Home / ಕವನ / ಕವಿತೆ / ಬೆಡಗಿ

ಬೆಡಗಿ

ಸುಡು ನಿನ್ನ ಸಿಂಗರವ,
ನಿನ್ನ ಸೊಗವ.
ಬಿಡು ನಿನ್ನ ಬೆಡಗ ಹಾ-
ಳಾಗಿಸಿತು ಜಗವ!
ಆಳಾಗಿಸಿತು ನೂರು
ದೇಹಗಳನು,
ತೊಳಲಾಡಿಸಿತ್ತೆನಿತೊ
ಗೇಹಗಳನು!
ನಿನ್ನ ಮಖಮಲು ಮುಖವ
ಬಣ್ಣಿಸಿದ ವೆಂಪು,-
ಕಳೆಯಲದು ನಿಲ್ಲುವವು
ನೂರು ಸಂಪು!
ಓ ಸುವಾಸಿನಿ! ನೀನು
ತೈಲಿಸಿದ ಕೇಶ,-
ಅದಕೆ ಬರಿದಾಯ್ತು ಜನ
ಶಂಕರಿಯ ಕೋಶ!
ಸುಡು ನಿನ್ನ ಸಿಂಗರವ,
ನಿನ್ನ ನೊಗವ.
ಬಿಡು ನಿನ್ನ ಬೆಡಗ, ಹಾ-
ಳಾಗಿಸಿತು ಜಗವ!

ನಿನ್ನ ಧಮನಿಯಲಿರುವ
ರಾಜರಕ್ತ
ಅನ್ಯಾಯಗಳ ತೀರ್‍ಥ-
ವೆಂದು ವ್ಯಕ್ತ
ಕೆಲಸವಿಲ್ಲದೆ ರಾಣಿ-
ವಾಸದಲ್ಲಿ
ಕುಳಿತರಳಿಸಿದ ಮಂದ-
ಹಾಸದಲ್ಲಿ
ನಿನ್ನ ಕುಲಕೋಟಿಯಾ
ಹೆಂಗಳೆಯರು
ಕಂಡಿಹರು ಸ್ವರ್‍ಗವನ್ನು,-
ನೆಲಕಿಳಿಯರು!
ನೂರು ಹೆಣ್ಣಿನ ಹೆಣ್ಣು-
ತನವೆ ಹೋಗಿ,-
ಕೂಲಿ ಹೆಣ್ಣಾಗಿ ಬರಿ
ಯಂತ್ರವಾಗಿ
ಸಾಯುತಿರೆ ಕೂಡಿಟ್ಟ
ಹಣದ ಗಂಟು,-
ಅದರಿಂದ ನಿನ್ನ ಚೆಲು
ವಿಕೆಗೆ ಉಂಟು,-
ನರಕದಾ ಮುಗಿಲಿಂದ
ಬಂದ ಮಿಂಚು,-
ನಿನ್ನ ಕೆಂದುಟಿಯ ನಗೆ,
ರಕ್ಕಸರ ಹೊಂಚು!
ಸುಡು ನಿನ್ನ ಸಿಂಗರವ,
ನಿನ್ನ ಸೊಗವ.
ಬಿಡು ನಿನ್ನ ಬೆಡಗ ಹಾ-
ಳಾಗಿಸಿತು ಜಗವ.

ದಿವ್ಯ ಸುಂದರಿಯಹುದು
ನೀನು ಬಾಲೆ.
ಸೆರೆಗೊಳುವ ಸೆರೆ ನೀನು;
ಹೆಂಡ. ಹಾಲೆ ?
ನಿತ್ಯ ಸಂಕಟ ಪಡಲು
ನೂರು ನರಪ್ರಾಣಿ,-
ಮೆರೆಯಲೆಳಸುವಿಯಲ್ಲ,
ಆಗಿ ಇಂದ್ರಾಣಿ?
ಬಾ ಇತ್ತ ಶಪಿಸುತ್ತ
ನಿನ್ನ ಕುಲಕೋಟಿ,-
ಬಾ ಇತ್ತ ಸಂವದದ
ಸೆರೆಮನೆಯ ದಾಟಿ!
ನೂರು ಗುಡಿಸಲಗಳಲಿ
ಮೀರಿ ನರಳಾಟ,-
ಕಾಸಿಲ್ಲ-ಈಸಿಲ್ಲ-
ವೆಂದು ಹೊರಳಾಟ!
ದೇವ ಕೊಟ್ಟಿಹ ಚೆಲುವ-
ದೊಂದೆ ಸಾಕು,
ಚಲು ಗುಲಾಬಿಗೆ ಬಣ್ಣ –
ನೆಯದೇಕೆ ಬೇಕು?
ಮೀಸಲಿಡು ಆ ಹಣವ
ಕಾಸಿಲ್ಲದರಿಗೆ.
ಇಳಿಯಾಣ್ಮಗೀವುದಿದೆ,-
ಇದೆ ಸುಂಕ, ತೆರಿಗೆ!
ಸುಡು ನಿನ್ನ ಸಿಂಗರವ,
ನಿನ್ನ ನೊಗವ.
ಬಿಡು ನಿನ್ನ ಬೆಡಗ, ಹಾ-
ಳಾಗಿಸಿತು ಜಗವ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...