Home / ಕವನ / ಕವಿತೆ / ಹೆದ್ದಾರಿಗುಂಟ

ಹೆದ್ದಾರಿಗುಂಟ

“ಹೆದ್ದಾರಿಗುಂಟ ರಾತ್ರಿ ಏನೆಲ್ಲ ನಡೆಯಬಹುದೆಂದು
ಹೆದರಿಕೊಂಡೇ ‘ಹಗಲಿನಲ್ಲಿಯೇ ಹೊರಟಿದ್ದೇನೆ’
safe ಆಗಿ ನನ್ನೂರು ತಲುಪಲು”

ಊರಿಂದೂರಿನ ಸರಪಳಿ ರಸ್ತೆಗಳ ಏರಿಳಿತ ನೋಡಲು
ವಿಶಾಲ ವಿಹಂಗಮ ನಿಸರ್ಗಕಾಣಲು
ಅಷ್ಟೇ ಅಲ್ಲ ಅಗಾಗ ತೂಕಡಿಕೆ ಬಂದರೂ
ಸ್ವಲ್ಪ ನೆಮ್ಮದಿಯಾಗಿ ಮಲಗಲೂ ಎಂದು
ಮುಂದಿನ ಸೀಟಿನಲ್ಲಿಯೇ ಕುಳಿತದ್ದು
ಗೊತ್ತಲ್ಲ ನಿಮಗೂ
ಹಿಂದಿನ ಸೀಟು ಎಬ್ಬೆಬ್ಬಿಸಿ ಒಗೆಯುವದೆಂದು

ನಮ್ಮ ಡ್ರೈವರು ತುಂಬಾ ತಲೆಹಿಡುಕ
Private Luxury bus ಬೇರೆ ನೋಡಿ
ಚಹಾದ ಅಂಗಡಿ ಬೀಡಿ ಅಂಗಡಿ
ಗಬ್ಬೆದ್ದಿರುವ ನೊಣಗಳ ಡಾಬ
ಕಳ್ಳಿನ ಹಳಸುನಾತಿನ ಹೊಟೇಲುಗಳ ಈ ಹೆದ್ದಾರಿಗುಂಟೆಲ್ಲ
ಇವನಿಗೆ ಜಿಗರಿದೋಸ್ತಗಳ ಸರಮಾಲೆ
ಇವನಿಗೆ ಅವರೋ, ಅವರಿಗಾಗಿ ಇವನೋ ಎಂಬಂತೆ.
ಓಡುವ ಬಸ್ಸು ಹಾರ್ನು ತಕ್ಷಣದ ಬ್ರೇಕು
ಅಬ್ಬಬ್ಬಾ ಬಸ್ಸಪ್ಪಾ, ಏ ಬಸಪ್ಪಾ
ಕಿರುಚಾಡುವಂತಾಗುತ್ತಿತ್ತು ಮನಸ್ಸು.

ಟೊಂಗೆ ಟೊಂಗೆಗಳ ಮೇಲಿನ ಮಂಗಗಳಂತೆ
ಡ್ರೈವರ್ರನ ಅಕ್ಕಪಕ್ಕದಲ್ಲೆಲ್ಲಾ Extra ಸೀಟುಗಳು
ಬಸಪ್ಪನ ಜೇಬು ತುಂಬುವ ಅರ್ಜೆಂಟದವರು.

ರಣರಣ ಮಧ್ಯಾಹ್ನ ಬಿಸಿಲು
ಎಳೆನೀರು ಬಾಳೆಹಣ್ಣುಗಳಿದ್ದರೂ
ಪ್ರಯಾಣಿಕರಿಗೆಲ್ಲ ಬೇಕು Fancy cococolaಗಳು
ಚಳಿಹತ್ತಿ ನಡಗುವ ವಿದೇಶಿಮೂಲದವರಂತೆ
ಇಳಿದಾಗೊಮ್ಮೆ ಎಳೆಯಲು ಬ್ರಾಂಡೇಡ್ ಸಿಗರೇಟುಗಳು.
ಹೆದ್ದಾರಿಗುಂಟ ಓಡುವ ಎದುರಾಗುವ
ಚಿತ್ರವಿಚಿತ್ರ ಹೆಸರಿನ ಲಾರಿ ಬಸ್ಸು ಟೆಂಪೋಗಳು
ಬೆಟ್ಟದಹಾವು, ತಾಯಿಯಮಗ, ನಿಮ್ಮಪ್ಪನ ಮಗ,
ಅಣ್ಣಯ್ಯನ ತಮ್ಮ, ಹೆದ್ದಾರಿಬಕ ಹೀಗೆ –
ಯಕ್ಷಕನ್ನಿಕೆಯರ ಸಿನೇಮದವುಗಳ
ಮಿನಿ ಮಿಡಿ ಚಿತ್ರಗಳು ನೋಡುತ್ತ ಓದುತ್ತ
ಡ್ರೈವರ್ ಹೇಗೆ ಓಡಿಸುತ್ತಾನಪ್ಪ ಬಸ್ಸು
ಆಕ್ಸಿಡೆಂಟ್ ಮಾಡದೆಯೆ?
ಹೆದರಿ ಹಿಂದೊರಗಿ ಕಣ್ಣುಮುಚ್ಚಿದ್ದೆ-

ಸುರುವಾಯಿತು ನೋಡಿ
ಒಂದು ಜೊಂಪು ನಿದ್ದೆ ಮಾಡಿ ಎದ್ದವರ ಹರಟೆ
ಮದುವೆ ದಿಬ್ಬಣದವರಿರಬೇಕೇನೊ
ಅವರಪ್ಪನ ಮನೆಯ ಬಸ್ಸು ಎನ್ನುವಂತೆ
ಹುಡುಗ ಹುಡುಗಿ ಬಂಗಾರು ಅಂತಸ್ತುಗಳನ್ನೆಲ್ಲ
ಇಲ್ಲಿ ಕಿತಾಪತಿಸುತ್ತ
ಸಂಬಂಧಿಕರನ್ನೆಲ್ಲಾ ಮಾತಿನಲ್ಲಿ ಥಳಿಸುತ್ತಾ ಹಗುರಾಗುತ್ತಿದ್ದರು.

ನನಗೋ ಕಣ್ಣು ಮುಚ್ಚದೆಯೋ ತೆರಯದೆಯೋ
ಒಳಗೊಳಗೇ ಕಿರಿಕಿರಿಯ ಒದ್ದಾಟ.
ಬರುತ್ತಿದೆ ನನ್ನೂರು ಹತ್ತಿರ ಹತ್ತಿರ
ಸಂಜೆಯಸೂರ್ಯ ಗಲ್ಲಕ್ಕೆ ಮುದ್ದಿಟ್ಟು ಎಬ್ಬಿಸಿದ್ದ
ಹಕ್ಕಿಪಕ್ಕಿ ದನಕರುಗಳೆಲ್ಲಾ ಗೂಡು ಸೇರಲು
ಓಡುತ್ತಿರುವಾಗ ಗಕ್ಕನೆ ಬ್ರೇಕ್ ಹಾಕಿದ ಬಸ್ಸಪ್ಪಾ
ಕ್ಷಣಾರ್ಧದಲ್ಲಿಯೇ ಇಳಿದು
ಅಡ್ಡಬಂದ ಚಕ್ಕಡಿಯವನೆದೆ ಎಳೆದು ಥಳಿಸಿ
ನೂರೆಂಟು ಹಲ್ಕಾ ಬೈಗುಳಗಳನ್ನೆಲ್ಲಾ ಸುರಿದು
ಎತ್ತೂಗಳೂ ನಡುಗುವಂತೆ ಮಾಡಿದ್ದ ನಮ್ಮ ಡ್ರೈವರ್ರು
ಹೆದ್ದಾರಿಗುಂಟ ಎರಡೂ ಕಡೆಗೂ
ಅರ್ಧ ಗಂಟೆ ರಸ್ತೆ ಬ್ಲಾಕು.
ಪ್ರಯಾಣಿಕರೆಲ್ಲ ಎರಡೂ ಕಡೆಗೂ ಬಾಲಬಡಿದು
ಡ್ರೈವರ್ರನ್ನ ತಂದು ಕೂರಿಸಿ
ನಡೆಯಪ್ಪ ಬೇಗ ಊರು ಸೇರೋಣ ಬೆಳಕಿನಲ್ಲಿಯೇ
ಅಂದರೂ
ಮುಂದಿನ ಊರಿನ ಹೊಟೆಲ್ ಮುಂದೆ ನಿಲ್ಲಿಸಿಯೇಬಿಟ್ಟ.

Coffee ಸಮಯ ಪ್ರಯಾಣಿಕರ ಪರಿಚಯ ವಿಳಾಸ
ಮಾತುಕತೆಗಳಲಿ ಸಂಬಂಧಿಗಳು, ಸ್ನೇಹಿತರು, ಆಗೇಬಿಡುವದೆ!!
“ಮುಂದಿನ ಸಲ ಬೆಂಗಳೂರಿಗೆ ಬಂದರೆ ನಿಮ್ಮಲ್ಲೇ ವಸ್ತಿ
ಇನ್ನೇನೂ ತೊಂದರೆ ಇಲ್ಲ ಬಿಡಿ”
ನನ್ನ ಪರಮೀಷನ್ ಇಲ್ಲದೆ ಬುಕ್ ಮಾಡಿಕೊಂಡೇ ಬಿಟ್ಟರು.

ಅಬ್ಬಬ್ಬಾ ಯಾಕಾದರೂ ಹಗಲಿನಲ್ಲಿಯೇ ಹೊರಟೆನಪ್ಪ ಊರಿಗೆ
ಸುದೈವಕೆ ಗಾಡಿ ಪಂಕ್ಚರ್ ಆಗದೇ
ಊರು ಸೇರಿದಾಗ ಅಗಿತ್ತು ರಾತ್ರಿ ಹತ್ತು.

“ಈಗೀಗ ತೀರ್ಮಾನಿಸಿದ್ದೇನೆ
ಹೆದ್ದಾರಿಗುಂಟ ರಾತ್ರಿ
ದರೋಡೆಯಾಗಲಿ ಕೊಲೆಸುಲಿಗೆ
ಅಕ್ಸಿಡೆಂಟೇ ಆಗಲಿ
ಮತ್ತಷ್ಟು ಊಟ ಮಾಡಿ ಬೇಕಿದ್ದರೆ
ಒಂದು ನಿದ್ದೆ ಗುಳಿಗೆಯೂ ನುಂಗಿ
ನೀರು ಕುಡಿದು ಆರಾಮವಾಗಿ
ಸೀಟಿಗೊರಗಿ ಗಪ್‌ಚುಪ್‌ ನಿದ್ದೆ ಮಾಡುತ್ತ
“ರಾತ್ರಿ ಪ್ರಯಾಣ ಮಾಡಲು”!
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...