ಇರುಳ ದುಗುಲವ ಕಳೆದು ಹೊನ್ನುಡೆಯುಟ್ಟು ತೇಜವ ಚಿಮುಕಿಸಿ
ಮೂಡಣದ ಮಲೆಯೇರಿ ಬಾರಿಗೆ ಹಾರಿ ನಿದ್ದೆಯ ಹಾರಿಸಿ
ಕಲಕೆ ಖಗರವದರ್ಘ್ಯ ಮೌನವ ಮಲರ್ಗಂಗಳ ಬನಬಿಡೆ
ಮೂಡಿ ಬಾ, ಮುಂಬೆಳಗಿನರಸಿ, ಮನತುಳಿದು, ನುಡಿತಳಿರಿಡೆ
ಹಿಂದೆ ನೋಡಲು ವೇದಪರ್ವತ ಮಂತ್ರಶಿಖರವ ಮೆರೆಸುತ
ದಿಕ್ ದಿಗಂತದಿ ದಿವವನೆತ್ತಿದೆ ದೇವದೇವರ ಹೊಳೆಸುತ
ಅದರುಪಾಂತ್ಯದಿ ಮಹಾಮಹಿಮರ ಚರಿತೆಬನ ಸೊಂಪಾಗಿದೆ
ಪರಮ ಋಷಿಗಳ ಸೂಕ್ತಿವಾಹಿನಿ ಯದಕೆ ಜೀವನವೆರೆದಿದೆ.
ಎನಿತು ತವಸಿಗಳಾತ್ಮರಸದೊಳು ಮಿಂದು ಪಾವನವೀ ರಸೆ
ಎನಿತು ಕವಿಗಳ ಭಕ್ತಿಯುಕ್ತಿಗಳಿದಕೆ ಉತ್ಸವ ಮಾಡಿಸೆ
ಎನಿತು ಬಾಳ್ಕಡೆದೆನಿತು ವಿಷಕುಡಿದೆನಿತು ಸೊಗಸೊದೆಗರೆಯುತ
ಎನಿತು ಚೇತನವಿದರ ರುಚಿಗೊಂಡೆಂಥ ಭಾವಕೆ ಸಂದಿದೆ!
ಭರತವರ್ಷವೆ, ನಿನ್ನ ತೇಜದ ಮುಂಬೆಳಗ ಶ್ರುತಿ ತೋರ್ವುವು
ಧರ್ಮದವತಾರಂಗಳೇರನು, ಪರಾಕ್ರಮಣವು ಮುಳುಗನು
ಎಂಬ ಸತ್ಯಾಭಾಸ ನಮಗಹುದದರ ಸಿರಿಸೊಗ ದುಕ್ಕವು
ನಿನಗಿಲ್ಲ-ಮೂಡೇರುಬೈಗಿನ ಮೋಹ ನೇಸರಿಗಿಲ್ಲವು.
ಹಿಂದೆ ಆಯಿತು ಇಂದು ಹೋಯಿತು ಮುಂದೆಯೆಂದಿಗು ಆಗದು
ಎಂದು ಹಲುಬುವರರಿವರೇನೌ ನಿನ್ನ ಸತ್ವದ ಮಹಿಮೆಯ?
ವಿಶ್ವದಾತ್ಮವನೆತ್ತಿ ಹಿಡಿದಿಹೆ ಆದಿಶೇಷನ ಧೃತಿಯೊಳು
ಕಾಲಕಾಲಕು ಮತಮತದ ಪೊರೆಯುರ್ಚಿ ಹುರುಪಹ ಮತಿಯೊಳು.
*****

















