Home / ಕವನ / ಕವಿತೆ / ಜೇಡನೂ ನೊಳವೂ

ಜೇಡನೂ ನೊಳವೂ

ಬಾ ನೊಳವೆ, ಬಾ ನೊಳವೆ, ಬಾ ನನ್ನ ಮನೆಗೆ,
ಬಾನೊಳಗೆ ಹಾರಿ ಬಲು ದಣುವಾಯ್ತು ನಿನಗೆ.
ನೀನೊಮ್ಮೆ ಬಾ, ನನ್ನ ಹೊಸ ಮನೆಯ ನೋಡು;
ಈ ನೂಲಿನಾ ಚಾಪೆಯಲಿ ಬಂದು ಕೂಡು.”

ಆ ಮಾತಿಗಾ ನೊಳವು “ಎಲೆ ಜೇಡ, ಜೇಡ!
ಈ ಮನೆಯ ಉಪಚಾರ, ಹಾ! ಬೇಡ ಬೇಡ!
ನೀ ಮಾಡಿದಾ ಚಾಪೆ ನನಗೊಂದು ದೂಪೆ,
ಆ ಮರದ ತೂತು ಮನೆ ಇದೆ, ಅಲ್ಲಿ ಪೋಪೆ!”

“ಎಲೆ ನೊಳವೆ! ನಿನ್ನ ತಿರುಗಾಟವನ್ನು ನೋಡಿ, ತಲೆತಿರುಗುತಿದೆ ನನಗೆ, ಬಾರೊ, ದಯಮಾಡಿ!
ಎಲೆಯ ಹಾಕಿರುವೆ, ನೀನುಂಡು ಸುಖಿಯಾಗು,
ಮಲಗು ಎಳೆಹಾಸಿನಲಿ, ಬಳಿಕೆದ್ದು ಹೋಗು.”

“ನಿನ್ನಲ್ಲಿ ಉಂಡವನು ಬೇರೆ ಬಾಳುವನೆ?
ನಿನ್ನಲ್ಲಿ ಮಲಗಿದವ ಮತ್ತೆ ಏಳುವನೆ?
ನಿನ್ನ ಕಥೆಯಂ ಹಿರಿಯರಿಂ ಕೇಳಿ ಬಲ್ಲೆ,
ನಿನ್ನಲ್ಲಿ ಬರಲೊಲ್ಲೆ, ನಾನು ಬರಲೊಲ್ಲೆ.”

“ಮರಿನೊಳವೆ! ಮರಿನೊಳವೆ! ನಮ್ಮೊಳಗೆ ನಂಟು ಇರುವುದೆಂಬುದು ನಮಗೆ ಕೇಳಿ ಗೊತ್ತುಂಟು.
ಮಿರಮಿರನೆ ಮಿರುಗುವಾ ನೂಲಿಂದ ನೇದು
ಅರಿವೆ ಉಡುಗೊರೆ ಕೊಡಲು ನಾನಿರುವೆ ಕಾದು.”

“ಕಾಡುವವ ನಾ ಅರಿವೆ’ ಎಂಬುದು ಸಹಜವು.
ನೇದ ಹೊಸ ಅರಿವೆ ಹೊದೆದರೆ ಸಾವು ನಿಜವು.
ಆದರವು ಸಾಕು, ಜೇಡನೆ! ಸಾಕೆ”ನುತ್ತ,
ಹಾದಿ ಹಿಡಿದಾ ನೊಳದ ಮರಿ ಹೋದುದತ್ತ.

ಇತ್ತ ಜೇಡನು ಬಳಿಕ ತಿರುಗುತಿರುಗುತ್ತ,
ಕಿತ್ತು ತನ್ನಯ ಮೈಯ ಮಯಣ ಹೊಸೆಯುತ್ತ,
ಹೊತ್ತು ನೋಡಿತು ನೊಳವ ತಿನ್ನುವೆನೆನುತ್ತ,
ಮತ್ತೊಮ್ಮೆ ಕೂಗಿದುದು, ಬರಿದೆ ಹೊಗಳುತ್ತ.

“ಅರೆರೆ ನೊಳಮರಿ! ಬೊಂಬೆ! ಮೈಗಂದ ನಿಂಬೆ!
ಹರಿನೀಲ ಕಣ್ಗೊಂಬೆ ನೋಡಿ ಸೊಗಗೊಂಬೆ!
ಗರಿ ಪಚ್ಚೆಯಲಿ ತುಂಬೆ, ಹಾಹಾ! ಹೊಸತುಂಬೆ!
ಸ್ವರವು ಝೇನ್-ಝೇನೆಂಬೆ, ಮಧುರವಿನಿತಿಂದೆ.”

ಗಾಳಿಯೂದಿದ ಚೆಂಡು ಬಲು ಹಿಗ್ಗುವಂತೆ,
ಬೀಳೆ ಕಿವಿಯಲಿ ಮಾತು ನೊಳ ಉಬ್ಬಿತಂತೆ;
ಆಳನೋಡದ ಮಡುವಿನಲಿ ಧುಮುಕುವಂತೆ.
ಬೋಳು ತಲೆ ನೊಳವು ಬಲೆಯಲಿ ಹಾರಿತಂತೆ.

ಕಳ್ಳ ಜೇಡನ ಮಾರಿ ಬಳಿಕೊಂದು ಬಾರಿ
ಪಿಳ್ಳೆನೊಳ ಮೈಯೇರಿ ಮುಳ್ಳುಗಳನೂರಿ,
ಚಿಳ್ಳೆಂದು ವಿಷಕಾರಿ, ನೆತ್ತರನು ಹೀರಿ,
ಕೊಳ್ಳೆಹೊಡೆಯಲು ನೊಳವು ಸತ್ತಿತೈ ಚೀರಿ.

ಬಲೆ ಹೊಗದ ನೊಳವನ್ನು ಬರಿಹೊಗಳಿ ಕೊಂದಾ.
ಬಲು ಮೋಸದಾ ಜೇಡನೀ ಕಥೆಯಿದೆಂದಾ.
ಕೊಲೆಗಾರರಾಡುವ ಮುಖಸ್ತುತಿಗಳಿಂದಾ
ಬಲಿ ಬೀಳ ಬೇಡೆಂಬುದನು ಕಲಿಯೊ, ಕಂದಾ.
*****
(ಕವಿಶಿಷ್ಯ)

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...