Home / ಕವನ / ಕವಿತೆ / ಮತ್ತೆ ಮಳೆ ಹೊಯ್ಯಲಿದೆ

ಮತ್ತೆ ಮಳೆ ಹೊಯ್ಯಲಿದೆ

ಮತ್ತೆ ಮಳೆ ಹೊಯ್ಯುವದೆ ? ಬಾಯಾರಿ ಬಿದ್ದ
ಬಾವಿಗಳು ತುಂಬುವವೆ ? ಬಾಡಿ ಬಸವಳಿದ
ನನ್ನ ಹಿತ್ತಲ ಗಿಡದ ಎಲೆಗಳು ಚಿಗುರುವವೆ ?
ಬರಲಿದೆಯೆ ಮೋಡಗಳ ಸಾಲು ? ಕಣ್ತುಂಬಲಿದೆಯೆ
ಮಿಂಚುಗಳ ಆಟ ? ಮೊದಲ ಮಳೆ ಬಿದ್ದು
ಮಣ್ಣು ಘಮ್ಮೆಂದ ಸಂಭ್ರಮ ? ಹರಕು ಕೊಡೆಗಳ
ಹೊಲಿಗೆ ? ತಟ್ಟಿ ಕಟ್ಟುವುದು ? ನೀರು ಸೋರುವಲ್ಲೆಲ್ಲ
ತಕ್ಕ ವ್ಯವಸ್ಥೆ ? ನಿಜ ಇವೆಲ್ಲ ಕಳೆದಿದ್ದೇ ದಾರಿ
ಈ ದಾರಿ ದಾಟಿದ್ದು ಅದೆಷ್ಟೋ ಬಾರಿ ಆದರೂ
ಕಳೆದಿದ್ದು ಕಟ್ಟುವುದು ಮತ್ತೆ ಮತ್ತೆ ಕಟ್ಟುವುದು
ಇದು ನಮ್ಮ- ನಿಮ್ಮ- ಭಾಗ್ಯ ಅದೆಲ್ಲಾ ಸರಿ ಗೆಳೆಯ
ಈಗ ಹೇಗಿದೆ ನಿನ್ನ ಆರೋಗ್ಯ ?

ಮನುಷ್ಯರ ಮಿತಿಗಳ ದಾಟಿ ನನ್ನ ಜ್ವರ ಇನ್ನು ಕೈ
ಬಿಟ್ಟೆವೋ ಎಂಬಂತೆ ಕ್ಷೀಣ ಸ್ವರ ಹೋದ ಹೋದ
ಕಣ್ಣುಗಳು ತುಂಬಿ ಬಂದವು ಜೀವದ ಕನಸುಗಳೆಲ್ಲ
ಕುತ್ತಿಗೆಗೆ ಬಂದವು ಉಕ್ಕಿ ಹರಿಯಿತು ಅಘನಾಶಿನಿ
ಈಸುತ್ತ ಬಂದವು ನೆನಪುಗಳು ಆ ನೆನಪುಗಳಿಗೆ
ನಾನಾ ಸ್ವರೂಪ ಕಲಸಿ ಕಲಸಿ
ಕಣ್ಣೊತ್ತಿ ನಿಂತಿದ್ದು ಮಂಗಳದ ಕುಂಕುಮ ಹೇಳು
ಆ ತಾಯಿ ಯಾರು ? ಅನಿಸುವುದು ನಾನು ಬದುಕುಳಿದಿದ್ದು
ಸಂಕಲ್ಪ ಮಾತ್ರದಿಂದ

ಮತ್ತೆ ಮಳೆ ಹೊಯ್ಯುವುದೆ ? ನನ್ನೂರು ಹಿರೇಗುತ್ತಿ
ಸ್ನಾನದ ಪುಳಕಕ್ಕೆ ಅರಳಿ ಹೂವಾಗುವುದೆ ? ಈಶ್ವರ ಕೆರೆ
ತುಂಬಿ ಎಬ್ಬಿಸುವುದೆ ರೋಮಾಂಚನ ? ಇದೇ ರೀತಿ
ಚೌತಿಯ ತನಕ ಇದ್ದು ಬಿಟ್ಟರೆ ಬಹಳ ಆರಾಮು
ಅನಂತರವೇನೂ ಬೇಡ ಎಂದಲ್ಲ …………….

ಮೃತ್ಯು ಲೋಕ ಬಾ ಎಂದಾಗ ಬದುಕು ಸಿಹಿ ಅನಿಸಿತು
ಇಲ್ಲಿ ಬದುಕುವೆ ಮಾನವನಾಗಿ ಈ ಬದುಕು ನನ್ನದು
ಇದರ ಸೋಲೂ ಗೆಲುವೂ ಸಂಪೂರ್ಣ ನನ್ನದು ಒಮ್ಮೆ
ಕೊಟ್ಟು ನೋಡು ಅವಕಾಶ- ಆಗ
ಎತ್ತರಿಸುವೆ ಆಕಾಶ

ಸ್ವಲ್ಪ ಸಾವಕಾಶ ಬಿದ್ದ ಮಳೆ ಪೂರಾ ನೋಡಿದ್ದೇ ಕೀರ್ತಿ
ಅಲ್ಲ. ನಮ್ಮೂರ ಕೆರೆಗಳ ಪಾಲೂ ಉಂಟಲ್ಲ ? ಬಾ ಎಂದು ಕರೆಯುವ
ಬೆಟ್ಟಗಳು ನವಿಲುಗಳು ಕಪ್ಪೆಗಳು ಇವುಗಳಿಗೆ ಅಭಾರ
ಸಲ್ಲಲೇಬೇಕಲ್ಲ ? ಮುಖ್ಯವಾಗಿ ಇವೆಲ್ಲ ಪ್ರಕೃತಿ ನಿಯಮ
ಇದು ಸತ್ಯ. ಇದು ಸತ್ಯ ನಂಬು

ನಾನಾಗ ಚಿಕ್ಕವನು ಆಗ ಇದ್ದಿದ್ದು ಈ ಮನೆಯಲ್ಲಲ್ಲ ಇದೇ
ಕೇರಿಯಲ್ಲಿ ಕೆಳಗೆ ಎಂಥ ಮಳೇ ಹೇಗೆ ಹರಿಯುತ್ತಿತ್ತು, ನೀರು !
ಆ ನೀರಿನ ಎದುರು ಎದ್ದ ಗುಳ್ಳೆಗಳ ಎದುರು ದಂಗು ದುಗುಡದ ನಾ
ಮನೆ ಅಂಗಳದ ಎರಡನೇ ಮೆಟ್ಟಿಲ ಮೇಲೆ ಆ ಗುಳ್ಳೆಗಳಿಗೆ
ಕೈ ಬೀಸುತ್ತಿದ್ದೆ. ಆ ಗುಳ್ಳೆಗಳದು ಅನಿಯಂತ್ರಿತ ಪ್ರವಾಹ
ಇಂದಿಗೂ ನಾನು ಅದೇ ಹುಡುಗ ಗಡ್ಡ ಮೀಸೆ ಬಂದಿದ್ದು
ನನಗಲ್ಲ ನನ್ನ ದೇಹಕ್ಕೆ

ಮತ್ತೆ ಮಳೆ ಹೊಯ್ಯಲಿದೆ. ಕಲ್ಪನೆಯ ಕಡಲುಗಳು
ತುಂಬಿ ತುಳುಕಲಿವೆ ಹಡಗುಗಳು ಬರಲಿವೆ ದೋಣಿಗಳು
ಬರಲಿವೆ ಆಚೆ ದಡದಿಂದ ಬರುವರು ಹೊಸ ಅತಿಥಿಗಳು
ಬಾ – ಅವರನ್ನು ಸ್ವಾಗತಿಸು ಕುಡಿಯಲು ಬಿಸಿಯೋ ತಣ್ಣಗೋ
ಬನ್ನಿ ಬಟ್ಟೆ ಬದಲಿಸಿ ನಮ್ಮದೂ ನಿಮ್ಮದೂ ಒಂದೇ ಬದುಕು
ಇರುವಷ್ಟು ದಿವಸ ಇದ್ದೇ ಬಿಡುವ ಬಿಡದೇ ಬಿರುಕು
ಇಲ್ಲದಿದ್ದಾಗಲೂ ಇದ್ದಿದ್ದ ಎಂದು ಎದೆ ತುಂಬಿ ಹೇಳಿದರೆ ಸಾಕು
ಅಷ್ಟೇ ಸಾಕು ; ಈ ಮಣ್ಣಿನ ಜೀವಕ್ಕೆ ಇನ್ನೇನು ಬೇಕು ?
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...