Home / ಕವನ / ಕವಿತೆ / ಯಾರೆಂಬರು ಮುಗಿದುವೆಂದು ಬವರಾಂ?

ಯಾರೆಂಬರು ಮುಗಿದುವೆಂದು ಬವರಾಂ?

ಹತೋ ವಾ ಪ್ತವ್ಸ್ಯಸಿ ಸ್ವರ್‍ಗಂ ಜಿ ತ್ವಾವಾ ಭೋಕ್ಷ್ಯಸೇ ಮಹೀಮ್ |
ತಸ್ಮಾದುತಿಷ್ಟ ಕೌಂತೇಯ ಯುದ್ಧಾಯ ಕೃತನಿಶ್ಚಯ ತಿ (ಗೀತಾ ೨.೩೭)

ಯಾರಂಬರು ಮುಗಿದುವೆಂದು ಬವರಂ?
ನಂಬದಿರದು ಮರುಳರ ಮಾತೆ:
ನರನೆನ್ನವರಂ ನರನನ್ನೆವರಂ
ರಣಾಂಗಣವೆ ಶಾಂತಿಯ ಮಾತೆ!
ಶಾಂತಿಯೆ ನಿನ್ನಯ ಸಾಧನಮಾಗೆ
ಸದಾ ಸಿದ್ಧವಿರು ಯುದ್ಧಕ ಸಾಗೆ.

ಯುದ್ಧವಿಲ್ಲದಭಿವೃದ್ಧಿಯದುಂಟೆ?
ಯುದ್ಧದೆ ಮನುಜತೆಯ ವಿಕಾಸಂ-
ಬೆಂಕಿಯೊಳಲ್ಲವೆ ಕಬ್ಬಿಣ ದಾಂಟೆ
ಯತ್ರ ತಂತ್ರ ಶಕ್ತಿಯ ಸಾನಂ?
ಯೋಧನಾದ ನರನಮರಸಮಾನಂ,
ಯೋಧನೆಂದೆ ಸೃಷ್ಟಿಯ ಯಜಮಾನಂ.

ಕಟ್ಟಳೆಯೊಳೆ ಹಳಸಿದ ಬಾಳುವೆಗೆ
ಯುದ್ಧದಿ ನವಯೌವನ ಸಿದ್ಧಿ;
ಪರವಶತಗೆ ನಾಚದ ತಾಳುವೆಗೆ
ಯುದ್ಧದೊಳಾ ಪಾಪದ ಶುದ್ದಿ;
ಯುದ್ಧವೆ ಮೃತಜೀವನದುತ್ಥಾನಂ,
ಯುದ್ಧವೆ ಉತ್ಕ್ರಾಂತಿಯ ಸೋಪಾನಂ.

ನರತೆಯೊಂದ ನರನಾದಡನೇಕಂ,
ಏಕಾರ್‍ಥದ ಮಂದಿಯೆ ಜನತ;
ಜನತ ಜನತೆಯೊಳಗಿರದು ಏವೇಕಂ-
ಸ್ವಾರ್ಥಕಲ್ಲವಲ್ಲವೆ ತನತೆ?
ಸ್ವಾರ್ಥತೆ ಪರ್‍ಆರ್‍ಥದಲಿ ಕೆಯ್ಮಾಡ
ಸಂಗರವಾ ಪ್ರಸಭವನೀಡಾಡೆ

ಸರ್‍ವಜೀವಿಗಳೊಳೊರ್‍ವನೆ ಮನುಜಂ
ವರಹಿತ ಗೆಯಲೆಂದೊಗೆತಂದು,
ತನ್ನ ಹಂಗನವಮನ್ನಸಿ ದನುಜಂ
ತಾನೆನೆ ಪರರಲಿ ಮಲೆವಂದು,
ಕೇಸುರಿ ಬಲೆಯ ಕೇಸರಿಗೆಂತು
ಸಮರವಾತನಂ ಕಮರಿಸಲಂತು

ಸಾಲದು ನರಜನ್ಮವ ಬರಿದೆತ್ತ-
ಜನ್ಮಮಾತ್ರವೇತರ ಕಾರ್‍ಯಂ?
ನರನಹೆಯಾ? ದುಡಿ ನರತೆಯ ಮತ್ತ-
ದ್ವಿಜನಾಗದ ಮನುಜನನಾರ್‍ಯಂ!
ಪರರಳಲಿನ ವರಿಹರಿಕಗೆ ನಂದು
ಹೊಸ ಬಾಳೆತ್ತಿದವನೆ ದ್ವಿಜನಿಂದು.

ಅನ್ಯನಲ್ಲ, ನೀನೆ ನನ್ನ ಯೋಧಂ!
ಕಾದೆನಲಾ ಪ್ರಕೃತಿಯೆ ನಿನಗೆ.
ಕಟ್ಟಾಜ್ಞೆಯದಕ ತಟ್ಟಿ ವಿರೋಧಂ
ಎಲ್ಲಿನೆಲ್ಲಿಗುರುಳಿದೆ ಕೊನೆಗೆ!
ಕತ್ತಿಗೆ ಬಾರದ ಕಬ್ಬಿಣ ಬಾಗಿ
ಸುಟ್ಟಪುದನುದಿನ ಸಟ್ಟುಗಮಾಗಿ
ಅಳಿವೆಯೊ? ಉಳಿವೆಯೊ? ಪ್ರಶ್ನೆಯನಿತ್ತೆ-
ಮೂರನೆಯದಿಲ್ಲ ನಿನಗಾಯ.
ಕಾದದಡೆ ಸಾವಿಗವುತಣವಿತ್ತೆ
ಕಾದೆ ಸದೆದೆ ಸಾವನೆ ಸಾಯ!
ಪ್ರಬಲರಬಲರಂ ಕಬಲಿಸೆ, ಹಗೆಯಾ
ಕಾದೊ ಕಾದದೆಯೊ ಬದುಕುವೆ, ಬಗೆಯಾ!

ಕದೆ ಸಾವೆನೆಂದಕಟಾ ಗಾಸಿಯೊ?
ಕಾದದವರಿಗಿಲ್ಲವ ಸಾಯೆ?
ಕತ್ತಿಯಾಗಿ ಹಾಯೆ ಸಾಯೆ ವಾಸಿಯಾ?
ನಾಲದಂತ ಕಾಲಲಿ ತೇಯೆ?
ಸಾವಿಗಂಜೆ ಸಾವಿರ ಸಲ ಸತ್ತ,
ಸಾವನಂಜದವನೂಮ್ಮೆಯನಿತ್ತ.

ಕಾದೆ ಸಾವನೆಂದಲ್ಲಿಗೆ ಸರಿಯ,
ಬಾಳ್ವೆ ಸಾವಿನೊಳೆ ನೆರವೇರೆ?
ಬಾಳ್ವೆ ಬಾಳತಕ್ಕುದೊ ನಾನರಿಯೆ,
ಸಾವು ಸಾಯತಕ್ಕುದು ನೇರೆ!
ಧರ್‍ಮಯುದ್ಧವೊಂದಲ್ಲದೆ ಬೇರ
ದಾರಿಯೆ ವೀರಸ್ವರ್‍ಗವನೇರೆ?

ಸೆರೆಗೇಕಂಜುವೆ? ನೆರೆಯಾಳಲ್ಲವ
ತನ್ನ ಮನೆಯೊಳನ್ಯರ ತೊತ್ತು?
ಸಿಕ್ಕ ಮಡೆಯ ಮುಕ್ಕುವ ಗಿಳಿ ಬಲ್ಲವೆ
ಗೂಡೊ ಬೀಡೊ ಎನುವಾ ಗೊತ್ತು?
ಬಸುರಲಿ ಸೋಸಿಲ್ಲವೆ ನೀ ಸೆರೆಯಾ?
ಹೊಸ ಹುಟ್ಟಿನ ಬಸಿರಾ ಸೆರೆಯರಿಯಾ!

ತನ್ನ ಕಡುಕನ್ನೆಲ್ಲ ಮುನ್ನ ಕಾದು,
ತಾಯಿಳೆಯ ಬಿಡುಗಡೆಗೆ ಕಾದು,
ನರತೆಯ ಸರಿಸೋದರತೆಗೆ ಕಾದು,
ಮನುಜನ ವಿಮೋಚನೆಗೆ ಕಾದು.
ಪೂಸತೆ ಭವಿಷ್ಯವ ನೊಸಯಿಸೆ ಕಾದು,
ಬದುಕಿದೊಂದು ಕೂಳುಗುಳವೆನೆ ಕಾದು.

ನೀನಜರಾಮರನಹೆಯಾ? ಕಾದು-
ನರರಿಗೆ ವೆರೆತಮರತಯೊಳವೆ?
ಕಂಚೊ ಕಲ್ಲೊ ಕತೆ ಕವಿತೆಯೊ ಕಾದು
ನಿನ್ನನುಳಿಸೆ ನಿನಗಿನ್ನಳಿವೆ?
ಗೆದ್ದರೆ ಹೊಸ ಹೊತ್ತೆದ್ದುದು ಮುಂದೆ.
ಬಿದ್ದರೆ ನೇಸರಿನುದ್ದಕೆ ನಿಂದೆ!

ನಿನಗೆ ಕಾದೆನುವೆನಿದೊ ಧರ್‍ಮರಣಂ,
ಪರಾಕ್ರಮಣವದು ರಣವಲ್ಲ,
ವರರ ಬಿಡುವಿನವಹರಣವೆ ಮರಣಂ-
ಬಿಡುವ ತುಡುಕಿ ಕೆಡದವರಿಲ್ಲ.
ಬಿಡುಗಡೆ ಎನೆ ಜನಜನತೆಯ ಸೊತ್ತು,
ಕಳೆವನು ಸೆಳೆವನು ನಿಯತಿಯ ತುತ್ತು.

ಸಗ್ಗದಿಂದ ಸೋನೆಯಂತ ಸುರಿಯದು,
ಬಿಡುಗಡೆ ಗಡ ಬಾರದು ಬರಿದೆ!
ಕಾಯ್ವೊಡೆಯಗೆ ಬರಿ ಬಾಯಿಗೆ ದೊರೆಯದು-
ಕಾದದ ಕೆಯ್ಗೆಂದಿಗುಮರಿದೆ!
ದುಡಿಯದೆ ಪಡೆದಾ ಬಿಡುಗಡೆಯಲ್ಲ-
ರಣಹೇಡಿಗೆ ದೇವರ ನೆರವಿಲ್ಲ.

ಆಯುಧವಿಲ್ಲೆಂದೆದೆಗೆಡಬೇಡ-
ಯೋಧನೆತ್ತಲತ್ತಲೆ ಕತ್ತಿ!
ಸಾಧಕನೆ ತನ್ನ ಸಾಧನ, ನೋಡ!
ಹೇಡಿ ಏವನಾಯುದ್ಧದತ್ತಿ?
ಮನದೊರೆಯಲಿ ನಿನಗನುತಹ ಸಿರಿಯ
ಹೊತ್ತು ಕಾವ ಬಗೆಗತ್ತಿಯ ಹಿರಿಯ!

ನೆರವಿಗೆ ಯಾರೆಂದೇತಕ ಖನ್ನ
ಕಾದಿಸುವೊಡೆಯನೆ ಜತೆಗಿಲ್ಲಾ?
ಎಂದಿನಿಂದ ಕಾದವನಿದೊ! ನಿನ್ನ
ನುಳಿದು ತಾನೆ ಕಾದುವನಲ್ಲ.
ಕಂಡಿಸೆದೆಯನಿಡು ಗಂಡಡಿ ಮುಂದೆ
ನೂಕು ರವೀಂದು ಪತಾಕೆಯ ಹಿಂದೆ

ಕೇಳದೆ ಜಗದಿ ಗೋಳಿನ ಕಾಳ?
ಕಳಕಳಿಸದೆ ನಿನ್ನೆದೆಯಾರ?
ನಾಳೆ ಎಂಬ ಜಡಗೆಂದಿಗು ನಾಳ.
ಬಂದೆನೆಂಬ ಕುದುರೆಗೆ ಹಾರ!
ನೆಟ್ಟನೆ ರಣರಂಗದಿ ಮುಂಬರಿಯೊ,
ಜಯ ಶಾಂತಿ ಎಂದಶಾಂತಿಯನಿರಿಯಾ!
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...