ರೂಪ

ಬಾಯ್ದೆರೆದು ಮುತ್ತಿರುವ
ದಳ್ಳುರಿಯ ಮಧ್ಯದೊಳು
ಚಿಚ್ಛಕ್ತಿಯೊಂದೆದ್ದಿತು

ಇದೆ ಸಮಯ ಇದೆ ಸಮಯ
ತಡಮಾಡದಿರು ಏಳು
ರೂಪವನು ಇಳಿಸೆಂದಿತು

ರೂಪವೆಂದರೆ ಏನೊ
ಚಿತ್ರವಾಗಿದೆ ಮಾತು
ಶಿಲ್ಪಿಯೇ ನಾನೆಂದೆನು

ಪರಿಹರಿಪೆ ಸಂಶಯವ
ನೋಡೆನುತ ಬಹುತರದ
ಭಾವಗಳ ತಂದೊಡ್ಡಿತು

ರೂಪಗಳ ಭಟ್ಟಿ ಇದು
ಆನಂದವಿಲ್ಲಿಹುದು
ಬಿತ್ತರಿಸು ಏಳೆಂದಿತು

ಇರಲಿರಲು ಬಹುದೆಂದು
ಗೈಮೆ ಇದು ಸುಖವೆಂದು
ಚಟಪಟಿಸಿ ನಾನೆದ್ದೆನು

ಭಾವನೋದ್ರೇಕದೊಳು
ಉಲ್ಲಾಸವುಕ್ಕೇರಿ
ಬಹುದೂರ ನಾ ಸಾಗಿದೆ

ಆನಂದ ಸಿಗದಾಗೆ
ಅತ್ತಿತ್ತ ಸುಳಿದಾಡಿ
ಕಂಗೆಟ್ಟು ಬೆದಕಾಡಿದೆ

ಓ ರೂಪವೇ ನಿನ್ನ
ಕಾಣಲೋಸುಗವೆಂದು
ಪೊಸರಾಜ್ಯಕೈತಂದೆನು

ಭಾವಶೃಂಗವೆ ನಿನ್ನ
ಬೀಡಿನಿಂದೆನಗೊಸೆದು
ಇಳಿದು ಬಾ ಬಳಿಗೆಂದೆನು

ಕೂಗದಿರು ಕಂಡತ್ತ
ಓಡದಿರು ಬಾ ಇಲ್ಲಿ
ವಾಹಿನಿಯು ಸೆಳೆದೊಯ್ವುದು

ತಾನಾಗಿ ಬಂದುದನು
ಪುಟವಿಟ್ಟು ಬೆಲೆಕಟ್ಟಿ
ರೂಪಕೊಡು ಅದಕೆಂದಿತು

ರೂಪಿಸುವ ಬಗೆ ಏನೊ
ಬಣ್ಣಗಳ ನಾನರಿಯೆ
ಪಾಠವೆನಗಿಲ್ಲೆಂದೆನು

ಭಾವವನು ಕಟ್ಟಿರಿಸಿ
ಅರ್ಥವನು ಬಿಚ್ಚಿಡುವ
ಪದಗಳನು ತಾರೆಂದಿತು

ನಿನ್ನ ಕಲ್ಪನೆಯೊಳಗೆ
ಚಿತ್ರ ತಾನೇಳುವುದು
ನವನೀತವುದಯಿಪಂತೆ

ಭಾವದೊಳು ಕಾಂತಿಯುತ
ಔಪಾಸನೆಯು ಮೂಡೆ
ಸಾವಿಲ್ಲ ಆ ರೂಪಕೆ

ಭಾವಗಳು ಉನ್ನತದ
ವಜ್ರಗಳು ಇದ್ದಂತೆ
ವಾಕ್ಯಗಳು ಚಿನ್ನದಂತೆ

ನಿನ್ನ ನಿಪುಣತೆಯೊಡನೆ
ಕಟ್ಟಡವ ಕಟ್ಟಿರಿಸೆ
ಪೂರ್ಣತೆಯು ಬಹುದೆಂದಿತು

ಕಟ್ಟದಿರು ಕಬ್ಬಿಣದ
ಕಟ್ಟಡದಿ ಪುಷ್ಪವನು
ಮಕರಂದವಿಹುದು ಒಳಗೆ

ಮಕರಂದವಿಲ್ಲದೊಡೆ
ಸಮದೊಳಗೆ ಸುಖವಿಲ್ಲ
ಪೋಗದಿರು ಆ ಗೊಡವೆಗೆ

ಅನುಭವದ ಕ್ಷೇತ್ರವನು
ಹೊಕ್ಕು ನೋಡಿದೊಡಲ್ಲಿ
ನುಡಿಗಳಿಗೆ ಕ್ಷಾಮವಿಲ್ಲ

ಸುಲಭ ಶೈಲಿಯ ಸೊಗದ
ಕಬ್ಬಿನಂತಹ ಸವಿಯ
ವಾಕ್ಯಗಳ ತಾರೆಂದಿತು

ದಿಶೆ ದಿಶೆಯೊಳಲೆದಲೆದು
ವಾಕ್ಯಗಳನಾಯ್ದಾಯ್ದು
ಸಡಗರದಿ ನಾ ತಂದೆನು

ಸುಲಭ ಶೈಲಿಯ ಸೊಗದ
ಕಬ್ಬಿನಂತಹ ಸವಿಯ
ವಾಕ್ಯಗಳೊ ನೋಡೆಂದೆನು

ಸಾಕು ಬಿಡು ಸಾಕು ಬಿಡು
ಏನ ತಂದೆಯೊ ಕಾಣೆ
ಈ ಭಾವಕೀ ಪದಗಳೆ?

ಕಡಿವಾಣವಿಲ್ಲದಿಹ
ಪದಗಳಿವು ‘ಛೀ’ ಯೆಂದು
ಮೂದಲಿಸಿ ಸಿಡುಗುಟ್ಟಿತು

ನಿನ್ನಂತೆ ಕಂಡವರು
ಸಿಡುಗುಟ್ಟುವರೊ ಏನೋ
ರೂಪವೇ ಬೇಡೆಂದೆನು

ಅನ್ಯರಾಡುವುದೇನು
ನಿನ್ನ ಕತೆ ನಿನದಿರಲು
ಅಳುಕುಬಗೆ ಬೇಡೆಂದಿತು

ರೂಪವದು ನಮದಲ್ಲ
ಟೀಕಿಪರ ಸೊತ್ತಲ್ಲ
ಗಣಿಯೊಡೆಯ ವಿಶ್ವನಾಥ

ಆಳಕ್ಕೆ ತಕ್ಕಂತೆ
ಏಳುವುದು ಆನಂದ
ಜನಕಜೇ, ಕೇಳೆಂದಿತು
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...