Home / ಕವನ / ಕವಿತೆ / ಹೊಲೆಯನು ಯಾರು?

ಹೊಲೆಯನು ಯಾರು?

ಹೊಲೆಯನಾರೂರ ಹೊರಗಿರುವವನೆ ಗೆಳೆಯ?
ಜಾತಿಯಿಂದಲ್ಲ ಗುಣದಿಂದಹನು ಹೊಲೆಯ ||ಪಲ್ಲ||

ಇಬ್ಬರಾಡುವ ಗುಟ್ಟು ಕದ್ದು ಕೇಳುವ ಹೊಲೆಯ,
ಗಂಡಹೆಂಡಿರ ಬೇರೆ ಮಾಡುವವ ಹೊಲೆಯ|
ಚಾಡಿ ಮಾತಾಡಿ ಭೇದವ ಕಲ್ಪಿಪನೆ ಹೊಲೆಯ,
ಒಣಹರಟೆಯಿಂ ಕಾಲ ಕಳೆಯುನವ ಹೊಲೆಯ ||೧||

ಬಾಯಿಬಾರದ ಜಂತುಗಳ ಕಾಡುವವ ಹೊಲೆಯ,
ಪಾಲ ಕುಡಿದಾಕಳನು ಸದೆವಾತ ಹೊಲೆಯ|
ಮನೆಯ ಬತ್ತಿದ ಪಶುವಿಗುಣಿಸು ಕೊಡದವ ಹೊಲೆಯ,
ಜೀವಿಗಳ ಕೊಂದು ಜೀವಿಸುವವನೆ ಹೊಲೆಯ ||೨||

ಹೆಂಡ ಕುಡಿದರಸುಬೀದಿಯಲಿ ತಿರಿವವ ಹೊಲೆಯ,
ಹಣವಿಟ್ಟು ಜೂಜಾಟವಾಡುವವ ಹೊಲೆಯ|
ತನ್ನೊಡನೆ ಮಡದಿಯಲಿ ತೃಪ್ತಿ ಪಡದವ ಹೊಲೆಯ,
ಪರರ ಧನವನಿತೆಯರ ಬಯಸುವವ ಹೊಲೆಯ ||೩||

ಎಳೆಮಕ್ಕಳಿಗೆ ವಿದ್ಯೆ ಕಲಿಸಿಕೊಡದವ ಹೊಲೆಯ,
ಯುವಕರಿಗೆ ದುರ್‍ಬುದ್ಧಿ ಕಲಿಸುವವ ಹೊಲೆಯ|
ತಾನರಿತ ಜ್ಞಾನ ಪರರಿಗೆ ಪೇಳದವ ಹೊಲೆಯ,
ತನ್ನಿಂದ ಹಿರಿಯರನು ಮನ್ನಿಸದ ಹೊಲೆಯ ||೪||

ಪರರ ಬೇನೆಯಲಿ ಮನಹಿಗ್ಗುವಾತನೆ ಹೊಲೆಯ,
ಪೀಡಿತರನಿನಿಸು ಕನಿಕರಿಸದವ ಹೊಲೆಯ|
ಪರರ ಹೊಗೆಯನು ನೋಡೆ ಕಾದಿರುವವನೆ ಹೊಲೆಯ,
ಪಸಿದವರಿಗೊಂದು ತುತ್ತೆರಚದವ ಹೊಲೆಯ ||೫||

ಹಣವ ಪಡೆದೊತ್ತೆಯನು ಹಿಂದೆ ಕೊಡದವ ಹೊಲೆಯ,
ಹಣವಿದ್ದು ಸಾಲವನು ತೀರಿಸದ ಹೊಲೆಯ|
‘ಆಶೆಮಾತನು ಕೊಟ್ಟು ಭಾಷೆ ತಪ್ಪುವ ಹೊಲೆಯ,’
ಬಗೆಬಗೆದು ಮೋಸವನು ಮಾಡುವವ ಹೊಲೆಯ ||೬||

ಶುದ್ಧ ತಾನೆಂದು ಪರರನು ಮುಟ್ಟದವ ಹೊಲೆಯ,
ಹೊಲೆಯರೆಂದನ್ಯರನು ಕರೆವವನೆ ಹೊಲೆಯ|
ತಾನು ಮೇಲೆಂದುಬ್ಬಿ ಹೀನೈಸುವನ ಹೊಲೆಯ,
ಕೀಳುದಸೆಯವರನುದ್ಧರಿಸದವ ಹೊಲೆಯ ||೭||

ತಾ ಬೋಧಿಸುವ ಧರ್‍ಮವಾಚರಿಸದವ ಹೊಲೆಯ,
ತಾನು ತಾನೆಂದು ಶ್ಲಾಘಿಸುವವನು ಹೊಲೆಯ|
ಪರರ ಹೊಲ್ಲೆಹದ ಕಾವ್ಯವ ಬಿತ್ತರಿಪ ಹೊಲೆಯ,
ಪರರ ಗುಣಗಳಿಗೆ ಕುರುಡಾಗಿಹನೆ ಹೊಲೆಯ ||೮||

ರಾಷ್ಟ್ರದುನ್ನತಿಯ ಸಾಧಿಸೆ ಶ್ರಮಿಸದವ ಹೊಲೆಯ,
ತನ್ನ ರಾಷ್ಟ್ರಕೆ ದ್ರೋಹ ಚಿಂತಿಪನೆ ಹೊಲೆಯ |
ಸ್ಫಾರ್ಥದಿಂ ರಾಷ್ಟ್ರಹಿತವನು ಮರೆವವನು ಹೊಲೆಯ,
ರಾಷ್ಟ್ರಭಕ್ತಿಯ ಲೇಶವಿಲ್ಲದವ ಹೊಲೆಯ ||೯||

ಎಲ್ಲವುಗಳಲ್ಲಿ ಹರಿಯನು ಕಾಣದನ ಹೊಲೆಯ,
ಶ್ರೀಹರಿಯೊಳೆಲ್ಲವನು ಕಾಣದವ ಹೊಲೆಯ|
ಮುಂಗೆಯ್ದ ಪಾಪಕನುತಾಪ ಪಡದವ ಹೊಲೆಯ,
ದೇವಕೀನಂದನನ ನೆನೆಯದವ ಹೊಲೆಯ ||೧೦||
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...