ರೂಪ

ಬಾಯ್ದೆರೆದು ಮುತ್ತಿರುವ
ದಳ್ಳುರಿಯ ಮಧ್ಯದೊಳು
ಚಿಚ್ಛಕ್ತಿಯೊಂದೆದ್ದಿತು

ಇದೆ ಸಮಯ ಇದೆ ಸಮಯ
ತಡಮಾಡದಿರು ಏಳು
ರೂಪವನು ಇಳಿಸೆಂದಿತು

ರೂಪವೆಂದರೆ ಏನೊ
ಚಿತ್ರವಾಗಿದೆ ಮಾತು
ಶಿಲ್ಪಿಯೇ ನಾನೆಂದೆನು

ಪರಿಹರಿಪೆ ಸಂಶಯವ
ನೋಡೆನುತ ಬಹುತರದ
ಭಾವಗಳ ತಂದೊಡ್ಡಿತು

ರೂಪಗಳ ಭಟ್ಟಿ ಇದು
ಆನಂದವಿಲ್ಲಿಹುದು
ಬಿತ್ತರಿಸು ಏಳೆಂದಿತು

ಇರಲಿರಲು ಬಹುದೆಂದು
ಗೈಮೆ ಇದು ಸುಖವೆಂದು
ಚಟಪಟಿಸಿ ನಾನೆದ್ದೆನು

ಭಾವನೋದ್ರೇಕದೊಳು
ಉಲ್ಲಾಸವುಕ್ಕೇರಿ
ಬಹುದೂರ ನಾ ಸಾಗಿದೆ

ಆನಂದ ಸಿಗದಾಗೆ
ಅತ್ತಿತ್ತ ಸುಳಿದಾಡಿ
ಕಂಗೆಟ್ಟು ಬೆದಕಾಡಿದೆ

ಓ ರೂಪವೇ ನಿನ್ನ
ಕಾಣಲೋಸುಗವೆಂದು
ಪೊಸರಾಜ್ಯಕೈತಂದೆನು

ಭಾವಶೃಂಗವೆ ನಿನ್ನ
ಬೀಡಿನಿಂದೆನಗೊಸೆದು
ಇಳಿದು ಬಾ ಬಳಿಗೆಂದೆನು

ಕೂಗದಿರು ಕಂಡತ್ತ
ಓಡದಿರು ಬಾ ಇಲ್ಲಿ
ವಾಹಿನಿಯು ಸೆಳೆದೊಯ್ವುದು

ತಾನಾಗಿ ಬಂದುದನು
ಪುಟವಿಟ್ಟು ಬೆಲೆಕಟ್ಟಿ
ರೂಪಕೊಡು ಅದಕೆಂದಿತು

ರೂಪಿಸುವ ಬಗೆ ಏನೊ
ಬಣ್ಣಗಳ ನಾನರಿಯೆ
ಪಾಠವೆನಗಿಲ್ಲೆಂದೆನು

ಭಾವವನು ಕಟ್ಟಿರಿಸಿ
ಅರ್ಥವನು ಬಿಚ್ಚಿಡುವ
ಪದಗಳನು ತಾರೆಂದಿತು

ನಿನ್ನ ಕಲ್ಪನೆಯೊಳಗೆ
ಚಿತ್ರ ತಾನೇಳುವುದು
ನವನೀತವುದಯಿಪಂತೆ

ಭಾವದೊಳು ಕಾಂತಿಯುತ
ಔಪಾಸನೆಯು ಮೂಡೆ
ಸಾವಿಲ್ಲ ಆ ರೂಪಕೆ

ಭಾವಗಳು ಉನ್ನತದ
ವಜ್ರಗಳು ಇದ್ದಂತೆ
ವಾಕ್ಯಗಳು ಚಿನ್ನದಂತೆ

ನಿನ್ನ ನಿಪುಣತೆಯೊಡನೆ
ಕಟ್ಟಡವ ಕಟ್ಟಿರಿಸೆ
ಪೂರ್ಣತೆಯು ಬಹುದೆಂದಿತು

ಕಟ್ಟದಿರು ಕಬ್ಬಿಣದ
ಕಟ್ಟಡದಿ ಪುಷ್ಪವನು
ಮಕರಂದವಿಹುದು ಒಳಗೆ

ಮಕರಂದವಿಲ್ಲದೊಡೆ
ಸಮದೊಳಗೆ ಸುಖವಿಲ್ಲ
ಪೋಗದಿರು ಆ ಗೊಡವೆಗೆ

ಅನುಭವದ ಕ್ಷೇತ್ರವನು
ಹೊಕ್ಕು ನೋಡಿದೊಡಲ್ಲಿ
ನುಡಿಗಳಿಗೆ ಕ್ಷಾಮವಿಲ್ಲ

ಸುಲಭ ಶೈಲಿಯ ಸೊಗದ
ಕಬ್ಬಿನಂತಹ ಸವಿಯ
ವಾಕ್ಯಗಳ ತಾರೆಂದಿತು

ದಿಶೆ ದಿಶೆಯೊಳಲೆದಲೆದು
ವಾಕ್ಯಗಳನಾಯ್ದಾಯ್ದು
ಸಡಗರದಿ ನಾ ತಂದೆನು

ಸುಲಭ ಶೈಲಿಯ ಸೊಗದ
ಕಬ್ಬಿನಂತಹ ಸವಿಯ
ವಾಕ್ಯಗಳೊ ನೋಡೆಂದೆನು

ಸಾಕು ಬಿಡು ಸಾಕು ಬಿಡು
ಏನ ತಂದೆಯೊ ಕಾಣೆ
ಈ ಭಾವಕೀ ಪದಗಳೆ?

ಕಡಿವಾಣವಿಲ್ಲದಿಹ
ಪದಗಳಿವು ‘ಛೀ’ ಯೆಂದು
ಮೂದಲಿಸಿ ಸಿಡುಗುಟ್ಟಿತು

ನಿನ್ನಂತೆ ಕಂಡವರು
ಸಿಡುಗುಟ್ಟುವರೊ ಏನೋ
ರೂಪವೇ ಬೇಡೆಂದೆನು

ಅನ್ಯರಾಡುವುದೇನು
ನಿನ್ನ ಕತೆ ನಿನದಿರಲು
ಅಳುಕುಬಗೆ ಬೇಡೆಂದಿತು

ರೂಪವದು ನಮದಲ್ಲ
ಟೀಕಿಪರ ಸೊತ್ತಲ್ಲ
ಗಣಿಯೊಡೆಯ ವಿಶ್ವನಾಥ

ಆಳಕ್ಕೆ ತಕ್ಕಂತೆ
ಏಳುವುದು ಆನಂದ
ಜನಕಜೇ, ಕೇಳೆಂದಿತು
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...