Home / ಕವನ / ಕವಿತೆ / ಎಲ್ಲಿಹನು ನನ್ನ ಪತಿ

ಎಲ್ಲಿಹನು ನನ್ನ ಪತಿ

ಓ ಗಿರಿಯೆ ಮರಗಳೇ ಓ ಜೀವ ಜೀವಗಳೆ
ನನ್ನೊಡೆಯ ಎಲ್ಲಿಹನು ಬೇಗ ಪೇಳಿ
ಸಾಯುತಿಹೆ ತರಹರಿಸಿ ನಿರ್ಜೀವವಾಗಿರುವೆ
ಅವನಿಲ್ಲದಾನಿನ್ನು ಹೇಗೆ ಇರಲಿ || ೧ ||

ಬಾವಿಯಲಿ ಜಲವೆಲ್ಲ ಬತ್ತಿ ಹೋದಂತಿಹುದು
ಹಣ್ಣಿನಲಿ ರಸವೆಲ್ಲ ಒಣಗಿರುವುದು
ದೀಪದಲಿ ಎಣ್ಣೆಯೇ ತಿರಿಹೋಗಿಹುದಲ್ಲ
ಬಾಳ ಬಳ್ಳಿಯ ರಸವು ಇಂಗಿರುವುದು || ೨ ||

ಇಷ್ಟು ದಿನ ಅವನಿದ್ದ, ಇದ್ದಂತೆ ಇದ್ದಿಲ್ಲ,
ಈಗ ಅವನಿಲ್ಲದೇ ಬರಿದಾಗಿದೆ
ಗಂಡ ಸತ್ತ ಮೇಲೆ ಹೆಂಡತಿಯು ಜಾಣಳೆ
ಕಳಕೊಂಡು ಹುಡುಕುತಿಹೆ ಸಿಗದಾಗಿದೆ || ೩ ||

ಯಾವುದಕೆ ಸಿಟ್ಟಾಗಿ ಹೋಗಿಹನೊ ನನ್ನ ದೊರೆ
ಎನ್ನ ಸಿರಿ ಎನ್ನ ಬಲ ಸರ್ವಸ್ವವು
ಅವನಿಲ್ಲದಿರೆ ನಾನು ಜೀವ ಹಿಡಿದಿರಲಾರೆ
ಬಾವಿಯೋ ಕೆರೆ ತೊರೆಯೊ ಕರೆಯುತಿಹವು || ೪ ||

ಸತ್ತಂತೆ ಬದುಕಿರುವ ಈ ಬಾಳಲೇನಿಹುದು
ಸತ್ತು ಹುಟ್ಟುವ ಇಂಥ ಬಾಳು ಸಾಕು
ಬಿಟ್ಟು ಬಿಟ್ಟೋಡಿದರೆ ಆಳುವಾ ಪತಿದೇವ
ಅಳಬೇಕೊ ನಗಬೇಕೋ ಸಾಕುಸಾಕು || ೫ ||

ಯಾವ ಪ್ರಭುವಿಂದೆನ್ನ ಮಾಂಗಲ್ಯ ಸೌಭಾಗ್ಯ
ಯಾವ ಕೈಯಾಸರೆಯೆ ನನ್ನ ಉಸಿರು
ಅವನನ್ನು ಕಳಕೊಂಡು ಇನ್ನೆಲ್ಲಿ ಸೌಭಾಗ್ಯ
ಕೆಳಗೆ ಮೇಲಾಗುತಿದೆ ಜೀವದುಸಿರು || ೬ ||

ಯೌವನದ ದೇಹವಿದೆ ಅಂದವಿದೆ ಚೆಂದವಿದೆ
ಮನೆಯೊಳಗೆ ಸಿರಿಸಂಪದೆಲ್ಲವಿಹುದು
ಉಂಡು ಉಡಲಿಕ್ಕೆ ಕೊರೆಯೆ ತಿಂದುತೇಗಲು ಅರೆಯೆ
ಏನಿದ್ದು ಎಲ್ಲವೂ ಬರಿದೊ ಬರಿದು || ೭ ||

ನನ್ನ ಕೂಗನ್ನಷ್ಟು ಕೇಳುವಿರ ಗೆಳತಿಯರೆ
ಕೇಳಿ ಎದೆಯಳಲನ್ನು ತೋಡಿಕೊಳುವೆ
ಏನಾದರೊಂದಿಷ್ಟು ಸಾಂತ್ವನವ ಹೇಳಿರಿ
ದುರ್ಭಾಗ್ಯೆ ನೊಂದವಳು ಬೇಡಿಕೊಳುವೆ || ೮ ||
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...