Home / ಕವನ / ಕವಿತೆ / ಈ ಜನುಮವೆ ಮುಗಿವ ಮುನ್ನ

ಈ ಜನುಮವೆ ಮುಗಿವ ಮುನ್ನ

ಈ ಜನುಮವೆ ಮುಗಿವ ಮುನ್ನ
ಕಾಣೆನೊ ಕಾಣುವೆನೊ ನಿನ್ನ
ನರಿಯದೊಡನಭಿನ್ನಮೆನ್ನ
ಮನದ ತಿತಿಕ್ಷೆ
ಇಂದಲ್ಲಡೆ ಮುಂದೆ ನೆರೆಯ
ದಿರದಿಲ್ಲಿಯೆ ಬಲ್ಲೆನೆರೆಯ-
ಸಲದೆ ತಾಯ ಬಸಿರ ಮರೆಯ
ಮಗುವ ದಿದೃಕ್ಷೆ?

ನಿನ್ನೊಳೊಗೆದ ನನ್ನೊಳಿಂತು
ನಿನ್ನ ಕಾಂಬ ಬಯಕೆ ಬಂತು,
ಕಡಲಾಳದ ತೆರೆಯೊಳೆಂತು
ಕಡಲ ಕಾಣಿಕೆ;

ನನಗೀ ಜನುಮದಿ ಪ್ರಸನ್ನ
ನಹುದು ಕಣಾ ಹೊಣೆಯೆ ನಿನ್ನ,
ಕಡಲ ಹೊಣೆಯದೆಂತು ತನ್ನ
ತೆರೆಯ ಪೂಣಿಕೆ.

ನಾನಿದೊ ಬರೆ ಬಾಷ್ಪದಂಧು,
ನೀನೊಡೆಯಾ ದಯಾಸಿಂಧು-
ನಿನ್ನಿಂದ ಸಮೀಪಬಂಧು
ವಾರೊಳರೆನ್ನ?
ಇಂತೆನೆ ಮೊಗಮರಸಿ ಬೆಂಗೆ
ಬಂದಡೆ ಮೊಗ ಮರಸೆ ಹಂಗೆ?
ಎನ್ನೆಗಮಿಂತೆನ್ನ ಕಂಗೆ
ಮಾಚುವೆ ನಿನ್ನ?

ಜನನದಿ ಮರಣಾಂತಮಿಲ್ಲಿ
ಬಾಳ್ವೆ ನಿನ್ನನರಸುವಲ್ಲಿ,
ನೋಡದಿಲ್ಲಿ ಕೂಡಲಲ್ಲಿ
ಬಲ್ಲುದೆ ನಿನ್ನ?
ಮರಳಿ ತನ್ನ ಹೊರಟ ರೇವ
ನಯ್ದೆ ಸುತ್ತಿ ಬರುವ ನಾವ
ಮಿಳಿಸಿತೆ ಹಾಯದರ ಸೋವ
ಕಾಣದ ಮುನ್ನ?

ಉದಯಾಸ್ತಂ ಬಡೆವ ಖರ್ವ
ಗತಿಯಂತಿನನೊಡನೆ ಪರ್ವ
ವಡೆವ ಗತಿಯುಮೆಂತು ಶರ್ವ
ರೀಶಗೆ ದ್ವಿಧಾ

ಜೀವನದಿಂದಂತು ಭಿನ್ನ
ಪಥಮೆನಗಿಲ್ಲಿರಲಖಿನ್ನ
ಮದಂ ನಡೆವಗೆಂತು ನಿನ್ನ
ದರ್‍ಶನಂ ಮುಧಾ?

ಬಾಳ್ವೆಯ ನಿಡುಮರಳಿನಲ್ಲಿ
ಸುಖದಿಂ ದಣಿದೊಣಗಿದಲ್ಲಿ
ನಡುದೀವಿಗಳಳಲೊಳಲ್ಲಿ
ಕಾವನಾವನಿಂ
ಕಂಬನಿಯಾತಿಥ್ಯ ದೊರೆತೆ
ನವನ ಮುಂದುವರಿಯೆ ಮರೆತೆ-
ನಿನ್ನಿಂದವನಕಟ ಪೆರತೆ?
ಪೇಳ ದೇವ ನೀಂ!

ನಿನ್ನನಿಲ್ಲಿ ನಮಗೆ ತೋರ
ಲಲ್ಲಡಳಲು ಬರಿದೆ ಬಾರ;
ಕಂಡ ನಿನ್ನ ನೋಡಲಾರ
ದೆನ್ನ ಕಣ್ಣಿಗೆ
ಬಲ್ಲೆನಿಲ್ಲೆ ಕಾಣಬರುವೆ-
ಎಂದೊ ಎಂತೊ ನೀನೆ ಅರಿವೆ,
ಬಗೆಗೆ ಕಾವ ಕವಿಯೊಲಿರುವೆ
ನಿಂತು ತಣ್ಣಗೆ.

ಬಲ್ಲೆನೆಂತು ಬಾಳ್ವೆ ಸಂದು
ನಿನ್ನೊಳೆ ಮೆಯ್ಗರೆವೆನೆಂದು,
ಬಲ್ಲೆನಂತು ಬಾಳುವಂದು
ಕಾಣುವೆ ನಿನ್ನ,
ರವಿಯಲಿ ಮೆಯ್ಗರೆವ ಮುಂತು
ಹುಣ್ಣಿಮೆಯಮೃತಾಂಶು ನಿಂತು
ಮುಖಾಮುಖಿಯೆ ಕಾಣುವಂತು
ಭಾಸ್ಕರನನ್ನ.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...