Home / ಕವನ / ಕವಿತೆ / ಸ್ನೇಹ-ಸಿಂಧು

ಸ್ನೇಹ-ಸಿಂಧು

ದೇವ ಹೃದಯದ ನೀಲದಾಳದಿ
ಮೊರೆವ ಸ್ನೇಹದ ಸಿಂಧುವೆ!
ಬೆಂದ ಬಾಳಿಗೆ ನೊಂದ ಜೀವಿಗೆ
ನೀನೆ ಸರುವರ ಬಂಧುವೆ!

ಇಳೆಯ ಕುದಿಯನು ಕಳೆಯಲೋಸುಗ
ಹಸಿರ ಸಿರಿಯನು ಹೊದಿಸಿದೆ
ಏಳು ಕಡಲುಗಳನ್ನೆ ಹರಿಯಿಸಿ
ಪ್ರಾಣಪವನವ ಸುತ್ತಿದೆ.
ಹಗಲಿನುರಿ ನಂದಿಸಲು ಸಂಧ್ಯಾ-
ಮೋಹ ಕಂಕಣ ಕಟ್ಟಿದೆ
ಇರುಳಿನೆದೆಯಲಿ ಚೆಲುವ ಚಂದ್ರನ
ಬಿಂಬವನ್ನೇ ಬಿತ್ತಿದೆ.

ಸೂರ್ಯ ಲೋಕದ ಸುತ್ತು ಭ್ರಮಿಸುವ
ನಿಖಿಲ ಗ್ರಹಗಳ ರತಿಯಲಿ
ಕಾಲಚಕ್ರದ ವಕ್ರಗತಿಯಲಿ
ಜನ್ಮ ಮರಣದ ಜೊತೆಯಲಿ
ದಿವ್ಯ ಪ್ರೀತಿಯ ಭವ್ಯ ಗೀತವ
ಮಿಡಿಡು ವಿಶ್ವವ ತುಂಬಿದೆ
ಪಂಚ ಭೂತಗಳನ್ನು ಬೆರೆಯಿಸಿ
ಬಣ್ಣದಾಟವ ನಾಡಿದೆ

ಚೆಲುವಿನಲಿ ಸೆಳೆ ಆಳಲಿನಲಿಯ-
ಕ್ಕರತೆ ನೆಲದಲಿ ಕಂಪನು
ಆಸೆಗನಸುಗಳರಳ ಹೃದಯದಿ
ಬೆಳೆದೆ ಇಹದಲಿ ಸಿರಿಯನು
ನಿನ್ನ ತೆರೆಗಳು ತಟ್ಟಿದೆಡೆಯಲಿ
ಸ್ವರ್ಗಲೋಕವು ಬೆಳೆವುದು
ನಿನ್ನ ಮೊಳಗೂ ಕೇಳದಾಕಡೆ
ನರಕಕಲ್ಲವೆ ನೆಲೆಯದು.

ನಿನ್ನ ದಂಡೆಯ ಉಸುಕಿನಿಂದಲೆ
ಗುಬ್ಬಿ ಗೂಡನು ಕಟ್ಟುತ
ಆಟವಾಡುತ ಮರೆತ ಕೆಲವರ
ಕರೆವೆ ತೆರೆ ಬೆರಳೆತ್ತುತ
ಕಣ್ಣ ಮಿಂಚಿನ ಬಲೆಯ ಬೀಸುತ
ಸೆಳೆವೆ ನಿನ್ನೆಡೆ ಹಲವರ.
ಸ್ವಪ್ನ ಸುಂದರ ಮಾಯೆಯಾಮಿಷ
ಹರಡಿ ನೀ ಸ್ನೇಹಾಕರ

ನೀ ಕೃಪಾಕರನೆಂದು ನಿನ್ನಡಿ
ಗೆರಗಿದವರನು ಮುರಿಯುವೆ
ನೀ ಕೃಪಾಣದ ಕೈಯನೆತ್ತುತ
ರುದ್ರರೂಪವ ತೋರುವೆ
ಯಾವ ಸಾಸಿಗ ನಿನ್ನ ನೀರೊಳು
ಧುಮುಕಿ ಸಿರಿಯನು ಜರೆವನು
ನಿನ್ನದೊಂದೇ ಹನಿಯನಾಶಿಸಿ
ಶಾಂತಿ ಸುಖವನು ತೊರೆವನು.

ನಿನ್ನ ಕರೆಯನು ಕೇಳಿದವರಿಗೆ
ಎಲ್ಲಿ ಬಿಡುಗಡೆ ಇರುವುದು
ನಿನ್ನ ಸುಡುವುರಿ ಮಡಲಿನಲಿ
ಒಡಲೆಲ್ಲಿ ತಂಪನು ಪಡೆವುದು.
ನಿನ್ನ ಮಡಿಲಲಿ ಆಡ ಬಂದೆನು
ಲೀಲೆಯಲಿ ಕುಣಿದಾಡಲು
ತಿಳಿಯದೆಯೆ ನಾ ಬೆಂದು ಹೋದೆನು
ಕನಸಿನಾಳಿಕೆ ಮುಗಿಯಲು

ನನ್ನ ಆಸೆಯ ಭವ್ಯ ಮಂದಿರ
ಶೂನ್ಯದಲಿ ಮರೆಯಾಯಿತು
ಮನದ ಬಾಂದಳದಲ್ಲಿ ಮಿನುಗಿದ
ಚಂದ್ರ ದೀಪವು ಆರಿತು.
ರಮ್ಯ ಭಾವದ ಸುಮನ ಪಲ್ಲವ
ಬಾಡೆ ಎದೆ ಕೊರಡಾಯಿತು
ಪಾರಿಜಾತದ ಮೃದುಲ ಹಾಸುಗೆ
ಶರಗಳಾಸನವಾಯಿತು.

ಸ್ವಪ್ನ ಸುಂದರವಾದ ಸುಖಮಯ
ಸುಲಭ ಜೀವನ ಮುಗಿಯಿತು
ನಿಜದ ಕಲ್ಲೆದೆ ಕೊರೆದು ಹರಿಯುವ
ಸತ್ವ ಸಮಯವು ಬಂದಿತು.
ನಿನ್ನ ಆಸರೆಯಲ್ಲಿ ನಿಂದಿಹ
ಬಾಳ ಬಗೆಯನು ಅರಿತೆನು
ಮುರಿನ ಕೈಯೇ ಅಭಯ ಕರವೆಂ-
ಬುದರೆ ಪರಿಯನು ತಿಳಿದೆನು.

ಬೆನ್ಗೆ ನಿನ್ನಯ ಭೀಮರಕ್ಷೆಯ
ಕಟ್ಟಿಿಕೊಂಡಿಹ ಧೀರರು
ಶಿಲುಬೆಯನು ನಗುನಗುತಲೇ-
ರಿದರತುಲ ತ್ಯಾಗದ ವೀರರು.
ನಂಜುನುಂಗಿದ ಒಡಲಿಗಿಳಿಯಿತು
ಅಮೃತ ಸತ್ವದ ಶಾಂತಿಯು
ಉರಿಗೆ ಧುಮುಕಿದರೇನು ದೊರೆಯಿತು
ಚಂದ್ರಶೀತಲ ಪ್ರೀತಿಯು

ಆದರೆನ್ನೆದೆಯಲ್ಲಿ ಭೀತಿಯು
ನೆರಳ ಚಾಚುತಲಿರುವುದು
ಕಣ್ಗೆ ಮಂಕನು ಕವಿದು ಹೃದಯದ
ಕಸುವ ಕೀಳುತಲಿರುವುದು.
ಏತಕಿನ್ನೂ ಹೃದಯ ತಳದಲಿ
ಹಗೆಯ ಹಾವವಿತಿರುವುದು
ಹೆಡೆಯ ಹರಡುತ ಬಾಳಿನಲಿ ನಂ-
ಜೇಕೆ ಚಿಮ್ಮುತಲಿರುವುದು.

ಹೃದಯವೆಲ್ಲಾ ನಿನ್ನೆ ಕರುಣೆಯ
ಕಿರಣಕಾಶಿಸಿ ಕಾಯ್ದಿದೆ
ಯಾವ ದೈವವು ನಮ್ಮ ಮಧ್ಯದಿ
ಮೇಘ ಜವನಿಕೆಯೆಳೆದಿದೆ.
ಯಾರು ಕೆಡುಕಿನ ಬೀಜ ಗಾಳಿಗೆ
ತೂರಿ ಎಲ್ಲೆಡೆ ಬೆಳೆದರು
ಹಗೆಯ ಕಾಡಿನ ವಿಷದ ವಲಯವ
ನಾಡು ಬೀಡಿಗೆ ಬಿಗಿದರು.

ದಿನವು ಚಿಮ್ಮುವ ಕೊಲೆಯ ರಕ್ತವು
ಹೇಗೆ ನನ್ನೆದೆ ತಟ್ಟಿತು
ಜಗದ ಪಾಪದ ಭೂತ ನೃತ್ಯವು
ಮನದ ರಂಗಕ್ಕಿಳಿಯಿತು.
ಯಾರ ಕರ್ಮವು ಬೆಳೆದ ಕಟುಫಲ
ನನ್ನ ಬಾಯಲಿ ಬಿದ್ದಿತು
ಅದರ ಕಹಿ ಯೊಡಲನ್ನು ತುಂಬಿರೆ
ಹರಣ ಕಸಿವಿಸಿ ಗೊಂಡಿತು.

ಯಾರು ಈ ಕಹಿ ಕಳೆವರೆನ್ನಯ
ಕೊಳೆಯನ್ನೆಲ್ಲಾ ತೊಳೆವರು
ಲೋಕವೆಲ್ಲಾ ತುಂಬಿ ಉಳಿದಿಹ
ಪಾಪವನು ಉರಿಗಿಡುವರು
ಪಾಪನಾಶನ ಗಂಗೆಯಲಿ ಇ-
ಕ್ಕೆಲದಿ ಕೊಳೆಯೇ ತುಂಬಿದೆ
ಸಪ್ತಸಾಗರದಂತರಂಗದಿ
ಕೊಲೆಯ ಜಾಲವು ಹರಡಿದೆ.

ಇನ್ನು ನೀನೇ ಶರಣು ಪತಿತಗೆ
ಯಾರು ಎತ್ತುವರನ್ಯರು
ನಿನ್ನ ಕರೆಯನು ಕೇಳಿ ನಿನ್ನೆಡೆ
ಓಡಿಬರುವರೆ ಧನ್ಯರು
ಏಳು ಸ್ನೇಹನೆ ಅರಳು ನಂದಾ-
ದೀಪವಾಗೆನ್ನೆದೆಯಲಿ
ನಿನ್ನ ಸಾಗರ ಘೋಷವೇಳಲಿ
ನನ್ನ ತನುಮನ ಕೆಣಕಲಿ.

ಕ್ಲೈಬ್ಯ ತೊಲಗಲಿ ಭೀತಿಯೋಡಲಿ
ಕೀಳು ಎಣಿಕೆಗಳಳಿಯಲಿ
ನಿನ್ನ ನಂಬಿದ ನನ್ನ ನೌಕೆಯು
ನಿನ್ನ ನೀರಲಿ ಧುಮುಕಲಿ
ಮತ್ತೆ ಬೇರೆಡೆ ಸುಖದ ಜೀವನ
ದೊರೆತರೂ ನಾನೊಲ್ಲೆನು
ಇಲ್ಲಿ ನಿನ್ನೆಡೆಯಲ್ಲಿ ಸಾವಿನ
ಸಖ್ಯ ಬೆಳೆಸಲು ಸಿದ್ಧನು.

ನಿನ್ನ ಸ್ಪರ್ಶವು ರೋಮ ರೋಮದಿ
ಸ್ನೇಹವಲ್ಲಿಯ ಚಿಗಿಸಲಿ
ನಿನ್ನ ಕರುಣಾ ದೃಷ್ಟಿ ಹೃದಯದ
ಅಮೃತ ಸೃಷ್ಟಿಯ ತೆರೆಯಲಿ
ದಿಗ್‌ದಿಗಂತದಿ ಮುತ್ತು ಹವಳದ
ವರ್ಣ ಸಂಪದ ಬೆಳೆಯಲಿ
ಬಾನು ನೆಲದಲಿ ಹರ್ಷಧವಲತೆ
ಜೊನ್ನದೊಲು ತುಳುಕಾಡಲಿ

ಸ್ನೇಹ ಸಿಂಧುವೆ, ನಿನ್ನ ಸ್ನೇಹಲ
ಲಹರಿಯಲಿ ಮುಳುಗೇಳಲು
ಶುದ್ಧ ಪಾವನ ತ್ಯಾಗ ಜೀವನ
ಸತ್ವವನು ಸವಿದೇಳಲು
ನನ್ನ ಬಾಳಿನ ಭಾವ ಬಳ್ಳಿಗೆ
ಆಶೆಯೊಂದೇ ಕೊನರಿದೆ
ನಿನ್ನನೊಳ ಹೊರಗೆಲ್ಲ ಕಡೆಗೂ
ತುಂಬಿಕೊಳ್ಳಲು ಎಳಸಿದೆ.
*****

Tagged:

Leave a Reply

Your email address will not be published. Required fields are marked *

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...