Home / ಕವನ / ಕವಿತೆ / ನಾಗಣ್ಣನ ಕನ್ನಡಕ

ನಾಗಣ್ಣನ ಕನ್ನಡಕ

“ಓಡಿ ಬನ್ನಿರಿ! ಕೂಡಿ ಬನ್ನಿರಿ!
ನೋಡಿ ಬನ್ನಿರಿ! ಗೆಳೆಯರೆ!
ನೋಡಿ ನಮ್ಮಯ ಕನ್ನಡಕಗಳ!
ಹಾಡಿ ಹೊಗಳಿರಿ, ಗೆಳೆಯರೆ!

“ಊರುಗನ್ನಡಿ! ಉರುಟು ಕನ್ನಡಿ!
ದೂರನೋಟದ ಕನ್ನಡಿ!
ಓರೆಕಣ್ಣಿಗೆ ನೇರು ಕನ್ನಡಿ!
ಮೂರು ಚವುಲಕೆ ಕೊಡುವೆನು.

“ಹಸುರು ಹರಳಿದು! ಹೊಸತು ಹರಳಿದು!
ಕೊಸರು ಕಾಸಿಗೆ ಕೊಡುವೆನು;
ಬಿಸಿಲು ತಾಗದು, ಬೇನೆಯಾಗದು,
ಪಿಸರು ಬಾರದು ಕಣ್ಣಿಗೆ

“ಬಿಳಿಯ ಕನ್ನಡಿ! ತಿಳಿಯ ಕನ್ನಡಿ!
ಕಳೆಯ ಬೇಡಿರಿ ಸಮಯವಾ;
ಹಲವು ಜನಕಿದು ಭೂತ ಕನ್ನಡಿ!
ಬಲವ ಕೊಡುವುದು ಕಣ್ಣಿಗೆ!

“ಹಣ್ಣುಮುದುಕಗೆ ಚಿಣ್ಣಮಕ್ಕಳ
ಕಣ್ಣು ಕೊಡುವಾ ಕನ್ನಡಿ!
ಬಣ್ಣ ಬಣ್ಣದ ಕನ್ನಡಕಗಳು
ಬೆಣ್ಣೆಯಂದದಿ ತಣ್ಣಗೆ.

“ಅರಸು ಮೂಗಿನೊಳಿದ್ದು, ರಾಜ್ಯದ
ಪರಿಯ ನೋಡುವ ಕನ್ನಡಿ!
ಎರಡು ರೂಪಾಇ ಬೆಲೆಗೆ ನಿಮ್ಮನು
ದೊರೆಯ ಮಾಡುವ ಕನ್ನಡಿ!

“ಬರಹ ಓದದ ಪರೆಯ ಕಣ್ಣನು
ತೆರೆದು ಕಲಿಸುವುದೆಲ್ಲವಾ!
ಆರಿವು, ಕನ್ನಡದಿರವು, ಇಂಗ್ಲಿಷ್
ಅರಿವು ಬರುವುದು ನಿಮಿಷದಿ!”

ಹೀಗೆ ಶ್ಯಾಮನು ಕೂಗಿ ಹೊಗಳುವ
ಸೋಗು ಮಾತನು ಕೇಳುತಾ,
ನಾಗನಪ್ಪನು ತೂಗಿ ತಲೆಯನು,
ಮೇಗೆ ಬಂದನು ಅಂಗಡಿಗೆ.

“ಒಳ್ಳೆ ಕನ್ನಡಿ ಬೇಕು ರಾಯರೆ,
ಕೊಳ್ಳಿರೈ ಸರಿ ಬೆಲೆಯನು !
ಹಳ್ಳಿ ಮಂದಿಗೆ ಕೊಡಲು ಬಾರದು
ಸುಳ್ಳು ಕನ್ನಡಿ” ಎಂದನು.

ಆಗ ಶ್ಯಾಮನು ನಾಗನಪ್ಪನ
ಮೂಗಿಗಿಟ್ಟನು ಕನ್ನಡಿ;
ಕಾಗದಗಳನು ಕೈಗೆ ಕೊಟ್ಟು,
“ಹೇಗೆ ಕಾಂಬುದು?” ಎಂದನು.

“ಆಗಲಾರದು, ತಾಗಲಾರದು”
ನಾಗನಪ್ಪನು ನುಡಿದನು;
ಬೇಗ ತೆಗೆದನು; ಬೇರೆ ಕನ್ನಡಿ
ಬಾಗಿಸಿಟ್ಟನು ಶ್ಯಾಮನು.

“ತೋರಲಾರದು, ಸೇರಲಾರದು;
ನೀರು ಹನಿವುದು ಕಣ್ಣಿಲಿ,
ಬೇರೆ ಕನ್ನಡಿ ಬೇಗನೇ ಕೊಡಿ,
ಜಾರಿ ಬೀಳ್ವುದು” ಎಂದನು.

ಮೂರು ಕನ್ನಡಿ, ಆರು ಕನ್ನಡಿ,
ನೂರು ಕನ್ನಡಿ ತೋರಿದಾ,
ಬಾರಿಬಾರಿಗೂ ನಾಗನೆಂದನು
“ತೋರದೈ ಕನ್ನಡಿಗಳು”.

ಅದನು ತೆಗೆದನು, ಇದನು ತೆಗೆದನು,
ಮುದುಕ ಗ್ರಹಕನ ಮೂಗಿನಾ
ತುದಿಯೊಳಿಟ್ಟನು; ಒಡನೆ ಮುದುಕನು
“ಮೊದಲಿನಂತೆಯ” ಎಂದನು.

“ಅರಿಕೆ ಮಾಡುವೆ, ಹಿರಿಯ ಅಯ್ಯಾ,
ಧರಿಸಬಾರದು ಕೋಪವಾ;
ಸರಿಯ ಕನ್ನಡಿ ದೊರೆವುದಿಲ್ಲ;
……ಅ….ಕುರುಡು
ಉಂಟೇ ಕಣ್ಣಿಲಿ?”

ಉರಿದು ಬಿದ್ದನು, ಮುದುಕನೆದ್ದನು-
“ಹರಳು ಕಲ್ಲನು ಮಾರುವಾ
ಕುರುಡು ರಾಯರ ನೋಳ್ಪ
ನಮ್ಮಯ ಎರಡು ಕಣ್ಣಳು ಸರಿ ಇವೆ!”

ಸಿಟ್ಟು ನುಡಿಯನು ಕೇಳಿ ಶ್ಯಾಮನು
ದಟ್ಟ ಹರಳುಗಳೆರಡನು
ಇಟ್ಟು ಗ್ರಹಕನ ಕಣ್ಣ ಮುಂಗಡೆ,
ಕೊಟ್ಟ ಕಾಗದ ಕೈಯಲಿ.

ಗುಡ್ಡ ಕುಂಬಳದಂತೆ ಬರೆದಿಹ
ದೊಡ್ಡ ಅಕ್ಷರ ಪತ್ರವಾ
ಅಡ್ಡ ಹಿಡಿದನು,-
“ಓದಿ, ಸ್ವಾಮೀ, ಅಡ್ಡಿಯಿಲ್ಲದೆ” ಎಂದನು.

“ಎಲೆಲೆ ರಾಯರೆ! ತೆಲಗು ಕನ್ನಡ
ಕಲಿಪ ಕನ್ನಡಿ ಬೇಕಲೈ!
ಬೆಲೆಯ ಕೊಡುವೆನು; ಬೇಗ ತನ್ನಿರಿ,
ಚೆಲುವ ಇಂಗ್ಲಿಷ್ ಕನ್ನಡಿ.

“ಓದು ಬರಹಗಳೆಮಗೆ ತಿಳಿಯದು,
ಓದು ಬರಹವ ತೋರುವಾ
ಬೂದು ಕನ್ನಡಿ ಬೇಕು ರಾಯರೆ,
ಬೀದಿಗೆಸೆವುದು ಮಿಕ್ಕವಾ”.

ಒರೆದ ಮಾತಿಗೆ ಮತ್ತೆ ಶ್ಯಾಮನು,
“ಬರಹ ಕಲಿಸುವ ಕನ್ನಡಿ
ಹರಳು ನಮ್ಮಲ್ಲಿಲ್ಲ, ಸ್ವಾಮೀ,
ತೆರಳಿ ಹಳ್ಳಿಯ ಸಾಲೆಗೆ!”

ಎಂದು ಶ್ಯಾಮನು ನುಡಿಯಲು ಮುಂದೆ
ನಾಗನು “ಸಾಲೆಯೋಳ್
ಚೆಂದ ಕನ್ನಡಿ ಯಾವುದೆನೆ,”
ನಗುತೆಂದನಾಗಲೆ ಶ್ಯಾಮನು-

“ಅಲ್ಲಿ ಕನ್ನಡಿ ದೊರಕುದಿಲ್ಲವು:
ಅಲ್ಲಿ ’ಕನ್ನಡ’ ದೊರೆವುದು!
ಮೆಲ್ಲನಿದ ನೀವ್ ಕಲಿತುಕೊಂಡರೆ,
ಎಲ್ಲ ತಾನೇ ಕಾಂಬುದು.”

ಹೀಗೆ ಶ್ಯಾಮನು ನುಡಿದ ಮಾತನು
ನಾಗನಪ್ಪನು ಕೇಳುತಾ
ಬೇಗ ತನ್ನಯ ಮಕ್ಕಳನು
ಲೇಸಾಗೆ ಕಳುಹಿದ ಸಾಲೆಗೆ
*****
(ಕವಿಶಿಷ್ಯ)

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...