Home / ಕವನ / ಕವಿತೆ / ಶಕುನ ಕನ್ಯೆ

ಶಕುನ ಕನ್ಯೆ

ಒಬ್ಬಾಕೆ ನನ್ನ ಮನೆಯಂಗಳದಲ್ಲಿ ಬಂದು ನಿಂತಳು
ಹರಕು ಬಟ್ಟೆ ಅವಳ ಮಾನವನ್ನು ಹೇಗೋ ಮುಚ್ಚಿತ್ತು
ಕಾಂತಿವಂತ ಮೈಯನ್ನು ಕಣ್ಣ ಬಾಣಗಳಿಂದ ರಕ್ಷಿಸಲು
ಮುದುಡಿಕೊಂಡು, ಒಡಲನ್ನು ಕೈಯಲ್ಲಿ ಹಿಡಿದುಕೊಂಡು
ತಲೆಗೂದಲಿಗೆ ಧೂಳೆಣ್ಣೆ ಸವರಿ ಕಲ್ಲು ಹೂಮುಡಿದು
ಗಂಡಾಂತರದ ಗಂಟು ತುರಬ ಬಿಗಿದಿದ್ದಳು
ಕಣ್ಣಗವಿಯಿಂದ ಮಿಣುಕು ಬೆಳಕನ್ನು ತೂರುತ್ತ
ಬೇಡುತ್ತಿದ್ದಳು
“ಯಾರಮ್ಮ” ನೀನೆಂದೆ
“ದಿಕ್ಕಿಲ್ಲ ಸ್ವಾಮಿ ಅನ್ನ ಕಾಣದೆಷ್ಟೋ ದಿನವಾದವು
ತುತ್ತನ್ನ ನೀಡಿ ಒಂದಿಷ್ಟಾಸರೆ ಕೊಡಿ”
“ನೋಡಿದರೆ ಕುಲೀನೆಯಾಗಿ ಕಾಣುವಿ ಯಾಕೆ ಹೀಗಾದೆ?”
“ನಾನೂ ಮೆರೆದೆ ಉರಿದೆ ಸ್ವಾಮಿ
ಅರಮನೆ ಸುರಮನೆಗಳ ಹೂಹಾಸಿಗೆಯಲ್ಲಿ
ವಿವಿಧ ಭಂಗಿಗಳಲ್ಲಿ ಕುಣಿದೆ ಬಲ್ಲಿದರ ಬೆಲೆವೆಣ್ಣಾಗಿ,
ದೀನದಲಿತರ ಕೇವಲ ಕನಸಕನ್ನೆಯಾಗಿದ್ದ
ನನ್ನೊಂದು ಕಟಾಕ್ಷಕ್ಕಾಗಿ ಬಾಯಿಬಾಯಿಬಿಡುತ್ತಿದ್ದವರೆಷ್ಟೊ ಮಂದಿ
ಕೆಲವರ ಕನಸಾಗಿ ಹಲವರ ಹಂಬಲವಾಗಿ ಹಾರಾಡುತ್ತಿದ್ದೆ
ಅಯ್ಯೋ ಆ ಗತಕಾಲ ವೈಭವವೆಲ್ಲ ಬಿಡಿ
ನನಗೆ ಶನಿಕಾಲ ಬಂತು
ನಾನು ಕಾಲಿಟ್ಟಲ್ಲೆಲ್ಲಾ ಮಸಣವಾಯಿತು
ನನ್ನ ಮುಟ್ಟಿದವರೆಲ್ಲ ದಟ್ಟ ದರಿದ್ರರಾದರು
ನಾನೊಬ್ಬ ಶಕುನ ಕನ್ನೆಯಾದೆ
ಆದರೂ ಕೆಲವರು ನನ್ನ ಕಂಡು
ನಾಲಗೆ ಚಪ್ಪರಿಸಿ ಚೀಪಿ ಒಗೆಯ ಬೇಕೆನ್ನುತ್ತಾರೆ
ನನ್ನ ಅರೆಮೈಗೆ ಬಾಡಿಗೆ ಬಟ್ಟೆಯುಡಿಸಿ ಮೆರೆಸಬಯಸುತ್ತಾರೆ
ನನ್ನ ಉದರವೋ ಬರಿದು
ನನ್ನ ಮನವರಿತು ಒಲವಿಗೊಲಿದು
ಕೂಡ ಬಲ್ಲ ಕೊಡಬಲ್ಲವರೇ ಇಲ್ಲ
ನೀವಾದರೂ….!” ಎಂದಾಗ
ಮೊದಲು ನಾಲಗೆಯಲೂರಿದ್ದ ನೀರು
ಅಲ್ಲೇ ಇಂಗಿ ಪ್ರೇತ ದರ್ಶನವಾದಂತಾಗಿ ‘ಮುಂದೆ ಹೋಗಿ ಬಾ’
ಎಂದು ಬಾಗಿಲು ಬಡಿದುಕೊಂಡೆ
(೨೨-೮-೭೮)
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...