Home / ಕವನ / ಅನುವಾದ / ‘ತಪ್ಪು’ ಮಾಡಿದ ಒಬ್ಬ ಸೋದರನಿಗೆ

‘ತಪ್ಪು’ ಮಾಡಿದ ಒಬ್ಬ ಸೋದರನಿಗೆ

ಮೂಲ: ನಜರುಲ್ ಇಸ್ಲಾಂ

ಅಯ್ಯೋ ಪೆದ್ದಣ್ಣ
ಯಾರು ಹೇಳಿದ್ದೊ ನೀ ಕಳ್ಳ ಅಂತ?
ಖದೀಮ ಅಂತ ?

ನೋಡು ಇಲ್ಲಿ
ಸುತ್ತ ಕೂತಿದೆ ಹೇಗೆ
ಮೆತ್ತೆ ಪೀಠದ ಮೇಲೆ ಅಸಲುಗಳ್ಳರ ತಂಡ!
ರಾಜ್ಯಸೂತ್ರವ ಹಿಡಿದು ರಕ್ತ ಹೀರಿದೆ ಹೇಗೆ
ಎಲ್ಲರಿಗು ಮೇಲೆ ಅತಿ ಭಂಡ!
ಯಾರಪ್ಪ ಡೇನಿಯಲ್, ಎಲ್ಲಿದ್ದಾನೆ ಹೇಳು
ಗುಟ್ಟು ಹೊರತೆಗೆವಂಥ ಧೀರ ಈ ಠಕ್ಕಿಗರ ಹೊಟ್ಟೆ ಸೀಳಿ?
ಯಾರಪ್ಪ ನಿಷ್ಕಳಂಕ.
ಯಾರ ಮನೆಯಯ್ಯ ಗುಡಿ?
ದಪ್ಪ ಹೇಗಾದಾರು ಇಷ್ಟು, ನುಂಗದೆ ಇವರು ಬಡವರನ್ನ?
ಎಷ್ಟು ದೊಡ್ಡದೊ ಲೂಟಿ, ಎಷ್ಟು ದೊಡ್ಡದೊ ಚಾಟಿ
ಅಷ್ಟೆ ದೊಡ್ಡದೊ ಅಣ್ಣ ವಿಶ್ವಸಂಸ್ಥೆಗಳಲ್ಲಿ ಇವರ ದನಿ ಧಾಟಿ.
ತುಳಿದು ಮಣ್ಣಾದವನ ಹೀರಿ ಏರಿದ ಮಹಲು,
ಲಕ್ಷ ಕುಲುಮೆಯ ಮೆಟ್ಟಿ ಎದ್ದಿದೆಯೊ ಕಾರ್ಖಾನೆ ತಡೆದು ಬಿಸಿಲು.
ನರಮಾಂಸ ಉಂಡು ಬೆಳೆಯುವ ದೈತ್ಯಯಂತ್ರ ಇದು ಯಾವುದಯ್ಯ,
ಯಾವುದಯ್ಯಾ ಗೆಳೆಯ? ಯಾವುದಯ್ಯಾ ಒಳಗೆ
ಹರಿವ ಪ್ರಾಣದ ಹೊಳೆಯ ಹೀರಿ ಕಬ್ಬಿನ ಸಿಪ್ಪೆ
ಮಾಡಿ ಎಸೆಯುವ ತಂತ್ರ?
ಲಕ್ಷ ಲಕ್ಷ ಕುಟುಂಬ ದುಡಿದು ತುಂಬುತ್ತವೋ
ಕಳ್ಳಿ ಕರಿಸಿರಿಯ ಬಸಿರು.
ನೆನಪಿದೆಯ, ಅಲ್ಲಿ ಗ್ಯಾರೇಜು ಸಾಲಿರುವ ಕಡೆ
ಚಳಿಮಳೆಗೆ ತಡೆ ನಿಂತ
ಅಷ್ಟಿಷ್ಟು ಹರಿದ ಕೊಡೆ ಥರದ ಗುಡಿಸಲ ಸಾಲು ಇದ್ದದ್ದು?
* * *

ನಿಜ ಕಣೋ, ಈ ಗ್ರಹ
ವ್ಯಾಪಾರಿ ಠಕ್ಕು ರೂಪಾಯಿ ಮಾಟಕೆ ಮೆಚ್ಚಿ
ಕಟ್ಟಿಸಿದ ವೇಶ್ಯಾಗೃಹ.
ಖುಷಿಹತ್ತಿ ಸೈತಾನ ತುಟಿ ಬಳಿಗೆ ತಂದು
ಬಗ್ಗಿಸುತ್ತಿದ್ದಾನೆ ಮಧುಬಟ್ಟಲ.
ಆಸೆ ಎಲ್ಲಿದೆ? ಎಲ್ಲಿ ಅನ್ನ? ಭರವಸೆ? ಭಾಷೆ
ಮೋಸ ಗೆದ್ದಿತೊ ಅಣ್ಣ ಭವಿಷ್ಯವನ್ನ.
ಬಳಗವಿದೆ ಕಳ್ಳರಿಗೆ
ಬಲಗಳಿವೆ ಠಕ್ಕರಿಗೆ
ಭೋಳೆರಾಮರು ನೀವು ಹೊಕ್ಕ ಜೈಲಿನ ಸುತ್ತ
ಕಳ್ಳರದ ತಂಡವಿದೆ ಹಗಲಿರುಳ ಗಸ್ತಿಗೆ!
* * *

ಯಾರು ಕರೆದರೊ ನಿನ್ನ ಕಳ್ಳ ಅಂತ,
ಖದೀಮ ಅಂತ?
ತೆಗೆದಿದ್ದರೂ ಪಾಪ! ಮಹಲ ಮಾಳಿಗೆಯಿಂದ
ಒಂದೆರಡು ಲೋಟ
ನಾಲ್ಕು ನಾಣ್ಯ
ಹಸಿದ ಮಧ್ಯಾಹ್ನಕ್ಕೆ ಪಾವು ಧಾನ್ಯ.
ಇರಿಯಲಿಲ್ಲಲ್ಲ ನೆರೆಯವನನ್ನ ಬೆನ್ನಲ್ಲಿ?
ಬರೆಯಲಿಲ್ಲಲ್ಲ ಅದ ಹೊಗಳಿ ಪುಸ್ತಕದಲ್ಲಿ?

ಯಾಕೆ ಕೊರಗುವೆ ತಮ್ಮ?
ನಿನ್ನ ತಪ್ಪೆಲ್ಲವೂ ಬರಿಯ ಕತ್ತಲ ಗುಮ್ಮ.
ಯಾರಿಗಾಗಿಯೊ ದುಡಿದ, ಹೊಡದ, ತಲೆಗಳನೊಡೆದ
ವಾಲ್ಮೀಕಿಗಾದಂತೆ ಸ್ಥಿತ್ಯಂತರ
ಸಿಕ್ಕ ಪಕ್ಷಕ್ಕೆ ನಿಜವಾದ ಮಾನವನೊಬ್ಬ
ಆಗದಿರುವುದೆ ನಿನಗು ಸ್ಥಾನಾಂತರ?
*****

Tagged:

Leave a Reply

Your email address will not be published. Required fields are marked *

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...

ಕಾಲ ಹನ್ನೆರಡನೆ ಶತಮಾನ. ದೇಶ ಜಪಾನ್. ಅರಸನ ಹೆಸರು ಅಂತೋಕು. ವಯಸ್ಸು ಕೇವಲ ಏಳು ಸಂವತ್ಸರಗಳು. ಅಂತೋಕು ಹೈಕೆ ಎಂಬ ಸಾಮುರಾಯ ದಳದ ನಾಮ ಮಾತ್ರ ಮುಂದಾಳುವಾಗಿದ್ದು ನಿಜವಾದ ಅಧಿಕಾರ ಇವನ ಅಜ್ಜಮ್ಮನ ಕೈಯಲ್ಲಿತ್ತು. ಅಜ್ಜಮ್ಮನ ಹೆಸರು ನೀ ಎಂದು. ನೀಯ ಜವಾಬ್ದಾರಿ ಗುರುತರವಾಗಿತ್ತು ಎಂದು...

ಶೇಖರನಿಗೆ ಇನ್ನೂ ಎರಡು ದಿನಗಳ ‘ವಾರ’ ಕಡಿಮೆ ಬಿದ್ದಿತ್ತು. ಎಲ್ಲಿಯೂ ಹುಟ್ಟುವಂತೆ ತೋರಲಿಲ್ಲ. ಶ್ರೀಮಾನ್ ಪದ್ಮನಾಭ ಹೆಬ್ಬಾರರ ಮನೆಯಲ್ಲಿ ಕೇಳಬೇಕೆಂದು ನಾಲ್ಕಾರು ಸಲ ಯೋಚಿಸಿದ. ಆದರೆ ಅವರು ಭಿಕ್ಷುಕರನ್ನೂ, ವರ್ಗಣಿ ಕೇಳುವವರನ್ನೂ ವಾರದ ಮಾಣಿಗಳನ್ನೂ ಅಂಗಳಕ್ಕೂ ಬರಗೊ...