Home / ಕವನ / ಕವಿತೆ / ಎಳೆ ನೇಸರು

ಎಳೆ ನೇಸರು

ಭುವಿಯಲ್ಲಿ ಹಿಮದ ಖುತು ಅರೆಗಣ್ಣ ತೆರದಿತ್ತು
ರವಿ ಮೂಡಿ ಮೇಲ್ಬಂದು ಇರ್ಗಳಿಗೆ ಸ೦ದಿತ್ತು

ಮುಚ್ಚಿದ್ದ ಬೆಳ್ಮಂಜು ತೆರೆಯುಗಿದ ತೆರನಿತ್ತು
ಹೆಚ್ಚಿದ್ದ ಕುಳಿರೊರತೆ ಕಾವಿಂಗೆ ಬಾಗಿತ್ತು

ನೇಸರಿನ ಎಳೆಗದಿರು ಹಿಮ ಮಣಿಯ ಮಾಲೆಯನು
ನೇಯ್ದು, ನಲಿಯುತಲಿತ್ತು ರಿಂಗಣಂಗುಣಿತವನು

ದಿನಕರನ ಸಂಖ್ಯಾತ ಕಿರಣಗಳು ಪೂರ್ವದಿಂ
ಸುಸ್ಪಷ್ಟತೆಯನಾಂತು, ವಿವಿಧ ವಿಧ ವರ್ಣದಿ೦-

ಹರಿತಂದು ಮೋದದಿಂ ತಿರೆವೆಣ್ಣನಪ್ಪುತ್ತ,
ಮೃದು ಚುಂಬನವನಿತ್ತು ಪುಲಕವನ್ನಾಗಿಸುತ.-

ಮಿರುಗಿರೆ, ‘ಸಹಸ್ರಕರ’ ನೆಂಬ ಸಂಕುಚಿತಾಖ್ಯೆ
ಮಿಥ್ಯವಾಗಲಸಂಖ್ಯಕರನೆಂಬ ನವ್ಯಾಖ್ಯೆ-

ಸಮನಿಸಿದ ತೆರನಾಯ್ತು! ಹೂಬಿಸಿಲು ಹೂಗಳಗೆ
ಎಸಳೆವೆಯನಲರಿಸಲು, ಹಿಮಬಿಂದು ಜೇನ್‌ಪನಿಗೆ-

ಬೆರೆದೊಂದು ಗೂಡುತ್ತ, ತುಂಬಿಗಳಿಗಾಹ್ವಾನ-
ವೀಯಲವು ಬ೦ದೊಲಿದು ಮಾಡಿದುವು ಮಧುಪಾನ,

ಸೌಸವದ ತನಿಜೇನನೊಲಿದೀಂಟಿ, ಸೊಕ್ಕೇರಿ,
ಅಳಿಗಳೊಂದೇ ಸರದಿ ಸೂಸಿದುವು ಹಾಡ ಸರಿ.

ಹಕ್ಕಿಗಳ ಕೊರಲುಲಿಯು ಕಟ್ಟೊಡೆದು, ಹೊನಲಾಗಿ,
ಬಾನ ದನಿಯಲೆಯಿ೦ದ ದುಂದುಮಿಸಿತಿ೦ಪಾಗಿ

ಬಯಲಿನೊಂದರೆಯಲ್ಲಿ ನಾನಾಗ ನಿಂದಿರಲು,
ಮೂಡಣದ ಬಾನ್ ಚೆಲುವು ಚೆಲುಮೆಯಲಿ ಚಿಮ್ಮಿರಲು,-

ಬಾಲಾರ್ಕನಿದಿರಾಗಿ ನನ್ನ ಕಣ್ಣೆವೆಗಳನು
ಅರಳಿಸುತ, ಮುಗುಳಿಸುತ, ನನ್ನೆಲ್ಲ ದೇಹವನು-

ಎಳೆಬಿಸಿಲ ಮಳೆಯಿಂದ ತೋಯಿಸುತ, ಸ್ವರ್ಗೀಯ
ಸಂತೋಷ ಸಾಗರದಿ ತೇಲಿಸುತಲಾತ್ಮೀಯ-

ಭಾವವನು ಬೆಳಗಿಸುತ, ಮುಗಿಲೋಳಿಗಳ ಮೇಲೆ
ಇರುವೆನಡಿಗೆಯ ನಡೆದು, ಬರುತಿದ್ದ ಮೇಲ್ಮೇಲೆ!

ಗಿಡ ಬಳ್ಳಿಯೆಲೆಗಳಲಿ ನೆಯ್ದಿರುವ ಜೇಡ ಬಲೆ
ನೂಲಿನೆಳೆಗಳು ಚಿನ್ನ ಸರಿಗೆಯಂತಿಹವು ಸಲೆ.

ಭೂದೇವಿಯುಟ್ಟಿರುವ ಹಸುರುಡಿಗೆಯ೦ತೆಸೆವ
ಎಳೆಗಳವೆ ಮಡಿಗಳಿಗೆ ಹೊ೦ಬಣ್ಣ ರವಿಯೀವ.

ಎತ್ತೆತ್ತಲೂ ತಿರೆಯು ಹೊನ್ನ ಹೊಳೆಯಲಿ ತೇಲಿ.
ತನ್ನತನವನು ಮರೆತು, ಹರಿದು ಸೊಗಗಡಲಿನಲಿ-

ಸಂಗಮ೦ಗೊಂಡಂತೆ ಭಾಸವಾಗುತ್ತಲಿತ್ತು.
ಒಂದಿನಿತು ಚಣ ಕಳೆಯಲೊಪ್ಪವೇ ಬೇರಾಯ್ತು:-

ಸ್ವರ್ಣ ಲೇಪದ ಮೇಲೆ ರಜತ ರಸ ಬೆರೆದಂತೆ.
ಬಿಸಿಲೊಸರು ಕಣ್ಗೂಟವನ್ನೂಡಿಸಿತು ಮುಂತೆ!
*****
೧೯೪೦

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...