Home / ಕವನ / ಕವಿತೆ / ನಿವೇದನೆ

ನಿವೇದನೆ

ಕಾರುಣ್ಯದಾ ಬೆಳಕೆ ಬಾ ಬೇಗ ಬಾ
ನನ್ನೆದೆಯ ಬಾಂದಳವ ಬೆಳಗಿಸಲು ಬಾ
ನಿನ್ನಲ್ಲಿ ಆನಿಂದು ಬೇಡಿಕೊಳ್ಳುವೆ ನಿನ್ನು
ಕೃಪೆಯಿಟ್ಟು ಆಲಿಸೆನ್ನೀ ಮೊರೆಯನ್ನು

ಮುಗಿಲಗಲ ಜಗಕೆಲ್ಲ
ರಸವೃಷ್ಟಿ ಸುರಿಸು,
ರವಿ ಶಶಿ ತಾರಾಹೊಳಪನ್ನು
ನಮ್ಮ ಕಣ್ಣುಗಳೊಳಗಿರಿಸು,

ಮೇದಿನಿಯ ಕಣ ಕಣದಲ್ಲೂ
ಫಲ ಫಲದೆನೆಯ ನಿರಿಸು,
ಜೀವ, ಜೀವ ಸಂಕುಲಕೆಲ್ಲ
ಉಲ್ಲಸದ ನೆಮ್ಮದಿಯ ಹರಸು,

ನದಿ ನದದ ಜುಳ ಜುಳದ
ಸಿರಿ ಬತ್ತದಂತಿರಿಸು,
ಅಂಬುಧಿಯ ಸಡಗರವ
ಜೀವಿತದಿ ಬೆರೆಸು,

ಪ್ರಾಣ ವಾಯುವಿನಲೆಯಲ್ಲಿ
ಸಂಜೀವಿನಿಯನಿರಿಸು
ಸುಮಸುಮದ ನಂದನದ
ಚೆಲ್ವ ಬಾಳ್ವೆಯಲಿ ಬೆರೆಸು

ಹಾರೋಹಕ್ಕಿಯ ಪಂಜರದ
ಪಾರತಂತ್ರ್‍ಯ ಧಿಕ್ಕರಿಸು
ಜಗದ ಜನಮನಕೆಲ್ಲ ಮುದದ
ಸ್ವಾತಂತ್ರ್‍ಯ ಕೊಡಿಸು

ಕ್ರೂರ ಕ್ರೌರ್ಯ ಮೃಗದ ರಣ
ದ್ವೇಷವನು ದಹಿಸು,
ಪ್ರೀತಿ ವಾತ್ಸಲ್ಯ ನೇಹ ಸಗ್ಗವನು
ಬಿತ್ತಿ ಬೆಳೆಸುತಾ ಬೆಸೆಸು.

ದುರಾಸೆಯಾಸೆಗಳಗ್ಗಳದ
ಕುತಂತ್ರವನೆ ಕೆಡಿಸು,
ಶ್ರಮದ ಅನ್ನವ ಸಮದಿ
ಉಣ್ಣುವುದ ತಿಳಿಸು.

ಶಸ್ತ್ರ ಶಾಸ್ತ್ರದ ಭಯದ
ಭೀತಿಯನು ಬಿಡಿಸು,
ವರ್ಣ ವರ್ಣದ ವರ್ಗ
ಕ್ಷುದ್ರತೆಯ ನಳಿಸು

ರಂಗು ರಂಗಿನರಂಗು
ಬೆಳ್ಮುಗಿಲ ರಂಗಿನ ಸೊಗಸು
ಭಿನ್ನ ಭಿನ್ನದ ಜನದ
ದೇಹ-ಗೇಹ ಒಂದೆಂದು ತಿಳಿಸು

ಆ ಧರ್ಮ ಈ ಧರ್ಮ ಕರ್ಮ
ಮೌಢ್ಯ ನಿಯತಿಗಳನಳಿಸು
ಈ ವಿಶ್ವ ವೀದೇಶ ನಾಡು ನುಡಿ
ನಿಜ ಧರ್ಮ ಸಾರ ತಿಳಿಸು

ಮತ ಪಥದ ಕುಲ ಕುಲದ
ಹುಚ್ಚು ಸಹವಾಸ ಬಿಡಿಸು
ಮಾನವತೆಯರಿವರಿವು
ನೆಚ್ಚಿ ಬದುಕಲೋಲೈಸು

ಗುಡಿ ಚರ್ಚು ಮಸೀದಿ ಬಸದಿಗಳ
ಕಟ್ಟುವುದ ಬಿಡಿಸು
ನಮ್ಮ ನಿಮ್ಮಯ ನಿಜ ತಿಳಿವು
ದೇವರಿರವೆಂದು ಕಲಿಸು.
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...