Home / ಕವನ / ಕವಿತೆ / ಹುಂಬರಾದೆವಲ್ಲೋ

ಹುಂಬರಾದೆವಲ್ಲೋ

ನಂಬಿದ್ರೆ ನಂಬಿ ಬಿಟ್ರೆ ಬಿಡ್ರಿ ಹುಂಬಗುತ್ಗಿ ಮಾತಿದಲ್ಲ
ಹುಂಬರಾದೆವಲ್ಲೋ ನಾವು ಇಷ್ಟೂ ದಿನ ||ಪ||

ತುಂಬಿ ತುಳುಕೋ ದೇಶದೊಳ್ಗೆ ತುಂಬದಂಗೆ ಹೊಟ್ಟೆ ಬಟ್ಟೆ
ದೊಂಬಿ ಮಾಡೋ ಶಕ್ತಿ ಇಲ್ದೆ ಕೊಳಿತಿವೋ ಜನ ||ಅ.ಪ||

ಕಂಡ ಕಂಡ ಗುಂಡು ಕಲ್ಗೆ ದೇವ್ರು ದಿಂಡ್ರು ಅಂದುಕೊಂತ
ಕಂಡು ಕಂಡು ಹಾಳು ಭಾವ್ಯಾಗ ಬಿದ್ದೀವಲ್ಲ
ಉಂಡು ತಿಂದು ಬೊಜ್ಜಾದೋರು ಕಾಲಿಗೆ ಬೀಳ್ರೋ ಅಂತಾ ಅಂದ್ರೆ
ದಿಂಡುಗೆಡ್ಡು ಮಂಡೆ ಬೋಳ್ಸಿಕೊಂಡೇವಲ್ಲ ||೧||

ಖೂನೀ ಮಾಡ್ಸೋ ಕಟುಕರಿಗೆ ಹೆಂಗಸರ್ಯಾನ ಕಳದೋರಿಗೆ
ನೀನೇ ದಣಿ ನಮ್ಮಪ್ಪಂತ ಕಾಲಿಗೆ ಬೀಳ್ತೀವಿ
ತಾನೇ ತಿಂದು ಊರಿನಾಸ್ತಿ ನಾನೇ ನಾನೆಂದ್ಮೆರದೋರ್ನೆಲ್ಲ
ನೀನೇ ಇಂದ್ರ ಚಂದ್ರ ಅಂತ ನಾವೆ ಹೊಗಳ್ತೀವಿ ||೨||

ನಮ್ಮ ಸೇವೆ ಮಾಡೋ ಆಳ್ಗೋಳ್ ಆಫೀಸಿನ್ಯಾಗೆ ದಣಿಗಳಂಗೆ
ಕಮ್ಗೆ ಮೆರ್ದು ದಬಾಯಿಸಿದ್ರೆ ನಾಯ್ಗಳಾಗ್ತೀವಿ
ದಮ್ಮು ಇಲ್ದೆ ಕಾಲಿಗೆ ಬಿದ್ದು ಕೇಳಿದಷ್ಟು ಬೋಳಿಸ್ಕೊಂಡು
ಸುಮ್ಗೆ ಹಲ್ಲಾಗ ನಾಲ್ಗೆ ಮಡ್ಗಿ ಮೂಳ್ಳುಳಾಗ್ತೀವಿ  ||೩||

ನಾನು ಮೇಲಿನ ಜಾತಿಯೋನು ನಾನು ಮೇಲಿಂದುದ್ರಿದೋನು
ನೀವು ಕೀಳು ಅಂದೋರ್ಕಾಲ್ಗೆ ನಾವೆ ಬೀಳ್ತೀವಿ
ಬಾನು ಭೂಮಿ ಗಾಳಿ ಬೆಂಕಿ ಒಂದೇ ಎಂದು ಸಾರುತಿದ್ರು
ಹೀನ ಜಾತಿ ಮೇಲು ಜಾತಿ ಅಂತ ಹೇಳ್ತೀವಿ ||೪||

ತಕ್ಡಿ ಮುರ್ದು ತೌಡು ಕೊಟ್ಟು ಮಹಡಿ ಮಹಡಿ ಕಟ್ಟಿಸ್ತಾರೆ
ಬೆಪ್ಪ ತಕ್ಡಿ ಆದ್ವಿ ನಾವು ದುಡ್ಡು ಹಣ್ಣಾಗಿ
ಬಡ್ಡೀ ಬಡ್ಡೀ ಕೂಡ್ಸಿ ಬರ್ದು ಮನೀ ಹೊಲ ನುಂಗಿ ಕುಂತು
ಬಡ್ಡೀ ಮಕ್ಳೆ ಅಂತ ಒದ್ರೆ ಬಿದ್ವಿ ಮಣ್ಣಾಗಿ ||೫||

ಪುಂಡ ಪೋಕ್ರಿ ಭಂಡರೆಲ್ಲ ಗೂಂಡಾಗದಿಮಿ ಮಾಡಿಕೊಂತ
ದಂಡು ಕಟ್ಟಿ ಕುಡ್ದು ತಿಂದು ದೊಡ್ಡೋರಾಗ್ತಾರೆ
ಗಂಡ ಹೇಣ್ತಿ ರಟ್ಟಿ ಮುರ್ದು ಹಗಲೆಲ್ಲ ದುಡುದ್ರು ಕೂಡ
ತಿಂಡಿಗಿಲ್ದೆ ಬಟ್ಟೆಗಿಲ್ದೆ ಹೆಡ್ಡರಾಗ್ತಾರೆ ||೬||

ತಾರಾತಿಗಡೀ ಮಾಡಿದೋರೆಲ್ಲ ತಾರಸಿ ಮನಿ ಕಟ್ಟಿಸ್ತಾರೆ
ನೇರ ನ್ಯಾಯ ನೀತಿ ಅಂದೋನ್ ಕೋತಿಯಾಗ್ತಾನೆ
ಬಾರಾ ವಿದ್ಯಾ ಭಾನಗೇಡಿ ಒಳಾಗೊಳ್ಗೆ ಮಾಡೋರೆಲ್ಲ
ದೊರಿಗಳಾದ್ರೆ ದುಡ್ಡು ಮನಸ್ಯ ಕತ್ತೆ ಆಗ್ತಾನೆ ||೭||

ಪ್ರಜೆಗಳದೆಲ್ಲ ರಾಜ್ಯಂತಾರೆ ಪ್ರಜೆಗಳಂದ್ರೆ ಯಾರಂತೀರಿ
ಪ್ರಜಾರಾಜ್ಯದಾಗ ರೊಕ್ಕ ಇರೋನೆ ರಾಜಾ
ಮೋಜಿನ್ಯಾಗ ರೊಕ್ಕ ಉಗ್ಗಿ ರೊಕ್ಕ ಬಳಿಯೋ ಆಟದಾಗೆ
ನಿಜವಾಗಿ ಸರ್ಕಾರೆಲ್ಲ ರೊಕ್‌ದೋರ್ ಮಜಾ ||೮||

ಕಾವಿ ಬಟ್ಟೆ ಹಾಕಿ ಸ್ವಾಮಿ ಗುರುವು ಅಂತ ಮೆರೆಯೋವಂಥ
ಸಾವಿರಾರು ಕುಂತು ತಿಂಬೊ ಮೈಗಳ್ರಿಗೆ
ನಾವೆ ಕಾಲೀಗ್ ಬೀಳತೀವಿ ಕಾಣ್ಕೆ ಕೊಟ್ಟು ಮೆರೆಸುತೀವಿ
ಪಾವನಾದೆವಂತ ಮಬ್ಬು ಮುಚ್ಚಿ ಮಳ್ಳಿಗೆ ||೯||

ವೇಷಕೆ ನಾವು ಮಳ್ಳಾಗ್ತೀವಿ ಬಣ್ಣಕ ನಾವು ಬಾಯ್ಬಿಡ್ತೀವಿ
ಐಷಾರಾಮಿ ಹಣವಂತರಿಗೆ ಹೆದರಿಕೊಂತಿವಿ
ಭಾಷೆ ಇಲ್ಲದ ಭಂಡರ ಮುಂದೆ ಬಾಯಿ ತೆಕ್ಕೊಂಡ್ ಬಿದ್ದಿರ್ತೀವಿ
ದೋಷ ನಮದಲ್ಲವೇನ್ರೊ ಎಲ್ಲಿ ಕುಂತಿವಿ ||೧೦||

***.

Tagged:

Leave a Reply

Your email address will not be published. Required fields are marked *

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...