Home / ಕವನ / ಕವಿತೆ / ಜೇಡನೂ ನೊಳವೂ

ಜೇಡನೂ ನೊಳವೂ

ಬಾ ನೊಳವೆ, ಬಾ ನೊಳವೆ, ಬಾ ನನ್ನ ಮನೆಗೆ,
ಬಾನೊಳಗೆ ಹಾರಿ ಬಲು ದಣುವಾಯ್ತು ನಿನಗೆ.
ನೀನೊಮ್ಮೆ ಬಾ, ನನ್ನ ಹೊಸ ಮನೆಯ ನೋಡು;
ಈ ನೂಲಿನಾ ಚಾಪೆಯಲಿ ಬಂದು ಕೂಡು.”

ಆ ಮಾತಿಗಾ ನೊಳವು “ಎಲೆ ಜೇಡ, ಜೇಡ!
ಈ ಮನೆಯ ಉಪಚಾರ, ಹಾ! ಬೇಡ ಬೇಡ!
ನೀ ಮಾಡಿದಾ ಚಾಪೆ ನನಗೊಂದು ದೂಪೆ,
ಆ ಮರದ ತೂತು ಮನೆ ಇದೆ, ಅಲ್ಲಿ ಪೋಪೆ!”

“ಎಲೆ ನೊಳವೆ! ನಿನ್ನ ತಿರುಗಾಟವನ್ನು ನೋಡಿ, ತಲೆತಿರುಗುತಿದೆ ನನಗೆ, ಬಾರೊ, ದಯಮಾಡಿ!
ಎಲೆಯ ಹಾಕಿರುವೆ, ನೀನುಂಡು ಸುಖಿಯಾಗು,
ಮಲಗು ಎಳೆಹಾಸಿನಲಿ, ಬಳಿಕೆದ್ದು ಹೋಗು.”

“ನಿನ್ನಲ್ಲಿ ಉಂಡವನು ಬೇರೆ ಬಾಳುವನೆ?
ನಿನ್ನಲ್ಲಿ ಮಲಗಿದವ ಮತ್ತೆ ಏಳುವನೆ?
ನಿನ್ನ ಕಥೆಯಂ ಹಿರಿಯರಿಂ ಕೇಳಿ ಬಲ್ಲೆ,
ನಿನ್ನಲ್ಲಿ ಬರಲೊಲ್ಲೆ, ನಾನು ಬರಲೊಲ್ಲೆ.”

“ಮರಿನೊಳವೆ! ಮರಿನೊಳವೆ! ನಮ್ಮೊಳಗೆ ನಂಟು ಇರುವುದೆಂಬುದು ನಮಗೆ ಕೇಳಿ ಗೊತ್ತುಂಟು.
ಮಿರಮಿರನೆ ಮಿರುಗುವಾ ನೂಲಿಂದ ನೇದು
ಅರಿವೆ ಉಡುಗೊರೆ ಕೊಡಲು ನಾನಿರುವೆ ಕಾದು.”

“ಕಾಡುವವ ನಾ ಅರಿವೆ’ ಎಂಬುದು ಸಹಜವು.
ನೇದ ಹೊಸ ಅರಿವೆ ಹೊದೆದರೆ ಸಾವು ನಿಜವು.
ಆದರವು ಸಾಕು, ಜೇಡನೆ! ಸಾಕೆ”ನುತ್ತ,
ಹಾದಿ ಹಿಡಿದಾ ನೊಳದ ಮರಿ ಹೋದುದತ್ತ.

ಇತ್ತ ಜೇಡನು ಬಳಿಕ ತಿರುಗುತಿರುಗುತ್ತ,
ಕಿತ್ತು ತನ್ನಯ ಮೈಯ ಮಯಣ ಹೊಸೆಯುತ್ತ,
ಹೊತ್ತು ನೋಡಿತು ನೊಳವ ತಿನ್ನುವೆನೆನುತ್ತ,
ಮತ್ತೊಮ್ಮೆ ಕೂಗಿದುದು, ಬರಿದೆ ಹೊಗಳುತ್ತ.

“ಅರೆರೆ ನೊಳಮರಿ! ಬೊಂಬೆ! ಮೈಗಂದ ನಿಂಬೆ!
ಹರಿನೀಲ ಕಣ್ಗೊಂಬೆ ನೋಡಿ ಸೊಗಗೊಂಬೆ!
ಗರಿ ಪಚ್ಚೆಯಲಿ ತುಂಬೆ, ಹಾಹಾ! ಹೊಸತುಂಬೆ!
ಸ್ವರವು ಝೇನ್-ಝೇನೆಂಬೆ, ಮಧುರವಿನಿತಿಂದೆ.”

ಗಾಳಿಯೂದಿದ ಚೆಂಡು ಬಲು ಹಿಗ್ಗುವಂತೆ,
ಬೀಳೆ ಕಿವಿಯಲಿ ಮಾತು ನೊಳ ಉಬ್ಬಿತಂತೆ;
ಆಳನೋಡದ ಮಡುವಿನಲಿ ಧುಮುಕುವಂತೆ.
ಬೋಳು ತಲೆ ನೊಳವು ಬಲೆಯಲಿ ಹಾರಿತಂತೆ.

ಕಳ್ಳ ಜೇಡನ ಮಾರಿ ಬಳಿಕೊಂದು ಬಾರಿ
ಪಿಳ್ಳೆನೊಳ ಮೈಯೇರಿ ಮುಳ್ಳುಗಳನೂರಿ,
ಚಿಳ್ಳೆಂದು ವಿಷಕಾರಿ, ನೆತ್ತರನು ಹೀರಿ,
ಕೊಳ್ಳೆಹೊಡೆಯಲು ನೊಳವು ಸತ್ತಿತೈ ಚೀರಿ.

ಬಲೆ ಹೊಗದ ನೊಳವನ್ನು ಬರಿಹೊಗಳಿ ಕೊಂದಾ.
ಬಲು ಮೋಸದಾ ಜೇಡನೀ ಕಥೆಯಿದೆಂದಾ.
ಕೊಲೆಗಾರರಾಡುವ ಮುಖಸ್ತುತಿಗಳಿಂದಾ
ಬಲಿ ಬೀಳ ಬೇಡೆಂಬುದನು ಕಲಿಯೊ, ಕಂದಾ.
*****
(ಕವಿಶಿಷ್ಯ)

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...