Home / ಕವನ / ಹಾಯ್ಕು / ಬುದ್ಧನ ಹಯವೇ! ನಿನಗೆ ವಂದನೆ!

ಬುದ್ಧನ ಹಯವೇ! ನಿನಗೆ ವಂದನೆ!

ಬುದ್ಧನ ಕಾಡಿನಲ್ಲಿ ಬಿಟ್ಟುಬಂದ ಹಯವೇ
ನೀ ಅರಮನೆಯ ಲಾಯದಲಿ ಏಕೆ ಆದೆ ಲಯವು?
ಹದವರಿಯಲು ಹುಡುಕುತಲಿರುವೆ
ಎಲ್ಲಿಯೂ ನೀ ಕಾಣದೆ ಇರುವೆ.

ಮನ ಲಾಯಕೆ ಬಾ ಹಯವೆ
ಹೃದಯ ಹುಲ್ಲುಗಾವಲ ಮೇಯಲು,
ಕಾಡುತಿದೆ ಭವದ ಭಯವು
ಭವ ಸಾಗರದಲಿ ಹೃದಯ ಲಹರಿ
ಹುಡುಕುತಿದೆ ಬುದ್ಧನ ಬೆಳಕಿನ ಕಣ್ಣು
ಭವಕ್ಕೆ ಬೇಕು ಬುದ್ಧತ್ವದ ಹಣ್ಣು.

ಭೋಧಿ ವೃಕ್ಷದ ಎಲೆ ಎಲೆಯಲ್ಲಿ
ಬುದ್ಧನ ಅಭಯಹಸ್ತ ಸೆಲೆ ಸೆಲೆಯಲ್ಲಿ
ಶಾಖೆ ಶಾಖೆಯಲಿ ಬುದ್ಧನ ತೋಳತೆಕ್ಕೆ
ನೆರಳಲ್ಲಿ ನೆಲೆನಿಂತು ಕರೆಯುತ್ತಿದೆ
ಬುದ್ಧನೆದೆಯ ಪರಮಶಾಂತಿ ಮೆರೆಯುತಿದೆ.

ತೆರದ ಹೆಬ್ಬಾಗಿಲಲಿ ಉರಿಯುತಿದೆ
ಜಗವೆಲ್ಲ ಬೆಳಗುವ ದೀಪ
ಹಯವೆ ಛಂಗನೆ ಹಾರು ಭವದ ಕೂಪ
ಹಚ್ಚಬೇಕು ಜನ್ಮ ಮುಕ್ತಿಗೆ ಧೂಪ
ಎದೆಯಲಿ ಮೊಳಗುತ್ತಿದೆ ಬೌದ್ಧ ಆಲಾಪ.

ನಿಬಿಡವನ ಕಾಡುಗಳಲಿ
ವಕ್ರ ದಾರಿಗಳ ಚಕ್ರ ತಿರುವಿನಲಿ
ನಿಲ್ಲದ ನದಿಯ ಸಾಗರ ಮಿಲನದಲಿ
ತಲ್ಲಣಿಸುತಿದೆ ಎದೆ ಬುದ್ಧತ್ವದ
ಚರಮ ಸೀಮೆಗೆ, ಹಯವೆ! ನಡೆ ಮುಂದೆ.

ಹಯವೆ! ನೀ ಕಂಡಿರುವೆ
ಬುದ್ಧನ ಯಾನ ತಾಣ
ಬುದ್ಧನ ತ್ರಾಣ ಪ್ರಾಣ
ಪಂಚಪ್ರಾಣ ಹೊತ್ತ ನೀ
ಬುದ್ಧನೆದೆಯ ಭ್ರೂಣ.

ಸಿದ್ಧ ಬುದ್ಧನಾಗೆ ಆಗಸದ ರವಿಯಾದ
ಗೆದ್ದಮನದಲಿ ಕಾವ್ಯತುಂಬಿ ಕವಿಯಾದ
ಸರಹದ್ದಿಲ್ಲದೆ ಹಯವೆ ನೀ ಸಾಗೆ
ಬುದ್ಧ, ಜಗಕೆ ತಮವ ಕಳೆದು ಬೆಳಕಾದ.

ಹಯವದನ! ತೋರು ಬುದ್ಧನ ಸದನ
ಬಾಳ ಕದನದಲಿ ಶೋಧನ, ವೇದನ
ತಾಳ್ಮೆಯಲಿ ಮಾಡಿಸು ಬುದ್ಧನ ಸಾಧನ
ಇದು ಆಂತರ್ಯದ ಅನಂತ ನಿವೇದನ.

ಬುದ್ಧನ ವಸಂತ ತಾಣವ ನೀ ಕಂಡಿರುವೆ
ಸಿದ್ಧನ ಬೆಳದಿಂಗಳ ಚೇತನವ ನೀ ಉಂಡಿರುವೆ
ಬುದ್ಧನ ಜೊತೆಯಲ್ಲಿ ಎದ್ದು ಓಡಿದವ ನೀನು
ಸದ್ದು ಗದ್ದಲವಿಲ್ಲದೆ ಅನಂತಕ್ಕೆ ದಾರಿ ತೋರಿರುವೆ
ಬುದ್ಧನ ರಥದ ಮನೋರಥವು ನೀನಾಗಿರುವೆ.
ಹೆಜ್ಞೆ ಹೆಜ್ಞೆಗೆ ಮಂತ್ರ, ಹೆಜ್ಞೆ ಹೆಜ್ಞೆಗೆ
ಬುದ್ಧನ ನಲ್ಮೆ ನುಡಿ, ನಿನ್ನ ಕಿವಿ ತುಂಬಿರಬೇಕು.
ಬುದ್ಧನ ಮಂದಸ್ಮಿತದ ಸರಕು ತುಂಬಿ ಬಾ
ಜಗದ ಖಾಲಿ ಹೃದಯಗಳ ತುಂಬ ಬಾ.

ಸಿದ್ಧರ್ಥ ನಿನ್ನ ಬೆನ್ನೇರಿದಾಗ
ಬಾನೆಲ್ಲಾ ಕಾಂತಿ ಪಥವಾಗಿತ್ತು
ಭೂಮಿ ಕ್ರಾಂತಿ ಪಥದಲ್ಲಿತ್ತು
ಶಾಂತಿ ನಾಂದಿಯಾಗಿತ್ತು
ಭ್ರಾಂತಿ ತುಂಬಿದ ಹೃದಯಕ್ಕೆ
ಹಯದ ಬೆನ್ನೇರಿ ಬಂದಿತ್ತು ಉದಯ.

ಬುವಿ ನಡೆದಿತ್ತು ನಿನ್ನ ಕಾಲೊರಸ ಸದ್ದಿನಲಿ
ಬಾನ ಬೆಳದಿತ್ತು ನಿನ್ನ ತಾಳ ವೇಗಕ್ಕೆ
ಬೆಟ್ಟ ಅದರಿತ್ತು, ’ವೃಕ್ಷ ಕಂಪಿಸಿತ್ತು’
ನದಿ ತುಂಬಿ ಹರಿದಿತ್ತು ಬುದ್ಧತ್ವದಿಂದ.

ಜಗದಲ್ಲಿ ಬಿತ್ತಿದ ನಿನ್ನ ಹೆಜ್ಞೆಯಲಿ
ಬೌದ್ಧಬೀಜವ ಬಿತ್ತಿದೆ, ಮಾನವರ ಎತ್ತಿದೆ
ಅತ್ತು ಸೋಲುವ ಹೃದಯದ ಎತ್ತರಕೆ ಒಯ್ದೆ.

ಬುದ್ಧಂ ಶರಣಂ ಗಚ್ಛಾಮಿ, ಧರ್ಮಂ ಶರಣಂ ಗಚ್ಛಾಮಿ
ಸಂಘಂ ಶರಣಂ ಗಚ್ಛಾಮಿ ಎಂಬ ತ್ರಿಗುಳ ಬಂಧಿಯಲಿ
ನಡೆ ಮುಂದೆ ನಡೆ ಮುಂದೆ ವಿಶ್ವ ಕಲ್ಯಾಣಕ್ಕೆ.

******

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...