Home / ಲೇಖನ / ಇತರೆ / ಸಂತೋಷ

ಸಂತೋಷ

ಸಂತೋಷ – ಹೆಪಿನೆಸ್ – ಎನ್ನುವುದು ಒಂದು ಮರೀಚಿಕೆ. ಹಿಡಿಯಲು ಹೋದರೆ ಜಾರಿಕೊಳ್ಳುತ್ತದೆ. ಹುಡುಕಲು ಹೋದರೆ ಸಿಗುವುದಿಲ್ಲ. ಯಾವುದನ್ನೋ ಗುರಿ ಇಟ್ಟುಕೊಂಡು ಹುಡುಕುತ್ತಾ ಹತ್ತಿರ ಹೋದರೆ ದೂರದೂರ ಓಡುತ್ತದೆ. ಇದರಲ್ಲೇ ನಮ್ಮ ಸಂತೋಷ ಇದೆ ಎಂದು ಯಾವುದಾದರೂ ಒಂದನ್ನು ಹಿಡಿದುಕೊಂಡರೆ ಮುಂದೊಂದು ದಿನ ಇದೇ ದುಃಖಕ್ಕೆ ನಾಂದಿಯಾಯಿತಲ್ಲ ಎನ್ನುವ ಕೊರಗು ಹುಟ್ಟಿಕೊಳ್ಳುತ್ತದೆ. ಸಂತೋಷ ಸಿಗುತ್ತದೆ ಎಂದು ಎಣಿಸಿದಲ್ಲಿ ಸಿಗುವುದಿಲ್ಲ. ಕೆಲವೊಮ್ಮೆ ಇಲ್ಲ ಎಂದು ಎಣಿಸಿದಲ್ಲಿ ಸಿಗುತ್ತದೆ. ಹಾಗಾಗಿ ಸಂತೋಷಕ್ಕೊಂದು ಇಕ್ವೆಶನ್ ಹಾಕುವುದೂ ಸಾಧ್ಯವಿಲ್ಲ. ಸಂತೋಷ ಎನ್ನುವುದು ನಮ್ಮ ಮನದ ಒಂದು ಭಾವನೆ.

ನಮ್ಮ ಮನೋಭೂಮಿಕೆ ಮಿತಿಯಿಲ್ಲದಷ್ಟು ವಿಶಾಲವಾಗಿದೆ. ಹಲವಾರು ಭಾವನೆಗಳ ಆಗರವಾಗಿದೆ. ಮನದಂಗಳದಲ್ಲಿ ಆಸೆಗಳ ಮೂಟೆಮೂಟೆಗಳೇ ರಾಶಿ ಬಿದ್ದಿರುತ್ತವೆ. ಎಡೆಬಿಡದ ಬೇಕು ಬೇಡಗಳು ಕಾಡಿಸುತ್ತಲೇ ಇರುತ್ತವೆ. ಅಳೆಯಲಾಗದ ಆಳದಿಂದ ಆಸೆಗಳು, ಅಗತ್ಯಗಳು, ನಿರೀಕ್ಷೆಗಳು ಉದ್ಭವವಾಗುತ್ತಲೇ ಇರುತ್ತವೆ. ಇವುಗಳಿಗೆ ತಕ್ಕ ಹಾಗೆ ಸಂತೋಷದ ಇಕ್ವೇಷನ್ ಬದಲಾಗುತ್ತಾ ಹೋಗುತ್ತದೆ.

ಹಾಗಾದರೆ ಸಂತೋಷ ಅಂದರೆ ಏನು? ಅದು ಎಲ್ಲಿ ಹೇಗೆ ಸಿಗುತ್ತದೆ? ಅದನ್ನು ನಮ್ಮದಾಗಿಸಿಕೊಳ್ಳುವುದು ಹೇಗೆ? ಸಂತೋಷದ ಹುಡುಕಾಟ ಎನ್ನುವುದು ಒಂದು ಭ್ರಮೆಯೇ? ಧರ್ಮಗ್ರಂಥಗಳಲ್ಲಿ ಇದಕ್ಕೆ ಉತ್ತರಗಳಿವೆ. ಸಂತರು, ಚಿಂತಕರು ಇದಕ್ಕೆ ಬೇರೆ ಬೇರೆ ರೀತಿಯಲ್ಲಿ ಉತ್ತರ ಹೇಳಿದ್ದಾರೆ. ಹೇಳುತ್ತಿದ್ದಾರೆ. ಆದರೆ ಒಬ್ಬ ಸಾಮಾನ್ಯ ಮನುಷ್ಯಳಾಗಿ ನನಗನಿಸುವುದು ಸಂತೋಷ ಎನ್ನುವುದು ಒಂದು ಭ್ರಮೆಯಲ್ಲದೆ ಬೇರೆ ಏನೂ ಅಲ್ಲ ಎಂದು. ನಾವು ಎಣಿಸಿದುದರಲ್ಲಿ ಸಂತೋಷ ಸಿಗುವುದಿಲ್ಲ ಎನ್ನುವುದು ಗೊತ್ತಿದ್ದರೂ ಅದನ್ನು ಹುಡುಕಿಕೊಂಡು ಹೋಗುತ್ತೇವೆಯಲ್ಲ ಅಲ್ಲೇ ಸಂತೋಷದ ಅವಸಾನವಾಗಿರುತ್ತದೆ. ಸಂತೋಷದ ಹುಡುಕಾಟವೇ ದುಃಖದ ಮೂಲ.

ಆದರೂ ಎಲ್ಲರಿಗೂ ಬೇಕಾಗಿರುವುದು ಸುಖ, ಸಂತೋಷ, ಸರಿಯಾಗಿ ಆಲೋಚಿಸಿದರೆ, ಸಂತೋಷ ಸಿಗುವುದು ಹೊರಗಿನ ಸುಖಗಳಿಂದಲ್ಲ. ನಮ್ಮೊಳಗಿನ ಭಾವನೆಗಳಿಂದ. ನಮ್ಮ ಭಾವನೆಗಳನ್ನು ನಿಯಂತ್ರಿಸುವುದರಿಂದ ಅದನ್ನು ಪಡೆದುಕೊಳ್ಳುವುದು ಸಾಧ್ಯ. ನಾವು ಏನನ್ನಾದರೂ ಗೆದ್ದರೆ, ನಮಗೆ ಬೇಕಾದ್ದು ಏನಾದರೂ ಸಿಕ್ಕಿದರೆ, ನಮಗೆ ಬೇಕಾದಂತೆ ಎಲ್ಲವೂ ನಡೆದರೆ ಸಂತೋಷ ಸಿಗುತ್ತದೆ ಎನ್ನುವುದು ಒಂದು ಭ್ರಮೆ. ಇದರಕ್ಕಿಂತ ಏನಾದರೂ ಒಳ್ಳೆಯದನ್ನು ಯೋಚಿಸಿದರೆ ಯಾರಿಗಾದರೂ ಒಳ್ಳೆಯದನ್ನು ಮಾಡಿದರೆ ಸಂತೋಷ ಸಿಗುತ್ತದೆ. ಸಂತೋಷ ಎನ್ನುವುದು ನಮ್ಮೊಳಗೇ ಇದೆ. ನಮ್ಮ ಮನಸ್ಸಿನಲ್ಲಿ, ನಮ್ಮ ಹೃದಯದಲ್ಲಿ, ನಮ್ಮ ಅರಿವಿನಲ್ಲಿ, ನಮ್ಮ ಆಯ್ಕೆಯಲ್ಲಿ, ನಮ್ಮ ಗುರುತಿಸುವಿಕೆಯಲ್ಲಿ, ನಾವು ಜೀವನವನ್ನು ನೋಡುವ ದೃಷ್ಟಿಯಲ್ಲಿ, ನಾವು ಜೀವಿಸುವ ರೀತಿಯಲ್ಲಿ ಸಂತೋಷದ ಒಸರಿದೆ. ನಾವು ಅನುಭವಿಸುವ ದುಃಖದಲ್ಲಿ ಸಂತೋಷದ ಅಂಶವಿದೆ. ಅನುಭವಿಸುವ ಸಂತೋಷದಲ್ಲಿ ದುಃಖದ ಒಳಹರಿವಿದೆ. ಇದನ್ನು ಗುರುತಿಸುವ ದಾರಿಯನ್ನು ಕಂಡುಕೊಂಡರೆ ಸಂತೋಷ ಎನ್ನುವುದು ನಮ್ಮ ಹತ್ತಿರದಲ್ಲೇ ಎಲ್ಲೋ ಸುಳಿಯುತ್ತಿದೆ ಎನ್ನುವ ಅರಿವಾಗುತ್ತದೆ. ಉದಾಹರಣೆಗೆ ನಮ್ಮ ಅತ್ಯಂತ ಪ್ರೀತಿ ಪಾತ್ರರಿಂದ ದೂರವಾಗುವ ದುಃಖವನ್ನೇ ತೆಗೆದುಕೊಂಡರೆ ಆ ದುಃಖದಲ್ಲಿ ನಮಗೆ ಅವರೆಷ್ಟು ಪ್ರೀತಿಯವರು ಎನ್ನುವ ಸಂತೋಷದ ಅರಿವಿದೆ. ಈ ಪ್ರೀತಿಯೆನ್ನುವ ಸಂತೋಷದ ಅರಿವಿನಿಂದಲೇ ಅವರ ಅಗಲಿಕೆ ನಮಗೆ ನೋವನ್ನು ತರುತ್ತದೆ. ಸಂತೋಷ ಮತ್ತು ದುಃಖ ಒಂದರೊಳಗೊಂದು ಸೇರಿಕೊಂಡೇ ಇದೆ. ಸ್ವಲ್ಪ ಆಳವಾಗಿ ಯೋಚಿಸಿದರೆ ಇದಕ್ಕೆ ಉದಾಹರಣೆಗಳನ್ನು ನಾವೇ ಕಂಡುಕೊಳ್ಳಬಹುದು.

ಸಂತೋಷವನ್ನು ಹುಡುಕಿಕೊಂಡು ಅಲೆಯುವವನಿಗಿಂತ ಏನು ಲಭ್ಯವಾಗಿದೆಯೋ ಆದರಲ್ಲಿಯೇ ಸಂತೋಷವನ್ನು ಕಂಡುಕೊಳ್ಳುವವನಿಗೆ ನಿಜವಾದ ಸಂತೋಷ ಯಾವಾಗಲೂ ಸಿಗುತ್ತದೆ. ಇದ್ದುದರಲ್ಲಿಯೇ ಸಂತೋಷವನ್ನು ಹುಡುಕಿಕೊಳ್ಳುವ ಮನೋಭಾವ ಜೀವನದ ರೀತಿಯೇ ಆದಾಗ ಸಂತೋಷವನ್ನು ಹುಡುಕುವ, ಹುಡುಕಿಕೊಂಡು ಹೋಗಿ ಸಿಗದಾಗ ನಿರಾಶರಾಗುವ ಪ್ರಮೇಯವೇ ಎದುರಾಗುವುದಿಲ್ಲ. ಸಂತೋಷ ಯಾವಾಗಲೂ ನಮ್ಮ ಜೊತೆಗೇ ಇರುತ್ತದೆ. ನಮ್ಮ ಒಳಗೇ ಇರುತ್ತದೆ.

ಒಂದು ಸುಂದರವಾದ ಮಾತಿದೆ. ಸಂತೋಷವೆನ್ನುವುದು ಕೈಗೆಟಕುವ ಹೂಗಳಿಂದಲೇ ತಯಾರಿಸಿದ ಒಂದು ಸುಂದರವಾದ ಹೂಗೊಂಚಲಿನ ಹಾಗೆ. ಸುಂದರವಾದ ಹೂಗೊಂಚಲಿಗೆ ಇದೇ ಹೂವಾಗಬೇಕೆನ್ನುವ ಚೌಕಟ್ಟು ಇಲ್ಲ. ಯಾವ ಹೂ ಕೈಗೆ ಸಿಗುವುದೋ ಅದರಿಂದಲೇ ಹೂ ಗೊಂಚಲನ್ನು ತಯಾರಿಸಬಹುದು. ಮನಸೆಳೆಯುವ ಅಂತಹ ಹೂಗೊಂಚಲೊಂದನ್ನು ತಯಾರಿಸುವ ಕಲೆಯಂತಹ ಕಲೆ ಸಂತೋಷ. ಜೀವನದಲ್ಲಿಯೂ ಹಾಗೆ, ನಮಗೆ ಸಿಕ್ಕಿದುದರಲ್ಲಿಯೇ ಸಂತೋಷವನ್ನು ಕಂಡು ಹುಡುಕುವ ಮನೋಭೂಮಿಕೆಯನ್ನು ನಮ್ಮದಾಗಿಸಿಕೊಂಡರೆ ಸಂತೋಷ ನಮ್ಮ ಹತ್ತಿರವೇ ಇದೆ, ನಮ್ಮ ಒಳಗೇ ಇದೆ ಎನ್ನುವ ಅರಿವಾಗುತ್ತದೆ. ಅರಿಯುವ ಕಲೆಯನ್ನು ಸಿದ್ಧಿಸಿಕೊಂಡರೆ ಈ ಸಂತೋಷಕ್ಕಾಗಿ ಪರದಾಡುವ ಕಷ್ಟವಿಲ್ಲ. ಸಂತೋಷ ಭ್ರಮನಿರಸನವಿಲ್ಲ. ಸಿಗದಾಗ ಸಂತೋಷವನ್ನು ಹುಡುಕಿಕೊಂಡು ಹೋಗುವ ಜಂಜಾಟವಿಲ್ಲ.
*****
(ಚಿಂತನ – ಆಕಾಶವಾಣಿ, ಮಂತಣಿ)

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...