು, ಮಟನ್ನು
ಭಕ್ಷಾನ್ನಗಳ ಘಮಘಮ ವಾಸನೆಗೆ
ಮಕ್ಕಳ ಹಸಿವಿನ ಕಿಚ್ಚು ಹೆಚ್ಚಾಗದಿರಲಿ ರಬ್ಬೆ.
ಗುಡಿಸಲ ಬಾಗಿಲು ಭದ್ರ ಮುಚ್ಚಿದಳು
ದೇವರಲ್ಲಿ ಪರಿಪರಿಯಾಗಿ ಪ್ರಾರ್ಥಿಸಿದಳು.
ನನ್ನ ಮಕ್ಕಳು ನೊಂದಾರು ಪ್ರಭುವೇ!
ಪಕ್ಕದ ಮಕ್ಕಳ ಹೊಸ ಬಟ್ಟೆಗಳು
ಅವರ ಕಣ್ಣಿಗೆ ಬೀಳದಿರಲಿ ರಬ್ಬೇ!

ಯಾಕಾದರೂ ನೀನು ಹಬ್ಬಗಳ ಮಾಡಿದೆ?
ಮಾಡಿದರೂ ಮಾಡಿದೆ ಬಿಡು
ನಮ್ಮನ್ನು ಬಡವರಾಗೇಕೆ ಹುಟ್ಟಿಸಿದೆ?
ಸರ್ವಶಕ್ತ ನೀನಂತೆ, ಒಂದು ಸಲ ನೀನು
ಲೋಕದ ಬಡತನದ ಬೇರುಗಳ ಸಹಿತ
ಬುಡದಿಂದ ಕಿತ್ತೆಸೆಯಬಾರದೇ?
`ನೆರೆಮನೆಯವರು ಹಸಿದಿರುವಾಗ
ಬೀರಿಯುವಂತೆ ತಿನ್ನುವುದು ಪಾಪ’
ಎಂದು ಪೈಗಂಬರರು ಹೇಳುತ್ತಿದ್ದರಲ್ಲವೇ

ಮನುಜ ಮನುಜರ ನಡುವಿನ
ಅಸಮತೆಯ ಗೋಡೆ ಕೆಡವಬಾರದೇ?
ನೋವಿನ ಉಸಿರು ಭಾರವಾದಾಗ
ಬದುಕು ಅಸಹನೀಯವಾದಾಗ
ಆ ಸೃಷ್ಟಿಕರ್ತನಿಗೇ ಕೇಳುತ್ತೇನೆ
ಜಗದಲಿ ಹಬ್ಬಗಳನ್ನೇಕೆ ಮಾಡಿದೆ?
ನೀನು ಹೇಳದಿದ್ದರೆ ನಿನ್ನ ದೇವಲೋಕದಲಿ
ನ್ಯಾಯಕ್ಕಾಗಿ ಜಿಹಾದ್‌ ಹೂಡುತ್ತೇನೆ
ಹೇಳು ಹಬ್ಬಗಳನ್ನೇಕೆ ಮಾಡಿದೆ
ಬಡತನವನ್ನೇಕೆ ಹುಟ್ಟು ಹಾಕಿದೆ.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...