Home / ಲೇಖನ / ಇತರೆ / ವಚನ ವಿಚಾರ – ಆಸೆ ರೋಷ

ವಚನ ವಿಚಾರ – ಆಸೆ ರೋಷ

ಆಸೆಯೆಂಬ ಕೂಸನೆತ್ತಲು
ರೋಷವೆಂಬ ತಾಯಿ ಮುಂದೆ ಬಂದಿಪ್ಪಳು
ನೋಡಾ
ಇಂತೆರಡಿಲ್ಲದೆ ಕೂಸನೆತ್ತಬಲ್ಲಡೆ
ಆತನೆ ಲಿಂಗೈಕ್ಯನು
ಗೊಹೇಶ್ವರ

ಅಲ್ಲಮನ ವಚನ. ಮನಸ್ಸಿನಲ್ಲಿ ಹುಟ್ಟುವ ಆಸೆ ಮತ್ತು ರೋಷಗಳಿಗೆ ಇರುವುದು ತಾಯಿ ಮಕ್ಕಳ ಸಂಬಂಧ. ಒಂದನ್ನು ಬಿಟ್ಟು ಒಂದಿರಲಾರವು. ಇವೆರಡೂ ಗುಣಗಳು ಇಲ್ಲವಾದಾಗ ಮನುಷ್ಯ ದೇವರಲ್ಲಿ ಒಂದಾಗಿರುತ್ತಾನೆ. ನಮ್ಮ ದಿನ ನಿತ್ಯದ ಬದುಕಿನಲ್ಲಿ ಮನಸ್ಸಿನ ಕಾರ್ಪಣ್ಯಗಳಿಗೆ ಕಾರಣವನ್ನು ಹುಡುಕುತ್ತ ಹೋದರೆ ಅವಕ್ಕೆಲ್ಲ ಮೂಲವಾಗಿ ಆಸೆ ಅಥವ ರೋಷಗಳೆಂಬ ಭಾವ ಇರುವುದು ತಿಳಿಯುತ್ತದೆ. ಆಸೆ ಮತ್ತು ರೋಷಗಳೆರಡೂ ನಮ್ಮ ಅಹಂಕಾರವನ್ನು ಗಟ್ಟಿಗೊಳಿಸುವ ಗುಣಗಳು.

ನಮ್ಮ ಎಲ್ಲ ಕೋಪಕ್ಕೆ ನಮ್ಮೊಳಗಿನ ಆಸೆಯೇ ಕಾರಣವಲ್ಲವೆ? ನಮ್ಮೊಳಗೆ ನಾವು ಬೆಳೆಸಿಕೊಂಡ ಆಸೆಗೆ ಧಕ್ಕೆ ಬಂದಾಗ ಕೋಪ, ರೋಷಗಳು ಮೂಡುತ್ತವೆ. ಹಾಗೆ ಹುಟ್ಟಿದ ರೋಷ ಅತೃಪ್ತವಾದ ಆಸೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಆಸೆಯಿಂದ ಕೋಪ, ಕೋಪದಿಂದ ಆಸೆ ಪರಸ್ಪರ ಬೆಳೆಯುತ್ತ ಹೋಗುತ್ತವೆ.

ದೇವರನ್ನು ನಮ್ಮಿಂದ ಬೇರೆಯಾದ ಒಂದು ಶಕ್ತಿ ಎಂದು ಸಾಮಾನ್ಯವಾಗಿ ತಿಳಿಯುತ್ತೇವೆ. ಹಾಗೆ ನಾವು ಬೇರೆ ಎಂಬ ಪ್ರತ್ಯೇಕತೆಯ ಭಾವ ಇರುವುದರಿಂದಲೇ ನನಗೆ ಅದು “ಬೇಕು” ಎಂಬ ಆಸೆ ಮತ್ತು ಸಿಗಲಿಲ್ಲವೆಂಬ ರೋಷ ಹುಟ್ಟುತ್ತವೆ. ಆಸೆ ರೋಷಗಳಿಂದ ನಾವು ನಮ್ಮ ಸುತ್ತಲವರಿಂದಲೂ ನಮ್ಮ ಕಲ್ಪನೆಯ ದೇವರಿಂದಲೂ ಬೇರೆಯಾಗುತ್ತ ದೂರವಾಗುತ್ತ ಹೋಗುತ್ತೇವೆ.

ಆಸೆಬುರುಕರನ್ನೂ ಕೋಪಿಷ್ಠರನ್ನೂ ನಾವು ದೂರವಿಡಲು ಬಯಸುವುದಿಲ್ಲವೇ? ಹಾಗೆಯೇ ದೇವರು ಕೂಡ ಆಸೆ ರೋಷಗಳು ಇರುವ ವ್ಯಕ್ತಿಗಳನ್ನು ದೂರವಿಡುತ್ತಾನೆ. ಆಸೆ ರೋಷಗಳನ್ನು ನೀಗಿಕೊಂಡಾಗ ವಿಶ್ವದ ಶಕ್ತಿಯೊಡನೆ ಐಕ್ಯ ಸಾಧ್ಯವಾಗುತ್ತದೆ ಎಂಬುದು ಅಲ್ಲಮನ ಮಾತು. ದೇವರನ್ನು ನಿರ್ಗುಣ ಅನ್ನುವುದುಂಟಲ್ಲವೆ? ಯಾಕೆಂದರೆ ದೇವರಿಗೆ ಆಸೆಯೂ ಇರಲಾರದು, ರೋಷವೂ ಇರಲಾರದು. ಇವೆರಡೂ ಗುಣಗಳನ್ನು ಇಲ್ಲವಾಗಿಸಿಕೊಂಡು ನಮ್ಮನ್ನು ನಾವು ಮಗುಗೊಳಿಸಿ ಕೊಂಡರೆ ಅದೇ ದೈವತ್ವ.
*****

Tagged:

Leave a Reply

Your email address will not be published. Required fields are marked *

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...