Home / ಲೇಖನ / ಇತರೆ / ಕೀಳರಿಮೆ ಏಕೆ?

ಕೀಳರಿಮೆ ಏಕೆ?

ಪ್ರಿಯ ಸಖಿ,
ಬಸ್ಸಿನ ಪ್ರಯಾಣದಲ್ಲೊಮ್ಮೆ ಕಾಲೇಜು ಯುವತಿಯೊಬ್ಬಳು ಜೊತೆಯಾದಳು. ಏನೇನೋ ಕಾಡು ಹರಟೆ ಹೊಡೆಯುತ್ತಾ ದಾರಿ ಸವೆಸುತ್ತಿರಲು, ಇದ್ದಕ್ಕಿದ್ದಂತೆ ಆ ಯುವತಿ ಕೂತ ಸೀಟಿನಲ್ಲೆ ಮಿಸುಕಾಡಲಾರಂಭಿಸಿದಳು. ಹಿಂದೆ ಮುಂದೆ, ಅಕ್ಕಪಕ್ಕಕ್ಕೆ ಜರುಗುತ್ತಾ ಹೇಗೆ ಕುಳಿತರೂ ಸಮಾಧಾನವಿಲ್ಲವೆಂಬಂತೆ ಗಲಿಬಿಲಿಯಲ್ಲಿದ್ದಳು. ನಿಧಾನಕ್ಕೆ ಕಣ್ಣು ಹಾಯಿಸಿದವಳಿಗೆ ಹಿಂದಿನ ಸೀಟಿನ ಯುವಕನೊಬ್ಬನ ಕಾಲ್ಚಳಕಕ್ಕೆ ಇವಳು ಹೀಗೆ ಒದ್ದಾಡುತ್ತಿದ್ದಾಳೆ ಎಂಬುದರಿವಾಯ್ತು. ‘ಆ ಹುಡುಗಂಗೆ ಕಾಲು ತೆಗೆಯೋದಕ್ಕೆ ಹೇಳಿ’ ಎಂದೆ. ಪಕ್ಕದವಳಿಗೆ. ಅದಕ್ಕವಳು ‘ಹೇಗೆ ಹೇಳೋದು ಅವನೇನಾದ್ರೂ ಒರಟಾಗಿ ಉತ್ತರ ಕೊಟ್ರೆ?’ ಎಂದಳು.

‘ಕೊಡ್ಲಿ ನಮಗೇನು ಬಾಯಿಲ್ಲವಾ ನಾವೂ ಮಾತಾಡಿದ್ರಾಯ್ತು’ ಎಂದೆ. ‘ಜನರೆದುರಿಗೆ ನಂಗೆ ಅವಮಾನ ಆಗುತ್ತೆ’ ಎಂದಳು ಹಿಂಜರಿಯುತ್ತಾ. ನಾನು ಅವಕ್ಕಾದೆ. ಅಲ್ಲ ಅವಮಾನವಾಗುವುದು ಇವಳಿಗಾ? ಅವನಿಗಾ? ಅವಳ ಒದ್ದಾಟ ನೋಡಲಾರದೇ ಕೊನೆಗೆ ನಾನೇ ಎದ್ದುನಿಂತು ‘ಸೀಟಿನಿಂದ ಕಾಲು ತೆಗೀರಿ ತೊಂದರೆ ಆಗುತ್ತೆ’ ಎಂದೆ. ಬಸ್ಸಿನಲ್ಲಿದ್ದ ಅನೇಕರ ಗಮನ ಆ ಕಡೆ ಬಿತ್ತು. ನಾಚಿದ ಯುವಕ ತಟ್ಟನೆ ಕಾಲ್ತೆಗೆದ. ಮುಂದೆ ಪ್ರಯಾಣದುದ್ದಕ್ಕೂ ಅನೇಕ ಪ್ರಜ್ಞಾವಂತರ ಚುಚ್ಚುನೋಟಗಳನ್ನು ಅವನು ಎದುರಿಸಬೇಕಾಯ್ತು!

ಸಖಿ, ಇಲ್ಲಿ ನನ್ನ ಕಾಳಜಿ ಇರುವುದು ಅವನ ಬಗೆಗಲ್ಲಾ. ಅವನು ಇದರಿಂದ ಪಾಠ ಕಲಿತನೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ …….. ಆ ಯುವತಿಯ ಸ್ವಾನುಕಂಪದ ಬಗೆಗೆ ನನಗೆ ತೀವ್ರ ಬೇಸರವಾಯ್ತು. ಇಷ್ಟು ಸಣ್ಣ ಕಿರುಕುಳವನ್ನೇ ಎದುರಿಸಲಾಗದವಳು ನಾಳೆ ಅಕಸ್ಮಾತ್ ದೊಡ್ಡ ಶೋಷಣೆ, ದೌರ್ಜನ್ಯ ಎದುರಾದರೆ ಹೇಗೆ ಎದುರಿಸಿಯಾಳು?

ಇದು ಮಹಿಳಾ ಸಬಲೀಕರಣ ವರ್ಷ. ಅವರು ಹೀಗೆಂದುಕೊಂಡರೆ, ಇವರು ಹಾಗೆಂದುಕೊಂಡರೆ ಎಂಬ ಸ್ವಯಂ ಕಲ್ಪಿತ ಭ್ರಮಾಲೋಕದಲ್ಲಿ ತೇಲುತ್ತಾ ವಾಸ್ತವ ವನ್ನೆದುರಿಸಲು ಹಿಂಜರಿಯುವ ಇಂತಹಾ ಸ್ತ್ರೀಯರು ಸಬಲರಾಗುವುದು ಯಾವಾಗ? ಇದು ನನ್ನ ಕರ್ಮ. ಇದನ್ನು ನಾನು ಹೇಗಾದರೂ ಸರಿ ಅನುಭವಿಸಲೇಬೇಕು ಎಂಬ ಕಣ್ಪಟ್ಟಿಯನ್ನು ಕಟ್ಟಿಕೊಂಡು ಅಂಧರಾಗಿರುವ ಮಹಿಳೆಯರು, ಈ ತಮ್ಮ ಕೀಳರಿಮೆಯಿಂದ ಮೊದಲು ಹೊರಬರಬೇಕು. ಯಾರೋ ಬಂದು ನನ್ನನ್ನು ಉದ್ಧಾರ ಮಾಡುವರೆಂದು ಕಾಯದೇ ತನಗೊದಗುವ ಎಲ್ಲಾ ಸಣ್ಣ, ದೊಡ್ಡ ಆಪತ್ತುಗಳನ್ನು ಸ್ವತಹ ತಾನೇ ಎದುರಿಸಲು ಸಿದ್ಧರಾಗಬೇಕು! ಆಗಷ್ಟೇ ಹೆಣ್ಣು ಸಬಲೆಯಾಗುವತ್ತ ಒಂದು ಹೆಜ್ಜೆ ಇರಿಸಿದಂತಾಗುತ್ತದೆ.

ಬೆನ್ನಿಗೆ ಬಿದ್ದ ಶಿಲುಬೆಯನ್ನು ಹೊರುವುದೂ ಅದನ್ನು ತುಂಡರಿಸಿ ಕಿತ್ತೂಗೆಯುವುದು ಎರಡೂ ನಮ್ಮ ಕೈಯಲ್ಲೇ ಇರುವುದಿಲ್ಲವೇ ಸಖಿ?
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...