Home / ಕವನ / ಕವಿತೆ / ಸ್ನೇಹ-ಸಿಂಧು

ಸ್ನೇಹ-ಸಿಂಧು

ದೇವ ಹೃದಯದ ನೀಲದಾಳದಿ
ಮೊರೆವ ಸ್ನೇಹದ ಸಿಂಧುವೆ!
ಬೆಂದ ಬಾಳಿಗೆ ನೊಂದ ಜೀವಿಗೆ
ನೀನೆ ಸರುವರ ಬಂಧುವೆ!

ಇಳೆಯ ಕುದಿಯನು ಕಳೆಯಲೋಸುಗ
ಹಸಿರ ಸಿರಿಯನು ಹೊದಿಸಿದೆ
ಏಳು ಕಡಲುಗಳನ್ನೆ ಹರಿಯಿಸಿ
ಪ್ರಾಣಪವನವ ಸುತ್ತಿದೆ.
ಹಗಲಿನುರಿ ನಂದಿಸಲು ಸಂಧ್ಯಾ-
ಮೋಹ ಕಂಕಣ ಕಟ್ಟಿದೆ
ಇರುಳಿನೆದೆಯಲಿ ಚೆಲುವ ಚಂದ್ರನ
ಬಿಂಬವನ್ನೇ ಬಿತ್ತಿದೆ.

ಸೂರ್ಯ ಲೋಕದ ಸುತ್ತು ಭ್ರಮಿಸುವ
ನಿಖಿಲ ಗ್ರಹಗಳ ರತಿಯಲಿ
ಕಾಲಚಕ್ರದ ವಕ್ರಗತಿಯಲಿ
ಜನ್ಮ ಮರಣದ ಜೊತೆಯಲಿ
ದಿವ್ಯ ಪ್ರೀತಿಯ ಭವ್ಯ ಗೀತವ
ಮಿಡಿಡು ವಿಶ್ವವ ತುಂಬಿದೆ
ಪಂಚ ಭೂತಗಳನ್ನು ಬೆರೆಯಿಸಿ
ಬಣ್ಣದಾಟವ ನಾಡಿದೆ

ಚೆಲುವಿನಲಿ ಸೆಳೆ ಆಳಲಿನಲಿಯ-
ಕ್ಕರತೆ ನೆಲದಲಿ ಕಂಪನು
ಆಸೆಗನಸುಗಳರಳ ಹೃದಯದಿ
ಬೆಳೆದೆ ಇಹದಲಿ ಸಿರಿಯನು
ನಿನ್ನ ತೆರೆಗಳು ತಟ್ಟಿದೆಡೆಯಲಿ
ಸ್ವರ್ಗಲೋಕವು ಬೆಳೆವುದು
ನಿನ್ನ ಮೊಳಗೂ ಕೇಳದಾಕಡೆ
ನರಕಕಲ್ಲವೆ ನೆಲೆಯದು.

ನಿನ್ನ ದಂಡೆಯ ಉಸುಕಿನಿಂದಲೆ
ಗುಬ್ಬಿ ಗೂಡನು ಕಟ್ಟುತ
ಆಟವಾಡುತ ಮರೆತ ಕೆಲವರ
ಕರೆವೆ ತೆರೆ ಬೆರಳೆತ್ತುತ
ಕಣ್ಣ ಮಿಂಚಿನ ಬಲೆಯ ಬೀಸುತ
ಸೆಳೆವೆ ನಿನ್ನೆಡೆ ಹಲವರ.
ಸ್ವಪ್ನ ಸುಂದರ ಮಾಯೆಯಾಮಿಷ
ಹರಡಿ ನೀ ಸ್ನೇಹಾಕರ

ನೀ ಕೃಪಾಕರನೆಂದು ನಿನ್ನಡಿ
ಗೆರಗಿದವರನು ಮುರಿಯುವೆ
ನೀ ಕೃಪಾಣದ ಕೈಯನೆತ್ತುತ
ರುದ್ರರೂಪವ ತೋರುವೆ
ಯಾವ ಸಾಸಿಗ ನಿನ್ನ ನೀರೊಳು
ಧುಮುಕಿ ಸಿರಿಯನು ಜರೆವನು
ನಿನ್ನದೊಂದೇ ಹನಿಯನಾಶಿಸಿ
ಶಾಂತಿ ಸುಖವನು ತೊರೆವನು.

ನಿನ್ನ ಕರೆಯನು ಕೇಳಿದವರಿಗೆ
ಎಲ್ಲಿ ಬಿಡುಗಡೆ ಇರುವುದು
ನಿನ್ನ ಸುಡುವುರಿ ಮಡಲಿನಲಿ
ಒಡಲೆಲ್ಲಿ ತಂಪನು ಪಡೆವುದು.
ನಿನ್ನ ಮಡಿಲಲಿ ಆಡ ಬಂದೆನು
ಲೀಲೆಯಲಿ ಕುಣಿದಾಡಲು
ತಿಳಿಯದೆಯೆ ನಾ ಬೆಂದು ಹೋದೆನು
ಕನಸಿನಾಳಿಕೆ ಮುಗಿಯಲು

ನನ್ನ ಆಸೆಯ ಭವ್ಯ ಮಂದಿರ
ಶೂನ್ಯದಲಿ ಮರೆಯಾಯಿತು
ಮನದ ಬಾಂದಳದಲ್ಲಿ ಮಿನುಗಿದ
ಚಂದ್ರ ದೀಪವು ಆರಿತು.
ರಮ್ಯ ಭಾವದ ಸುಮನ ಪಲ್ಲವ
ಬಾಡೆ ಎದೆ ಕೊರಡಾಯಿತು
ಪಾರಿಜಾತದ ಮೃದುಲ ಹಾಸುಗೆ
ಶರಗಳಾಸನವಾಯಿತು.

ಸ್ವಪ್ನ ಸುಂದರವಾದ ಸುಖಮಯ
ಸುಲಭ ಜೀವನ ಮುಗಿಯಿತು
ನಿಜದ ಕಲ್ಲೆದೆ ಕೊರೆದು ಹರಿಯುವ
ಸತ್ವ ಸಮಯವು ಬಂದಿತು.
ನಿನ್ನ ಆಸರೆಯಲ್ಲಿ ನಿಂದಿಹ
ಬಾಳ ಬಗೆಯನು ಅರಿತೆನು
ಮುರಿನ ಕೈಯೇ ಅಭಯ ಕರವೆಂ-
ಬುದರೆ ಪರಿಯನು ತಿಳಿದೆನು.

ಬೆನ್ಗೆ ನಿನ್ನಯ ಭೀಮರಕ್ಷೆಯ
ಕಟ್ಟಿಿಕೊಂಡಿಹ ಧೀರರು
ಶಿಲುಬೆಯನು ನಗುನಗುತಲೇ-
ರಿದರತುಲ ತ್ಯಾಗದ ವೀರರು.
ನಂಜುನುಂಗಿದ ಒಡಲಿಗಿಳಿಯಿತು
ಅಮೃತ ಸತ್ವದ ಶಾಂತಿಯು
ಉರಿಗೆ ಧುಮುಕಿದರೇನು ದೊರೆಯಿತು
ಚಂದ್ರಶೀತಲ ಪ್ರೀತಿಯು

ಆದರೆನ್ನೆದೆಯಲ್ಲಿ ಭೀತಿಯು
ನೆರಳ ಚಾಚುತಲಿರುವುದು
ಕಣ್ಗೆ ಮಂಕನು ಕವಿದು ಹೃದಯದ
ಕಸುವ ಕೀಳುತಲಿರುವುದು.
ಏತಕಿನ್ನೂ ಹೃದಯ ತಳದಲಿ
ಹಗೆಯ ಹಾವವಿತಿರುವುದು
ಹೆಡೆಯ ಹರಡುತ ಬಾಳಿನಲಿ ನಂ-
ಜೇಕೆ ಚಿಮ್ಮುತಲಿರುವುದು.

ಹೃದಯವೆಲ್ಲಾ ನಿನ್ನೆ ಕರುಣೆಯ
ಕಿರಣಕಾಶಿಸಿ ಕಾಯ್ದಿದೆ
ಯಾವ ದೈವವು ನಮ್ಮ ಮಧ್ಯದಿ
ಮೇಘ ಜವನಿಕೆಯೆಳೆದಿದೆ.
ಯಾರು ಕೆಡುಕಿನ ಬೀಜ ಗಾಳಿಗೆ
ತೂರಿ ಎಲ್ಲೆಡೆ ಬೆಳೆದರು
ಹಗೆಯ ಕಾಡಿನ ವಿಷದ ವಲಯವ
ನಾಡು ಬೀಡಿಗೆ ಬಿಗಿದರು.

ದಿನವು ಚಿಮ್ಮುವ ಕೊಲೆಯ ರಕ್ತವು
ಹೇಗೆ ನನ್ನೆದೆ ತಟ್ಟಿತು
ಜಗದ ಪಾಪದ ಭೂತ ನೃತ್ಯವು
ಮನದ ರಂಗಕ್ಕಿಳಿಯಿತು.
ಯಾರ ಕರ್ಮವು ಬೆಳೆದ ಕಟುಫಲ
ನನ್ನ ಬಾಯಲಿ ಬಿದ್ದಿತು
ಅದರ ಕಹಿ ಯೊಡಲನ್ನು ತುಂಬಿರೆ
ಹರಣ ಕಸಿವಿಸಿ ಗೊಂಡಿತು.

ಯಾರು ಈ ಕಹಿ ಕಳೆವರೆನ್ನಯ
ಕೊಳೆಯನ್ನೆಲ್ಲಾ ತೊಳೆವರು
ಲೋಕವೆಲ್ಲಾ ತುಂಬಿ ಉಳಿದಿಹ
ಪಾಪವನು ಉರಿಗಿಡುವರು
ಪಾಪನಾಶನ ಗಂಗೆಯಲಿ ಇ-
ಕ್ಕೆಲದಿ ಕೊಳೆಯೇ ತುಂಬಿದೆ
ಸಪ್ತಸಾಗರದಂತರಂಗದಿ
ಕೊಲೆಯ ಜಾಲವು ಹರಡಿದೆ.

ಇನ್ನು ನೀನೇ ಶರಣು ಪತಿತಗೆ
ಯಾರು ಎತ್ತುವರನ್ಯರು
ನಿನ್ನ ಕರೆಯನು ಕೇಳಿ ನಿನ್ನೆಡೆ
ಓಡಿಬರುವರೆ ಧನ್ಯರು
ಏಳು ಸ್ನೇಹನೆ ಅರಳು ನಂದಾ-
ದೀಪವಾಗೆನ್ನೆದೆಯಲಿ
ನಿನ್ನ ಸಾಗರ ಘೋಷವೇಳಲಿ
ನನ್ನ ತನುಮನ ಕೆಣಕಲಿ.

ಕ್ಲೈಬ್ಯ ತೊಲಗಲಿ ಭೀತಿಯೋಡಲಿ
ಕೀಳು ಎಣಿಕೆಗಳಳಿಯಲಿ
ನಿನ್ನ ನಂಬಿದ ನನ್ನ ನೌಕೆಯು
ನಿನ್ನ ನೀರಲಿ ಧುಮುಕಲಿ
ಮತ್ತೆ ಬೇರೆಡೆ ಸುಖದ ಜೀವನ
ದೊರೆತರೂ ನಾನೊಲ್ಲೆನು
ಇಲ್ಲಿ ನಿನ್ನೆಡೆಯಲ್ಲಿ ಸಾವಿನ
ಸಖ್ಯ ಬೆಳೆಸಲು ಸಿದ್ಧನು.

ನಿನ್ನ ಸ್ಪರ್ಶವು ರೋಮ ರೋಮದಿ
ಸ್ನೇಹವಲ್ಲಿಯ ಚಿಗಿಸಲಿ
ನಿನ್ನ ಕರುಣಾ ದೃಷ್ಟಿ ಹೃದಯದ
ಅಮೃತ ಸೃಷ್ಟಿಯ ತೆರೆಯಲಿ
ದಿಗ್‌ದಿಗಂತದಿ ಮುತ್ತು ಹವಳದ
ವರ್ಣ ಸಂಪದ ಬೆಳೆಯಲಿ
ಬಾನು ನೆಲದಲಿ ಹರ್ಷಧವಲತೆ
ಜೊನ್ನದೊಲು ತುಳುಕಾಡಲಿ

ಸ್ನೇಹ ಸಿಂಧುವೆ, ನಿನ್ನ ಸ್ನೇಹಲ
ಲಹರಿಯಲಿ ಮುಳುಗೇಳಲು
ಶುದ್ಧ ಪಾವನ ತ್ಯಾಗ ಜೀವನ
ಸತ್ವವನು ಸವಿದೇಳಲು
ನನ್ನ ಬಾಳಿನ ಭಾವ ಬಳ್ಳಿಗೆ
ಆಶೆಯೊಂದೇ ಕೊನರಿದೆ
ನಿನ್ನನೊಳ ಹೊರಗೆಲ್ಲ ಕಡೆಗೂ
ತುಂಬಿಕೊಳ್ಳಲು ಎಳಸಿದೆ.
*****

Tagged:

Leave a Reply

Your email address will not be published. Required fields are marked *

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...