Home / ಕವನ / ಕವಿತೆ / ಮಾಯದ ನೋವು

ಮಾಯದ ನೋವು

(ಶೋಕಗೀತ)


ಶಕ್ತಿದೈವತದ ಬಲಗೈಯ ಕರವಾಲವೇ,
ಯುಕ್ತಿಯಲಿ ಹಗೆಯ ಬಂಧಿಸುವಿಂದ್ರಜಾಲವೇ,
ದಿಕ್ಕು-ದಿಕ್ಕುಗಳ ರಕ್ಷಿಸಿದೇಕ ದಿಗ್ಗಜವೆ,
ಭರತರಾಷ್ಟ್ರದ ಧೈರ್ಯಪುರುಷ ಕೀರ್ತಿಧ್ವಜವೆ!
ಭಾಯಿ, ವಲ್ಲಭಭಾಯಿ ಭಾರತಿಯ ಕಣ್ಮಣಿ-
ನಿನ್ನನೂ ಕಬಳಿಸಿದಳೇ ಮೃತ್ಯುರಾಣಿ ?


ಓ, ಮೃತ್ಯು ದೇವತೆಯೆ ನಿರ್ದಯೇ, ನಿನ್ನನೂ
ದೇವಿಯರ ಶ್ರೇಣಿಯಲ್ಲಿ ಸೇರಿಸಿದನಾವನು ?
ನಿನಗೆ ಕಣ್ಣಿವೆಯೇನು ? ನಿನಗೆ ಕರುಳಿದೆಯೇನು ?
ಕನಸೊಳಾದರು ಲೋಕಹಿತವ ಬಗೆದಿಹೆಯೇನು ?
ಲೋಕಹಿತಕಿರದವಳು ನೀನೆಂತು ದೇವತೆಯು ?
ಲೌಕಿಕರ ದುಃಖದಲಿ ನೂಕುವುದೆ ಸತ್ಕೃತಿಯು ?


ಓ! ಮೃತ್ಯುರಾಣೇಽಽ! ಬಾ, ನೋಡು ಬಾರಿಲ್ಲಿ,
ನೀನಿಂದು ಗೆಯ್ದ ತಾಂಡವದ ಪರಿಣಾಮವನು !
ಎಂಥ ಜೀವದ ಹೂವ ತುಳಿ-ತುಳಿದು ಬಳಲಿಸಿದೆ?
ಆ ಹೂವ ಬಯಸುವರ ಎದೆಯೆದೆಯನಳಲಿಸಿದೆ!
ನಾಡಿನಲಿ ಹರಿಯುತಿದೆ ಕಂಬನಿಯ ಹೊನಲು
ಚಳಿಗಾಳಿಯೂ ಚೆಲ್ಲುತಿದೆ ಬಿಸಿಯ ಸುಯಿಲು!


ಉಕ್ಕಿನೆದೆಯವನೆಂದು ಹೆಸರಾಂತ ಧೀರಾ !
ಉಕ್ಕಿನೆದೆಯನ್ನು ಕಾಯಲಿಕೆಂದು ಮೈಯನೂ
ಉಕ್ಕಿನದೆ ಪಡೆದುಕೊಂಡಿರ್ದ್ದೆಯೆಂದಿರ್ದ್ದೆವೈ !
ನಿನ್ನ ಉಕ್ಕಿನ ಜೀವ ಭಾರತದ ರಕ್ಷಣೆಗೆ
ಬನ್ನವಿಲ್ಲದ ಕವಚವೆಂದು ಬಗೆದಿರ್ದ್ದೆವೈ !
ಬಂಧು, ವಲ್ಲಭರಾಜ, ನಿನ್ನ ಮರಣವಿದು-
ನಮ್ಮ ನಂಬುಗೆಗೆಂಥ ಹಾರೆಯಿಕ್ಕಿದುದು !


ನಿರ್ಜೀವದಲ್ಲಿ ಜೀವವನೂದಿದವ ನೀನು,
ಬೆಂಡುಗಳಲೂ ಬಲದ ಸಾರವರೆದವನು ;
ಬಯಲಲ್ಲಿ ಧೈರ್ಯಮೇರುವ ಮೆರಸಿದವ ನೀನು
ಭಯವನ್ನು ಶೌರ್ಯದಲಿ ಮಾರ್ಪಡಿಸಿದವನು!
ಓ, ಅಣ್ಣ ವಲ್ಲಭಾ, ನೀನು ಸಾಹಸಮಲ್ಲ,
ನಿನಗೆ ಸಾವೇ ? ಸುಳ್ಳು ಸುಳ್ಳು! ಹುಸಿಮಾತೆಲ್ಲ!


ಅಯ್ಯೋ, ಏನಿದು ಭ್ರಮೆಯು! ದುಃಖದುನ್ಮಾದ!
ಭಾರತದಿ ತುಂಬಿರುವ ಈ ಆರ್ತನಾದ….
ಕಿವಿಗೆ ಕೇಳುತಲಿಹುದು, ಮನಕೆ ಕಾಣುತಲಿಹುದು,
ಸುಳ್ಳು ಎಂತಾಗುವುದು ವಲ್ಲಭನ ಮರಣವದು !
ನಿಜವೆ, ಅಂತಾದೊಡಾ ಧೀರನಾ ಸಾವು ?
ಅಯ್ಯೊ, ನಾಡಿನ ಜನಕೆ ಮಾಯದಾ ನೋವು!


ಅಕ್ಕಟಾ!
ಭಾರತದ ಕಾಪಿಂಗೆ ಕೋಟೆಯಿನ್ನಾರು ?
ಹಗೆಯ ಗುಂಡಿಗೆಯೊಡೆವ ಗುಡುಗು ಇನ್ನಾರು ?
ಕಂಗೆಟ್ಟ ಜನಕುಲಕೆ ಕಣ್ಣು ಇನ್ನಾರು ?
ಸಿಡಿಲುನುಡಿಯಿಂದ ಭಯವನು ಜಡಿವರಾರು ?
ಯಾರಿಹರು ? ಯಾರಿಹರು ? ಯಾರು, ಇನ್ನಾರು ?
ಈ ಕೇಳ್ಕೆಗುತ್ತರವ ಕೊಡುವರಾರಿಹರು ?


ಶಕ್ತಿದೈವತದ ಬಲಗೈಯ ಕರವಾಲವೆ ?
ಯುಕ್ತಿಯಲಿ ಹಗೆಯ ಬಂಧಿಸುವಿಂದ್ರಜಾಲವೆ?
ದಿಕ್ಕು-ದಿಕ್ಕುಗಳ ರಕ್ಷಿಸಿದೇಕ ದಿಗ್ಗಜವೆ!
ಭರತರಾಷ್ಟ್ರದ ಧೈರ್ಯಪುರುಷ ಕೀರ್ತಿಧ್ವಜವೆ?
ಭಾಯಿ, ವಲ್ಲಭಭಾಯಿ, ಭಾರತದ ಕಣ್ಮಣಿ,
ನಿನ್ನನೂ ಕಬಳಿಸಿದಳೇ ಮೃತ್ಯರಾಣಿ ?
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...