Home / ಕವನ / ಕವಿತೆ / ಜೀವಗಾಳಿ

ಜೀವಗಾಳಿ


ಭೂಮಿ ಬಿರುಕು ಬಿಟ್ಟಿತು
ನಾಡಿನ ನರಗುಂದದಲ್ಲಿ ನಾಡಿ ಮಿಡಿತ ಕೇಳಿ
ಹೂತು ಹೋದ ಹೆಣಗಳೆಲ್ಲ
ಬರಡು ನೆಲದ ಕಣಗಳೆಲ್ಲ
ಪುಟಪುಟಿದು ಸೆಟೆದವು, ಬೀಸಿ ಜೀವಗಾಳಿ.

ನೆಲದೊಳಗೆ ಭೋರ್ಗರೆತ, ಸುಳಿಸುತ್ತುವ ಸೆಳೆತ
ಸಿಟ್ಟಿನ ಸುಳಿ ಸಿಂಬೆ ಸುತ್ತಿ
ಕುದಿ ಕುದಿಯುವ ರಕ್ತವೆಲ್ಲ
ಕೈಯಾಗಿ ಕಿಡಿಯಿತು ಬಿಗಿದ ಮುಷ್ಟಿ ಎದ್ದಿತು
ನೋವೆ ನೆರೆದು ನಿಂತಂತೆ
ನೆಲದ ಒಡಲು ಗುಡುಗು ಸಿಡಿಲು
ಸೀಳಿ ಸೃಷ್ಟಿಯಾಗುತ್ತಿರುವ ಸಾಲು ಸಾಲು ಕೈಗಳು
ಬುಸುಗುಟ್ಟುವ ಹೆಡೆಗಳು
ಜೊತೆ ಜೊತೆಯಲ್ಲಿ ಸೆಟೆದು ನಿಂತ
ಅರೆಬೆತ್ತಲ ನಡುಗತ್ತಲ
ಭಯ ಬದುಕಿನ ಮೈಗಳು
ಹುಟ್ಟಿಕೊಂಡವೆಲ್ಲೆಲ್ಲೂ ಕಾದ ಕೆಂಡ ಕಿಡಿಗಳು
ಮೂಳೆಯೊಳಗೆ ಮನಸ ಹರಿಸಿ
ಕಾಲಿನಲ್ಲಿ ಕನಸು ನೆಲೆಸಿ
ಶೋಷಣೆಯ ಸಜ್ಜೆ ಮೇಲೆ ಹೆಜ್ಜೆಯಿಟ್ಟು ರೈತರು


ಕೆದರಿದ ಕಿಡಿ ಕೂದಲು, ಉಬ್ಬಿ ಹೋದ ಕಾಲು
ಗರಬಡಿದ ಬಾಗಿಲಿಗೆ ಝಾಡಿಸಿ ಒದ್ದು
ನಗರವೆಲ್ಲ ಮೈ ಕೊಡವಿ ನಿಟ್ಟು ಬಿದ್ದು ಎದ್ದು
ಹೃದಯವಾಗಿ ನಿಂತಿತು, ಹಾರವಾಗಿ ಹರಿಯಿತು
ತೇಗುತ್ತಿದ್ದ ಟಾರು ರಸ್ತೆ ತೆಪ್ಪಗಾಯಿತು
“ಸೌಧ”ದತ್ತ ಸಾಗಲು ತೆಪ್ಪವಾಯಿತು.


“ನಿಧಿ” ನೆಲೆಯೂರಿದ ವಿಧಾನ ಸೌಧ
ಸರ್ಪಕಾವಲಿನ ಶ್ರೀ ಕುರುಡ
ನೆಲದ ಒಡೆಯರು ನಮ್ಮ ರೈತರು
ಕೊಚ್ಚಿ ಬಂದರು ರೊಚ್ಚೆದ್ದವರು

ವಿಧಾನ ಸೌಧದ ಹೊಟ್ಟೆಯ ಒದ್ದು
ಕಲ್ಲು ಕಲ್ಲಿಗೂ ಕ್ರಾಂತಿಯ ಸದ್ದು
ಎದೆಯುಬ್ಬಿಸಿ ಒಳ ನುಗ್ಗಿದರು

ಅತ್ತಿಂದಿತ್ತ ಹಾರುವ ಬಾವಲಿ
ಕಣ್ಣಿಗೆ ಬಡಿಯುವ ಕಳ್ಳಾಟ
ದಿಗಿಲು ಹುಟ್ಟಿಸುವ ದುರ್ನಾತ

ಕಿಡಿಕಾರುವ ಕಣ್ ಬೆಳಕನು ಬಿಟ್ಟು
ಎದೆ ಮನೆ ಬಾಗಿಲು ಭೇದಿಸಿ ಹೊಕ್ಕು
ಒಳಗೆಲ್ಲಾ ಹುಡುಕಾಡಿದರು
ಹೃದಯವ ಕಾಣಲು ಹುಡುಕಿದರು
ಮೂಲೆ ಮೂಲೆಯ ತಡಕಿದರು

ಕತ್ತಲು ಕವಿದರು ಸಿಗಲಿಲ್ಲ.
ಹೃದಯವೆ ಅಲ್ಲಿ ಇರಲಿಲ್ಲ
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...