Home / ಕವನ / ಕವಿತೆ / ಇಜ್ಜೋಡು

ಇಜ್ಜೋಡು

ನನ್ನಾಕೆಯಂತಾಕೆ ಲೋಕಕೆ ಒಬ್ಬಾಕೆ
ಅವಳಿಗೆ ಅವಳೆ ಹೋಲಿಕೆ.

ಓದಿಯೂ ಓದದ
ದೂರದವಳಲ್ಲದ ಇವಳ ಮಾಡಿಕೊಂಡು ಬಂದೆ
ಇವಳ ಜೋಡಿ ಸಂಸಾರ ನನಗೆ
ಕತ್ತಿ ಮೇಲೆ ಸಾಮು ಮಾಡಿದಂಗಾಗುತಿಹುದು.

ಮೇಲೆ, ನೋಡೋಕೆ ಇವಳು ಮೆತ್ತನ್ನಾಕೆ
ಒಳಗೆ ಬಲು ಘಾಟಿಯೀಕೆ
ಸದಾ ನೆರೆಕೆರೆ ಒಬ್ಬರಲ್ಲ ಒಬ್ಬರ, ಒಂದಲ್ಲ ಒಂದು ಕೊಂಕ
ಎತ್ತಿಯಾಡದಿದ್ದರೆ ತಿಂದದ್ದು ಅರಗದು ಇವಳಿಗೆ.
ನಮ್ಮದು ನಮಗೆ
ಅನ್ಯರ ಸುದ್ದಿ ಯಾಕೆಂದರೆ ಮೂತಿ ಮುರಿಯುವಳು

ಇವಳು ಚೆನ್ನಾಗಿದ್ದಾಗ ಮಾತ್ರ
ಇವಳಂತ ಹೆಣ್ಣಿಲ್ಲ
ಉಳಿದಂತೆ ಹೀಗೆ ಅಂತ ಹೇಳೋಕೆ ಬರಲ್ಲ.

ದೊಡ್ಡಾಕೆಯಿವಳು
ನೀನು ಬುದ್ದೀನೆ ಹೇಳು ಕೇಳಳು
ಅವಳಿಗೆ ಏನು ಹೇಳಬಾರದು
ಅವಳು ನಡೆದದ್ದೆ ದಾರಿಯೆಂದರೆ ಸಮ
ತಪ್ಪಿದರೆ ಮನೆಯಾದ ಮನೆಯನ್ನೆಲ್ಲಾ
ಕಾಳಿಂಗ ಮಡುವಾಗಿ ಮಾಡಿ ಬಿಡುವಳು.

ಅನುನಯ ಇವಳಲ್ಲಿ ಕೇಳಬೇಡ
ಹರಿ ಹಾಯೋದು ಬಿಟ್ಟರಿವಳು ಮನುಷ್ಯಳಲ್ಲ!
ಎದ್ದಾಗಿನಿಂದ ಮಲಕೊಳ್ಳೊವರೆಗೆ ಅದು ನಡದೇ ಇರುತ್ತೆ
ಇಗ! ಅವಳಿಗೆ ನಿದ್ದೆ ಬಂದಾಗಲೊಂದು ಕ್ಷಣ
ಮನೆ, ಮನ ತಣ್ಣಗಿರುತ್ತೆ, ನಿರಾಳವಿರುತ್ತೆ.

ಅವಳು ನನ್ನ ಮೇಲಷ್ಟೆ ಅಲ್ಲ
ಮಕ್ಕಳ ಮೇಲೂ ಅಷ್ಟೆ!
ಅವು ಆಟ ಗೀಟ ಅಂದರೆ ಉಹೂಂ! ಇಲ್ಲ!
ಅವಳು ಹೇಳಿದ್ದ ಮಾಡಬೇಕು
ಅವಳಿಷ್ಟದಂಗೆ ಇರಬೇಕು
ಒಂದೇ ಒಂದು ಕ್ಷಣ ಮರೆಯಾದರೂ ಸಿದುಮುವಂಗಾಡುವಳು

ಹೇಳಿ ಕೇಳಿ ನಾನೊಬ್ಬ ಮಾಸ್ತರ
ಯಾರಾದರೊಬ್ಬರು ತಪ್ಪದೇ ಬರುವರು
ನನ್ನ ಹತ್ತಿರ.
ಹಾಗೆ ಬಂದಾಗ ಮಾತಾಡುತ್ತ ಕುಳಿತರೆ
ಅಬ್ಬಬ್ಬಾ! ಏನದು ಮಾತೂ ಮಾತು!
ಮಾಡೋಕಿನ್ನೇನು ಬೇರೆ ಉದ್ಯೋಗ
ಅದರ ಬದಲು ಮನೆಯೊಳಗೆ ಏನಾದರೂ ನೋಡಿದರೆ ಆಗೋದಿಲ್ಲವೆ!
ನಿಮಗೇನೋ ಬೇರೆ ಕೆಲಸವಿಲ್ಲವೆಂದರೆ
ಇದ್ದವರಿಗೆ ಇರೋದಿಲ್ವೆ?
ಜೊತೆಗೆ ನಿಮಗೆ ಕಾಫಿ, ತಿಂಡಿ, ಸರಬರಾಜು ಬೇರೆ ಆಗಬೇಕು
ನೀವು ಮನೆಯೊಳಗಿದ್ದೀರಿಯೆಂದರೆ
ನನಗೆ ಒಂದೇ ಒಂದು ಕೆಲಸವೂ ಸಾಗದು
ದೊಡ್ಡ ತಲೆನೋವೆನ್ನುವಳು.

ಇನ್ನು ಹುಡುಗಿಯರು ಯಾರಾದರೂ ಬಂದು ಬಿಟ್ಟರೆ
ಮುಗೀತು!
ಒಳಗಿದ್ದು ಕೊಂಡೇ ಎಲ್ಲಾ ಗಮನಿಸುವಳು
ಅವರೊಂದೊಂದು ಅಲಂಕಾರ, ಆಕಾರ, ಬಟ್ಟೆ, ಬರೆ, ನಡೆ ನುಡಿ
ಎಲ್ಲಾ ವಿಮರ್ಶೆ ನಡೆಸುವಳು
ನನ್ನನ್ನು ಅವರನ್ನು ಒಟ್ಟುಗೂಡಿಸಿ ಅಂದು ಬಿಡುವಳು.

ರೇಗತ್ತಿ ನಾನು,
ನಾನು ಕೆಡಬೇಕೆಂದರೆ
ನೀನು ಹಿಡಿದು ಕೊಳ್ಳುವೆಯೇನೆ?
ನನಗೆ ನನ್ನ ಗೌರವ, ಘನತೆಯ ಬಗೆಗೆ ತಿಳಿಯದೆ?
ಏನು ಮೊದಲಿಂದಲೂ ನೀನೇ ಇದ್ದೆಯಾ? ಎಂದರೆ
ಆ ಹ . ಹ .. ಹ .. ! ಎನ್ನುವಳು

ಯಾವುದೊಂದರಲ್ಲೂ ಹೀಗೆ
ನಾನು ಯಾವುದೆಂದರೂ ಅವಳಿಗೆ ತಪ್ಪೆ!
ಕೊನೆಗೆ ಸರಸದ ವಿಷಯಕ್ಕೆ ಬಂದರೂ
ಬಲು ಮಡಿ, ಬಿಗಿ
ತೂಕ ಮಾಡಿದಂಗೆ

ಅದೇನೋ
ಓದು ಬರೆಯೋದು ಅಂದರೆ
ಇವಳಿಗಾಗದು
ನಾನೇನಾದರೂ ಪುಸ್ತಕ, ಪೆನ್ನು ಎತ್ತಿಕೊಂಡರೆ
ಹೂಂ! ಇನ್ನು ಕುಂತು ಬಿಟ್ಟರಾ ಎನ್ನುವಳು

ಒಂದಾದರೆ ಹೇಳ ಬಹುದು

ರೋಸಿ ಹೋಗಿ
ಲಟ ಪಟ ಅಂದರೆ
ಮುಸುಗಿಟ್ಟು ಮಲಗಿದಾಕೆ ಮರುದಿನವಾದರೂ ಎದ್ದರೆ ಕೇಳಿ!

ನಾನು,
ಅನ್ನೋದೇನೋ ಅಂದು ಬಿಡುವೆ
ಆಮೇಲೆ ಏನಾದರೊಂದು ಮಾಡಿಕೊಂಡರೇನು ಗತಿಯೆಂದು
ಬಹಳ ಅಂಜುವೆ.

ಜೊತೆಗೆ
ಕಸ ಮುಸುರೆ, ಮಕ್ಕಳು ಮರಿ ಕೆಲಸ
ನನಗೆ ಭಾರಿ ಕೆಲಸ.
ಇದೆಲ್ಲಾ ತಿಳಿದೋ ಏನೋ ಅವಳು ಉರಿದಾಡುವಳು
ನಾನು ನಾಯಿಯಂಗೆ ಮುಚ್ಚಿಕೊಂಡಿರ ಬೇಕಾಗುವುದು
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...