Home / ಕವನ / ಅನುವಾದ / ‘ತಪ್ಪು’ ಮಾಡಿದ ಒಬ್ಬ ಸೋದರನಿಗೆ

‘ತಪ್ಪು’ ಮಾಡಿದ ಒಬ್ಬ ಸೋದರನಿಗೆ

ಮೂಲ: ನಜರುಲ್ ಇಸ್ಲಾಂ

ಅಯ್ಯೋ ಪೆದ್ದಣ್ಣ
ಯಾರು ಹೇಳಿದ್ದೊ ನೀ ಕಳ್ಳ ಅಂತ?
ಖದೀಮ ಅಂತ ?

ನೋಡು ಇಲ್ಲಿ
ಸುತ್ತ ಕೂತಿದೆ ಹೇಗೆ
ಮೆತ್ತೆ ಪೀಠದ ಮೇಲೆ ಅಸಲುಗಳ್ಳರ ತಂಡ!
ರಾಜ್ಯಸೂತ್ರವ ಹಿಡಿದು ರಕ್ತ ಹೀರಿದೆ ಹೇಗೆ
ಎಲ್ಲರಿಗು ಮೇಲೆ ಅತಿ ಭಂಡ!
ಯಾರಪ್ಪ ಡೇನಿಯಲ್, ಎಲ್ಲಿದ್ದಾನೆ ಹೇಳು
ಗುಟ್ಟು ಹೊರತೆಗೆವಂಥ ಧೀರ ಈ ಠಕ್ಕಿಗರ ಹೊಟ್ಟೆ ಸೀಳಿ?
ಯಾರಪ್ಪ ನಿಷ್ಕಳಂಕ.
ಯಾರ ಮನೆಯಯ್ಯ ಗುಡಿ?
ದಪ್ಪ ಹೇಗಾದಾರು ಇಷ್ಟು, ನುಂಗದೆ ಇವರು ಬಡವರನ್ನ?
ಎಷ್ಟು ದೊಡ್ಡದೊ ಲೂಟಿ, ಎಷ್ಟು ದೊಡ್ಡದೊ ಚಾಟಿ
ಅಷ್ಟೆ ದೊಡ್ಡದೊ ಅಣ್ಣ ವಿಶ್ವಸಂಸ್ಥೆಗಳಲ್ಲಿ ಇವರ ದನಿ ಧಾಟಿ.
ತುಳಿದು ಮಣ್ಣಾದವನ ಹೀರಿ ಏರಿದ ಮಹಲು,
ಲಕ್ಷ ಕುಲುಮೆಯ ಮೆಟ್ಟಿ ಎದ್ದಿದೆಯೊ ಕಾರ್ಖಾನೆ ತಡೆದು ಬಿಸಿಲು.
ನರಮಾಂಸ ಉಂಡು ಬೆಳೆಯುವ ದೈತ್ಯಯಂತ್ರ ಇದು ಯಾವುದಯ್ಯ,
ಯಾವುದಯ್ಯಾ ಗೆಳೆಯ? ಯಾವುದಯ್ಯಾ ಒಳಗೆ
ಹರಿವ ಪ್ರಾಣದ ಹೊಳೆಯ ಹೀರಿ ಕಬ್ಬಿನ ಸಿಪ್ಪೆ
ಮಾಡಿ ಎಸೆಯುವ ತಂತ್ರ?
ಲಕ್ಷ ಲಕ್ಷ ಕುಟುಂಬ ದುಡಿದು ತುಂಬುತ್ತವೋ
ಕಳ್ಳಿ ಕರಿಸಿರಿಯ ಬಸಿರು.
ನೆನಪಿದೆಯ, ಅಲ್ಲಿ ಗ್ಯಾರೇಜು ಸಾಲಿರುವ ಕಡೆ
ಚಳಿಮಳೆಗೆ ತಡೆ ನಿಂತ
ಅಷ್ಟಿಷ್ಟು ಹರಿದ ಕೊಡೆ ಥರದ ಗುಡಿಸಲ ಸಾಲು ಇದ್ದದ್ದು?
* * *

ನಿಜ ಕಣೋ, ಈ ಗ್ರಹ
ವ್ಯಾಪಾರಿ ಠಕ್ಕು ರೂಪಾಯಿ ಮಾಟಕೆ ಮೆಚ್ಚಿ
ಕಟ್ಟಿಸಿದ ವೇಶ್ಯಾಗೃಹ.
ಖುಷಿಹತ್ತಿ ಸೈತಾನ ತುಟಿ ಬಳಿಗೆ ತಂದು
ಬಗ್ಗಿಸುತ್ತಿದ್ದಾನೆ ಮಧುಬಟ್ಟಲ.
ಆಸೆ ಎಲ್ಲಿದೆ? ಎಲ್ಲಿ ಅನ್ನ? ಭರವಸೆ? ಭಾಷೆ
ಮೋಸ ಗೆದ್ದಿತೊ ಅಣ್ಣ ಭವಿಷ್ಯವನ್ನ.
ಬಳಗವಿದೆ ಕಳ್ಳರಿಗೆ
ಬಲಗಳಿವೆ ಠಕ್ಕರಿಗೆ
ಭೋಳೆರಾಮರು ನೀವು ಹೊಕ್ಕ ಜೈಲಿನ ಸುತ್ತ
ಕಳ್ಳರದ ತಂಡವಿದೆ ಹಗಲಿರುಳ ಗಸ್ತಿಗೆ!
* * *

ಯಾರು ಕರೆದರೊ ನಿನ್ನ ಕಳ್ಳ ಅಂತ,
ಖದೀಮ ಅಂತ?
ತೆಗೆದಿದ್ದರೂ ಪಾಪ! ಮಹಲ ಮಾಳಿಗೆಯಿಂದ
ಒಂದೆರಡು ಲೋಟ
ನಾಲ್ಕು ನಾಣ್ಯ
ಹಸಿದ ಮಧ್ಯಾಹ್ನಕ್ಕೆ ಪಾವು ಧಾನ್ಯ.
ಇರಿಯಲಿಲ್ಲಲ್ಲ ನೆರೆಯವನನ್ನ ಬೆನ್ನಲ್ಲಿ?
ಬರೆಯಲಿಲ್ಲಲ್ಲ ಅದ ಹೊಗಳಿ ಪುಸ್ತಕದಲ್ಲಿ?

ಯಾಕೆ ಕೊರಗುವೆ ತಮ್ಮ?
ನಿನ್ನ ತಪ್ಪೆಲ್ಲವೂ ಬರಿಯ ಕತ್ತಲ ಗುಮ್ಮ.
ಯಾರಿಗಾಗಿಯೊ ದುಡಿದ, ಹೊಡದ, ತಲೆಗಳನೊಡೆದ
ವಾಲ್ಮೀಕಿಗಾದಂತೆ ಸ್ಥಿತ್ಯಂತರ
ಸಿಕ್ಕ ಪಕ್ಷಕ್ಕೆ ನಿಜವಾದ ಮಾನವನೊಬ್ಬ
ಆಗದಿರುವುದೆ ನಿನಗು ಸ್ಥಾನಾಂತರ?
*****

Tagged:

Leave a Reply

Your email address will not be published. Required fields are marked *

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...