ನಿನ್ನ ನದಿಗಳ ಹೆಸರು ನನಗೆ ಗೊತ್ತಿಲ್ಲ, ಓ ಫ್ರಾನ್ಸ್!
ಆದರೆ ಇಂಥ ಚಲುವಿನ ಹೊನಲೇ ಹರಿದಿಹುದು ನನ್ನ ನಾಡಿನಲ್ಲಿ.
ನಿನ್ನ ವನ-ವೃಕ್ಷಗಳ ಹೂ-ಬಳ್ಳಿಗಳ ಪ್ರೀತಿಯನು ಗಳಿಸಿಲ್ಲ ಓ ಫ್ರಾನ್ಸ್!
ಇವನೆಲ್ಲ ನೋಡಿ ನಾನೊಸೆದ ತರುಲತೆಗಳ ನೆನಪಾಗುವದು ಮಾತ್ರ.
ಚೆಲುವಿಹುದನಂತ,- ಕಿಡಿಯನು ತಿಳಿದವಗಿಡಿ ಬೆಂಕಿಯ ಮೂಲ ಗೊತ್ತು.
ಅದರೂ ನಿನ್ನ ಚೆಲುವಿಗೆ ಮನಸೊತು ಮುಗ್ಧನಾದೆ!
ಅದಕಿದೆ ಸ್ವಾತಂತ್ರ್ಯದ ಕಾಂತಿ, ಸ್ವಾನುಭೂತಿಯ ಸ್ವಚ್ಛಂದ,
ಆನಂದದ ಲಹರಿಲಹರಿ! ಮಾಟದ ವಿಡಾಯ!
ಪ್ರಕೃತಿಯಾಳವನರಿತಿದೆ ನಿನ್ನಲ್ಲಿಯ ಕಲೆ,-
ಕಲೆಯ ನೆಲೆಯನ್ನರಿತಿದೆ ನಿನ್ನಲ್ಲಿಯ ಪ್ರಕೃತಿ!
ನಿನ್ನ ಬಸಿರಲ್ಲಿ ಬಂದ ಸುಂದರಿಯರು,
ನಿನ್ನಡಿಯಲ್ಲಿ ನಿಂತ ಉನ್ನತ ಕ್ರಿಸ್ತಾಲಯಗಳು,
ನಿನ್ನ ನಂದನವನಗಳಲಿ ಪುಟಿಯುತಿಹ ಕಾರಂಜಿ,-
ಇದರ ಫೋಟೊಗ್ರಾಫಿಯಿದೆ ಮೈಸೂರಲ್ಲಿ,-
ಜೀವಕಳೆಯಿದೆಯಿಲ್ಲಿ,-ನಿನ್ನುಸಿರಿನಲ್ಲಿ!
ಮಾರ್ಸೆಲದಲ್ಲಿಳಿದು ನಿನ್ನ ವೈಭವವ ನೋಡಿ ಬೆರಗುಬಟ್ಟೆ;
ನಿನ್ನೋಣಿಗಳಲ್ಲಿ ತಿರುಗಾಡಿದೆ, ಕಾವಣಗಳಲ್ಲಿ ತರೆದೂಗಿದೆ;
ನಗೆಮೊಗದ ನನ್ನಿಗರೊಡನೆ ಮಾತಾಡಿದೆ; ಸಮಾಧಾನವಿರಲಿಲ್ಲ.
ಪರಂತಂತ್ರ ಭಾರತೀಯನ ಗಂಟಲಿಗೆ ಗಾಳವಿದೆಲ್ಲ ಸಿರಿ.
ನಿನ್ನ `ನಾ:ತರ್ದಾಮ’ವು ಮಾತ್ರ ದಿವ್ಯಧಾಮವಾಯ್ತು!
ನೆಲ ನೀರುಗಳಂಚಿನ ಮೇಲೆ ನೆಲೆಸಿದ
ಉನ್ನತೋನ್ನತ ಕಿಸ್ತಾಲಯತೆ ಕಳಸವನಿಟ್ಟು
ಕೈಯಲೆತ್ತಿ ಕ್ರಿಸ್ತನನ್ನು
ಶಾಂತಗ೦ಭೀರವಾಗಿ ನಿಂತಿಹಳು ಮಾತಾಯಿ:
ಆ ದೇವಮಾತೆಯ ಪಡಿಯಚ್ಚಿದೆ
ನಿನ್ನ ಹೆಣ್ಣಿನ ಮೋರೆಯ ಮೇಲೆ, ಓ! ಫ್ರಾನ್ಸ್!
ನೀನೇಯೇನು ಆ ಮಾತಾಯಿ?
ರಕ್ಷಿಸಲಣಿಗರನ್ನು, ಸುವ್ವಿಗೆಯ್ಯಲೆಂದತಿಥಿಗಳನ್ನು,-
ನಿಂತೆಯೇನು ನೀನಲ್ಲ?
ಬೆಟ್ಟವನೊ೦ದರಳಿಸಿ ದೇವಮಾತೆಗೆ,-ನಿನ್ನ ದೇಹವು ಪಾವನವಾಯ್ತು,
ತಲೆಯೆತ್ತಿ ನೋಡಿದೆನು ಬಣ್ಣಬಣ್ಣದ ಗುಮ್ಮಟಗಳನ್ನು;
ನುಡಿದದ್ದನ್ನೆ ನುಡಿದು ಮುಗಿಲ ಕಿವಿಗೆ ಮಟ್ಟಿಸುವ ಮಾಡಗಳನ್ನು;
ಮಳೆಬಿಲ್ಲು ಗಾಜಿನಲ್ಲಿ ಮೋಜುಮೋಜಿನ ರೂಹುವೆತ್ತ ಚಿತ್ರಗಳನ್ನು;
ಶಿಲುಬೆಗೇರಿಸಿದ ಕ್ರಿಸ್ತಮೂರ್ತಿಯ;-
ತನೂರುಹುಗಳ ತೆರೆದು ನಿಂತ ದೇವದೂತರ,-
ನೋಡಿ ಬಿಲ್ಲುಂಬೆರಗದೆನಾಗ.
ಕ್ರಿಸ್ತನನೆತ್ತಿಕೊಂಡು ನಿಂತ ಮೇರಿ! ಮಾತಾಯಿ!
ನಿನ್ನನೋಡಿದೊಡನುಕ್ಕಿ ಬ೦ತು ನನ್ನ ಹೃದಯ
ಏಕಾಕಿಯಾದ ನಾನು ದರದೇಶಿಯಂತೆ ಶರಣು ಬರಲು
ತೆಗೆದಪ್ಪಿಕೊಂಡೆ ನನ್ನನು, ಆಶೀರ್ವದಿಸಿದೆ; ಕರುಣಿಸಿದೆ; ವರವನಿತ್ತೆ.
ನಿನ್ನ ನೆನಿಸಲು ಎದೆಯುಕ್ಕುವದು,-ನಿನ್ನಡಿಗಿದ್ದ ಸಮುದ್ರದಂತೆ!
*****

















