Home / ಲೇಖನ / ಇತರೆ / ಸನ್ಯಾಸಿ ಕತೆ

ಸನ್ಯಾಸಿ ಕತೆ

ಬೆಂಗಳೂರೆಂಬ ದೊಡ್ಡ ಪಟ್ಟಣದಲ್ಲಿ ಬಲು ದೊಡ್ಡ ಮಠವಿತ್ತು. ಒಂದು ದಿನ ಒಬ್ಬ ಸನ್ಯಾಸಿ ಮಠದೊಳಕ್ಕೆ ಐದಾರು ಶಿಷ್ಯರೊಂದಿಗೆ ಗೂಳಿ ನುಗ್ಗಿದಂತೆ ನುಗ್ಗಿ ಬಂದ, ಮಠದಲ್ಲಿದ್ದವರೆಲ್ಲ ಗಾಬರಿಯಾದರು.

“ಸ್ವಾಮಿಗಳೆ ತಾವು ಯಾರು? ನಿಮಗ್ಯಾರು ಬೇಕಾಗಿತ್ತು? ನಿಮಗೇನಾಗ ಬೇಕಾಗಿತ್ತು?” ಎಂದು ಮಠದ ಮರಿಸ್ವಾಮಿಗಳೆಲ್ಲ ಆ ಸನ್ಯಾಸಿಯನ್ನು ವಿಜ್ಞಾಪಿಸಿದರು.

“ನಾನೊಬ್ಬ ದೇವದೂತ. ನಿಮಗೇನು ಬೇಕೆಂದು ಕೇಳಿಕೊಳ್ಳಿರಿ. ನನಗೇನು ಬೇಕಾಗಿಲ್ಲ. ನಿಮ್ಮ ಹಿರಿಸ್ವಾಮಿಯನ್ನು ನನ್ನಲ್ಲಿಗೆ ಕರೆದುಕೊಂಡು ಬನ್ನಿ” ಎಂದು ಸನ್ಯಾಸಿ ಅಲ್ಲಿದ್ದವರನ್ನೆಲ್ಲ ಜೋರು ಜೋರು ಮಾಡಿದ.

ಮಠದ ಮರಿಸ್ವಾಮಿಗಳೆಲ್ಲ ಒಳಗೆ ಓಡಿದರು. ಹಿರಿಸ್ವಾಮಿಗಳಿಗೆ ಸುದ್ದಿ ಮುಟ್ಟಿಸಿದರು. ಹಿರಿಸ್ವಾಮಿಗಳು ಗಾಬರಿ ಬಿದ್ದರು.

ಹಿರಿಸ್ವಾಮಿಗಳು ಏಳಲಾರದೆ ಬೇಗ ಎದ್ದು ಅವಸರದಿ ಸನ್ಯಾಸಿ ಬಳಿಗೆ ಬಂದರು. “ಸ್ವಾಮಿಗಳೆ ತಮ್ಮ ಹೆಸರು, ಊರು, ಯಾವ ಮಠದವರು ? ತಮಗೆ ನಮ್ಮಿಂದೇನಾಗಬೇಕು?” ಎಂದು ಕೇಳಿದರು.

“ನನ್ನ ಹೆಸರು ಮೃತ್ಯುವೆಂದು. ಎಲ್ಲರೂ ಭಯಭಕ್ತಿಯಿಂದ ಮೃತ್ಯುಂಜಯ ಮಹಾಸ್ವಾಮಿಗಳೆಂದು ಕರೆಯುವರು. ನಮ್ಮದು ಬಲು ಎತ್ತರದ ಊರು! ಉತ್ತರ ಭಾರತದ ಹಿಮಾಲಯದ ತಪ್ಪಲಿನಿಂದ ಬಂದವರು! ಸಿದ್ಧಿ ಪ್ರಸಿದ್ಧಿ ಸಾಧಕರು! ನಿಮಗೇನಾದರು ಬೇಕಿದ್ದರೆ ಹೇಳಿ. ನಿಮ್ಮಿಂದ ನಮಗೆ ಪೂಜಾ ಏರ್ಪಾಡು, ಉಳಿಯಲು ವಾರದ ಮಟ್ಟಿಗೆ ವಸತಿ, ಪ್ರಸಾದದ ವ್ಯವಸ್ಥೆಯಾಗಬೇಕೆಂದು” ಜೋರು ಮಾಡಿದರು.

ಇದೇನು ಸ್ವಾಮಿಗಳೆ ನಿಮ್ಮದೇ ಮಠವೇನೋ ಶಾಖ ಮಠವೆಂಬಂತೆ ನಮ್ಮನ್ನು ನಿಮ್ಮ ಕಿರಿಸ್ವಾಮಿ ಎಂಬಂತೇ ಜೋರು ಜೋರು… ಮಾಡುತ್ತಿರುವಿರಲ್ಲಾ? ಇದೇನು ತೋಟದಪ್ಪನ ಪುಣ್ಯ ಛತ್ರವೆಂದು ತಿಳಿದಿರೇನು? ನೀವ್ಯಾರೋ… ನಮಗೇ ತಿಳಿಯದು ದಯಮಾಡಿ ಮುಂದೆ ಹೋಗಿ” ಎಂದು ಹಿರಿಸ್ವಾಮಿಗಳು ಅಂದರು.

“ನಿಮಗೆ ನಮ್ಮ ಮಹಿಮೆ ತಿಳಿಯದು. ದೇವರು ನಿಮಗೆ ನೀಡಿದ್ದನ್ನು ನಮ್ಮಂಥಾ ಸನ್ಯಾಸಿಗೆ ನೀಡುವುದರಲ್ಲಿ ತಪ್ಪಿಲ್ಲವಲ್ಲಾ? ಎಲ್ಲ ದೇವರ ಕೊಡುಗೆಯಲ್ಲವೇ? ಹೀಗಾಗಿ ಈ ಮಠದ ಮೇಲೆ ನನಗೂ ಹಕ್ಕಿದೆ. ಪಾಲಿದೆ” ಎಂದ ಸನ್ಯಾಸಿ.

“ನಿಮ್ಮಂಥ ಸನ್ಯಾಸಿಗಳು ನಿತ್ಯ ನೂರಾರು ಜನ ಬಂದು ಹೋಗುವರು ನಿಮ್ಮ ರೀತಿ ವರ್ತಿಸಿದ್ದು ನಾ ಕಾಣೆ. ನೀವ್ಯಾರೋ ಕೆಟ್ಟ, ಕಪಟ ಸ್ವಾಮಿ ಇರಬೇಕು” ಎಂದ ಮಠದ ಹಿರಿಯ ಸ್ವಾಮಿ.

“ಏ ನೀ ನನ್ನ ಅನುಮಾನಿಸುತ್ತೀಯಾ? ನನ್ನ ವೇಷಭೂಷಣ ಶಿಷ್ಯರ ನೋಡಿದರೆ ನಿನಗೆ ಜ್ಞಾನೋದಯವಾಗಬೇಕಾಗಿತ್ತು!! ಆದರೆ ನಿನಗೆ ನೂರಾರು ವರ್ಷ ವಯಸ್ಸಾಗಿದೆ. ಬುದ್ಧಿ ಬಲಿತಿಲ್ಲ” ಎಂದ ಸನ್ಯಾಸಿ.

“ನಾವು ಇಲ್ಲಿ ಈ ಮಠದಲ್ಲಿ ೫೦ ವರ್ಷದಿಂದ ಇದ್ದೇವೆ! ನಮಗೆ ತಿಳಿದಿದೆ ಯಾರು ನಿಜದ ಸ್ವಾಮಿಗಳೆಂದು… ಬರಿಯ ಕಾವಿ ತೊಟ್ಟರೆ ಕಾಮ ಹೋಗುವುದಿಲ್ಲ! ಕರ್ಮ ಕಳೆದುಕೊಂಡು ನಮ್ಮಲ್ಲಿಗೆ ಬಾ… ಹೋಗು” ಎಂದ ಹಿರಿಸ್ವಾಮಿ.

“ನನ್ನ ಏಕವಚನದಲ್ಲಿ ಮಾತನಾಡಿಸುತ್ತೀಯಾ? ನೀನು ನರಕಕ್ಕೆ ಹೋಗುವೆ ಪಾಪಿ! ನಿನಗೆ ಜಾತಿಯ ಮದ, ಅಧಿಕಾರದ ಹಮ್ಮು, ಜನಬಲದ ಸೊಕ್ಕು ಹಣದ ದುರಂಕಾರ, ಜಾಸ್ತಿಯಾಗಿದೆ ನಾನಿನ್ನು ಬರುತ್ತೇನೆ” ಎಂದು ಹೊರಡಲನುವಾದ.

ಹಿರಿಸ್ವಾಮಿಗಳು ಸುಮ್ಮನೆ ಬಿಟ್ಟಾರೆಯೇ?

“ಏ ಇವನನ್ನು ಹಿಡಿಯಿರಿ ಮಠದಿಂದ ಎಳೆಯಿರಿ ನಾಲ್ಕು ಭಾರಿಸಿ…” ಎಂದು ಕೂಗಿಯೇ ಬಿಟ್ಟರು. ಶಿಷ್ಯರಿಗೆ ಇಷ್ಟೇ ಸಾಕಾಯಿತು!

ಅಲ್ಲಿದ್ದ ಇವರ ಶಿಷ್ಯರೆಲ್ಲ ಮೃತ್ಯುಂಜಯ ಸ್ವಾಮಿಯನ್ನು ಮುತ್ತಿದರು. ಮಠದಿಂದ ಹೊರಗೆ ಎಳೆದರು. ಚೆನ್ನಾಗಿ ಬಿಸಿ ಮುಟ್ಟಿಸಿದರು. ಇನ್ನೆಂದೂ ಮಠದತ್ತ ಇಣಕಿ ನೋಡದಂತೆ ಮಾಡಿದರು.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...