Home / ಕವನ / ಕವಿತೆ / ಕೆದಾರ ಮರಣಮೃದಂಗ

ಕೆದಾರ ಮರಣಮೃದಂಗ

ದೈವ ಸನ್ನಿಧಿಯ ಚೈತನ್ಯದಲಿ
ಹಿಡಿದ ಹೂಮಾಲೆ ಧೂಪದೀಪ ಶ್ರೀಗಂಧ
ಸ್ವರ್ಗದೊಳಗೋಡಾಡಿ ದೇವಪಾದತಲದಲಿ ನಿಂತಕ್ಷಣ
ಕನಸು ನನಸಾಗಿಸಿಕೊಂಡ ಭಾವತೃಪ್ತಿ.

ಹರಹರ ಮಹಾದೇವ ಹರಹರ ಮಹಾದೇವ
ಪರಾತ್ಪರಾಶಿವನ ಮಂತ್ರ ಎಲ್ಲರೆದೆ ತುಂಬ
ಆ ಬೆಟ್ಟ ಈ ಬೆಟ್ಟ ಅಲ್ಲಿಯದೋ ಪ್ರಪಾತ
ಹಚ್ಚಹಸಿರು ಇಳಿಜಾರು ಅಂಕುಡೊಂಕು
ಮೋಡಮುಸುಕು ಮಳೆಯೊಳಗೆಲ್ಲ ಪ್ರತಿಧ್ವನಿ ತುಂಬಿ

ಭಾರಹೊತ್ತ ಇಳಿಸಂಜೆಗೆ ಸುಸ್ತಾಯಿತೆ?
ಇಲ್ಲವೇ ಇಲ್ಲ; ಸುತ್ತೆಲ್ಲ ದೀಪಸಾಲುಗಳು
ಝಗಮಗಿಸುವ ಜಾತ್ರಾಮೆರವಣಿಗೆ
ಘಂಟಾನಾದಕೆ ಪುರಾಣ ಪುಣ್ಯ ಎಚ್ಚೆತ್ತು

ಸಾಕ್ಷಾತ್ ಸ್ವರ್ಗ ಶಿವ ಪದತಲ
ಕಾತರದ ಮನಗಳಿಗೆ ಪುಣ್ಯ ಒಳಗಿಳಿಸಿಕೊಳ್ಳುವ ಕ್ಷಣ
ಪುಣ್ಯದ ಬೀಡು ಉಕ್ಕುಕ್ಕಿ ಹರಿವ
ಭಕ್ತರ ಭಾವನೊರೆತೊರೆ

ದೂರಬೆಟ್ಟದಾಚೆ ಅದೇನೋ ಹೊಂಚು
ಮೋಡಗಳಿಗೆ ರೆಕ್ಕೆಹೊಡೆದು ಮಳೆಯೊಳಗಿಳಿದ
ಸಂಚಿನಾ ಪಕ್ಷಿಗೆ ಕತ್ತಲೆ ಹಿತವಾಗಿ
ಅದರೊಡಲ ಸೀಳಿ ಗಕ್ಕನೆ ನೆಗೆಯಿತು ಕೆದಾರಕೊಳ್ಳಕೆ
ಬೆಚ್ಚಿಬಿದ್ದ ಬೆಟ್ಟದೊಡಲ ಗರ್‍ಭಪಾತ
ಕಲ್ಲುಮಣ್ಣು ಮರಳು ಗಿಡಮರಗಳು ಜರಿದು
ಕ್ಷಣಕ್ಷಣಕೂ ಧುಮ್ಮಿಕ್ಕಿ ಹೊರಹೊಮ್ಮಿ
ಹಿಡಿತಕೆ ಬಾರದೆ ಪ್ರಳಯತಾಂಡವ

ದೇವಸನ್ನಿಧಿಯ ಭಕ್ತರ ಧ್ವನಿ ಮಾರ್‍ಧನಿಸಿ
ಹರಹರ ಮಹಾದೇವ ಹರಹರಮಹಾದೇವ
ಕಾಪಾಡು ಮೃತ್ಯುಂಜಯ ದೈನ್ಯತೆಯ ಕೂಗು ಮತ್ತೆ
ಮತ್ತೆ ಹರಕೆಗಳೆದೆಗೆ ಮರಣಮೃದಂಗ ಸದ್ದು;
ನೋಡು ನೋಡುತಿರೆ ಮನೆಮಠಗಳು ಉರುಳಿ
ಅಲ್ಲೋಲಕಲ್ಲೋಲ ಕೊಚ್ಚಿ ಕೊಚ್ಚಿ ಹೋಗುವ ರಾಶಿರಾಶಿ ಹೆಣಗಳು.

ಅಲಕನಂದಾ ಮಂದಾಕಿನಿ ಭಾಗೀರತಿ
ಸುತ್ತಿಸುಳಿದಾಡಿ ಬಳುಕಿ ಶಿವನೊಲಿಸಲು ಸೋತರೆ?
ಕಠೋರ ಎದೆಯವನೆ ಕಲ್ಲಾಗಿ ಕುಳಿತವನೆ
ಮುಕ್ಕಣ್ಣನೆ ಕಿಚ್ಚು ರೊಚ್ಚು ಹೊತ್ತವನೆ
ವಿಜ್ಞಾನ ಜಗದ ಹಮ್ಮುಬಿಮ್ಮುಗಳಿಗೆ ಬೇಸರವಾಯಿತೆ!
ತಪಸ್ಸಿನೇಕಾಂತಕ್ಕೆ ಭಗ್ನವಾಯಿತೆ ತಂದೆ!!
ಬಾರಿಸಿಯೇ ಬಿಟ್ಟೆ ಮರಣಮೃದಂಗ

ಗಿರಿ ಕಂದರ ಕೊಳ್ಳಗಳೆದೆಗಳ ತುಂಬ
ಹೆಣಗಳ ರಾಶಿರಾಶಿ ಬೀಸಾಕಿ ತಣ್ಣಗಾದೆಯಾ ಮಹಾದೇವ
ಬಂದಿದ್ದರೆಲ್ಲ ಅವರಿಲ್ಲಿ ನಿನ್ನ ಸಾಕ್ಷಾತ್ಕಾರಕೆ
ಹಾರೈಸಿದ್ದೇನು ಶಿವನೆ
ಹೊಸಕಿ ಹೊಸಕಿ ಇಳೆಸುಡುಗಾಡಿಸಿ
ಕಣ್ರೆಪ್ಪೆ ಮುಚ್ಚಿ ಹಾಗೆಯೇ ಸ್ನಾನಕೆ ಕುಳಿತಿರುವೆ.
ಭೋರ್‍ಗರೆವ ಪ್ರಳಯರಾತ್ರಿಗೆ ಚಂದ್ರಕಾಂತನೇ…
ಭಾವಪರವಶದೊಳಗೆ ಭಜಿಸಿದ ಭಕ್ತರನು
ನಿನ್ನ ಮರಣಮೃದಂಗಕ್ಕೆ ತಾಂಡವನೃತ್ಯಕ್ಕೆ
ಎಳೆದೊಯ್ದೆಯೋ;
ನೀನೇ ಹುಚ್ಚೆದ್ದು ಕುಣಿದು
ಕಿಚ್ಚು ಶಮನಿಸಿಕೊಂಡೆಯೋ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...