Home / ಕವನ / ಕವಿತೆ / ಸ್ವಾತಂತ್ರ್ಯ ಎಂದರೇನು

ಸ್ವಾತಂತ್ರ್ಯ ಎಂದರೇನು

ಅವರು ಹೆತ್ತು ಹೆತ್ತು ನಲುಗಿದ ಹೆಣ್ಣುಗಳು
ದುಡಿದು ದುಡಿದು ಸವೆದು ಹೋದ ದೇಹಗಳು
ಸಹಿಸಿ ಸಹಿಸಿ ಸುಣ್ಣವಾದ ಅವರ ಮನಸುಗಳು
ಸುತ್ತಲೂ ಎತ್ತರೆತ್ತರದ ಪಹರೆ ಗೋಡೆಗಳು
ಉಸಿರುಗಟ್ಟಿಸುವ ನಿಯಮಗಳು
ನಡುವೆ ಸಮಾಧಿಯಾದ ಬದುಕು.
ಗೋಡೆಯಾಚೆ ತೂಗುತ್ತಿದೆ ನೋಡು
ನಿರಂತರ ತಲ್ಲಾಖಿನ ಕತ್ತಿ
ಅದು ಯಾವಾಗ ಬೇಕಾದರೂ
ಅವಳ ಕತ್ತು ಕೊಯ್ಯುತ್ತದೆ.
ಪ್ರಪಂಚದ ಓದು ಅವಳಿಗೇಕೆ?
ಖುರಾನ್ ಓದು ಸಾಕು.
ಧರ್‍ಮ ಉಸ್ತುವಾರಿಯ ನಡುವೆ
ನಲುಗಿದ ಅವಳ ಬಾಲ್ಯ,
ನಾಟಿ ಕೋಳಿಗೆ ದಕ್ಕುವ
ವಿವಿಧ ಕಾಳಿನ ವೈವಿಧ್ಯ
ಹೆಕ್ಕಿ ತಿನ್ನುವ ಅವಕಾಶ
ಫಾರಂ ಕೋಳಿಗೆ ಎಲ್ಲಿ?
ಹಾಕಿದ ಫೀಡ್ಸ್, ನಿಂತ ನೀರನ್ನೇ ಕುಡಿದು,
ಪಂಜರದಲ್ಲಿ ಬಂಧಿ ಅವಳಿಗೆ
ಹೇಗೆ ದಕ್ಕಿತು ಸ್ವಾತಂತ್ರ್ಯ
ಬೆಳ್ಳಗೆ ಫಾರಮ್‌ ಕೋಳಿಯಂತಹ
ಬಿಳಿ ಹೆಂಡತಿ ಅವನ ಹೆಮ್ಮೆಯ ಆಯ್ಕೆ ನಿಜ.
ಇವಳಲ್ಲ, ಇನ್ನೊಬ್ಬಳು ಇದ್ದೇ ಇದೆಯಲ್ಲ!
ನಾಲ್ಕರತನಕದ ಗಡುವು ನಿರಾಳ
ಫಾರಂ ಕೋಳಿಗೆ ಕತ್ತಲ
ಗವಿಯ ಇಕ್ಕಟ್ಟಿನ ಬದುಕು
ಸೂರ್‍ಯ ಕಿರಣ ತಾಕದೇ
ವಿದ್ಯುತ್‌ ಬಲ್ಬಿನ ಬೆಳಕು
ಯಾವ ವಸಂತದ ರುಚಿಯೂ ಕಾಣದಿರುವ
ಅದರ ಬದುಕು ನಿರ್‍ಬಂಧಿತ
ಸರಪಳಿಗಳು, ಸರಹದ್ದುಗಳ ಮಧ್ಯ
ಶುದ್ಧ ಗಾಳಿ, ಬೆಳಕು ನಿಶಿದ್ಧ ವಲಯದಲಿ
ಅರಳಲಾರದೇ, ಮುದುಡಿದ ಕೆಂಪು ತಾವರೆ
ಚೌಕಟ್ಟಿನಲಿ ಬಂಧಿತ
ಕಪ್ಪು ಬಿಳುಪಿನ ಭಾವಚಿತ್ರದಲ್ಲಿ
ಮೂಡಲಾರದು ವೈವಿಧ್ಯತೆಯ ಬಣ್ಣಗಳು,
ಆಯ್ಕೆಯಿಲ್ಲ, ಇಚ್ಛೆಯಿಲ್ಲ.
ಕತ್ತಲ ಗವಿಯಲ್ಲಿ ಬೇತಾಳ
ಕಿಟಕಿಯಾಚೆ ಪರದೆ ಸರಿಸಿ ಇಣುಕಿದರೆ,
ಶೂನ್ಯ ತುಂಬಿದ ಆಕಾಶದಲ್ಲಿ
ದುಃಖದ ಕಾರ್‍ಮೋಡ ಚೆಲ್ಲಾಡಿ
ಆದರೂ ರೆಕ್ಕೆ ಪುಕ್ಕ ಹಚ್ಚಿಕೊಂಡು ಆಕಾಶದಲ್ಲಿ
ಹೂರ್‌ಪರಿ’ಯಂತೆ ಹಾರುತ್ತೇನೆ.
ಬಂಧನದ ಸರಪಳಿ ಕಿತ್ತೆಸೆದು ಬೆಳ್ಳಕ್ಕಿ
ನಿರಾಂತಕ ಹಾರಾಡುತ್ತೇನೆ.
ನಾನು ಅನುಭವಿಸಿದ ಬಂಧನದ ನರಕಯಾತನೆ
ಕೆಲ ದಿನಗಳಾದರೂ ಅವನೂ ಅನುಭವಿಸಲಿ
ಆಗ ತಿಳಿಯುತ್ತದೆ ಅವನಿಗೆ
ಸ್ವಾತಂತ್ರ ಎಂದರೇನೆಂದು.
*****
(ಹೂ‌ರ್ ಪರಿ-ದೇವಕನ್ಯೆ)

Tagged:

Leave a Reply

Your email address will not be published. Required fields are marked *

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...

ಕಾಲ ಹನ್ನೆರಡನೆ ಶತಮಾನ. ದೇಶ ಜಪಾನ್. ಅರಸನ ಹೆಸರು ಅಂತೋಕು. ವಯಸ್ಸು ಕೇವಲ ಏಳು ಸಂವತ್ಸರಗಳು. ಅಂತೋಕು ಹೈಕೆ ಎಂಬ ಸಾಮುರಾಯ ದಳದ ನಾಮ ಮಾತ್ರ ಮುಂದಾಳುವಾಗಿದ್ದು ನಿಜವಾದ ಅಧಿಕಾರ ಇವನ ಅಜ್ಜಮ್ಮನ ಕೈಯಲ್ಲಿತ್ತು. ಅಜ್ಜಮ್ಮನ ಹೆಸರು ನೀ ಎಂದು. ನೀಯ ಜವಾಬ್ದಾರಿ ಗುರುತರವಾಗಿತ್ತು ಎಂದು...

ಶೇಖರನಿಗೆ ಇನ್ನೂ ಎರಡು ದಿನಗಳ ‘ವಾರ’ ಕಡಿಮೆ ಬಿದ್ದಿತ್ತು. ಎಲ್ಲಿಯೂ ಹುಟ್ಟುವಂತೆ ತೋರಲಿಲ್ಲ. ಶ್ರೀಮಾನ್ ಪದ್ಮನಾಭ ಹೆಬ್ಬಾರರ ಮನೆಯಲ್ಲಿ ಕೇಳಬೇಕೆಂದು ನಾಲ್ಕಾರು ಸಲ ಯೋಚಿಸಿದ. ಆದರೆ ಅವರು ಭಿಕ್ಷುಕರನ್ನೂ, ವರ್ಗಣಿ ಕೇಳುವವರನ್ನೂ ವಾರದ ಮಾಣಿಗಳನ್ನೂ ಅಂಗಳಕ್ಕೂ ಬರಗೊ...

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...