Home / ಕವನ / ಕವಿತೆ / ಮಳಿ ಬಂತು

ಮಳಿ ಬಂತು

ಮಳಿ ಬಂತು ನೋಡು ಮೂಡಲಿನ್ಯಾಗ-
ಮರಡೀಯ ತಲಿಯ ಮ್ಯಾಗ
ಗುಡು ಗುಡುಡು ಎಂದು ಗುಡಗ್ತದ ಕಾಡು ಕರಿಮುಗಿಲು-
ಕೇಳ್ದವರ ಎದೆಗೆ ಭುಗಿಲು
ಗಡಗಡಡ ಎ೦ದು ನಡಗ್ತದ ನಿಂತ ನೆಲದೊಡಲು-
ನೆರೆದವರಿಗೆಲ್ಲ ದಿಗಿಲು
ಇದನೋಡಿ ರವಿಯು ತಾನೋಡಿ ಹೋದನಪ ಚದರಿ
ಬರಲಿಲ್ಲ ಚಿಕ್ಕಿಗಳು ಬೆದರಿ
ಮಳಿಬಂತು ನೋಡು ಮೂಡಲಿನ್ಯಾಗ-
ಮರಡೀಯ ತಲಿಯ ಮ್ಯಾಗ

ಬಾನಿ೦ದ ಬಿದ್ದು ಮೇಲೆದ್ದು ಮಣ್ಣಿನೊಡನಿದ್ದು-
ಹೊರಟೀತು ನೀರು ನೆಲದುದ್ದು
ಹನಿ ಹನಿ ಕೂಡಿ ಹಳ್ಳಾಗಿ ತುಂಬಿ ಹರಿದಾವ ಹೊಳೆಯ ಕಡಿಗಾಗಿ-
ಅಲ್ಲಲ್ಲಿ ನಿಂತು ಮಡುವಾಗಿ
ಹೊಲ ತುಂಬಿ ತುಳಕಿ ಕೆರೆನೀರ ಕುಲುಕಿ ನದಿನೀರನೆಲ್ಲ ಕಲಕಿ-
ಹಾಕೀತು ನೀರು ತಳಕಿ
ಗಿಡಮರ ಬಳ್ಳಿ ಎಲಿಸಾಲು ಕಳ್ಳಿ ನಿಂತಾವ ಜಳಕ ಮಾಡಿ-
ತಣಿದಾವು ನೀರ ನೋಡಿ
ಮಳಿ ಬಂತು ನೋಡು ಮೂಡಲಿನ್ಯಾಗ-
ಮರಡೀಯ ತಲಿಯ ಮ್ಯಾಗ
ದಿಕ್ಕೆಟ್ಟು ಹಾರಿ ಸಿಕ್ಕಲ್ಲೆ ಸೇರಿ ಹುದುಗ್ಯಾವ ಹಕ್ಕಿ ಪಕ್ಕಿ-
ಆಗ್ಯಾವ ಕಕ್ಕ ಬಿಕ್ಕಿ
ಗಿಡದಿಂದ ಗಿಡಕೆ ಹಾರಾಡಿ ನಡಕ ಬದ್ದಾವ ಕೋತಿ ಜೋತು-
ಮಳೆಗೂಡ ಹೆಣಗಿ ಸೋತು
ದನಕರುಗಳೆಲ್ಲ ನಿಂತಾವ ಹುಲ್ಲ ತಿನಲಾರ್ದ ಅಡವಿಯಲ್ಲಿ-
ಬೆಪ್ಪಾಗಿ ಅಲ್ಲಿ ಇಲ್ಲಿ
ದನಕಾವ ಹುಡುಗಹುಡುಗಿಯರು ಮನೆಗೆ ಬಂದಾರ ಓಡಿತೊಯ್ದು-
ಬಿಟಗೊಟ್ಟ ಹುಲ್ಲ ಕೊಯ್ದು
ಮಳಿ ಬಂದಿ ನೋಡು – ಮೂಡಿಲಿನ್ಯಾಗ
ಮರಡೀಯ ತಲಿಯ ಮ್ಯಾಗ

ಬೇಸಿಗೆಯ ಬಿಸಿಲ ಬೇಗೆಯಲಿ ಬಳಲಿ ಬೆಂದಾಳ ಭೂಮಿತಾಯಿ-
ನೀರಡಿಸಿ ಬಿಟ್ಟು ಬಾಯಿ
ಗುಡ್ಡಕ್ಕೆ ತಾಗಿ ಹತ್ತಿದ್ದ ಬ್ಯಾಗಿ ಸುಟ್ಟಂಥ ಮೈಯ ಚಾಚಿ
ಹಲುಬ್ಯಾಳ ಆಂಗಲಾಚಿ
ಬಾಯಾರಿ ಬಾಯ್ಬರದೆ ಬಿದ್ದಲ್ಲೆ ಇದ್ದಽರು ಆಸರಕೆ ದೈವ ಬ೦ತು-
ಮರೆಯಲ್ಲಿ ಇತ್ತು ನಿಂತು
ಆಕಾಶ ತಂದೆ ಎದೆ ಕರಗಿ ಬ೦ದೆ ಮಳೆಯಾಗಿ ನೆಲಕೆ ನಿಂದೆ
ಬರುವಾಗ ಅಮೃತ ತಂದೆ
ಮಳೆ ಬಂತು ನೋಡು ಮೂಡಲಿನ್ಯಾಗ
ಮರಡೀಯ ತಲಿಯಮ್ಯಾಗ
*****

Tagged:

Leave a Reply

Your email address will not be published. Required fields are marked *

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...