Home / ಕವನ / ಕವಿತೆ / ಎಳೆ ನೇಸರು

ಎಳೆ ನೇಸರು

ಭುವಿಯಲ್ಲಿ ಹಿಮದ ಖುತು ಅರೆಗಣ್ಣ ತೆರದಿತ್ತು
ರವಿ ಮೂಡಿ ಮೇಲ್ಬಂದು ಇರ್ಗಳಿಗೆ ಸ೦ದಿತ್ತು

ಮುಚ್ಚಿದ್ದ ಬೆಳ್ಮಂಜು ತೆರೆಯುಗಿದ ತೆರನಿತ್ತು
ಹೆಚ್ಚಿದ್ದ ಕುಳಿರೊರತೆ ಕಾವಿಂಗೆ ಬಾಗಿತ್ತು

ನೇಸರಿನ ಎಳೆಗದಿರು ಹಿಮ ಮಣಿಯ ಮಾಲೆಯನು
ನೇಯ್ದು, ನಲಿಯುತಲಿತ್ತು ರಿಂಗಣಂಗುಣಿತವನು

ದಿನಕರನ ಸಂಖ್ಯಾತ ಕಿರಣಗಳು ಪೂರ್ವದಿಂ
ಸುಸ್ಪಷ್ಟತೆಯನಾಂತು, ವಿವಿಧ ವಿಧ ವರ್ಣದಿ೦-

ಹರಿತಂದು ಮೋದದಿಂ ತಿರೆವೆಣ್ಣನಪ್ಪುತ್ತ,
ಮೃದು ಚುಂಬನವನಿತ್ತು ಪುಲಕವನ್ನಾಗಿಸುತ.-

ಮಿರುಗಿರೆ, ‘ಸಹಸ್ರಕರ’ ನೆಂಬ ಸಂಕುಚಿತಾಖ್ಯೆ
ಮಿಥ್ಯವಾಗಲಸಂಖ್ಯಕರನೆಂಬ ನವ್ಯಾಖ್ಯೆ-

ಸಮನಿಸಿದ ತೆರನಾಯ್ತು! ಹೂಬಿಸಿಲು ಹೂಗಳಗೆ
ಎಸಳೆವೆಯನಲರಿಸಲು, ಹಿಮಬಿಂದು ಜೇನ್‌ಪನಿಗೆ-

ಬೆರೆದೊಂದು ಗೂಡುತ್ತ, ತುಂಬಿಗಳಿಗಾಹ್ವಾನ-
ವೀಯಲವು ಬ೦ದೊಲಿದು ಮಾಡಿದುವು ಮಧುಪಾನ,

ಸೌಸವದ ತನಿಜೇನನೊಲಿದೀಂಟಿ, ಸೊಕ್ಕೇರಿ,
ಅಳಿಗಳೊಂದೇ ಸರದಿ ಸೂಸಿದುವು ಹಾಡ ಸರಿ.

ಹಕ್ಕಿಗಳ ಕೊರಲುಲಿಯು ಕಟ್ಟೊಡೆದು, ಹೊನಲಾಗಿ,
ಬಾನ ದನಿಯಲೆಯಿ೦ದ ದುಂದುಮಿಸಿತಿ೦ಪಾಗಿ

ಬಯಲಿನೊಂದರೆಯಲ್ಲಿ ನಾನಾಗ ನಿಂದಿರಲು,
ಮೂಡಣದ ಬಾನ್ ಚೆಲುವು ಚೆಲುಮೆಯಲಿ ಚಿಮ್ಮಿರಲು,-

ಬಾಲಾರ್ಕನಿದಿರಾಗಿ ನನ್ನ ಕಣ್ಣೆವೆಗಳನು
ಅರಳಿಸುತ, ಮುಗುಳಿಸುತ, ನನ್ನೆಲ್ಲ ದೇಹವನು-

ಎಳೆಬಿಸಿಲ ಮಳೆಯಿಂದ ತೋಯಿಸುತ, ಸ್ವರ್ಗೀಯ
ಸಂತೋಷ ಸಾಗರದಿ ತೇಲಿಸುತಲಾತ್ಮೀಯ-

ಭಾವವನು ಬೆಳಗಿಸುತ, ಮುಗಿಲೋಳಿಗಳ ಮೇಲೆ
ಇರುವೆನಡಿಗೆಯ ನಡೆದು, ಬರುತಿದ್ದ ಮೇಲ್ಮೇಲೆ!

ಗಿಡ ಬಳ್ಳಿಯೆಲೆಗಳಲಿ ನೆಯ್ದಿರುವ ಜೇಡ ಬಲೆ
ನೂಲಿನೆಳೆಗಳು ಚಿನ್ನ ಸರಿಗೆಯಂತಿಹವು ಸಲೆ.

ಭೂದೇವಿಯುಟ್ಟಿರುವ ಹಸುರುಡಿಗೆಯ೦ತೆಸೆವ
ಎಳೆಗಳವೆ ಮಡಿಗಳಿಗೆ ಹೊ೦ಬಣ್ಣ ರವಿಯೀವ.

ಎತ್ತೆತ್ತಲೂ ತಿರೆಯು ಹೊನ್ನ ಹೊಳೆಯಲಿ ತೇಲಿ.
ತನ್ನತನವನು ಮರೆತು, ಹರಿದು ಸೊಗಗಡಲಿನಲಿ-

ಸಂಗಮ೦ಗೊಂಡಂತೆ ಭಾಸವಾಗುತ್ತಲಿತ್ತು.
ಒಂದಿನಿತು ಚಣ ಕಳೆಯಲೊಪ್ಪವೇ ಬೇರಾಯ್ತು:-

ಸ್ವರ್ಣ ಲೇಪದ ಮೇಲೆ ರಜತ ರಸ ಬೆರೆದಂತೆ.
ಬಿಸಿಲೊಸರು ಕಣ್ಗೂಟವನ್ನೂಡಿಸಿತು ಮುಂತೆ!
*****
೧೯೪೦

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...