Home / ಕವನ / ಕವಿತೆ / ದರ್‍ಶನ

ದರ್‍ಶನ

ಶ್ರೀರಾಮ ಪಟ್ಟಾಭಿಷೇಕದಲಿ ಒಲಿಯುತ್ತ
ಜಾನಕಿಯು ರಘುವರನ ಸಂಜ್ಞೆಯರಿತು.
ಹನುಮಂತನಿಂದಾಯ್ತು ರಾಮದರ್ಶನಮೆಂದು
ನವರತ್ನಹಾರಮಂ ಕೊರಳಿಗಿತ್ತು
ಸಿಂಗರಿಸೆ ಹೊಳೆ ಹೊಳೆದ ದೇದೀಪ್ಯಮಾನದಲಿ
ರಾಮರತ್ನವ ಧರಿಸಿ ನುಡಿಯ ಮರೆತು.
ಒಂದೊಂದೆ ರತ್ನಮಂ ಪರಿಕಿಸುತ ಕಡಿಯುತ್ತ
ಪುಡಿಗೈಯುತುಗುಳಿದಂ ರುಚಿಯನರಿತು.
ಆ ಸರದ ರತ್ನಗಳ ಹಾಳುಮಾಡಿ
ಶ್ರೀರಾಮರಡಿಗಳಲಿ ಹಾಕಿ ಹಾಡಿ
ತಾಯಿಯಾ ಕೂಪಮಂ ನೊಂದ ನೋಡಿ
ಕೋಡಗಕೆ ಮಣಿಯೇಕೆಯೆಂದ ಬೇಡಿ.

ಕಪಿಗೆ ಸಿಂಗರಮೇಕೆ ಗೌರವಂ ಸಲ್ಲುವುದೆ
ಕುಲಬುದ್ಧಿಯಂ ತೋರ್‍ದೆ ಪುಡಿಯ ಗೈದು
ಸಾಲದಾದುದೆ ನಿನಗೆ ನವರತ್ನಹಾರಮಿದು
ಹಣ್ಣೆಂದು ಬಗದೆಯಾ ಹಸಿವ ನೆನೆದು.
ಇದೊ ಶಾಪ ನಿನಗೆಂದು ಕುಪಿತಳಾದಳು ತಾಯಿ
ಹಣ ಚಾಚಿದನು ಪದದಿ ದೇಹಕೆಡೆದು.
ಈ ಮಹಾ ಹಾರದೊಳು ರಾಮನಾಮದ ಸವಿಯ
ಕಾಣದಾಂ ಬಿಸುಡಿದೆನು ಹುರುಳನರಿದು
ನಿಸ್ಸಾರವೀ ಹಾರ ಕ್ಷಮಿಸು ತಾಯಿ
ರಾಮನಾಮದ ರತ್ನ ಸೌಖ್ಯದಾಯಿ
ರಾಮಸನ್ನಿಧಿಯಿರಲು ಬೇರೆ ಬೇಕೆ
ನಿಮ್ಮ ಮಗುವಾಗಿರಲು ಹಾರಮೇಕೆ?
ನಸುನಕ್ಕನಾ ರಾಮ ಸಂತವಿಸಿ ಸೀತೆಯನು
ಅವನ ಕೊಂಡಾಡಿದಳು ನಿಜವನರಿತು.
ರಾಮನಾಮದ ಮಹಿಮೆಯರಿತವನು ಹನುಮಂತ
ರಾಮನೊಲಿದಿಹನವಗೆ ತನ್ನನಿತ್ತು
ಭಕ್ತಿಮರುಳಿಂ ಕುಣಿವ ಹನುಮಂತನೊಡನಿರುವ
ತೊಡಕಾಯ್ತು ರಾಜ್ಯಮಂ ನಡೆಸಲೆನಿತು.
ಅವನು ನೆನೆದಲ್ಲಿರುವ ಅವನ ಪ್ರೇಮಕ ಮಣಿವ
ಅಡವಿಯೇ ಮನೆಯಾಯ್ತು ಕಪಿಯ ಬೆರೆತು.
ರಾಮನಾಮವ ಹಾಡಿ ಕುಣಿಯುತಿಹನು
ಮೈಮರೆತು ದಾಶರಥಿ ನಗುತಲಿಹನು
ರಾಮ ಬಂದುದ ಕಾಣ ಅಳುತಲಿಹನು
ಮಾರುತಿಯ ನುಡಿಸಿದನು ಭರದಿ ತಾನು.

ಹಾಡುತಿರೆ ನೀನಿಲ್ಲಿ ರಾಜಕಾರ್ಯದ ನಾವೆ
ಎಂತು ನಡೆವುದು ಹೇಳು ರಾಜನಿರದೆ.
ಹಾಡು ಹಾಕುತ ಚಿಟಿಕಿ ಶಯನ ಕಾಲದಿ ಬಂದು
ಆಕಳಿಪ ಸಮಯದೊಳು ಎನಲು ನಿಜದೆ.
ತಾಯಿಯೊಡನಿರುವಾಗ ಸೆಜ್ಜೆಯೊಳು ಬಹೆನೆಂತು
ಅಲ್ಲೇಕೆ ಇಲ್ಲಿರುವೆ ಚಿಂತೆಯಿರದೆ.
ಆಗದಾಗದು ಹನುಮ ಅರಮನೆಯ ಬಾಗಿಲೊಳ್
ಇರ್‍ದು ನೀ ಇರುಳಿನೊಳು ನೆನೆದು ಬಿಡದೆ.
ಚಿಟಿಕಿಯಂ ಹಾಕಿದೊಡೆ ಆಕಳಿಸುವೆ
ಎನಲಯೋಧ್ಯಯನೈದಿ ರಾಮ ಸೇವೆ
ಯಲಿ ನಿಂದ ಭಕ್ತಿಯಲಿ ಆಯ್ತು ಮರವೆ
ಚಿಟಿಕಿ ಹಾಕುತ ಕುಣಿದ ಹೇಳಲಳವೆ!
ಬಿಟ್ಟ ಬಾಯ್ ಮುಚ್ಚದಿಹ ಮಲಗಿರುವ ರಘುರಾಮ
ಸೀತೆಗಚ್ಚರಿಯಾಯ್ತು ಭಯದಿ ಬಂದು
ಗುರು ವಸಿಷ್ಠಂಗರುಹೆ ಓಡಿಬಂದರು ಹನುಮ
ನಿರವರಿತು ಅಪ್ಪಿದರು ಕೈಯ ತಂದು.
ರಾಮನಿರವನ್ನೊರೆಯೆ ತಪ್ಪನೊಪ್ಪುತ ಬಂದು
ಅಜನ ಪಟ್ಟವ ಪಡೆದ ಪದದಿ ನಿಂದು.
ಎಲೆ ರಾಮ ನೀ ಸುಲಭ ಮೋಡಿಗಳ ಮಾಡುವೆಯ
ಎನುತ ನಮಿಸಿದ ಕಣ್ಣನೀರ ತಂದು
ಅಚ್ಚರಿಯ ತಾಳಿದಳು ಸೀತೆ ಮನದಿ
ಮಚಿದಳು ಮಾರುತಿಯ ಹಿಗ್ಗಿ ಭರದಿ
ಚಿರಜೀವಿಯಾಗೆಂದು ಹರಸಿ ಹೊಗಳಿ
ಅರೆನಗೆಯ ನಕ್ಕಳಾ ದೇವಿ ಮಗುಳಿ.
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...