Home / ಕವನ / ಅನುವಾದ / ಹಂಸಗಳ ಹಿಂಡು

ಹಂಸಗಳ ಹಿಂಡು

ಶರತ್ಕಾಲದ ಚೆಲುವ ಹೊದ್ದು ನಿಂತಿವೆ ಮರ
ಕಾಡುದಾರಿಗಳೆಲ್ಲ ಒಣಗಿವೆ;
ಕಾರ್‍ತಿಕದ ಸಂಜೆಬೆಳಕಲ್ಲಿ ಮಿಂಚುವ ನೀರು
ಶಾಂತ ಆಗಸವನ್ನು ಪ್ರತಿಫಲಿಸಿದೆ;
ಬಂಡಗಳ ನಡುವೆ ಮಡುನಿಂತ ನೀರಿನ ಮೇಲೆ
ಐವತ್ತೊಂಬತ್ತು ಹಂಸ ತೇಲಿವೆ.

ನಾನು ಮೊದಲೆಣಿಕೆ ಮಾಡಿದ್ದು ನೆನಪಿದೆ, ಅದು
ಹತ್ತೊಂಬತ್ತು ಶರದೃತುಗಳಷ್ಟು ಹಿಂದೆ.
ಕಂಡೆ, ಇದೊ ಎಣಿಸಿಯೇ ಬಿಟ್ಟೆ ಎನ್ನುವ ಮುಂಚೆ
ಥಟ್ಟನೇರಿ ಸವಾರಿ, ಹಾರಿಬಿಟ್ಟವು ಅಂಚೆ,
ಮೊರೆವ ರೆಕ್ಕೆಯ ಬೀಸಿ ಮುರಿದ ಬೃಹದಾಕಾರ
ವೃತ್ತ ಚಿತ್ರಗಳಾಗಿ ಹರಡಿ.

ಪರಿಭಾವಿಸಿದ್ದೆ ಆ ಉಜ್ವಲ ಜೀವಿಗಳ ಹಿಂದೆ
ಘಾಸಿಗೊಂಡಿದೆ ಈಗ ಹೃದಯ.
ಮೊದಲ ಸಲ ಸಂಜೆಬೆಳಕಲ್ಲಿ ಈ ದಡದಲ್ಲಿ
ನಿಂತು ತಲೆಮೇಲೆ
ಹಕ್ಕಿ ರೆಕ್ಕೆಯ ಗಂಟೆಬಡಿತ ಆಲಿಸಿ, ಆಹ!
ನಡೆದಿದ್ದೆ ಹಗುರಾಗಿ ಆಗ,
ಎಲ್ಲ ಬದಲಾಗಿದೆ ಈಗ

ದಣಿಯದಿವೆ ಈ ಪ್ರಣಯ ಜೋಡಿಗಳು ಈಗಲೂ
ಸ್ನೇಹ ಶೀತಳ ತರಂಗಿಣಿಯ ಬಗೆದೀಜುತ್ತ,
ಗಾಳಿಯಲ್ಲೇರುತ್ತ,
ಮುಪ್ಪು ಹೃದಯಕ್ಕೆ ಎಂದೆಂದೂ ತಾಗದಿರುತ್ತ;
ಎಲ್ಲಿ ಹಾರಲಿ ಅವು, ಆರದಿವೆ ಅವಕ್ಕೆ ರತಿಯುದ್ರೇಕ ಇಲ್ಲವೇ
ಗೆದ್ದು ಮೀರುವ ತವಕ,
ನಿಂತ ನೀರಿನ ಮೇಲೆ ಶಾಂತ ತೇಲಿವೆ ಹಕ್ಕಿ
ಏನು ಮೋಹಕ, ಎಷ್ಟು ಗೂಢ!
ಮುಂದೆಂದೊ ಒಂದು ದಿನ ಈ ಹಂಸ ಸಂಕುಲ
ಹಾರಿಹೋಯಿತೆ ಎಂದು ಚಿಂತಿಸುವ ಹೊತ್ತಲ್ಲಿ
ಯಾವ ಕೊಳದಲ್ಲಿ ಸರೋವರದ ತಡಿಯಲ್ಲಿ
ಯಾವ ಜೊಂಡುಗಳಲ್ಲಿ ತಂಗಿರುವುದೋ ಇದು
ಯಾರ ಕಣ್ಣಿಗೆ ಹಬ್ಬವಾಗಿ ನಲಿದಿರುವುದೋ!
*****
ಮೂಲ: ವಿಲಿಯಂ ಬಟ್ಲರ್ ಏಟ್ಸ್

ಕೂಲೆ ಉದ್ಯಾನ ಲೇಡಿ ಗ್ರೆಗರಿಯ ಮನೆಗೆ ಸೇರಿದ್ದು. ಏಟ್ಸ್ ಅಲ್ಲಿಯ ಕೊಳದಲ್ಲಿ ಹಂಸದ ಹಿಂಡೊಂದನ್ನು ನೋಡುತ್ತಾನೆ. ಹತ್ತೊಂಬತ್ತು ವರ್‍ಷಗಳಷ್ಟು ಹಿಂದೆ ಅಲ್ಲಿಯೇ, ಅಂಥದೇ ದೃಶ್ಯವನ್ನು ನೋಡಿದ್ದು ಅವನಿಗೆ ನೆನಪಾಗುತ್ತದೆ. ಆಗ ಅವನು ಯುವಕನಾಗಿದ್ದ; ಪ್ರೇಮದಲ್ಲಿದ್ದ; ಕುಣಿಯುವ ಹೃದಯ ಹೊತ್ತು ನಡೆದಿದ್ದ. ಈಗ ಅವನ ಮೇಲೆ ಕಾಲ ದಾಳಿಮಾಡಿದೆ, ಪ್ರೇಮ ಭ್ರಮೆಯೆನಿಸಿ ಕುಸಿದಿದೆ, ಹೃದಯ ಭಾರವಾಗಿದೆ. ಹಂಸಗಳು ಮಾತ್ರ ಆಗಿನಷ್ಟೇ ಚೆಲುವಾಗಿ, ಚುರುಕಾಗಿ, ಸಡಗರದ ಜೋಡಿಗಳಾಗಿ ಉಳಿದಿವೆ.

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...