Home / ಕವನ / ಕವಿತೆ / ಭಲಭಲರೆ, ಶಕುನಿ!

ಭಲಭಲರೆ, ಶಕುನಿ!

ಕೌರವರ ಮಂತಣಗಾರನಾದ ಶಕುನಿ ಮಾಡಿದ ಕಾರ್ಯ ಅಕಾರ್ಯವೆಂದ ನಿಂದಿಸುವುದು, ಅಜ್ಞಾನದ ಪರಿಣಾಮವೆಂದು ಭಾವಿಸಬಹುದಲ್ಲವೆ?


ಧೀರುರೇ, ಭಲಭಲರೆ! ಶಕುನಿಯೇ ನಾ ನಿನಗೆ
ತಲೆವಾಗಿ ವಂದಿಸುವೆನೈ!
ಭಾರತೀಯರ ಮೇಲೆ ನೀ ಮಾಡಿದುಪಕಾರ
ಭಾರವಾಗಿಹುದು ಕಾಣೈ!


ನಿನ್ನ ಕೈ ಚಳಕದಾ ಹೊಲಬನರಿಯದೆ ನಿನಗೆ
ಹಳಿವನ್ನು ಹೊದ್ದಿಸುವರು-
ಬಣ್ಣವನೆ ನೋಡಿ ಕೋಗಿಲಿಗೆ ಕರಿಗಾಗೆಯೆಂ-
ದೆನುವ ಮತಿಮಂದಜನರು!


ಮುಳ್ಳ ಮಳೆಯಲ್ಲಿರುವ ಹೊಸಜೇನುಹುಟ್ಟಿನಲಿ
ಇನಿರಸವು ತುಂಬಿರುವೊಲು-
ಸುಳ್ಳಲ್ಲ, ನಿನ್ನ ಪ್ರತಿಯೊಂದು ಕೃತಿಯೊಳಗೊಳಗೆ
ಹುರುಳು ಹುದುಗಿಹುದು ಕೇಳು!


ನೀನಿಲ್ಲದಿರಲು ಭಾರತದ ಹಿರಿಹೊತ್ತಗೆಯು
ತಿರುಳಿಲ್ಲದಾಗಿರುವುದು-
ತನಿರಸವನೆಲ್ಲವನು ಹಿಂಡಿ ಹೊರದೆಗೆದ ಕ-
ಬ್ಬಿನ ಕೋಲಿನಂತಿರುವುದು.


ಸುಜನರನು ದುರ್ಜನರು ಯುಗ-ಯುಗಗಳಲ್ಲಿಯೂ
ಪೀಡಿಸುವರೆಂಬುದನ್ನು
ತ್ರಿಜಗಕ್ಕೆ ತಿಳುಹಲಿಕೆ ಭಾರತದ ನಾಟಕದಿ
ಸೂತ್ರಧರನಾದೆ ನೀನು !


ಧರ್ಮರಾಯನ ಧರ್ಮನಿಷ್ಠೆ, ಭೀಮನ ಬಲುಹು,
ಅರ್ಜುನನ ಅಸ್ತ್ರದರಿವು,
ನಮ್ಮೆಲ್ಲರಾ ಕಂಗಳೆದುರಿನಲ್ಲಿ ಕುಣಿಯುವುದು
ನಿನ್ನ ಗೈಮಯ ಫಲಿತವು !


ದುರ್ಯೋಧನನ ಧೈರ್ಯ-ಚಲದಂಕತನವ, ವಿದು-
ರನ ವಿಷ್ಣುಭಕ್ತಿಯನ್ನು,
ಸೂರ್‍ಯಾತ್ಮಜನ ದಾತೃಗುಣವ ಡಂಗುರ ಹೊಯ್ದು
ಜಗದಿ ಸಾರಿದೆಯೊ ನೀನು!


ಪಾಂಚಾಲಿನಿಯ ಪಾವನತೆಯು ಪಸರಿಸುವುದಕೆ
ನೆರವು ನೀ ನೀಡಿದೆಯಲ್ಲಾ?
ಚಂಚಲಾಕ್ಷಿಯ ಹೆಸರನಾರು ತಿಳಿಯುತ್ತಿರ್ದ-
ರೈ, ಪೇಳು ನೀ ಸೌಬಲಾ!


ಕುರುವಂಶಜಾತರನು ಹುರಿಗೊಳಿಸಿ ಸಂಗರಕೆ
ಪರಮಾತ್ಮ ಕೃಷ್ಣನಿಂದೆ-
ಪರಮಗೀತೆಯನು ಹಾಡಿಸಿದೆ ಜಗಕೆಲ್ಲ ಉಪ-
ಕೃತಿಯ ಹೊರೆಯನು ಹೊರಿಸಿದೆ!

೧೦
ಇನ್ನೆಂದು ಬಂದು ನೀ ಭರತಖಂಡದಲಿ ಹೂ-
ಡುವೆ ನಿನ್ನ ನಾಟಕವನು ?
ಮನ್ನೆಯನೆ ತಿಳುಹುವುದು ಜನಕೆ ‘ಸತ್ಯಕ್ಕೆ ಜಯ
ವುಂಟೆ’ಂಬ ತತ್ತ್ವವನ್ನು !

೧೧
ಧೀರುರೇ, ಭಲಭಲರೆ ! ಶಕುನಿಯೇ ನಿನಗೆ ನಾ
ತಲೆವಾಗಿ ವಂದಿಸುವೆನು.
ಭಾರತೀಯರಿಗೆಲ್ಲ ಜೀವನದ ಸಾರವನು
ಕಲಿಸಲಿಕೆ ಬೇಕು ನೀನು!
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...