Home / ಕವನ / ಕವಿತೆ / ಬಿಸಿಲು ಕುದುರೆಯನೇರಿ….

ಬಿಸಿಲು ಕುದುರೆಯನೇರಿ….

ಬಿಸಿಲು ಕುದುರೆಯನೇರಿ ಹೋಗಬೇಡೋ ಗೆಳೆಯಾ
ಬೆಂಗಾಡಿನಲಿ ಸುತ್ತಿ ಬೆವರ ಸುರಿಸಲು ಬೇಡ
ಬಯಕೆ ಬೆಟ್ಟವ ಹತ್ತಿ ಹೋಗಬೇಡೋ ಗೆಳೆಯಾ
ಬಂಡೆಯಂತೆ ಉರುಳಿ ಬೆರಗಾಗಲು ಬೇಡ ||ಬಿಸಿಲು||

ಬಿಸಿಲು ಮಚ್ಚಿನ ಮೇಲೆ ಬಿರಿದಿರಲು ಬಳಿ ಸೂರ್‍ಯ
ಕಿಸುರ ಕಣ್ಣ ಒರೆಸಿ ತುಂಬಿಕೊ ಬೆಳಕ ಪೂರ
ಬಿದಿರು ಮೆಳೆಯಲ್ಲಿ ಅಡಗಿಹನು ಪಿಳ್ಳಂಗೋವಿಯ ಒಡೆಯ
ನವಿಲುಗಣ್ಣ ತೆರೆದು ನೋಡೊ ಒಮ್ಮೆ ಗೆಳೆಯಾ ||ಬಿಸಿಲು||

ಬಿದಿರು ಕಡ್ಡಿಯೆ ಬೇರೆ ಬಿಸಿಲು ಕೋಲೆ ಬೇರೆ
ಬಿದಿರು ಕಡ್ಡಯೆಂದೇ ಬಗೆದು
ಬಿಸಿಲು ಕೋಲ ನುಡಿಸಲು ಬೇಡ ||ಬಿಸಿಲು||

ಅಂಬರದ ಹಕ್ಕಿಗೆ ಆಕಾಶದಗಲದ ರೆಕ್ಕೆ
ರೆಕ್ಕೆ ಬೀಸಿ ಹಕ್ಕಿ ಮೆರೆದರೂ ಬಾನೊಳಗೆ
ಕಾಳು ಕಡ್ಡಿ ಹೆಕ್ಕಿ ಬೆಚ್ಚನೆ ಗೂಡ ಕಟ್ಟಿ
ಬಣ್ಣದ ಹಾಡ ಹೆಣೆದು ಹಣ್ಣಾಯಿತು ನೆಲದೊಳಗೆ ||ಬಿಸಿಲು||

ಮಿಂಚು ಹುಳುವೆ ಬೇರೆ ಮಿನುಗೊ ಚುಕ್ಕಿಯೆ ಬೇರೆ
ಮಿಂಚು ಹುಳುವೆಂದೆ ಬಗೆದು
ಮಿನುಗೊ ಚುಕ್ಕಿಯ ಹಿಡಿಯಲು ಬೇಡ ||ಬಿಸಿಲು||

ನೀರೊಳಗಿನ ನೈದಿಲೆಗೂ ನೀರಡಿಕೆ ತಪ್ಪಿಲ್ಲ
ಚಿಪ್ಪಿನ ಮುತ್ತಿಗೆ ನತ್ತಾದರೂ ನೆಮ್ಮದಿಯಿಲ್ಲ
ಕಾಲು ಕಂಗಾಲಾದರೂ ಕನಸಿಗೆ ಬರವಿಲ್ಲ
ನಡೆದಷ್ಟು ದಾರಿಯು ನಿಲ್ಲೊ ಮಾತೇ ಇಲ್ಲ ||ಬಿಸಿಲು||

ಒಡಲೊಳಗುರಿದರೂ ಬೆಂಕಿ
ಒಲೆಯೊಳಗುರಿದರೂ ಬೆಂಕಿ
ಬೆಂಕಿಯೊಳಗೆ ಬೆಂದು ಬಯಲು ಕಾಣೊ ಗೆಳೆಯಾ ||ಬಿಸಿಲು||
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...