Home / ಕವನ / ಕವಿತೆ / ತ್ಯಾಗವೆ ಒಲುಮೆ

ತ್ಯಾಗವೆ ಒಲುಮೆ

ಮೇಜಿನ ಮೇಲೊಂದು ರೋಜದ ಹೂವು,
ಹಿಂದೆಂದು ಕಾಣದ ಸೊಗಸಿನ ಹೂವು,
ಅಂದೆ ಅರಳಿದ ಹೂವು,
ಸಂಜೆಗೆಂಪಿನ ಹೂವು,
ಕಂಗಳು ತಂಗುವ ಸೊಗಸಿನ ರೇವು.

ಬಾಲಸೂರ್‍ಯನ ಕಿರಣ ರಂಧ್ರದಿ ತೂರಿ,
ಮಲರನ್ನು ಮುತ್ತಿಡಲು ಹೊಸ ಚೆಲುವ ತೋರಿ,
ಜೀವಗೂಡಿರುವಂತೆ
ಒಲವೆರೆದು ನಗುವಂತೆ
ಕಳಕಳಿಸಿ ಮೆರೆದುದು ಸೋಜಿಗವ ಬೀರಿ.

ಕಣ್ಮುಚ್ಚಿ ಮೆಲ್ಲನೆ ಹೂವ ತುಟಿಗೆತ್ತಿ
“ನನ್ನೊಲವೆ” ಎನ್ನುತ್ತ ಮುತ್ತಿಟ್ಟಿನೊತ್ತಿ;
ಅದರ ಸೊಂಪಿನ ಕಂಪು,
ಸ್ಪರ್‍ಶದ ಸುಖ, ತಂಪು,
ಮುದದ ಮೋರೆಯ ತೋರೆ ಸ್ವರ್‍ಗಕೆ ಎತ್ತಿ,

ಬಾನಿನ ನೆತ್ತಿಯನೇರಿತು ಹೊತ್ತು;
ಚೆಂದದ ಹೂವನ್ನು ತುಟಿಮೇಲೆ ಇತ್ತು.
ರೋಜದ ರೂಪು,
ಪ್ರಾಯದ ಹುರುಪು,
ಆಸೆಯಾವೇಶಕ್ಕೆ ಕಂದಿಹೋಗಿತ್ತು,

ತುಟಿಯಿಂದ ತೆಗೆದೆನು ಸೊರಗಿದ ಹೂವ,
ದುಂಡನೆ ದಳವೆಲ್ಲ ಸುರುಟಿಕೊಂಡಿರುವ,
ಪ್ರೇಮಕೆ ಬಿಂಕವ-
ನೀಯಲು ಸುಂಕವ,
ಹೆಚ್ಚಿದ ಕಂಪಿಗೆ ಸೋತುದು ಜೀವ.

“ಒಲುಮೆಯ ಸಲುವಾಗಿ ಎಲ್ಲವ ತೆತ್ತೆ,
ಚೆಂದವ, ಪ್ರಾಯವ, ಜೀವವ ತೆತ್ತೆ;
ಒಲಿಯಲು ತೆತ್ತೆ,
ಒಲಿದುದಕೇ ತೆತ್ತೆ;
ಸಾಯುವೆ; ತುಸಹೊತ್ತು ಮುತ್ತಿಡು ಮತ್ತೆ.”

ಎನ್ನಲು ಹೂವಿನ ದಳಗಳು ಅಲುಗಿ,
ಎನ್ನಯ ಕ್ರೂರತೆಗೆ ದೈನ್ಯದಿ ಕೊರಗಿ,
ನುಡಿಯೆನ್ನ ಚುಚ್ಚಿತು,
ಹೃದಯವ ಕೊಚ್ಚಿತು,
ತುಟಿಗೆತ್ತಿ ಮುತ್ತಿಟ್ಟೆ ರೋಜವ ತಿರುಗಿ.

ಹೂವಂದು ಸತ್ತಿತು ಮುತ್ತನು ಕೊಟ್ಟು,
ಮುತ್ತಿನ ನೆನಪಿಗೆ ಕಂಪನು ಬಿಟ್ಟು;
“ತ್ಯಾಗವೆ ಒಲುಮೆ
ಬಾಳ್ವೆಯ ಕುಲುಮೆ”
ಎನ್ನುವ ನುಡಿಯನ್ನು ಎದೆಯೊಳಗೆ ನೆಟ್ಟು,
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...