Home / ಕವನ / ಕವಿತೆ / ಚಂದ್ರಗ್ರಹಣ

ಚಂದ್ರಗ್ರಹಣ

ಮೇಳ

ಒಂದು ಗ್ರಹಕೆ ಬಂತು ಗ್ರಹಣ,
ಇಂದೆ ಚಂದ್ರಗ್ರಹಣ
ಇಂದೆ ಚಂದ್ರಗ್ರಹಣೋ !
ಇಂದೆ ಚಂದ್ರಗ್ರಹಣ.

ಮೇಳದ ಹಿರಿಯ

ಕೆನೆವೆಳಕಿನ ಸೊನೆಯ ಚಂದ್ರ-
ನಾದನು ಕಪ್ಪಿಡಿದ ಲಾಂದ್ರ
ಪವನವಾಯ್ತು ತಾಮ್ರದ ವೈ
ಕತ್ತಲೆಯೇ ಎತ್ತಿದ ಕೈ.
ಮರುಳೆಂದವು – ಸೈ, ಸೈ, ಸೈ!
ದೆವ್ವ ಕುಣಿಯೆ : ಹೈ, ಹೈ, ಹೈ!
ತಬ್ಬಿಬ್ಬಾದವು ತಾರೆ
ಮಬ್ಬಿಡಿಯಲು ಹೌಹಾರೆ!

ಮೇಳ

ಒಂದು ಗ್ರಹಕೆ ಬಂತು ಗ್ರಹಣ,
ಇಂದೆ ಚಂದ್ರಗ್ರಹಣ.
ಇಂದೆ ಚಂದ್ರಗ್ರಹಣೋ!
ಇಂದೆ ಚಂದ್ರಗ್ರಹಣ.

ಮೇಳದ ಹಿರಿಯ

ತುಂಬುದೆರೆಯ ತಂಬುಲವನು
ತುಂಬ ಮೆಲುವ ಹಂಬಲವನು
ತಳೆದರಂತೆ ರಾಹು ಕೇತು :
ನೋಡಿದೆಂಧ ಹೇತು, ಬೇತು !
ಕಾಡಿನಲ್ಲಿ ಕಗ್ಗತ್ತಲೆ,
ಮನೆ ಮನೆಯಲಿ ಮಡಿಬತ್ತಲೆ !
ಬಂದಿತಾವುದೋ ವಿಪತ್ತು
ಮಂದಿ ತಿಳಿಯರದರ ಗತ್ತು.

ಮೇಳ

ಒಂದು ಗ್ರಹಕೆ ಬಂತು ಗ್ರಹಣ,
ಇಂದೆ ಚಂದ್ರಗ್ರಹಣ.
ಇಂದೆ ಚಂದ್ರಗ್ರಹಣೋ !
ಇಂದೆ ಚಂದ್ರಗ್ರಹಣ.

ಮೇಳದ ಹಿರಿಯ

ರಾಹು ಕೇತು ರಗಳೆ, ಕಂತೆ;
ಅಂಜಿಕೆಗಳ ಬಂಜೆ ಸಂತೆ.
ಮಣ್ಣಿಗರಿಗೆ ಹೊಳೆದಿರುವುದು,-
ಸತ್ಯಕಥೆಯು ತಿಳಿದಿರುವುದು :
ಹೊಂಗದಿರನಿಗೆದುರಾಗಿ
ಭೂಮಿಯು ಬರುತಿರಲಾಗಿ
ಬೀಳುತಿರುವ ಕಪ್ಪುನೆಳಲು-
ಅದುವೆ ಚಂದ್ರನಳಲು-ಬಳಲು
ಹುಣ್ಣಿಮೆಯನೆ ನುಂಗುವಂಥ
ರಾಹು ನಾವು, ನಮ್ಮ ಪಂಥ
ಪಂಧಾನವ ಸುತ್ತಿದೆ,
ಮುದ್ದು ಮುಗಿಲ ಮುತ್ತಿದೆ :
ಭೂಮಂಡಲ ಕೆಣಕುತಿದೆ,
ಗ್ರಹಮಂಡಲ ಹೆಣಗುತಿದೆ :
ಸಾಯ್ವೆಳಕದು ಮಿಣುಕುತಿದೆ:-

ಮೇಳ

ಒಂದು ಗ್ರಹಕೆ ಬಂತು ಗ್ರಹಣ,
ಇಂದೆ ಚಂದ್ರಗ್ರಹಣ
ಉಳಿದವಕೂ ತುಂಬಿದೆ ದಿನ.
ನಾಳೆ ಸೂರ್‍ಯಗ್ರಹಣ.

ಮೇಳದ ಹಿರಿಯ

ದೇ ದಾನ್ ! ಸುಟೇ ಗ್ರಾನ್ !
ದೇ ದಾನ್ ! ಸುಟೇ ಗ್ರಾನ್ !
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...