“ಕಾಗೆಯಂತೆಯೆ ಬಣ್ಣ ಆ ನರ ಪ್ರಾಣಿಗಹ!”
ಎನ್ನುವರು ಕರಿಯರನು ಜನರು ಕಂಡು
“ಆಹ! ಆಕೆಯ ಕೇಶ ಕಾಗೆಯೊಲೆ ಕಪ್ಪೆ”ಂದು
ಬಣ್ಣಿಸರು! ಜನರ ಮತಿಯೆಷ್ಟು ಮೊಂಡು!
ಅಹುದು! ದಿಟ! ನೀನೇನೊ ಕೊಂಚ ಕಪ್ಪಿರಬಹುದು!
‘ಅತಿಕಪ್ಪು’ ಎಂಬ ನುಡಿ ಸುಳ್ಳ ಸಂತೆ!
ನಿನ್ನ ಕಪ್ಪಿನ ಮೊಗಕೆ ಕಪ್ಪುಬಳಿಯುವ ಕಪ್ಪು
ಈ ಜಗದೊಳಿರಲು ನಿನಗೇಕೆ ಚಿಂತೆ?”
ನಿನ್ನದೇ ಠೀವಿಯೊಳು ಕೊರಳ ಬಿಳಿಗೆರೆಯ ನೀ
ಎಡೆಬಿಡದೆ ಕುಕ್ಕುತಿಹೆ ಕತವದೇನು?-
ಅದನು ಕೃಷ್ಣನು ಧರಿಪ ವೈಜಯಂತಿಗೆ ಜನರು
ಹೋಲಿಸರದೇಕೆಂಬ ಕೋಪವೇನು?
ನಿನ್ನ ರೂಪೊಳೆ ಬಂದು ಸತ್ತವರು ಪಿಂಡಗಳ
ಸ್ಪೀಕರಿಸುತಿರಲು ನಿನಗೇನು ಕೊರತೆ?
ನಿನ್ನ ನೋಡುತಲಿರಲು ಸ್ಫೂರ್ತಿಯುಕ್ಕುವುದಮಮ!
ಎಂದಿಗೂ ಬತ್ತದಲ ಭಾವದೊರತೆ!
ಮಾಂಸದೊಂದೇ ತುಂಡ ಕಂಡರೂ ನೀ ಕರೆದು
ನಿನ್ನ ಗೆಳೆಯರಿಗೆಲ್ಲ ಕೊಡುವೆ ಪಾಲು
ಕೂಲಿಗಳಿಗೀಯದೆಯೆ ಎಲ್ಲ ನುಂಗುತಲಿರುವ
ಕ್ಯಪಿಟಲಿಸ್ಟರಿಗಿಂತ ನೀನೆ ಮೇಲು!
ಸರ್ವಗುಣ ಪರಿಪೂರ್ಣನಾರಿಹನು ಧರೆಯೊಳಗೆ?
ಅದರಿಂದ ಸಹ್ಯವೆಲೆ ನಿನ್ನ ಕಂಠ
ಸರ್ವಗುಣಸಂಪನ್ನ ಏಕಗುಣಹೀನನಾ
ಟ್ರಾಜೆಡಿಯ ನಾಯಕನು ನಿನ್ನ ನಂಟ!
ಸವಿಗೊರಲು ನಿನಗಿಲ್ಲವಾದರೇಂ ವಾಯಸವೆ?
ನೀನೀವ ಕಾವಿಲ್ಲದಿರಲು ಪಿಕವು
ಮೊಟ್ಟೆ ಯೊಡೆದೀ ಜಗದಿ ಹಾಡಲೆಂದಿಗುಮರಿದು
ಕ್ಷಮ್ಯವದರಿಂ ನಿನ್ನಘೋರ ಸ್ವರವು!
“ಗುಣವಿಲ್ಲ ವಸ್ತುವೊಳೆ, ಕಾಂಬ ಹೃದಯದೊಳಿಹುದು”
ಎಂದು ಭಾರವಿ ಕವಿಯು ನುಡಿದನಂದೇ!–
ಎಷ್ಟು ದಿಟವೀ ಮಾತು? ಕವಿಧಾತ್ರಿ ನಿನಗೊಲಿದೆ
ಇಂತು ಸವಿಮಾತುಗಳ ಮುಡಿಪ ತಂದೆ!
*****

















