Home / ಕವನ / ಕವಿತೆ / ಗೋರಿಗಳ ನಡುವೆ

ಗೋರಿಗಳ ನಡುವೆ


ಕಣ್ತೆರೆಯುತ್ತಲೆ ಕಣ್ಮುಚ್ಚಿದ ಕಂದಮ್ಮಗಳೇ
ಅರಳುತ್ತಲೆ ಉರಿದುಹೋದ ಅಕ್ಕಂದಿರೆ, ತಂಗಿಯರೇ
ಬದುಕುತ್ತಲೆ ಬೀದಿಪಾಲು-ತಾಯಂದಿರೆ, ತಂದೆಯರೇ
ಕರೆಯುತ್ತಲೆ ಕಮರಿಹೋದ ಗೋರಿ ಗೆಳೆಯರೇ

ನಡುವೆ ನಿಂತವನ
ಮನಸು ಚಿಂತೆವನ
ಉರಿಯುತ್ತಿದೆ ಕಾಡು
ಮುರಿಯುತ್ತಿದೆ ಮಾಡು

ಮನಸಿನ ಮಾತು
ಕಣ್ಣಲೆ ಹೂತು
ಅರಿವಾಗದು ಅಲ್ಲಿ
ಅದು ನೀರಿಲ್ಲದ ನಲ್ಲಿ.

ನಗವಿದ್ದರೆ, ನಗುವಿದ್ದರೆ
ಮುಗಿಬೀಳುವರಲ್ಲಿ.
ನಿಜ ಮುಚ್ಚುತ, ಹುಸಿ ಬಿಚ್ಚುತ
ಹಸಿವಾದರೂ ಹಸಿರಾಗುತ
ಅವರಿವರಿಗೆ ಉಸಿರಾದರೆ
ಹೆಸರಾಗುವುದಲ್ಲಿ
ಮನದಾಳವ ತೋಡಿದರೆ
ಕೆಸರಾಗುವುದಲ್ಲಿ
ಮೊರೆ ಹೊಕ್ಕೆನು ಇಲ್ಲಿ


ಗೋಡೆಗಳಾದರು ಕಂಬಗಳಾದರು
ಮಾತು ಮರೆಯುವ ಮೃಗಗಳಾದರು
ಸತು ಮುರಿಯುವ ತೋಳಗಳಾದರು
ಮನಸಿಗೆ ಮುಷ್ಟಿಯ ತೋಳುಗಳಾದರು.

ಬೆಳಕಿಗೆ ಬರಿದೆ ಕತ್ತಲ ಕೊರೆದೆ
ಮೀಟುವ ತಂತಿ ಮಿನುಗುವ ತಾರೆ-
ಕಾಣದೆ, ಕಡೆಗೆ ನಾನೇ ಕತ್ತಲು
ಕಣ್ಕಟ್ಟಿದ ವಿಷ-ಬಾಳಿನ ಕುಯಿಲು.


ಮನಸಿಲ್ಲವೆ ನಿಮಗಾದರು?
ದನಿಯಿಲ್ಲವೆ ನಿಜ-ಕಾದರು?
ನನ್ನೆದೆ ಬೆಳಕಿನ ಗೋರಿಗಳೆ
ಬಾಳಿನ ಬಯಲಿನ ಭೇರಿಗಳೆ.

ಅಳಲಿನ ಅನುಭವ ಆಳಕೆ ತಟ್ಟಿ
ಮನುಜತೆ ಮಾತು ಮೂಲಕ ಮುಟ್ಟಿ
ಕಲಕುವ ಅಲೆಗಳು, ಎದೆ ಮುಟ್ಟುವ ಮಜಲು
ಗೋರಿಗಳಾ ಒಡಲು-ಈಗಾಯಿತು ಕಡಲು.

ಗೋರಿಗೊರಳುಗಳು ಉಬ್ಬಿ ಬಂದವು
ಬೆಂದ ಮನಸನು ತಬ್ಬಿ ನಿಂದವು
ತೇವಗೊಳ್ಳುತ ತೇವಗೊಳಿಸುತ
ತೆರಳು ಎಂದವು ಬಾಳಿನ ಹರಿತಕೆ
ಮರಳು ಎಂದವು ಗೋಳಿನ ಇರಿತಕೆ.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...