Home / ಕವನ / ಕವಿತೆ / ಹೆದ್ದಾರಿಗುಂಟ

ಹೆದ್ದಾರಿಗುಂಟ

“ಹೆದ್ದಾರಿಗುಂಟ ರಾತ್ರಿ ಏನೆಲ್ಲ ನಡೆಯಬಹುದೆಂದು
ಹೆದರಿಕೊಂಡೇ ‘ಹಗಲಿನಲ್ಲಿಯೇ ಹೊರಟಿದ್ದೇನೆ’
safe ಆಗಿ ನನ್ನೂರು ತಲುಪಲು”

ಊರಿಂದೂರಿನ ಸರಪಳಿ ರಸ್ತೆಗಳ ಏರಿಳಿತ ನೋಡಲು
ವಿಶಾಲ ವಿಹಂಗಮ ನಿಸರ್ಗಕಾಣಲು
ಅಷ್ಟೇ ಅಲ್ಲ ಅಗಾಗ ತೂಕಡಿಕೆ ಬಂದರೂ
ಸ್ವಲ್ಪ ನೆಮ್ಮದಿಯಾಗಿ ಮಲಗಲೂ ಎಂದು
ಮುಂದಿನ ಸೀಟಿನಲ್ಲಿಯೇ ಕುಳಿತದ್ದು
ಗೊತ್ತಲ್ಲ ನಿಮಗೂ
ಹಿಂದಿನ ಸೀಟು ಎಬ್ಬೆಬ್ಬಿಸಿ ಒಗೆಯುವದೆಂದು

ನಮ್ಮ ಡ್ರೈವರು ತುಂಬಾ ತಲೆಹಿಡುಕ
Private Luxury bus ಬೇರೆ ನೋಡಿ
ಚಹಾದ ಅಂಗಡಿ ಬೀಡಿ ಅಂಗಡಿ
ಗಬ್ಬೆದ್ದಿರುವ ನೊಣಗಳ ಡಾಬ
ಕಳ್ಳಿನ ಹಳಸುನಾತಿನ ಹೊಟೇಲುಗಳ ಈ ಹೆದ್ದಾರಿಗುಂಟೆಲ್ಲ
ಇವನಿಗೆ ಜಿಗರಿದೋಸ್ತಗಳ ಸರಮಾಲೆ
ಇವನಿಗೆ ಅವರೋ, ಅವರಿಗಾಗಿ ಇವನೋ ಎಂಬಂತೆ.
ಓಡುವ ಬಸ್ಸು ಹಾರ್ನು ತಕ್ಷಣದ ಬ್ರೇಕು
ಅಬ್ಬಬ್ಬಾ ಬಸ್ಸಪ್ಪಾ, ಏ ಬಸಪ್ಪಾ
ಕಿರುಚಾಡುವಂತಾಗುತ್ತಿತ್ತು ಮನಸ್ಸು.

ಟೊಂಗೆ ಟೊಂಗೆಗಳ ಮೇಲಿನ ಮಂಗಗಳಂತೆ
ಡ್ರೈವರ್ರನ ಅಕ್ಕಪಕ್ಕದಲ್ಲೆಲ್ಲಾ Extra ಸೀಟುಗಳು
ಬಸಪ್ಪನ ಜೇಬು ತುಂಬುವ ಅರ್ಜೆಂಟದವರು.

ರಣರಣ ಮಧ್ಯಾಹ್ನ ಬಿಸಿಲು
ಎಳೆನೀರು ಬಾಳೆಹಣ್ಣುಗಳಿದ್ದರೂ
ಪ್ರಯಾಣಿಕರಿಗೆಲ್ಲ ಬೇಕು Fancy cococolaಗಳು
ಚಳಿಹತ್ತಿ ನಡಗುವ ವಿದೇಶಿಮೂಲದವರಂತೆ
ಇಳಿದಾಗೊಮ್ಮೆ ಎಳೆಯಲು ಬ್ರಾಂಡೇಡ್ ಸಿಗರೇಟುಗಳು.
ಹೆದ್ದಾರಿಗುಂಟ ಓಡುವ ಎದುರಾಗುವ
ಚಿತ್ರವಿಚಿತ್ರ ಹೆಸರಿನ ಲಾರಿ ಬಸ್ಸು ಟೆಂಪೋಗಳು
ಬೆಟ್ಟದಹಾವು, ತಾಯಿಯಮಗ, ನಿಮ್ಮಪ್ಪನ ಮಗ,
ಅಣ್ಣಯ್ಯನ ತಮ್ಮ, ಹೆದ್ದಾರಿಬಕ ಹೀಗೆ –
ಯಕ್ಷಕನ್ನಿಕೆಯರ ಸಿನೇಮದವುಗಳ
ಮಿನಿ ಮಿಡಿ ಚಿತ್ರಗಳು ನೋಡುತ್ತ ಓದುತ್ತ
ಡ್ರೈವರ್ ಹೇಗೆ ಓಡಿಸುತ್ತಾನಪ್ಪ ಬಸ್ಸು
ಆಕ್ಸಿಡೆಂಟ್ ಮಾಡದೆಯೆ?
ಹೆದರಿ ಹಿಂದೊರಗಿ ಕಣ್ಣುಮುಚ್ಚಿದ್ದೆ-

ಸುರುವಾಯಿತು ನೋಡಿ
ಒಂದು ಜೊಂಪು ನಿದ್ದೆ ಮಾಡಿ ಎದ್ದವರ ಹರಟೆ
ಮದುವೆ ದಿಬ್ಬಣದವರಿರಬೇಕೇನೊ
ಅವರಪ್ಪನ ಮನೆಯ ಬಸ್ಸು ಎನ್ನುವಂತೆ
ಹುಡುಗ ಹುಡುಗಿ ಬಂಗಾರು ಅಂತಸ್ತುಗಳನ್ನೆಲ್ಲ
ಇಲ್ಲಿ ಕಿತಾಪತಿಸುತ್ತ
ಸಂಬಂಧಿಕರನ್ನೆಲ್ಲಾ ಮಾತಿನಲ್ಲಿ ಥಳಿಸುತ್ತಾ ಹಗುರಾಗುತ್ತಿದ್ದರು.

ನನಗೋ ಕಣ್ಣು ಮುಚ್ಚದೆಯೋ ತೆರಯದೆಯೋ
ಒಳಗೊಳಗೇ ಕಿರಿಕಿರಿಯ ಒದ್ದಾಟ.
ಬರುತ್ತಿದೆ ನನ್ನೂರು ಹತ್ತಿರ ಹತ್ತಿರ
ಸಂಜೆಯಸೂರ್ಯ ಗಲ್ಲಕ್ಕೆ ಮುದ್ದಿಟ್ಟು ಎಬ್ಬಿಸಿದ್ದ
ಹಕ್ಕಿಪಕ್ಕಿ ದನಕರುಗಳೆಲ್ಲಾ ಗೂಡು ಸೇರಲು
ಓಡುತ್ತಿರುವಾಗ ಗಕ್ಕನೆ ಬ್ರೇಕ್ ಹಾಕಿದ ಬಸ್ಸಪ್ಪಾ
ಕ್ಷಣಾರ್ಧದಲ್ಲಿಯೇ ಇಳಿದು
ಅಡ್ಡಬಂದ ಚಕ್ಕಡಿಯವನೆದೆ ಎಳೆದು ಥಳಿಸಿ
ನೂರೆಂಟು ಹಲ್ಕಾ ಬೈಗುಳಗಳನ್ನೆಲ್ಲಾ ಸುರಿದು
ಎತ್ತೂಗಳೂ ನಡುಗುವಂತೆ ಮಾಡಿದ್ದ ನಮ್ಮ ಡ್ರೈವರ್ರು
ಹೆದ್ದಾರಿಗುಂಟ ಎರಡೂ ಕಡೆಗೂ
ಅರ್ಧ ಗಂಟೆ ರಸ್ತೆ ಬ್ಲಾಕು.
ಪ್ರಯಾಣಿಕರೆಲ್ಲ ಎರಡೂ ಕಡೆಗೂ ಬಾಲಬಡಿದು
ಡ್ರೈವರ್ರನ್ನ ತಂದು ಕೂರಿಸಿ
ನಡೆಯಪ್ಪ ಬೇಗ ಊರು ಸೇರೋಣ ಬೆಳಕಿನಲ್ಲಿಯೇ
ಅಂದರೂ
ಮುಂದಿನ ಊರಿನ ಹೊಟೆಲ್ ಮುಂದೆ ನಿಲ್ಲಿಸಿಯೇಬಿಟ್ಟ.

Coffee ಸಮಯ ಪ್ರಯಾಣಿಕರ ಪರಿಚಯ ವಿಳಾಸ
ಮಾತುಕತೆಗಳಲಿ ಸಂಬಂಧಿಗಳು, ಸ್ನೇಹಿತರು, ಆಗೇಬಿಡುವದೆ!!
“ಮುಂದಿನ ಸಲ ಬೆಂಗಳೂರಿಗೆ ಬಂದರೆ ನಿಮ್ಮಲ್ಲೇ ವಸ್ತಿ
ಇನ್ನೇನೂ ತೊಂದರೆ ಇಲ್ಲ ಬಿಡಿ”
ನನ್ನ ಪರಮೀಷನ್ ಇಲ್ಲದೆ ಬುಕ್ ಮಾಡಿಕೊಂಡೇ ಬಿಟ್ಟರು.

ಅಬ್ಬಬ್ಬಾ ಯಾಕಾದರೂ ಹಗಲಿನಲ್ಲಿಯೇ ಹೊರಟೆನಪ್ಪ ಊರಿಗೆ
ಸುದೈವಕೆ ಗಾಡಿ ಪಂಕ್ಚರ್ ಆಗದೇ
ಊರು ಸೇರಿದಾಗ ಅಗಿತ್ತು ರಾತ್ರಿ ಹತ್ತು.

“ಈಗೀಗ ತೀರ್ಮಾನಿಸಿದ್ದೇನೆ
ಹೆದ್ದಾರಿಗುಂಟ ರಾತ್ರಿ
ದರೋಡೆಯಾಗಲಿ ಕೊಲೆಸುಲಿಗೆ
ಅಕ್ಸಿಡೆಂಟೇ ಆಗಲಿ
ಮತ್ತಷ್ಟು ಊಟ ಮಾಡಿ ಬೇಕಿದ್ದರೆ
ಒಂದು ನಿದ್ದೆ ಗುಳಿಗೆಯೂ ನುಂಗಿ
ನೀರು ಕುಡಿದು ಆರಾಮವಾಗಿ
ಸೀಟಿಗೊರಗಿ ಗಪ್‌ಚುಪ್‌ ನಿದ್ದೆ ಮಾಡುತ್ತ
“ರಾತ್ರಿ ಪ್ರಯಾಣ ಮಾಡಲು”!
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...