Home / ಕವನ / ಕವಿತೆ / ಎಲ್ಲಿ ಹೋದಳು ನಮ್ಮ ಅಡಗೂಲಜ್ಜಿ?

ಎಲ್ಲಿ ಹೋದಳು ನಮ್ಮ ಅಡಗೂಲಜ್ಜಿ?

ಎಲ್ಲಿ ಹೋದಳು ನಮ್ಮ ಅಡಗೂಲಜ್ಜಿ
ಎಲ್ಲಿ ಗುರುತುಗಳನು ಒಮ್ಮಲೆ ಉಜ್ಜಿ

ನಡೆದರು ಮುಗಿಯದ ಕಾಡಿನ ಹಾದಿ
ಕಾಣಿಸಿತೊಂದು ಗುಡಿಸಲ ಬಿಡದಿ

ಮೀಯಲು ಬೆಚ್ಚನೆ ಬಿಸಿ ನೀರಿತ್ತು
ಕುಡಿಯಲು ಪನ್ನೀರಿನ ಷರಬತ್ತು

ಒಲೆಯ ಮೇಲೊಂದು ಮಾಯಾ ಗಡಿಗೆ
ಬಯಸಿದ ತಕ್ಷಣ ಪಾಯಸದಡಿಗೆ

ಆ ದಿನ ಅಲ್ಲೇ ನಮ್ಮ ಠಿಕಾಣಿ
ದಿಂಬಿನ ಬದಿಗೇ ನೂಲಿನ ಏಣಿ

ಮಲಗಿರಲೇನದು ಯಾರೋ ಎದ್ದು
ಮನೆಯೊಳಗೆಲ್ಲೋ ನಡೆಯುವ ಸದ್ದು

ಕನಸೋ ನೆನಸೊ ಯಾರಿಗೆ ಗೊತ್ತು
ರಾತ್ರಿ ತುಂಬಾ ಹೊತ್ತಾಗಿತ್ತು

ಅಜ್ಜೀ ಅಜ್ಜೀ ಏನಜ್ಜೀ
ನಡೆಯುವ ಸದ್ದು ಯಾರಜ್ಜೀ

ಬಂದಿಲ್ಲವೆ ಮಕ್ಕಳೆ ಇನ್ನೂ ನಿದ್ದೆ
ಬಂದಿದೆಯೆಂದೇ ನಾ ತಿಳಿದಿದ್ದೆ

ಹೇಳುವೆನೊಂದು ಸುದ್ದಿಯ ನಿಮಗೆ
ಕಣ್ಣಿಗೆ ಮಂಪರು ಹತ್ತುವವರೆಗೆ

ತುಂಬಾ ಚೆಲುವೆ ರಾಜನ ಮಗಳು
ಕಾಲಿನವರೆಗೂ ಇಳಿಯುವ ಹೆರಳು

ಆದರೆ ಒಬ್ಬ ಮಾಂತ್ರಿಕ ಬಂದು
ಪೀಡಿಸುತಿರುವನು ಆಕೆಯನಿಂದು

ತಾನೇ ಹಿಡಿದು ಆಕೆಯ ಕೈಯ
ರಾಜ್ಯವ ಪಡೆವುದು ಅವನ ಉಪಾಯ

ನಾಳೆ ಹೇಳುವೆ ಇನ್ನುಳಿದದ್ದು
ಮಲಗಿರಿ ಈಗ ಕಂಬಳಿ ಹೊದ್ದು

ಅಜ್ಜೀ ಅಜ್ಜೀ ಹೇಳಜ್ಜೀ
ಆತನ ಕೊಲುವುದು ಹೇಗಜ್ಜೀ

ಬಂದಿಲ್ಲವೆ ಮಕ್ಕಳೆ ಇನ್ನೂ ನಿದ್ದೆ
ಬಂದಿದೆಯೆಂದೇ ನಾ ತಿಳಿದಿದ್ದೆ

ಏಳು ಸಮುದ್ರಗಳಾಚೆಗೆ ದ್ವೀಪ
ಉರಿಯುವುದಲ್ಲಿ ನಂದಾದೀಪ

ಅಲ್ಲೇ ಇರುವುದು ಮಾಂತ್ರಿಕ ಜೀವ
ಆರಿಸಲೆಂದೇ ಆತನು ಸಾವ

ಆದರೆ ಮಾತ್ರ ದ್ವೀಪದ ಸುತ್ತಲು
ರಕ್ಕಸನೊಬ್ಬ ಇರುವನು ಕಾವಲು

ನಾಳೆ ಹೇಳುವೆ ಆತನ ಗುಟ್ಟು
ಮಲಗಿರಿ ಈಗ ಗಾಬರಿ ಬಿಟ್ಟು

ಭಾರೀ ನಿದ್ದೆಯೆ ಬಿದ್ದಿರಬೇಕು
ಎಚ್ಚರವಾಗಲು ಸೂರ್ಯನ ಬೆಳಕು

ಸುತ್ತ ನೋಡಿದರೆ ಉರಿಗಣ್ಣುಜ್ಜಿ
ಎಲ್ಲೂ ಇಲ್ಲದ ಅಡಗೂಲಜ್ಜಿ

ಎಲ್ಲಿ ಹೋದಳು ನಮ್ಮ ಅಡಗೂಲಜ್ಜಿ
ಎಲ್ಲ ಗುರುತುಗಳನು ಒಮ್ಮೆಲೆ ಉಜ್ಜಿ
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...