Home / ಕವನ / ಕವಿತೆ / ಪಾಚಿಗಟ್ಟಿದ ಪುರುಷಾವತಾರ

ಪಾಚಿಗಟ್ಟಿದ ಪುರುಷಾವತಾರ


ತಲೆತಲಾಂತರದಲ್ಲಿ ನುಗ್ಗಿ
ಹರಿದು ಹಾರಿ ತೇಲಿಬರುತಿದೆ
ಹೆಸರುಹೊತ್ತು ಇದು ಗಂಡಸರ ಜಗತ್ತೆಂದು

ಗಂಡಸಾಕಾರದ ಮುಖವಾಡಗಳಿಗೆ
ನಾವೇ ಇಟ್ಟ ಮರ್‍ಯಾದೆಯ ಹೆಸರುಗಳು
ಅಜ್ಜ, ಅಪ್ಪ, ಚಿಕ್ಕಪ್ಪ, ದೊಡ್ಡಪ್ಪ, ಅಣ್ಣ, ತಮ್ಮ
ಮಾವ, ಮೈದುನ, ಗೆಳೆಯ, ಪರಿಚಿತ, ನೆರೆಯಾತ,
ಗುರು, ಹಿರಿಯ, ಸ್ವಾಮಿ, ಸಾಧು, ದೀನಬಂಧು,
ಎಲಾ ಇವರಿವರಾ…. ಛೇ…

ಇವರ ಶತಶತಮಾನದ ವೀರ್ಯಾಣುಗಳು
ಹರಿದು ನುಗ್ಗಿ ಬರುತ್ತ
ಹೆಣ್ಣಿನಾಳಕೆ ಕೊಕ್ಕೆ ಹಾಕಿ ಕೇಕೆ ಹೊಡೆದು
ಮತ್ತೆ ಧರೆಗುರುಳಿ ಮತ್ತೆ ಮತ್ತೆ ಪಾಚಿಗಟ್ಟಿ
ಗೊರಲಿಗೊಂದು ಬಿದ್ದು ಕೊಳೆತು ನಾರಿ
ತಾಯಿಸೃಷ್ಟಿಗೆರಗುವ ಕಾಮಾಂಧರು
ಪಾಚಿಗಟ್ಟಿದ ಪುರುಷಾವತಾರದ ರಾಕ್ಷಸರು.

ತರತರಹದಾ ಯುಕ್ತಿಯ
ಬರ್ಚಿಗಳು ಹಿಡಿದಿಡಿದು ದುರ್ಗೆಯರು ನಿಮ್ಮ ಮರ್‍ಮಾಂಗಕೆ
ಕತ್ತರಿ ಹಾಕಿ ಕತ್ತಿಗೆ ನೇಣು ಬಿಗಿಸಿ
ನಿಮ್ಮಂಗಾಂಗಳನ್ನು ನಾಯಿನರಿಗಳಿಗೆ ಎಸೆದು
ಸಾಬೀತು ಪಡಿಸುತ್ತಾರಿನ್ನು
ಇದು ಹೆಂಗಸರ ಜಗತ್ತೆಂದು.


ಇಂಚಿಂಚಾಗಿ ಅವಳ ದೇಹ ಕತ್ತರಿಸಿ
ನೆತ್ತರು ಹರಿಸಿ ಧ್ವನಿ ಇಂಗಿಸಿ
ಎಸೆದ ಪುರುಷಾಕಾರವೇ
ಯಾವ ತಪ್ಪಿಗೆ ಅವಳಿಗೀ ಶಿಕ್ಷೆ.
ಕತ್ತಲು ಕೋಣೆಯಲಿ ಕುಳಿತ
ಅವಳ ಸೀಳಿದದೇಹದೊಳಿಂದ
ಇನ್ನೂ ಬೆಂಕಿಸ್ರಾವವಾಗುತ
ಕರಗಿ ಕ್ಷಣ ಕ್ಷಣಕೂ ಸಾಯುತಿಹಳು
ಹೃದಯ ಬಡಿತದೊಳಗೆ
ಮುಖ ನೋಡಿಕೊಳ್ಳುತ
ಬೆಳಕಿಗೆ ಮುಖತೋರುವುದೆಂತು
ಮುಖವಾಡ ಹಾಕುವುದೋ ಕಳಚುವುದೊ
ರಕ್ತಕಣ್ಣೀರು ಕಾರುತ
ಸೋತು ಸೋತು ಹೋಗುತಿರುವಳು


ನಿಮ್ಮ ನೆರೆಮನೆಯದೇ ಮುಗ್ಧ ಮಗು
ಅಣ್ಣಾ ಎಂದು ರಾಖಿಕಟ್ಟಿ
ನಿನ್ನಪ್ಪನಿಗೆ ಅಪ್ಪಾ ಎಂದು
ನಿನ್ನಜ್ಜನಿಗೆ ಅಜ್ಜಾ ಎಂದು ಹೇಳಿ
ನಿನ್ನ ಸೋದರಿ ಜೊತೆ ಸೋದರಿಯಾಗಿಯೇ
ಬಂದು ಮುದ್ದಾಗಿ ಓಡಾಡಿ ಹೋಗಿತ್ತಲ್ಲ
ಪುಟ್ಟದೇವತೆಯಂತೆ

ಹಾಲುಗಲ್ಲದ ತೊದಲು ಮಾತನಾಡುವ
ಹಸುಳೆಕಂದಾ ನಿನ್ನ ಮೋಸಗೊಳಿಸಿ
ಹಾಡೇಹಗಲು ಕತ್ತಲೆಕೋಣೆಗೆ ಕರೆದು
ಪಿಶಾಚಿಗಳಾದವಲ್ಲವೆ ಅವು-
ಹೆಣ್ಣೆಂದರೇನೆಂದರಿಯದೆ
ತೊಂಡರಗೂಳಿಯಂತೆ
ಗುಲಾಬಿಗೂಡಿಗೆ ನುಗ್ಗಿ
ಚಿಲ್ಲಾಪಿಲ್ಲಿಯಾಗಿಸಿದವಲ್ಲೆ
ನಿನ್ನ ಮೈಮನದ ಪಕಳೆಗಳು.

ಗೊಡ್ಡುಬೀಳಲಿ ಅವುಗಳ ಪುರುಷತ್ವ
ನಿನ್ನ ನೋವು ದುಃಖ ಶಾಪವಾಗಲಿ
ಬಂದು ಬೀಳಲಿ ನಿನ್ನ ಕಾಲಕೆಳಗೆ
ಬಾಣಬರ್‍ಚಿಗೆ ನಿನ್ನ ಮರ್ಮಾಂಗದ ರಕ್ತ
ಹಚ್ಚಿ ಅವುಗಳ ಇಡೀ ಮೈ ಸೀಳುತ ಸೀಳುತ
ಚಾಮುಂಡಿಯಾಗು ತಾಯಿ ಚಾಮುಂಡಿಯಾಗು.


‘ಕೃಷ್ಣನ ನೆನೆದರೆ ಕಷ್ಟ ಎಂತಿಷ್ಟಿಲ್ಲ
ಕೃಷ್ಣ ಎನಬಾರದೆ’-
‘ಧರ್ಮೋ ರಕ್ಷತಿ ರಕ್ಷಿತಃ’-

ಅಯ್ಯೋ’ ಎಲ್ಲಿರುವಿರಿ ದೇವರುಗಳೇ
ಎಲ್ಲಿದೆ ಧರ್ಮ ನ್ಯಾಯ ನೀತಿ
ನೀವೇ ಸೃಷ್ಟಿಸಿದ ಮುಗ್ಧಮಕ್ಕಳ ಮರ್ಮಾಂಗಕ್ಕೆ
ಹಲ್ಲೆಯಾಗುತ್ತಿದೆ. ಹೆದರಿಗುಬ್ಬಚ್ಚಿಯಾಗುತ್ತಿವೆ
ಮಾತೇ ಹೊರಡದೆ ಪಿಳಿಪಿಳಿ ಕಣ್ಣು ಬಿಡುತ
ಸುಸ್ತಾಗಿ ಸೊರಗಿಹೋಗಿವೆ.

ಅಯ್ಯಾ ದೇವರುಗಳೆ ನೀವೆಲ್ಲಿದ್ದೀರಿ
ಭಕ್ತಿ ಪ್ರೀತಿಯಿಂದ ನಿಮಗಿಟ್ಟ ಹೆಸರುಗಳು
ರಾಧೆಕೃಷ್ಣ, ಪಾರ್‍ವತಿಪತಿ, ಲಕ್ಷ್ಮೀನಾರಾಯಣ
ಜಾನಕಿವಲ್ಲಭ… ಅಲೆಲೆಲೇ…

ನಿಮ್ಮ ಸಂತಸದ ಕಾಮಕ್ರೀಡೆಯ ಫಲ
ನಿಮ್ಮದೇ ಸಂತತಿಯ ಮಕ್ಕಳ ಆಕ್ರಂದನ ನೋವು
ಕೇಳಿಸುತ್ತಿಲ್ಲವೆ ಕಾಣಿಸುತ್ತಿಲ್ಲವೆ?
ಅಯ್ಯೋ ದೇವರುಗಳೆ ನೀವೆಲ್ಲಿದ್ದೀರಿ
ಶಂಕ ಚಕ್ರ ಗಧೆ ತ್ರಿಶೂಲಗಳನೆಸೆದು
ಗುಡಿಗುಂಡಾರಗಳ ಬಿಟ್ಟು ಹೊರಬಂದು
ಉಳಿಸಿ ರಕ್ಷಿಸಿಕೊಳ್ಳಿ ನಿಮ್ಮದೇ ವಂಶವೃಕ್ಷದ
ಮಕ್ಕಳ ಮಾನ ಪ್ರಾಣ.


ಕಾಡುಮೇಡಗಳಲಲೆವ ಕಾಡುಗಾತಿಯರೆ
ಮಾಯಮಾಟಗಾತಿಯರೆ
ಹೊಟ್ಟೆಗೆ ಬಿದ್ದ ಹಸಿವಿನ ಬೆಂಕಿಗೆ
ರಕ್ಕಸಿಯರಾಗಿ ಹೆದರಿಸಿ ಬಲಿ ಕೇಳಿ
ರಕ್ತ ಕುಡಿದವರೆ ಮಾಂಸ ತಿಂದವರೆ ಈಗೆಲ್ಲಿ ಇರುವಿರೇ-
ದ್ಯಾಮವ್ವ ದುರಗವ್ವ ಚೌಡಮ್ಮ ಮಾರಮ್ಮ
ಕಾಳಮ್ಮ ಮೂಕಮ್ಮ ಉಧೋ ಉಧೋ!
ಬಹುಪರಾಕಗಳ ನಡುವೆ ಹೊರಳಾಡಿ
ಮುತ್ತು ಮಾಣಿಮಾಣಿಕ್ಯಗಳ ಭಾರದಲಿ
ತೊನೆದಾಡಿ ಏನೆಲ್ಲ ಬಾಚಿ ತೋಚಿ
ಎಲ್ಲೆಲ್ಲಿ ತೇಲಿಹೋದಿರೆ ನೀವು ಎಲ್ಲೆಲ್ಲಿ ಹೋದಿರಿ-
ಊರ ಹೆಬ್ಬಾಗಿಲಲಿ ಕುಳಿತು
ಊರವರ ಕಾಯುವವರೆ
ದೆವ್ವ ಪಿಶಾಚಿಗಳ ಹೊಡೆದೋಡಿಸುವವರೆ
ಬಾಣ ಬರ್‍ಚಿಗಳ ಹಿಡಿದು
ಚಂಡಿ ಚಾಮುಂಡಿಯಾಗಿ
ಪುಂಡಪೋಕರಿಗಳ ಚಚ್ಚಿ ಕೊಲ್ಲುವವರೆ
ಈಗೆಲ್ಲಿ ಹೋಗಿರುವಿರೆ ನೀವು ಈಗೆಲ್ಲಿ ಹೋಗಿರುವಿರಿ-
ನಿಮ್ಮ ಕಣ್ಣು ತಪ್ಪಿಸಿ ತುಟಿಗೆ ತುಪ್ಪ ಸವರಿ
ಊರೊಳಗೆ ನುಗ್ಗಿವೆ ಕಾಡುದನಗಳು
ನಿಮಗೇನು ಕೊರತೆ ಕಾಡಿತ್ತೆ
ಹೊಸ ಹೊಸ ಬಟ್ಟೆಬರೆ ಉಡಿತುಂಬ ಹಣ್ಣುಕಾಯಿ
ಊರವರ ಪ್ರೀತಿ ನೈವೇದ್ಯಗಳಿರುವಾಗ
ಊರಬಿಟ್ಟು ಅಲೆಯಲು ಹೋದಿರೆಲ್ಲೆ ನೀವು ಹೋದಿರೆಲ್ಲಿ-

ಬೇಡಬೇಡಿನ್ನು ನಿಮ್ಮ ಒಡವೆ ವೈಡೂರ್ಯಗಳ
ಜರಿಪೀತಾಂಬರಗಳ ಭಾರ
ಬಂಗಾರ ಪಂಜರ ಬೆಳ್ಳಿ ಪೀಠದ ಅಲಂಕಾರ
ಅಲ್ಲೇ ಕೂತಲ್ಲಿ ಕೂತು ನಿಂತಲ್ಲಿ ನಿಂತು
ಮೈಭಾರ ಮಂಡಿನೋವು ತಲೆಬಿಸಿ

ಅದೇ ರುಚಿ ಅದೇನೋಟ
ತಪ್ಪೇನು ಸುತ್ತಾಡುವುದು
ಬಣ್ಣಬಣ್ಣದ ಜಾಗತೀಕರಣದ ಕೈಚಳಕ
ಮುಂದಾಲೋಚನೆ ಗೊತ್ತಾಗಬೇಡವೇ ನಮಗಿನ್ನು.
ಸಾಕು ಸಾಕಿನ್ನು ನಮಗೆ ಪೂಜೆ ಪುನಸ್ಕಾರ;
ನಿಮ್ಮ ದೀನ ಆರ್ತನಾದ
ನಾವಿನ್ನು ನೀವು ನೀವಿನ್ನು ನಾವು ಸೋದರಿಯರೆ
ನರಳುವಿಕೆಯ ಸಂಕಟ; ನೋವಿನ ಕಹಿ-
ಕಪ್ಪು ಕಣ್ಣೀರು; ನೀಲಿರಕ್ತದ ಹತಾಷೆಗೆ-
ರೋಷಗೊಂಡು ಕೆಕ್ಕರಿಸಿ ಈ ವರೆಗೂ
ಈಟಿ ಗುರಾಣಿ ಹಿಡಿದಿದ್ದೆವು.

ಇನ್ನು ಇನ್ನೇಕೆ ತಡ
ವ್ಯಭಿಚಾರ ಅತ್ಯಾಚಾರಿಗಳಿಗೆ
ಕೈಗೆ ಕೈ, ಕಣ್ಣಿಗೆ ಕಣ್ಣು, ಕಾಲಿಗೆ ಕಾಲು, ಮುತ್ತಿಗೆ ಮುಖ
ಯೋನಿಗೆ ಶಿಷ್ನ. ತಲೆಗೆ ತಲೆಗಳು
ಸೀಳಿ ತುಂಡರಿಸಿ ನಾಯಿನರಿಗಳಿಗೆಸೆಯಲು
ಇದ್ದ ಈಟಿ ಗುರಾಣಿ ಹರಿತಗೊಳಿಸಿ
ಜಾಗತೀಕರಣದ ಹೊಸ ಹೊಸ ಆಯುಧಗಳು
ಕೊಳ್ಳಲು ದೊಡ್ಡೂರಿನ ಪೇಟೆಗಳಿಗೆ ಹೋಗಿದ್ದೆವಷ್ಟೆ-
ಸಾಕಿನ್ನು ನಮಗೆ ಕೋಳಿ ಕುರಿಗಳ ಬಲಿ
ಬೇಕಿನ್ನು ನಮಗೆ ತಿಂದು ತೇಗಾಡಲು
ನರಹಂತಕ ಅತ್ಯಾಚಾರಿ ರಾಕ್ಷಸರ ಇಡಿ ಇಡಿಯಾದ
ಬಲಿ
* * *

ಕಾರ್‍ಯ ಸಿದ್ಧಿಗೊಳಿಸಿ ತಾಯಿಯರೆ ದೇವಿಯರೆ
ಪರಾಕು ಹೇಳೆವು ನಿಮ್ಮ ಮಾತಿಗೆ ಮರುಳಾಗಿ
ಹೇಳೇ ಹೇಳುವೆವು ಒಂದರಮೇಲೊಂದನು ನೀವು ಚೆಂಡಾಡಿ
ನಮ್ಮ ಕೊರಳಿಗೆ ರುಂಡಮಾಲೆ ಬಿದ್ದಾಗ
ನ್ಯಾಯದ ಹುಡಿ ಮುಗಿಲುಮುಟ್ಟಿದಾಗ.
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...