Home / ಕವನ / ಕವಿತೆ / ನಾಗಣ್ಣನ ಕನ್ನಡಕ

ನಾಗಣ್ಣನ ಕನ್ನಡಕ

“ಓಡಿ ಬನ್ನಿರಿ! ಕೂಡಿ ಬನ್ನಿರಿ!
ನೋಡಿ ಬನ್ನಿರಿ! ಗೆಳೆಯರೆ!
ನೋಡಿ ನಮ್ಮಯ ಕನ್ನಡಕಗಳ!
ಹಾಡಿ ಹೊಗಳಿರಿ, ಗೆಳೆಯರೆ!

“ಊರುಗನ್ನಡಿ! ಉರುಟು ಕನ್ನಡಿ!
ದೂರನೋಟದ ಕನ್ನಡಿ!
ಓರೆಕಣ್ಣಿಗೆ ನೇರು ಕನ್ನಡಿ!
ಮೂರು ಚವುಲಕೆ ಕೊಡುವೆನು.

“ಹಸುರು ಹರಳಿದು! ಹೊಸತು ಹರಳಿದು!
ಕೊಸರು ಕಾಸಿಗೆ ಕೊಡುವೆನು;
ಬಿಸಿಲು ತಾಗದು, ಬೇನೆಯಾಗದು,
ಪಿಸರು ಬಾರದು ಕಣ್ಣಿಗೆ

“ಬಿಳಿಯ ಕನ್ನಡಿ! ತಿಳಿಯ ಕನ್ನಡಿ!
ಕಳೆಯ ಬೇಡಿರಿ ಸಮಯವಾ;
ಹಲವು ಜನಕಿದು ಭೂತ ಕನ್ನಡಿ!
ಬಲವ ಕೊಡುವುದು ಕಣ್ಣಿಗೆ!

“ಹಣ್ಣುಮುದುಕಗೆ ಚಿಣ್ಣಮಕ್ಕಳ
ಕಣ್ಣು ಕೊಡುವಾ ಕನ್ನಡಿ!
ಬಣ್ಣ ಬಣ್ಣದ ಕನ್ನಡಕಗಳು
ಬೆಣ್ಣೆಯಂದದಿ ತಣ್ಣಗೆ.

“ಅರಸು ಮೂಗಿನೊಳಿದ್ದು, ರಾಜ್ಯದ
ಪರಿಯ ನೋಡುವ ಕನ್ನಡಿ!
ಎರಡು ರೂಪಾಇ ಬೆಲೆಗೆ ನಿಮ್ಮನು
ದೊರೆಯ ಮಾಡುವ ಕನ್ನಡಿ!

“ಬರಹ ಓದದ ಪರೆಯ ಕಣ್ಣನು
ತೆರೆದು ಕಲಿಸುವುದೆಲ್ಲವಾ!
ಆರಿವು, ಕನ್ನಡದಿರವು, ಇಂಗ್ಲಿಷ್
ಅರಿವು ಬರುವುದು ನಿಮಿಷದಿ!”

ಹೀಗೆ ಶ್ಯಾಮನು ಕೂಗಿ ಹೊಗಳುವ
ಸೋಗು ಮಾತನು ಕೇಳುತಾ,
ನಾಗನಪ್ಪನು ತೂಗಿ ತಲೆಯನು,
ಮೇಗೆ ಬಂದನು ಅಂಗಡಿಗೆ.

“ಒಳ್ಳೆ ಕನ್ನಡಿ ಬೇಕು ರಾಯರೆ,
ಕೊಳ್ಳಿರೈ ಸರಿ ಬೆಲೆಯನು !
ಹಳ್ಳಿ ಮಂದಿಗೆ ಕೊಡಲು ಬಾರದು
ಸುಳ್ಳು ಕನ್ನಡಿ” ಎಂದನು.

ಆಗ ಶ್ಯಾಮನು ನಾಗನಪ್ಪನ
ಮೂಗಿಗಿಟ್ಟನು ಕನ್ನಡಿ;
ಕಾಗದಗಳನು ಕೈಗೆ ಕೊಟ್ಟು,
“ಹೇಗೆ ಕಾಂಬುದು?” ಎಂದನು.

“ಆಗಲಾರದು, ತಾಗಲಾರದು”
ನಾಗನಪ್ಪನು ನುಡಿದನು;
ಬೇಗ ತೆಗೆದನು; ಬೇರೆ ಕನ್ನಡಿ
ಬಾಗಿಸಿಟ್ಟನು ಶ್ಯಾಮನು.

“ತೋರಲಾರದು, ಸೇರಲಾರದು;
ನೀರು ಹನಿವುದು ಕಣ್ಣಿಲಿ,
ಬೇರೆ ಕನ್ನಡಿ ಬೇಗನೇ ಕೊಡಿ,
ಜಾರಿ ಬೀಳ್ವುದು” ಎಂದನು.

ಮೂರು ಕನ್ನಡಿ, ಆರು ಕನ್ನಡಿ,
ನೂರು ಕನ್ನಡಿ ತೋರಿದಾ,
ಬಾರಿಬಾರಿಗೂ ನಾಗನೆಂದನು
“ತೋರದೈ ಕನ್ನಡಿಗಳು”.

ಅದನು ತೆಗೆದನು, ಇದನು ತೆಗೆದನು,
ಮುದುಕ ಗ್ರಹಕನ ಮೂಗಿನಾ
ತುದಿಯೊಳಿಟ್ಟನು; ಒಡನೆ ಮುದುಕನು
“ಮೊದಲಿನಂತೆಯ” ಎಂದನು.

“ಅರಿಕೆ ಮಾಡುವೆ, ಹಿರಿಯ ಅಯ್ಯಾ,
ಧರಿಸಬಾರದು ಕೋಪವಾ;
ಸರಿಯ ಕನ್ನಡಿ ದೊರೆವುದಿಲ್ಲ;
……ಅ….ಕುರುಡು
ಉಂಟೇ ಕಣ್ಣಿಲಿ?”

ಉರಿದು ಬಿದ್ದನು, ಮುದುಕನೆದ್ದನು-
“ಹರಳು ಕಲ್ಲನು ಮಾರುವಾ
ಕುರುಡು ರಾಯರ ನೋಳ್ಪ
ನಮ್ಮಯ ಎರಡು ಕಣ್ಣಳು ಸರಿ ಇವೆ!”

ಸಿಟ್ಟು ನುಡಿಯನು ಕೇಳಿ ಶ್ಯಾಮನು
ದಟ್ಟ ಹರಳುಗಳೆರಡನು
ಇಟ್ಟು ಗ್ರಹಕನ ಕಣ್ಣ ಮುಂಗಡೆ,
ಕೊಟ್ಟ ಕಾಗದ ಕೈಯಲಿ.

ಗುಡ್ಡ ಕುಂಬಳದಂತೆ ಬರೆದಿಹ
ದೊಡ್ಡ ಅಕ್ಷರ ಪತ್ರವಾ
ಅಡ್ಡ ಹಿಡಿದನು,-
“ಓದಿ, ಸ್ವಾಮೀ, ಅಡ್ಡಿಯಿಲ್ಲದೆ” ಎಂದನು.

“ಎಲೆಲೆ ರಾಯರೆ! ತೆಲಗು ಕನ್ನಡ
ಕಲಿಪ ಕನ್ನಡಿ ಬೇಕಲೈ!
ಬೆಲೆಯ ಕೊಡುವೆನು; ಬೇಗ ತನ್ನಿರಿ,
ಚೆಲುವ ಇಂಗ್ಲಿಷ್ ಕನ್ನಡಿ.

“ಓದು ಬರಹಗಳೆಮಗೆ ತಿಳಿಯದು,
ಓದು ಬರಹವ ತೋರುವಾ
ಬೂದು ಕನ್ನಡಿ ಬೇಕು ರಾಯರೆ,
ಬೀದಿಗೆಸೆವುದು ಮಿಕ್ಕವಾ”.

ಒರೆದ ಮಾತಿಗೆ ಮತ್ತೆ ಶ್ಯಾಮನು,
“ಬರಹ ಕಲಿಸುವ ಕನ್ನಡಿ
ಹರಳು ನಮ್ಮಲ್ಲಿಲ್ಲ, ಸ್ವಾಮೀ,
ತೆರಳಿ ಹಳ್ಳಿಯ ಸಾಲೆಗೆ!”

ಎಂದು ಶ್ಯಾಮನು ನುಡಿಯಲು ಮುಂದೆ
ನಾಗನು “ಸಾಲೆಯೋಳ್
ಚೆಂದ ಕನ್ನಡಿ ಯಾವುದೆನೆ,”
ನಗುತೆಂದನಾಗಲೆ ಶ್ಯಾಮನು-

“ಅಲ್ಲಿ ಕನ್ನಡಿ ದೊರಕುದಿಲ್ಲವು:
ಅಲ್ಲಿ ’ಕನ್ನಡ’ ದೊರೆವುದು!
ಮೆಲ್ಲನಿದ ನೀವ್ ಕಲಿತುಕೊಂಡರೆ,
ಎಲ್ಲ ತಾನೇ ಕಾಂಬುದು.”

ಹೀಗೆ ಶ್ಯಾಮನು ನುಡಿದ ಮಾತನು
ನಾಗನಪ್ಪನು ಕೇಳುತಾ
ಬೇಗ ತನ್ನಯ ಮಕ್ಕಳನು
ಲೇಸಾಗೆ ಕಳುಹಿದ ಸಾಲೆಗೆ
*****
(ಕವಿಶಿಷ್ಯ)

Tagged:

Leave a Reply

Your email address will not be published. Required fields are marked *

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...