Home / ಕವನ / ಕವಿತೆ / ನವಿರಂಗಿ

ನವಿರಂಗಿ

ಒಂದೂರಿನಲ್ಲಿ ಒಬ್ಬರಸಿದ್ದ
ಅವನುಡುಪೆಂದರೆ ಬಹು ಪ್ರಸಿದ್ದ.
ಒಮ್ಮೆಗೆ ಓಲಗದೊಳು ಕುಳಿತಿರಲು
ಬಂದೆರೆಡೆಗೆ ಇಬ್ಬರು ದರ್ಜಿಗಳು,
“ಕಂಡೂ ಕಾಣದ ತೆರ ನವಿರಾಗಿಹ
ಗಾಳಿಗು ಆಕಾಶಕು ತೆಳುವಾಗಿಹ
ಸೋಜಿಗದುಡುಪನು ಹೊಲಿಯುವೆ”ವೆಂದು
ಆಣೆಯನಿಟ್ಟರು ಎಲ್ಲರ ಮುಂದು.
ಅರಸಗೆ ಉಡುಪೆಂದರೆ ಬಲು ಆಸೆ.
ನಂಬಿಸಿತವನನು ಠಕ್ಕರ ಭಾಷೆ.
ಒಂದು ವರುಷ ಗಡುಬನು ಕೇಳಿದರು
ರಾಶಿಹೊನ್ನ ಮುಂಗಡ ಕೇಳಿದರು.
ಉಡುಪಿನಾಸೆಗರಸಸ್ತು ಎಂದ
ಅವರೆರೆತಕೆಲ್ಲಕ್ಕೂ “ಹ್ಞೂ” ಎಂದ.

ಇಂತು ಬೊಕ್ಕಸವ ಬರಿದನು ಮಾಡಿ
ನೆಯ್ಯುವ ಹೊಲಿಯುವ ಆಟವ ಹೂಡಿ
ಜಾಣರಿಗೇ ಇದು ಕಾಣುವುದೆಂದು
ಸಾಮಾನ್ಯರಿಗೆಂದಿಗು ಅಲ್ಲೊಂದು
ಬಂದವರಿಗೆಲ್ಲ ಬಯಲನೆ ತೋರಿ
ಇಲ್ಲದುಡುಪಿನಂದವನೇ ಸಾರಿ
ಎಲ್ಲರ ನಂಬಿಸಿದರು ದರ್ಜಿಗಳು.
ಇದರ ಮಾತನಡುಗೂಲಜ್ಜಿಗಳು
ಹರಡಿದರೆಲ್ಲೆಡೆ ಜಾತ್ರೆ ನೆರೆಯಿತು.
ದೊರೆ ಉಡುಪನುಡುವ ದಿನವೇರ್ಪಟ್ಟಿತು.
ಉಟ್ಟನರಸನೀ ಬಯಲುಬಟ್ಟೆಯ,
ಬೆತ್ತಲೆಯೊಳೆ ಕೊಂಡನು ಜನದಿಟ್ಟಿಯ!
“ಅಯ್ಯೋ! ಬರಿಮೈ” ಎಂದರು ಜನಮನದೊಳಗೆ,
“ಆಹಾ ವಸ್ತ್ರದ ನವಿರೆಂಥದು!” ಎಂದರು ಹೊರಗೆ.
ಆದೊಡೆ ಮಗುವೊಂದು
“ಅಯ್ಯೋ ಬೆತ್ತಲೆಬಸವನ ನೋಡೆ”ಂದು
ಚಪ್ಪಳೆಯಿಕ್ಕಿತು; ಎಂಥ ದಿಟ್ಟತನ!
“ಹೌದೇ, ಬರಿಬೆತ್ತಲೆ!” ಎಂದರು ಊರ ಜನ
“ದಿಟ, ದಿಟ” ಪಿಸುಗುಟ್ಟಿತು ಪರಿವಾರ ;
ಅಳುಕಿ ಅಳುಕಿ “ಹೌದೆ”ಂದಿತು ಸರಕಾರ.
ಆಗರಸನು ಬೆಚ್ಚಿ
“ಕೆಚ್ಚಿನಿವರ ನೆಚ್ಚಿ”
ಎನ್ನುತ ಅವಮಾನಕೆ ಕಣ್ಮುಚ್ಚಿ
ಓಡಿದನರಮನೆಗೆ,
ತಿಂಗಳವರೆಗೂ ಬಾರದೆ ಹೊರಗೆ
ನೀವೇನೆನ್ನುವಿರೀ ಕತೆಗೆ?

ಈ ಕವನ ಹಾನ್ ಅನ್‌ಡೆರ್‌ಸೆನ್‌ ಅವರ ಕತಯೊಂದರ ಭಾವಾನುವಾದ.
*****

Tagged:

Leave a Reply

Your email address will not be published. Required fields are marked *

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...